Advertisement
ನಾವು ಇಷ್ಟು ಸಾಧನೆ ಮಾಡಲು ಸಮರ್ಥರೂ ಎಂದ ಮೇಲೆ ಒಲಿಂಪಿಕ್ಸ್ನಲ್ಲಿ ನಮಗೆ ಏಕೆ ಇಂತಹ ಸಾಹಸಗಳನ್ನು ಮೆರೆಯಲಾಗುತ್ತಿಲ್ಲ?, ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್ನಲ್ಲಿ ನಮ್ಮ ಪದಕಗಳು ಒಂದೆರಡಕ್ಕೆ ಮಾತ್ರ ಸೀಮಿತವಾಗುವುದೇಕೆ?, ನಮಗೆ ಅನುಭವ ಕೊರತೆ ಇದೆಯೆ? ಅಥವಾ ನಾವು ಪಡೆಯುತ್ತಿರುವ ತರಬೇತಿಯಲ್ಲಿ ದೋಷ ಇದೆಯೆ? ಇಂತಹ ಸಾಮಾನ್ಯ ಪ್ರಶ್ನೆಗಳು ಪ್ರತಿಯೊಬ್ಬ ಕ್ರೀಡಾಭಿಮಾನಿಗಳ ಮನಸ್ಸಿನಲ್ಲಿ ಮೂಡುವುದು ಸಹಜ. ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದೆ.
Related Articles
ತರಬೇತಿ ಗುಣಮಟ್ಟ, ಕೋಚ್ ಕೊರತೆ: ಭಾರತೀಯರಿಗೆ ಸದ್ಯ ದೇಶೀಯ ಮಟ್ಟದಲ್ಲಿ ಸಿಗುತ್ತಿರುವ ತರಬೇತಿ ಹೆಚ್ಚು ಗುಣಮಟ್ಟದ್ದಾಗಿಲ್ಲ. ಒಲಿಂಪಿಕ್ಸ್ನಂತಹ ಕೂಟಗಳಿಗೆ ನಿರಂತರ ತಯಾರಿ ಅತ್ಯಗತ್ಯ. ವಿದೇಶಕ್ಕೆ ತೆರಳಿ ಅಲ್ಲಿನ ವಾತಾವರಣದಲ್ಲಿ ತರಬೇತಿ ಪಡೆಯಲೇಬೇಕಾಗುತ್ತದೆ. ಜತೆಗೆ ನಿಪುಣ ಕೋಚ್ಗಳ ಅಲಭ್ಯತೆಯೂ ಇದೆ.
Advertisement
ಆರ್ಥಿಕ ಅಡಚಣೆ: ಭಾರತದಲ್ಲಿನ ಹೆಚ್ಚಿನ ಕ್ರೀಡಾಪಟುಗಳು ಬಡ, ಮಧ್ಯಮ ವರ್ಗದ ಕುಟುಂಬದವರು. ಅವರಿಗೆ ಆರ್ಥಿಕ ಸಮಸ್ಯೆಗಳೇ ಹೆಚ್ಚು. ಕೋಚಿಂಗ್ ಹೋಗುವುದು, ವಿದೇಶಕ್ಕೆ ಕೂಟಕ್ಕೆ ತೆರಳುವುದು ಇದಕ್ಕೆಲ್ಲ ಲಕ್ಷಾಂತರ ರೂ. ಖರ್ಚಾಗುತ್ತದೆ. ಸರ್ಕಾರ ಸ್ವಲ್ಪ ಹಣ ನೀಡುತ್ತದೆಯಾದರೂ ಅದು ಸಾಲುತ್ತಿಲ್ಲ. ಜತೆಗೆ ತಳಮಟ್ಟದಲ್ಲಿ ತರಬೇತಿ ನೀಡಲು ಸೂಕ್ತ ಹಣದ ಕೊರತೆ ಎದುರಾಗಿದೆ.
