Advertisement

ಎಸ್‌ಪಿ-ಬಿಎಸ್‌ಪಿ; ಮೈತ್ರಿ ಧರ್ಮ ಪಾಲನೆಯಾಗಲಿ 

12:30 AM Jan 14, 2019 | Team Udayavani |

ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ ಶಾಶ್ವತ ಶತ್ರುಗಳೂ ಇಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆ ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜ ಪಾರ್ಟಿ ನಡುವಣ ಮೈತ್ರಿ. ಮುಂಬರುವ ಲೋಕಸಭಾ ಚುನಾವಣೆಯನ್ನು ಜತೆಯಾಗಿ ಎದುರಿಸಲು ತೀರ್ಮಾನಿಸಿರುವ ಉತ್ತರ ಪ್ರದೇಶದ ಬಲಾಡ್ಯ ಪ್ರಾದೇಶಿಕ ಪಕ್ಷಗಳಾಗಿರುವ ಎಸ್‌ಪಿ ಮತ್ತು ಬಿಎಸ್‌ಪಿ ನಡುವೆ ಸೀಟು ಹಂಚಿಕೆಯೂ ಅಂತಿಮಗೊಂಡಿದೆ. ಇದು ಉತ್ತರ ಪ್ರದೇಶಕ್ಕೆ ಸೀಮಿತವಾಗಿರುವ ಮೈತ್ರಿಯಾಗಿದ್ದರೂ ಒಟ್ಟಾರೆಯಾಗಿ ಇಡೀ ದೇಶದ ಹಾಗೂ ನಿರ್ದಿಷ್ಟವಾಗಿ ಹಿಂದಿ ವಲಯವೆಂದು ಗುರುತಿಸಲ್ಪಡುವ ಮಧ್ಯ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತಿತರ ರಾಜ್ಯಗಳ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ. 

Advertisement

ಅಂತೆಯೇ ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ಗೆ ಯಾವುದೇ ಪಾತ್ರ ಇಲ್ಲ ಎನ್ನುವುದು ಇನ್ನೊಂದು ಗಮನಾರ್ಹ ಅಂಶ. ಎಲ್ಲ ವಿಪಕ್ಷಗಳನ್ನು ಒಟ್ಟುಗೂಡಿಸಿ ಮಹಾಘಟಬಂಧನ್‌ ಒಂದನ್ನು ರಚಿಸಿಕೊಂಡು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸಿ ಅವಕಾಶ ಸಿಕ್ಕಿದರೆ ಪ್ರಧಾನಿಯೂ ಆಗಿ ಬಿಡುವುದು ಎಂಬ ರಾಹುಲ್‌ ಗಾಂಧಿಯ ಲೆಕ್ಕಾಚಾರಗಳನ್ನು ಎಸ್‌ಪಿ-ಬಿಎಸ್‌ಪಿ ಮೈತ್ರಿ ಬುಡಮೇಲು ಮಾಡಿದೆ. ದಿಲ್ಲಿಯ ಅಧಿಕಾರ ಗದ್ದುಗೆಯ ರಾಜರಸ್ತೆ ಸಾಗು ವುದು ಲಖನೌ ಮೂಲಕ ಎನ್ನುವುದು ರಾಜಕೀಯದಲ್ಲಿ ಪ್ರಚಲಿತದಲ್ಲಿರುವ ಮಾತು. 

ದೇಶದಲ್ಲೇ ಅತ್ಯಧಿಕ 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶವು ದಿಲ್ಲಿ ಗದ್ದುಗೆಯೇರಲು ನಿರ್ಣಾಯಕ. 2014ರಲ್ಲಿ ಬಿಜೆಪಿ ಈ ರಾಜ್ಯದಲ್ಲಿ 71 ಸ್ಥಾನಗಳನ್ನು ಗೆಲ್ಲುವ ಮೂಲಕ ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಅನ್ನು ಗುಡಿಸಿ ಹಾಕಿತ್ತು. ಲೋಕಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತಗಳಿಸಿಕೊಳ್ಳುವಲ್ಲಿ ಉತ್ತರ ಪ್ರದೇಶದ ಪಾತ್ರ ಮುಖ್ಯವಾಗಿತ್ತು. ಈ ರಾಜ್ಯದ ಫ‌ಲಿತಾಂಶ ದೇಶದ ರಾಜಕೀಯ ಭವಿಷ್ಯನ್ನು ನಿರ್ಧರಿಸುವುದರಿಂದ ಇಲ್ಲಾಗುವ ರಾಜಕೀಯ ಬೆಳವಣಿಗೆಗಳನ್ನು ಇಡೀ ದೇಶ ಕುತೂಹಲದಿಂದ ಗಮನಿಸುತ್ತದೆ. ಇಂಥ ರಾಜ್ಯದಲ್ಲೇ ಏನೇನೂ ಅಸ್ತಿತ್ವ ಇಲ್ಲದ ಕಾಂಗ್ರೆಸ್‌ಗೆ ದಿಲ್ಲಿ ಅಧಿಕಾರ ದಕ್ಕಿಸಿಕೊಳ್ಳುವುದು ಅಷ್ಟು ಸುಲಭವಲ್ಲ. 

