Advertisement

Ratan Naval Tata: ರತನ್‌ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು

11:52 AM Oct 13, 2024 | Team Udayavani |

ಇಂದಿನ ಸೋಶಿಯಲ್‌ ಮೀಡಿಯಾ ಜಗತ್ತಿನಲ್ಲಿ ನಮ್ಮ ಕುರಿತು ಒಂದೂ ನಕಾರಾತ್ಮಕ ಮಾತುಗಳನ್ನಾಡಿಸಿಕೊಳ್ಳದೆ ಬದುಕುವುದು ಕಷ್ಟ. ಆದರೆ ರತನ್‌ ಟಾಟಾ ಇದಕ್ಕೆ ಅಪವಾದವೆನಿಸಿಕೊಂಡರು. ಫೇಸ್‌ಬುಕ್‌, ಟ್ವಿಟರ್‌, ಲಿಂಕ್ಡ್ ಇನ್‌, ಇನ್ಸ್ಟಾಗ್ರಾಮ್, ಟಿವಿ ಎಲ್ಲ ಕಡೆಗಳಲ್ಲಿ ಅವರನ್ನು ಕುರಿತು ಅಭಿಮಾನದ ಮಾತುಗಳು ಕೇಳಿಬಂದವು. ಟಾಟಾ ಸಮೂಹವೊಂದೇ ಅಲ್ಲ, ಭಾರತವೊಂದೇ ಅಲ್ಲ, ಇಡೀ ಜಗತ್ತು ಅವರ ನಿಧನಕ್ಕೆ ಸಂತಾಪ ಸೂಚಿಸಿತು… 

Advertisement

ಭಾರತದ ಇತಿಹಾಸದಲ್ಲಿ ರತನ್‌ ಟಾಟಾರವರು ತುಳಿದಷ್ಟು ಸೋಲಿನ ರಸ್ತೆಗಳನ್ನು ಮತ್ತಾವುದೇ ಉದ್ಯಮಿಗಳು ಕಂಡಿರಲಿಕ್ಕಿಲ್ಲ. ಮೊದಲು ಯಾವುದು ಸೋಲಾಗಿ ಕಂಡಿತೋ ಅವೆಲ್ಲ ಕೆಲವೇ ದಿನಗಳಲ್ಲಿ ಅವರ ಪಾಲಿಗೆ ಅತ್ಯಂತ ಯಶಸ್ವಿ ಅಧ್ಯಾಯಗಳಾದವು. ಭಾರತದಲ್ಲಿ, ಭಾರತೀಯರು, ಭಾರತಕ್ಕಾಗಿ ತಯಾರಿಸಿದ ಮೊತ್ತ ಮೊದಲ ಕಾರು ಇಂಡಿಕಾ. ಆರಂಭದಲ್ಲಿ ಅದಕ್ಕೆ ಯಶಸ್ಸು ಸಿಕ್ಕಿರಲಿಲ್ಲ. ಹಣಕಾಸಿನ ದೃಷ್ಟಿಯಿಂದ ಇಂಡಿಕಾ ಯೋಜನೆಯನ್ನು ಅದರ ತಯಾರಿಕಾ ಘಟಕದ ಸಮೇತ ಫೋರ್ಡ್‌ ಕಂಪನಿಗೆ ಮಾರುವ ಪ್ರಸಂಗ ಎದುರಾಯಿತು.

ಫೋರ್ಡ್‌ ಕಂಪನಿಯವರು -“ಟಾಟಾ ಕಂಪನಿಗೆ ಕಾರು ಮಾಡಲು ಬರದೇ ಹೋದರೆ ಯಾಕೆ ಮಾಡಬೇಕಿತ್ತು?’- ಎಂದು ಹೀಯಾಳಿಸಿದ ಮಾತು ಟಾಟಾರವರಿಗೆ ತುಂಬಾ ನೋವನ್ನುಂಟುಮಾಡಿತ್ತು. ಎಷ್ಟೇ ಕಷ್ಟವಾಗಲಿ, ತಾನು ಕಾರಿನ ಉದ್ಯಮವನ್ನು ನಡೆಸಿಯೇ ತೀರುತ್ತೇನೆ ಎಂದು ಪಣತೊಟ್ಟರು. ಕಾರು ಮಾರಾಟದ ಉದ್ಯಮ ಎಲ್ಲಿ ಹಳಿತಪ್ಪಿತು ಎಂದು ಕಂಡುಕೊಂಡರು. ಆ ಸೋಲನ್ನೇ ಗೆಲುವನ್ನಾಗಿ ಪರಿವರ್ತಿಸಲು ಹಗಲು ರಾತ್ರಿಯೆನ್ನದೆ ಕೆಲಸ ಮಾಡಿದರು. ಪರಿಣಾಮ ಏನಾಗಿದೆಯೆಂದರೆ- ಒಂದು ಕಾಲದಲ್ಲಿ ಫೋರ್ಡ್‌ ಕಂಪನಿಗೆ ಮಾರಬೇಕೆಂದಿದ್ದ ಟಾಟಾ ಮೋಟರ್ಸ್‌ ಕಾರು ತಯಾರಿಕಾ ಕಂಪನಿ ಇಂದು ಭಾರತದ ಎರಡನೆಯ ಅತಿ ದೊಡ್ಡ ಕಾರಿನ ಕಂಪನಿಯಾಗಿ ಬೆಳೆದಿದೆ. ಇಲ್ಲಿಯ ತನಕ ಒಂದು ಕೋಟಿಗೂ ಹೆಚ್ಚು ಕಾರುಗಳನ್ನು ತಯಾರಿಸಿ, ಮಾರಿದೆ! ಎಲೆಕ್ಟ್ರಿಕ್‌ ವೆಹಿಕಲ್‌ ಕ್ಷೇತ್ರದಲ್ಲಂತೂ ಈ ಕಂಪನಿ ಹೊಸದೊಂದು ಅಲೆಯನ್ನೇ ಎಬ್ಬಿಸಿದೆ.

