Advertisement

ಈ ವರ್ಷ 1.54 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ

09:30 PM May 08, 2019 | Lakshmi GovindaRaj |

ಸತತ ಆರೇಳು ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿದ್ದಾರೆ. ಜಿಲ್ಲೆಯಲ್ಲಿ ಮೇ 1 ರಿಂದ 8 ತನಕ ಸರಾಸರಿ 14.6 ಮೀ.ಮೀ ಮಳೆಯಾಗಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಬೇಕಾದ ರೀತಿಯಲ್ಲಿ ತಮ್ಮ ಹೊಲ ಗದ್ದೆಗಳನ್ನು ಹದ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಕೃಷಿ ಇಲಾಖೆ ಜಿಲ್ಲಾದ್ಯಂತ ಬರೋಬ್ಬರಿ 1.54 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಜಿಲ್ಲೆಯಲ್ಲಿ ಸದ್ಯ ಕೃಷಿ ಚಟುವಟಿಕೆಗಳು ಏನೆಲ್ಲಾ ನಡೆಯುತ್ತಿವೆ. ಕೃಷಿ ಇಲಾಖೆ ಏನೆಲ್ಲಾ ಬೆಳೆಗಳನ್ನು ಎಷ್ಟೆಷ್ಟು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ ಎಂಬುದರ ಸಂಕ್ಷಿಪ್ತ ವರದಿ ಇಲ್ಲಿದೆ.

Advertisement

ಚಿಕ್ಕಬಳ್ಳಾಪುರ: ಕಳೆದ ವರ್ಷಕ್ಕಿಂತ ಈ ವರ್ಷ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತದೆ ಎಂಬ ರಾಜ್ಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಬರದ ಜಿಲ್ಲೆ ಚಿಕ್ಕಬಳ್ಳಾಪುರ ರೈತರಲ್ಲಿ ಸಹಜವಾಗಿಯೇ ಹೊಸ ಆಶಾಕಿರಣ ಮೂಡಿಸಿದೆ.

ಸತತ ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ಅನ್ನದಾತರು ಈ ಬಾರಿ ಕೃಷಿ ಚಟುವಟಿಕೆಗಳಲ್ಲಿ ಉತ್ಸಾಹದಿಂದಲೇ ಪಾಲ್ಗೊಂಡಿರುವ ದೃಶ್ಯಗಳು ಎಲ್ಲೆಡೆ ಸಾಮಾನ್ಯವಾಗಿವೆ. ಈ ವರ್ಷದ ಮುಂಗಾರಿನಲ್ಲಿ ಕೃಷಿ ಇಲಾಖೆ ಜಿಲ್ಲೆಯಲ್ಲಿ ಬರೋಬ್ಬರಿ 1.54 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆಯ ಗುರಿ ಹೊಂದಿದೆ.

33,700 ಹೆಕ್ಟೇರ್‌ ಬಿತ್ತನೆ ಗುರಿ: ಜಿಲ್ಲೆಯಲ್ಲಿ ಈ ವರ್ಷ ಕೃಷಿ ಇಲಾಖೆ ಒಟ್ಟು 1,54 ಲಕ್ಷ ಹೆಕ್ಟೇರ್‌ ಗುರಿ ಪೈಕಿ ನೀರಾವರಿ ಪ್ರದೇಶದಲ್ಲಿ 18,280 ಹೆಕ್ಟೇರ್‌ ಗುರಿ ಹೊಂದಿದ್ದರೆ, ಖುಷ್ಕಿಯಲ್ಲಿ ಒಟ್ಟು 1,35,720 ಹೆಕ್ಟೇರ್‌ ಗುರಿ ಹೊಂದಿದೆ. ಆ ಪೈಕಿ ಒಟ್ಟು ಏಕದಳ ಧಾನ್ಯಗಳು 98,150 ಹೆrಕೇರ್‌ ಗುರಿ ಹೊಂದಿದ್ದರೆ ದ್ವಿದಳ ಧಾನ್ಯಗಳು ಬರೋಬ್ಬರಿ 21,800 ಹೆಕ್ಟೇರ್‌, ಎಣ್ಣೆಕಾಳು ಒಟ್ಟು 33,700 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.

ಬೆಳೆವಾರು ವಿವರ: ಒಟ್ಟು 1.54 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ಹೊಂದಿರುವ ಕೃಷಿ ಇಲಾಖೆ ಖುಷ್ಕಿ ಹಾಗೂ ನೀರಾವರಿ ಸೇರಿ ಒಟ್ಟು 2,500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, 42,500 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ, 53,000 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ, 150 ಹೆಕ್ಟೇರ್‌ ಪ್ರದೇಶದಲ್ಲಿ ತೃಣಧಾನ್ಯ ಬಿತ್ತನೆ ಗುರಿ ಸೇರಿ ಒಟ್ಟು 98,150 ಹೆಕ್ಟೇರ್‌ ಪ್ರದೇಶದಲ್ಲಿ ಏಕದಳ ಧಾನ್ಯಗಳ ಬಿತ್ತನೆಯ ಗುರಿ ಹೊಂದಲಾಗಿದೆ.

