ಚಿಕ್ಕಬಳ್ಳಾಪುರ: ಕಳೆದೊಂದು ಉತ್ತಮ ಮಳೆಯಾಗುತ್ತಿದ್ದು, ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜುಲೈ ಅಂತ್ಯಕ್ಕೂ ಮೊದಲೇ ನಿರೀಕ್ಷೆಗೂ ಮೀರಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಇದು ವರೆಗೂ ಜಿಲ್ಲೆಯಲ್ಲಿ ಒಟ್ಟಾರೆ ಶೇ. 68.36 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
96,317 ಹೆ.ಪ್ರ.ಪೂರ್ಣ: ಜಿಲ್ಲೆಯಲ್ಲಿ ಮುಂಗಾರು ಆರಂಭದಲ್ಲಿ ಸಮರ್ಪಕವಾಗಿ ಮಳೆ ಕಾಣದೇ ಬಿತ್ತನೆ ಕಾರ್ಯಕ್ಕೆ ಬಿತ್ತನೆ ಬೀಜ ಕೈಯಲ್ಲಿಡಿದು ರೈತರು ಆಕಾಶದತ್ತ ಮಳೆಗಾಗಿ ಚಾತಕ ಪಕ್ಷಿಗಳಿಂತೆ ಆತಂಕ ದಿಂದ ದಿಟ್ಟಿಸಿ ನೋಡುತ್ತಿದ್ದರು. ಆದರೆ ಅನ್ನದಾತ ರಿಗೆ ವರುಣ ಕೃಪೆ ತೋರಿದ್ದು, ನಿರೀಕ್ಷೆಗೂ ಮೀರಿ ಜಿಲ್ಲೆಯಲ್ಲಿ ಮಳೆ ಆಗುತ್ತಿರುವುದರಿಂದ ಬಿತ್ತನೆ ಕಾರ್ಯ ಚುರುಕು ಗೊಂಡಿದೆ. ಕೃಷಿ ಇಲಾಖೆ ಹೊಂದಿರುವ 1.40,000 ಲಕ್ಷ ಹೆಕ್ಟೇರ್ ಪೈಕಿ ಜಿಲ್ಲಾದ್ಯಂತ ಇದುವರೆಗೂ ಬರೋಬ್ಬರಿ 96,317 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣವಾಗಿದೆ.
ಆಗಸ್ಟ್ ಕೊನೆಯವರೆಗೂ ರಾಗಿ ಬಿತ್ತನೆ: ಕಳೆದ ವರ್ಷ ನೆಲಗಡಲೆಗೆ ಸಕಾಲದಲ್ಲಿ ಮಳೆ ಆಗದೇ ನಿಗದಿತ ಗುರಿಯಲ್ಲಿ ಅರ್ಧಕ್ಕೆ ಅರ್ಧ ಬಿತ್ತನೆ ಆಗಲಿಲ್ಲ. ಆದರೆ ಈ ಬಾರಿ ಜುಲೈ ಅಂತ್ಯಕ್ಕೆ ಮೊದಲೇ ನೆಲಗಡಲೆ ಶೇ.87.77 ಬಿತ್ತನೆ ಆಗಿದ್ದರೆ, ತೊಗರಿ ಶೇ.85.19 ಪೂರ್ಣಗೊಂಡಿದೆ. ಸಾಮಾನ್ಯ ವಾಗಿ ಜಿಲ್ಲೆಯಲ್ಲಿ ಖುಷಿಯಲ್ಲಿ ರೈತರು ವಾಡಿಕೆಯಂತೆ ನೆಲಗಡಲೆ ಹಾಗೂ ತೊಗರಿ ಜುಲೈ ಅಂತ್ಯಕ್ಕೆ ಬಿತ್ತನೆ ಮುಗಿಸಿ ನಂತರ ಆಗಸ್ಟ್ ಕೊನೆಯವರೆಗೂ ರಾಗಿ ಬಿತ್ತನೆ ಮಾಡುತ್ತಾರೆ. ಕಳೆದ ವರ್ಷ ಮಳೆ ಕ್ಷೀಣಿಸಿದ್ದರಿಂದ ನೆಲಗಡಲೆ ಹಾಗೂ ತೊಗರಿ ನಿರೀಕ್ಷಿತ ಪ್ರಮಾ ಣದಲ್ಲಿ ಬಿತ್ತನೆ ಆಗಿರಲಿಲ್ಲ. ಆದರೆ ಈ ವರ್ಷ ಚಿಂತಾ ಮಣಿ, ಶಿಡ್ಲಘಟ್ಟದಲ್ಲಿ ಸಕಾಲ ದಲ್ಲಿ ಮಳೆ ಆಗದಿರುವುದು ಬಿಟ್ಟರೆ ಉಳಿದ ತಾಲೂಕು ಗಳಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಕಾರ್ಯದಲ್ಲಿ ಸದ್ದಿಲ್ಲದೆ ರೈತರು ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಹಲವು ದಿನಗಳಿಂದ ಉತ್ತಮ ಮಳೆ ಆಗುತ್ತಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕೃಷಿ ಇಲಾಖೆ ಗುರಿ ಹೊಂದಿರುವ 1.40 ಲಕ್ಷ ಹೆಕ್ಟೇರ್ ಪೈಕಿ 96.317 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದು ಶೇ.68.36 ಗುರಿ ಸಾಧಿಸಲಾಗಿದೆ.
– ಎಲ್.ರೂಪಾ, ಜಂಟಿ ಕೃಷಿ ನಿರ್ದೇಶಕರು.
– ಕಾಗತಿ ನಾಗರಾಜಪ್ಪ