ಬ್ರಿಟಿಷರ ಕಂಪನಿ ಖರೀದಿಸಿದರು!

ಟಾಟಾ ಸಮೂಹ ಕಂಪನಿಗಳ ಸಂಸ್ಥಾಪಕರಾದ ಜೆಮ್‌ ಷೆಡ್‌ಜಿ ಟಾಟಾರವರು “ಭಾರತದಲ್ಲಿ ನಾವೇ ಸ್ವತಃ ಉಕ್ಕು ತಯಾರಿಸುತ್ತೇವೆ’ ಎಂದಾಗ “ಭಾರತೀಯರ ತಯಾರಿಸಿದ ಉಕ್ಕನ್ನು ತಾವು ತಿಂದುಬಿಡುತ್ತೇವೆ’ ಎಂದು ಬ್ರಿಟಿಷ್‌ ಅಧಿಕಾರಿಯೊಬ್ಬರು ಗೇಲಿ ಮಾಡಿದ್ದರಂತೆ. ಅಲ್ಲಿಂದ ಶುರುವಾಗಿ ಸ್ಟೀಲ್‌ ಉತ್ಪಾದನೆಯಲ್ಲಿ ಇಂದು ಜಗತ್ತಿನ ಎರಡನೆಯ ದೊಡ್ಡ ರಾಷ್ಟ್ರವಾಗಿ ನಿಂತಿರುವ ಸುದೀರ್ಘ‌ ಪಯಣ ನಮ್ಮದು. ರತನ್‌ ಟಾಟಾರವರ ಮುಂದಾಳತ್ವದಲ್ಲಿ ಟಾಟಾ ಸ್ಟೀಲ್ಸ್‌ , ಬ್ರಿಟಿಷರದ್ದಾದ ಕೊರಸ್‌ ಸ್ಟೀಲ್‌ ಕಂಪನಿಯನ್ನು ಖರೀದಿ ಮಾಡಿದಾಗ ಇಡೀ ದೇಶವೇ ಹೆಮ್ಮೆಯಿಂದ ಬಿಗಿತ್ತು. ಹಾಗೆಯೇ ಬ್ರಿಟಿಷ್‌ ನೆಲದ ಇನ್ನೊಂದು ಪ್ರಸಿದ್ಧ ಕಾರು ಕಂಪನಿ ಜಾಗ್ವರ್ ಆ್ಯಂಡ್‌ ಲ್ಯಾಂಡ್‌ ರೋವರ್‌ನ್ನು ಖರೀದಿ ಮಾಡಿದಾಗಲೂ ಅದು ಟಾಟಾ ಕಂಪನಿಯದ್ದೊಂದೇ ಆಗಿರದೆ ಇಡೀ ರಾಷ್ಟ್ರದ ಸಾಧನೆಯಂತೆ ಬಿಂಬಿತವಾಗಿತ್ತು. ಜಾಗ್ವರ್ ಆ್ಯಂಡ್‌ ಲ್ಯಾಂಡ್‌ ರೋವರ್‌ ಕಂಪನಿಯ ಹಣಕಾಸಿನ ತೊಂದರೆಯು ಟಾಟಾ ಮೋಟರ್ಸ್‌ ಖರೀದಿ ಮಾಡಿದ ಮೇಲೂ ಬಗೆಹರಿದಿರಲಿಲ್ಲ. ಸಹಾಯ ಕೇಳಿದರೆ ಯಾವುದೇ ಬ್ರಿಟಿಷ್‌ ಬ್ಯಾಂಕ್‌ ಮುಂದೆ ಬರದೇ ಹೋದವು. ಆಗ ಟಾಟಾರವರ ಮಾತನ್ನು ಗೌರವಿಸಿ ಜೆಎಲ್‌ ಆರ್‌ ಕಂಪನಿಯನ್ನು ಉಳಿಸಲು ಬಂದಿದ್ದು ಭಾರತದ ಬ್ಯಾಂಕುಗಳು. ಟಾಟಾರ ನೇತೃತ್ವದಲ್ಲಿ ಅಂದು ಬದುಕುಳಿದ ಜೆಎಲ್‌ ಆರ್‌ ಇಂದು ಜಗತ್ತಿನ ಅತ್ಯಂತ ಯಶಸ್ವಿ ಕಂಪನಿಗಳಲ್ಲೊಂದು.

