Advertisement

Chikkaballapura ರಕ್ಷಾಗಿಲ್ಲ ರಕ್ಷೆ; ಜಿಲ್ಲಾ ಕಾಂಗ್ರೆಸ್‌ನಲ್ಲಿ ಮುಂದುವರಿದ ಅಸಮಾಧಾನ

11:06 PM Apr 06, 2024 | Team Udayavani |

ಬೆಂಗಳೂರು: ಕೋಲಾರಕ್ಕೂ ಮುನ್ನ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿದ್ದ ಅಸಮಾಧಾನ ಇನ್ನೂ ಶಮನವಾಗಿಲ್ಲ. ಟಿಕೆಟ್‌ ಸಿಗದಿದ್ದರೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವ ಹಂತಕ್ಕೆ ಹೋಗಿದ್ದ ಶಿವಶಂಕರ ರೆಡ್ಡಿ ಹಾಗೂ ಮಾಜಿ ಸಂಸದ ವೀರಪ್ಪ ಮೊಯ್ಲಿ ಅವರನ್ನು ಹೈಕಮಾಂಡ್‌ ಸಮಾಧಾನಪಡಿಸಿತ್ತು. ಆದರೆ, ರಕ್ಷಾ ರಾಮಯ್ಯಗೆ ಟಿಕೆಟ್‌ ಘೋಷಣೆಯಾದ ಬಳಿಕ ಅಂತರ ಕಾಯ್ದುಕೊಂಡಿರುವ ಇಬ್ಬರು ನಾಯಕರೂ ಈವರೆಗೆ ರಕ್ಷಾ ರಾಮಯ್ಯ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ.

Advertisement

ಅಲ್ಲದೆ, ಸಚಿವ ಎಂ.ಸಿ. ಸುಧಾಕರ್‌, ಶಾಸಕ ಪ್ರದೀಪ್‌ ಈಶ್ವರ್‌ ಜತೆ ನಡೆದಿದ್ದ ಸಭೆಯಲ್ಲಿ ಶಿವಶಂಕರ ರೆಡ್ಡಿ ಒಂದಿಷ್ಟು ಬೇಡಿಕೆಗಳನ್ನಿಟ್ಟಿದ್ದು, ಅವುಗಳನ್ನು ಈಡೇರಿಸುವುದಾದರೆ ಮಾತ್ರ ಕೆಲಸ ಮಾಡುವುದಾಗಿ ಹೇಳಿದ್ದರು. ರವಿವಾರ ಬೆಂಬಲಿಗರ ಸಭೆ ಕರೆದಿದ್ದು, ಮುಂದಿನ ದಾರಿ ನಿಗೂಢವಾಗಿದೆ. ಅದೇ ರೀತಿ ರಾಯಚೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಸಚಿವ ಬೋಸರಾಜು ಅಸಮಾಧಾನಗೊಂಡಿದ್ದು ಅಭ್ಯರ್ಥಿ ಕುಮಾರ್‌ ನಾಯಕ್‌ ಪರ ಕೆಲಸಮಾಡಲು ನಿರುತ್ಸಾಹ ತೋರಿದ್ದಾರೆ ಎನ್ನಲಾಗಿದೆ.

ಬಾಗಲಕೋಟೆಯಲ್ಲಿ ಬಗೆಹರಿಯದ ಬಿಕ್ಕಟ್ಟು
ಬಾಗಲಕೋಟೆ ಕಾಂಗ್ರೆಸ್‌ ಅಭ್ಯರ್ಥಿಯೂ ಆಗಿರುವ ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್‌ ಅವರು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅಕ್ಕ ವೀಣಾ ಕಾಶಪ್ಪನವರ್‌ ಕೂಡ ಪ್ರಚಾರಕ್ಕೆ ಬರುತ್ತಾರೆ, ಅವರೂ ಕಾಂಗ್ರೆಸ್‌ನ ಭಾಗ, ಕಾಂಗ್ರೆಸ್‌ನ್ನು ಗೆಲ್ಲಿಸಲು ಬಂದೇ ಬರುತ್ತಾರೆ ಎನ್ನುತ್ತಲೇ ಇದ್ದಾರೆ. ಆದರೆ, ಟಿಕೆಟ್‌ ಕೈತಪ್ಪಿರುವ ಅಸಮಾಧಾನ ಹಾಗೇ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next