Advertisement

ದ್ವಿದಳ ಧಾನ್ಯಗಳಾದ ತೊಗರಿ ಒಟ್ಟು 13,600 ಹೆಕ್ಟೇರ್‌, ಹುರುಳಿ 1,200 ಹೆಕ್ಟೇರ್‌, ಅವರೆ 5500 ಹೆಕ್ಟೇರ್‌, ಅಲಸಂಧೆ ಒಟ್ಟು 1500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇನ್ನೂ ಎಣ್ಣೆ ಕಾಳುಗಳಾದ ಜಿಲ್ಲೆಯಲ್ಲಿ ಪ್ರಧಾನವಾಗಿ ಬೆಳೆಯುವ ನೆಲಗಡಲೆ ನೀರಾವರಿ ಹಾಗೂ ಖುಷ್ಕಿ ಸೇರಿ ಒಟ್ಟು 32,750 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಸೂರ್ಯಕಾಂತಿ ಕಟ್ಟು 200 ಹೆಕ್ಟೇರ್‌, ಸಾಸಿವೆ ಒಟ್ಟು 250 ಹೆಕ್ಟೇರ್‌, ಎಳ್ಳು ಒಟ್ಟು 150 ಹೆಕ್ಟೇರ್‌, ಹುಚ್ಚೆಳ್ಳು 150 ಹೆಕ್ಟೇರ್‌, ಹರಳು 200 ಹೆಕ್ಟೇರ್‌ ಸೇರಿ ಒಟ್ಟು 33,700 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ. ಉಳಿದಂತೆ ಜಿಲ್ಲೆಯಲ್ಲಿ ಅಪರೂಪವಾಗಿ ಬೆಳೆಯುವ ಕಬ್ಬು 200 ಹೆಕ್ಟೇರ್‌ ಹಾಗೂ ಹತ್ತಿ 150 ಹೆಕ್ಟೇರ್‌ ಪ್ರದೇಶದಲ್ಲ ಬೆಳೆಯುವ ಗುರಿ ಹೊಂದಲಾಗಿದೆ.

ಮುಂಗಾರು ಮಳೆ ಶುಭಾರಂಭ: ಸದ್ಯ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆ ಹಲವು ಕಡೆ ಶುಭಾರಂಭ ಮಾಡಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಬೇಕಾದ ರೀತಿಯಲ್ಲಿ ಹೊಲ, ಗದ್ದೆಗಳನ್ನು ಹದ ಮಾಡಿಕೊಳ್ಳುತ್ತಿರುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿವೆ.

ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದ ಸಾಲ, ಸೋಲ ಮಾಡಿ ಭೂಮಿಗೆ ಹಾಕಿದ ಬೀಜಗಳು ಮೊಳಕೆ ಒಡೆಯದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಜಿಲ್ಲೆಯ ರೈತರು ಈ ಬಾರಿ ಉತ್ತಮ ಮಳೆ ನಿರೀಕ್ಷೆ ಹೊಂದಿದ್ದಾರೆ. ಕೃಷಿ ಇಲಾಖೆ ಕೂಡ ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಮತ್ತಿತರ ಕೃಷಿ ಪರಿಕರಗಳ ದಾಸ್ತನು ಪ್ರಕ್ರಿಯೆಯಲ್ಲಿ ತೊಡಗಿದೆ. ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಂದ ರೈತರ ಬೇಡಿಕೆ ಪಡೆದುಕೊಂಡಿರುವ ಕೃಷಿ ಇಲಾಖೆ ಜಿಲ್ಲೆಗೆ ಅವಶ್ಯಕವಾಗಿರುವ ಬಿತ್ತನೆ ಬೀಜ, ರಸಗೊಬ್ಬರ ತರಿಸಿಕೊಳ್ಳಲು ಮುಂದಾಗಿದೆ.

ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ 14.6 ಮಿ.ಮೀ ಮಳೆ: ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಮೇ.8ರ ತನಕ ಸರಾಸರಿ 54 ಮಿ.ಮೀ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.03 ರಷ್ಟು ಮಳೆ ಕೊರತೆ ಉಂಟಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಜಿಲ್ಲಾದ್ಯಂತ 55.7 ಮಿ.ಮೀ ಮಳೆ ಆಗಿತ್ತು.