Advertisement

ಹೆದರಿಸಬಹುದು, ಬಗ್ಗಿಸಲಾಗದು!

2008ರಲ್ಲಿ ಭಯೋತ್ಪಾದಕರು ಮುಂಬೈ ನಗರದ ಮೇಲೆ ನಡೆಸಿದ ದಾಳಿಯಿಂದ ಇಡೀ ದೇಶ ತತ್ತರಿಸಿತ್ತು. ಮುನ್ನೂರಕ್ಕೂ ಹೆಚ್ಚು ಜನರು ತಂಗಿದ್ದ ಹಾಗೂ ನೂರಾರು ಜನರು ಊಟ ಮಾಡುತ್ತಿದ್ದ ಟಾಟಾ ಗ್ರೂಪ್‌ನ ಪ್ರತಿಷ್ಠಿತ ತಾಜ್‌ ಹೋಟೆಲ್‌ ಒಳಗೂ ಭಯೋತ್ಪಾದಕರು ನುಗ್ಗಿ ನಡೆಸಿದ ಗುಂಡಿನ ಸುರಿಮಳೆ ಹಾಗೂ ಬಾಂಬ್‌ ಸ್ಫೋಟವು ನೂರಾರು ಜನರನ್ನು ಸಾವಿನ ದವಡೆಗೆ ನೂಕಿತ್ತು. ಆ ಸಮಯದಲ್ಲಿ ಹೋಟೆಲಿಗೆ ಬಂದಿದ್ದ ಅತಿಥಿಗಳನ್ನು ರಕ್ಷಿಸುತ್ತಾ ಬಹಳಷ್ಟು ಟಾಟಾ ಕಂಪನಿಯ ಉದ್ಯೋಗಿಗಳು ತಮ್ಮ ಜೀವವನ್ನು ಬಲಿಕೊಟ್ಟಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ರತನ್‌ ಟಾಟಾರವರು ಕಾರನ್ನು ತಾವೇ ಓಡಿಸಿಕೊಂಡು ಹೋಟೆಲಿಗೆ ಧಾವಿಸಿದರಂತೆ. ಒಳಗೆ ಹೋಗಲು ಅವರಿಗೆ ಬಿಡದ ಕಾರಣ, ಸೈನಿಕರು ಆ ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿಷ್ಕ್ರಿಯ ಮಾಡುವ ತನಕ ಮೂರು ದಿನ ಹಾಗೂ ರಾತ್ರಿ ಊಟ ಹಾಗೂ ನಿದ್ದೆಯನ್ನು ಬಿಟ್ಟು ಅಲ್ಲೇ ಇದ್ದರಂತೆ. “ಮುಂಬೈ ನಗರವನ್ನು ಹೆದರಿಸಬಹುದು, ಆದರೆ ನಿಲ್ಲಿಸಲಾಗದು’ ಎಂದು ಅವರು ಗುಡುಗಿದ ಮಾತು ಇನ್ನೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ. ಒಂದು ತಿಂಗಳೊಳಗೆ ತಾಜ್‌ ಹೋಟೆಲನ್ನು ಮರು ನಿರ್ಮಾಣ ಮಾಡಿಸಿದ್ದರು. ಈ ಘಟನೆಯಲ್ಲಿ ಜೀವ ಕಳೆದುಕೊಂಡ ಪ್ರತಿಯೊಬ್ಬ ಉದ್ಯೋಗಿಗೂ ಪರಿಹಾರ ಕೊಟ್ಟದ್ದಷ್ಟೇ ಅಲ್ಲ, ಅವರ ಸಂಪೂರ್ಣ ಪರಿವಾರದ ಭವಿಷ್ಯವನ್ನು ಟಾಟಾ ಸಮೂಹವು ನೋಡಿಕೊಳ್ಳುವುದೆಂಬ ಭರವಸೆ ನೀಡಿದ್ದರು. ಇಂದಿಗೂ ಗೇಟ್‌ ವೇ ಆಫ್ ಇಂಡಿಯಾಕ್ಕೆ ಹೋಗಿ ನಿಂತು ವಿಶಾಲವಾದ ಆ ತಾಜ್‌ ಹೋಟೆಲ್‌ ನೋಡುವಾಗ ಟಾಟಾ ಕಂಪನಿಯು ಉದ್ಯೋಗಿಗಳ ಬಲಿದಾನ, ರತನ್‌ ಟಾಟಾರವರ ಧೈರ್ಯ ಹಾಗೂ ಮಾನವೀಯತೆ ನೆನಪಾಗುತ್ತದೆ.