ಇಂದು ಕ್ರೀಡೆಗಳೇ ದುಬಾರಿ: ಇಂದು ಕ್ರೀಡೆ ದುಬಾರಿಯಾಗಿದೆ. ನೀವು ನಂಬುತ್ತೀರೋ.. ಬಿಡುತ್ತಿರೋ.. ವೈದ್ಯಕೀಯ, ಇಂಜಿನಿಯರಿಂಗ್ ಓದುವುದಕ್ಕಿಂತ ಹೆಚ್ಚಿನ ಖರ್ಚು ಇಂದು ಕ್ರೀಡೆಗೆ ವ್ಯಯಿಸಬೇಕಾಗುತ್ತದೆ. ತರಬೇತಿ, ವಿದೇಶಿ ಕೋಚಿಂಗ್, ಡಯಟ್, ಕಿಟ್, ಜೆರ್ಸಿ ಇದೆಲ್ಲದರ ಖರ್ಚು ತಿಂಗಳಿಗೆ ಕನಿಷ್ಟ ಎಂದರೂ 10 ಸಾವಿರ ಆಗುತ್ತದೆ. ಇದನ್ನು ಭರಿಸಲು ಹೆಚ್ಚಿನ ಕ್ರೀಡಾಪಟುವಿನ ಹೆತ್ತವರಿಗೆ ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದ ಅದೆಷ್ಟೋ ಕ್ರೀಡಾಪಟುಗಳು ಕ್ರೀಡೆಯನ್ನೇ ತೊರೆದ ಉದಾಹರಣೆಗಳಿವೆ.
ಅಸೋಸಿಯೇಷನ್ ಒಳಜಗಳ: ಕ್ರಿಕೆಟ್ ಹೊರತುಪಡಿಸಿ ದೇಶದ ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ಹೆಚ್ಚಿನವುಗಳಲ್ಲಿ ಇಂದು ಒಳಜಗಳವೇ ತುಂಬಿ ತುಳುಕುತ್ತಿದೆ. ಹೊಲಸು ರಾಜಕೀಯ ಹರಿಯುತ್ತಿದೆ. ವೈಯಕ್ತಿಕ ಹಿತಾಸಕ್ತಿಗಾಗಿ ಕ್ರೀಡಾಪಟುಗಳ ಹಿತಾಸಕ್ತಿಯನ್ನೇ ಬಲಿಕೊಡಲಾಗುತ್ತಿದೆ. ಜವಾಬಾœರಿಯುತ ವ್ಯಕ್ತಿಗಳು ವೈಯಕ್ತಿಕ ಲಾಭಕ್ಕೋಸ್ಕರ ಬಡಿದಾಡಿಕೊಳ್ಳುತ್ತಿದ್ದಾರೆ. ಇದೆಲ್ಲವು ಕ್ರೀಡೆಯ ಸಮಗ್ರ ಅಭಿವೃದ್ಧಿಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ.
ಪ್ರಾಯೋಜಕರ ಕೊರತೆ: ಕ್ರಿಕೆಟ್ನಂತಹ ಆದಾಯ ಬರುವ ಕ್ರೀಡೆಯನ್ನು ಹೊರತುಪಡಿಸಿ ಬಹುತೇಕ ಎಲ್ಲ ಕ್ರೀಡೆಗಳು ಇದು ಪ್ರಾಯೋಜಕರ ಕೊರತೆ ಎದುರಿಸುತ್ತಿವೆ. ದೊಡ್ಡ ಸಂಸ್ಥೆಗಳ ಹೆಚ್ಚಿನ ಪ್ರಾಯೋಜಕರು ಗೆದ್ದ ಎತ್ತುಗಳ ಬಾಲವನ್ನೇ ಹಿಡಿಯುತ್ತಿದ್ದಾರೆ. ತಳಮಟ್ಟದಲ್ಲಿ ತರಬೇತಿ ಕೊಡುವ ಪ್ರಯತ್ನದಲ್ಲಿ ಪ್ರಾಯೋಜಕರ ಕೊಡುಗೆ ಶೂನ್ಯ. ಗೆದ್ದ ಮೇಲೆ ಚಪ್ಪಾಳೆ ತಟ್ಟಿ ಬೆಂಬಲಿಸುವುದಕ್ಕಿಂತ ಗೆಲ್ಲುವವರಿಗೆ ದಾರಿ ಮಾಡಿಕೊಡುವ ಹೊಣೆಗಾರಿಕೆಯನ್ನು ಪ್ರಾಯೋಜಕರು ಹೊತ್ತರೆ ಬಹುತೇಕ ಅರ್ಧ ಸಮಸ್ಯೆ ಪರಿಹಾರಗೊಳ್ಳುವುದರಲ್ಲಿ ಅನುಮಾನವಿಲ್ಲ.