ಸದ್ಯ ಮೇ ತಿಂಗಳಲ್ಲಿ ಮಾತ್ರ ಇಡೀ ಜಿಲ್ಲೆಯಲ್ಲಿ ಸರಾಸರಿ 14.6 ಮಿ. ಮೀ ಮಳೆಯಾಗಿದೆ. ಆ ಪೈಕಿ ಬಾಗೇಪಲ್ಲಿ ತಾಲೂಕಿನಲ್ಲಿ 10.4 ಮಿ.ಮೀ., ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 10.6 ಮಿ.ಮೀ., ಚಿಂತಾಮಣಿ ತಾಲೂಕಿನಲ್ಲಿ 6.1 ಮಿ.ಮೀ., ಗೌರಿಬಿದನೂರು ತಾಲೂಕಿನಲ್ಲಿ 32.3 ಮಿ.ಮೀ., ಗುಡಿಬಂಡೆ ತಾಲೂಕಿನಲ್ಲಿ 12.3 ಮಿ.ಮೀ., ಶಿಡ್ಲಘಟ್ಟ ತಾಲೂಕಿನಲ್ಲಿ 12.0 ಮಿ.ಮೀ ಮಳೆಯಾಗಿದೆ.

ಕಳೆದ ವರ್ಷ 80 ಸಾವಿರ ಹೆಕ್ಟೇರ್‌ ಬೆಳೆ ಹಾನಿ: ಕಳೆದ ವರ್ಷ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟ ಪರಿಣಾಮ ಜಿಲ್ಲಾದ್ಯಂತ ತೀವ್ರ ಬರಗಾಲ ಎದುರಾಗಿ ಕೃಷಿ ಇಲಾಖೆ ಗುರಿ ಹೊಂದಿದ್ದ 1.54 ಲಕ್ಷ ಹೆಕ್ಟೇರ್‌ ಗುರಿ ಪೈಕಿ ಬರೋಬ್ಬರಿ 97.877 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳು ಬಿತ್ತನೆಯಾಗಿದ್ದರೂ ಮಳೆ ಕೊರತೆಯಿಂದ 80 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ರಾಗಿ, ನೆಲಗಡಲೆ, ಅವರೆ, ತೊಗರಿ, ಅಲಸಂಸದೆ ಮತ್ತಿತರ ಬೆಳೆಗಳು ಮಳೆ ಇಲ್ಲದೇ ಒಣಗಿತ್ತು. ಜೊತೆಗೆ ಹಿಂಗಾರು ಮಳೆಯಾದರೂ ಕೈ ಹಿಡಿಯಬಹುದೆಂಬ ಜಿಲ್ಲೆಯ ಅನ್ನದಾತ್ಕ ನಿರೀಕ್ಷೆ ಹುಸಿಯಾಗಿತ್ತು.

2019-20ನೇ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಬಿತ್ತನೆ ಗುರಿ
-ಬೆಳೆ ಒಟ್ಟು ವಿಸ್ತೀಣ (ಹೆ.ಕ)
-ಏಕದಳ ಧಾನ್ಯಗಳು 98,150
-ದ್ವಿದಳ ಧಾನ್ಯಗಳು 21,800
-ಎಣ್ಣೆಕಾಳು ಬೆಳೆಗಳು 33,700
-ವಾಣಿಜ್ಯ ಬೆಳೆಗಳು 350

ಜಿಲ್ಲೆಯ ಪ್ರಧಾನ ಬೆಳೆಗಳ ಹೆಕ್ಟೇರ್‌ವಾರು ವಿವರ
-ಬೆಳೆ ವಿಸ್ತೀರ್ಣ (ಹೆ.ಕ)
-ರಾಗಿ 42,500
-ಹೈ.ಮು.ಜೋಳ 53,000
-ತೊಗರಿ 13,600
-ಹುರುಳಿ 1,200
-ಅವರೆ 5,500
-ಅಲಸಂಧೆ 1,500
-ನೆಲಗಡಲೆ 32,750
-ಭತ್ತ 2,500

ಜಿಲ್ಲೆಯಲ್ಲಿ 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 1.54 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಸರಾಸರಿ 54 ಮಿ.ಮೀ ಮಳೆಯಾಗಿದ್ದು, ರೈತರು ಹೊಲಗಳನ್ನು ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೂನ್‌ ತಿಂಗಳಿಂದ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಶುರುವಾಗಲಿದೆ. ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗುತ್ತಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ನೇರವಾಗಿ ವಿತರಿಸಲಾಗುವುದು.
-ರೂಪ, ಜಂಟಿ ಕೃಷಿ ನಿರ್ದೇಶಕರು, ಚಿಕ್ಕಬಳ್ಳಾಪುರ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next