ಎಸ್‌ಪಿ ಮತ್ತು ಬಿಎಸ್‌ಪಿ ನಡುವಿನ ಮೈತ್ರಿಗೆ ಸ್ಫೂರ್ತಿಯಾಗಿರುವುದು ಕಳೆದ ವರ್ಷ ಗೋರಖ್‌ಪುರ ಮತ್ತು ಫ‌ೂಲ್‌ಪುರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಿಂದ ತೆರವಾದ ಈ ಎರಡು ಕ್ಷೇತ್ರಗಳಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಜತೆಯಾಗಿ ಸ್ಪರ್ಧಿಸಿ ಗೆದ್ದಿದ್ದವು. ಕಾಂಗ್ರೆಸ್‌ ಕೂಡಾ ಜತೆಗಿತ್ತು. ಈ ಗೆಲುವಿನ ಬಳಿಕವೇ ಉತ್ತರ ಪ್ರದೇಶ ಮಾತ್ರವಲ್ಲದೆ ಇತರೆಡೆಗಳಲ್ಲೂ ಎಲ್ಲ ವಿಪಕ್ಷಗಳು ಜತೆಯಾದರೆ ಮೋದಿಯನ್ನು ಮಣಿಸಬಹುದು ಎಂಬ ವಿಶ್ವಾಸ ಮೂಡಿದ್ದು. 

ಇದಕ್ಕೂ ಮೊದಲು ಮೋದಿಯ ಪ್ರಚಂಡ ಅಲೆಯೆದುರು ಎಲ್ಲ ಪಕ್ಷಗಳು ಥರಗುಟ್ಟಿದ್ದವು. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ ಎಸ್‌ಪಿ 47ರಲ್ಲೂ, ಬಿಎಸ್‌ಪಿ 19 ಸ್ಥಾನಗಳಲ್ಲೂ ಗೆದ್ದಿವೆ. ಕಾಂಗ್ರೆಸ್‌ ಸಾಧನೆ ಒಂದಂಕಿ. ಈ ಚುನಾವಣೆಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದವು. ಇದರಿಂದ ಎಸ್‌ಪಿಗೇನೂ ಲಾಭವಾಗಲಿಲ್ಲ. 

Advertisement

ಹೀಗಾಗಿ ಈ ಸಲ ಎಸ್‌ಪಿ ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ಸನ್ನು ದೂರ ವಿ ಟ್ಟಿದೆ. ಬಿಜೆಪಿ ಶೇ.40 ಮತಗಳಿಸಿದರೂ 312 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೇ ವೇಳೆ ಎಸ್‌ಪಿ ಮತ್ತು ಬಿಎಸ್‌ಪಿಯ ಒಟ್ಟು ಮತಗಳಿಕೆ ಶೇ. 44. ಈ ಒಂದು ಲೆಕ್ಕಾಚಾರವೇ ಒಂದು ಕಾಲದಲ್ಲಿ ಹಾವು ಮುಂಗುಸಿಯಂತೆ ಕಚ್ಚಾ ಡುತ್ತಿದ್ದ ಮಾಯಾವತಿ ಮತ್ತು ಅಖೀಲೇಶ್‌ ಯಾದವ್‌ ಜತೆಯಾಗುವಂತೆ ಮಾಡಿದ್ದು. 

ಬಲಾಡ್ಯ ಜಾತಿಗಳಾಗಿರುವ ಯಾದವರು, ಜಾಟರು ಮತ್ತು ಮುಸ್ಲಿಮರ ಮತಗಳನ್ನು ಗಳಿಸಿದರೆ ಗೆಲುವು ಸುಲಭ ಎನ್ನುವುದು ಈ ಮೈತ್ರಿಕೂಟದ ಸರಳ ಲೆಕ್ಕಾಚಾರ. ಹೀಗೆ ಪ್ರಾದೇಶಿಕ ಪಕ್ಷಗಳು ಒಗ್ಗೂಡಿರುವುದರಿಂದ ಇದೀಗ ಬಿಜೆಪಿ ತನ್ನ ರಣತಂತ್ರವನ್ನು ಬದಲಾಯಿಸುವ ಅನಿವಾರ್ಯತೆ ಇದೆ. ಈ ಮೂರು ಸಮುದಾಯಗಳನ್ನು ಬಿಟ್ಟು ಉಳಿದ ಜಾತಿಗಳನ್ನು ಮತ್ತು ಹಿಂದು ಮತಗಳನ್ನು ಒಗ್ಗೂಡಿಸಿದರೆ ಮಾತ್ರ ಉತ್ತರ ಪ್ರದೇಶದಲ್ಲಿ ತೃಪ್ತಿಕರ ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಾಗಬಹುದು. 

ಬಹುಪಕ್ಷೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭಿನ್ನ ಸಿದ್ಧಾಂತಗಳನ್ನು ಹೊಂದಿರುವ ರಾಜಕೀಯ ಪಕ್ಷಗಳು ಚುನಾವಣೆ ಸನ್ನಿಹಿತವಾಗುವಾಗ ಮೈತ್ರಿ ಮಾಡಿಕೊಳ್ಳುವುದು ಹೊಸದೇನೂ ಅಲ್ಲ. ಇಂಥ ಹಲವು ಮೈತ್ರಿಕೂಟಗಳನ್ನು ದೇಶ ಈ ಹಿಂದೆಯೂ ಕಂಡಿದೆ. ನೂರಾರು ಪಕ್ಷಗಳಿರುವುದರಿಂದ ಏಕಪಕ್ಷದ ಸರಕಾರವನ್ನು ಕಲ್ಪಿಸಿಕೊಳ್ಳಲಾರದಷ್ಟು ದೇಶದ ರಾಜಕೀಯ ಸ್ಥಿತ್ಯಂತರಗಳನ್ನು ಕಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವೂ ಆಗಿರಬಹುದು. ಆದರೆ ಮೈತ್ರಿ ಮಾಡಿಕೊಂಡ ಬಳಿಕ ಮೈತ್ರಿಧರ್ಮವನ್ನು ಪಾಲಿಸಿಕೊಂಡು ಹೋಗುವುದು ಪಕ್ಷಗಳ ಜವಾಬ್ದಾರಿ. 

Advertisement

Udayavani is now on Telegram. Click here to join our channel and stay updated with the latest news.

Next