*********

ಎದುರಾಳಿಯ ಗಮನಿಸುತಿರಬೇಕು! ¤ ಮಹೀಂದ್ರಾ ಹಾಗೂ ಟಾಟಾ ಎರಡೂ ಪ್ರತಿಸ್ಪರ್ಧಿ ಕಂಪನಿಗಳು. ಆದರೆ ಇಬ್ಬರಿಗೂ ಪರಸ್ಪರರ ಮೇಲೆ ಇದ್ದ ಗೌರವ ಅಪಾರವಾದುದು. ಒಂದು ಆಟೋಮೊಬೈಲ್‌ ಮೇಳದಲ್ಲಿ ಮಹೀಂದ್ರಾ ಅವರ ಮಳಿಗೆಗೆ ಹಠಾತ್ತನೆ ರತನ್‌ ಟಾಟಾ ಬಂದರಂತೆ. ಅವರನ್ನು ನೋಡಿ ತುಸು ಗಾಬರಿಯಾದ ಮಹೀಂದ್ರಾ ಸಮೂಹದ ಕಂಪನಿಗಳ ಮಾಲೀಕರಾದ ಆನಂದ್‌ ಮಹೀಂದ್ರಾ, “ನೀವು ಹೇಳಿದ್ದರೆ ನಾನೇ ನಿಮ್ಮನ್ನು ಭೇಟಿಯಾಗಲು ಬರುತ್ತಿದ್ದೆ. ಇಲ್ಲಿಗೇ ಯಾಕೆ ಬಂದಿರಿ?’ ಎಂದು ಕೇಳಿದಾಗ ಅದಕ್ಕೆ ರತನ್‌ ಟಾಟಾ- “ನಮ್ಮ ಪ್ರತಿಸ್ಪರ್ಧಿಗಳು ಏನು ಮಾಡುತ್ತಿದ್ದಾರೆ ಎಂದು ಗಮನಿಸುತ್ತಿರಬೇಕು’- ಎಂದು ನಗುತ್ತಾ ಉತ್ತರಿಸಿದ್ದರಂತೆ.

*********

ಕಡಿಮೆ ಬೆಲೆಗೆ ಗುಣಮಟದ ವಸ್ತು.. ತಾವು ತಯಾರಿಸುವ ಉತ್ಪನ್ನದಲ್ಲಿ ಒಂದೊಳ್ಳೆ ಗುಣ  ಮಟ್ಟವಿರಬೇಕು, ಅದು ಬಡವರಿಗೂ ಸಿಗುವಂತಿರಬೇಕು ಎಂಬುದು ಟಾಟಾ ಅವರ ಕನಸಾಗಿತ್ತು. ಹದಿನೈದು ವರ್ಷಗಳ ಹಿಂದೆ ವಾಟರ್‌ ಫಿಲ್ಟರ್‌ ಬೆಲೆ 3000-5000 ರೂ. ಗಳಷ್ಟಿತ್ತು. ಆಗ, ಬಡವರಿಗೂ ಸ್ವತ್ಛ ನೀರು ಸಿಗಬೇಕೆಂದು “ಟಾಟಾ ಸ್ವಚ್ಛ’ ಎನ್ನುವ ಹೊಸ ವಾಟರ್‌ ಫಿಲ್ಟರ್‌ ತಂದಿ ದ್ದರು. ಅದರ ಬೆಲೆ ಕೇವಲ 750 ರೂ. ಹೀಗೆ ಪ್ರತಿಸ್ಪರ್ಧಿಗಳನ್ನು ವೈಯಕ್ತಿಕವಾಗಿ ದ್ವೇಷಿಸದೇ, ಜನ ಸಾಮಾನ್ಯರಿಗೂ ಸಿಗಬಲ್ಲ ಉನ್ನತ ಗುಣಮಟ್ಟದ ಉತ್ಪನ್ನಗಳ ಮೂಲಕ ಜನರನ್ನು ತಲುಪುತ್ತಿದ್ದ ಉದ್ಯಮಿ ರತನ್‌ ಟಾಟಾರವರಾಗಿದ್ದರು.

-ವಿಕ್ರಮ್‌ ಜೋಶಿ, ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next