Advertisement

ಬೂಟುಗಾಲಿನ ಸದ್ದು

06:00 AM Sep 16, 2018 | |

ಒಂದು ನಾಟಕದಿಂದಾಗಿ ಭಾರತ ಬಂದ್‌ನ ಇಡೀ ಸಂದರ್ಭವನ್ನು ಬೇರೆಯದೇ ರೀತಿಯಲ್ಲಿ ನೋಡುವುದಕ್ಕೆ ಸಾಧ್ಯವಾಯಿತು!

Advertisement

ಮೊನ್ನೆ ಎಂದರೆ, ಸೆ. 9 ಮುಂಬೈಯ “ಮೈಸೂರು ಅಸೋಸಿಯೇಶನ್‌’ ರಂಗಮಂದಿರದಲ್ಲಿ, “ಏಷಿಯನ್‌ ಥೇಟರ್‌’ ಬೆಂಗಳೂರಿನವರು ಸಾದರಪಡಿಸಿದ ಬೂಟುಗಾಲಿನ ಸದ್ದು ನಾಟಕ, ಪ್ರಸ್ತುತ ಸಮಾಜದ ವಾಸ್ತವತೆಯ ಚಿತ್ರಣವನ್ನು ತೆರೆದಿಟ್ಟ ಪರಿ, ಮನಸ್ಸಿನಲ್ಲಿ ಇನ್ನೂ ಹಸಿಯಾಗಿತ್ತು. ಸೆ. 10 ಭಾರತ ಬಂದ್‌  ಘೋಷಿತವಾದ ದಿನ. ಯಾವಾಗಲೂ ಕರ್ಕಶ ವಾಹನಗಳ ಸದ್ದಿನಿಂದ ಗಿಜಿಗುಡುವ ಮುಂಬೈ ನಗರಿಯಲ್ಲಿ, ಹಿಂದೆ ಮುಷ್ಕರದ ಘೋಷಣೆಯಾದ  ದಿನಗಳಲ್ಲೆಲ್ಲ ಕಾಡುವ ನಿಶ್ಯಬ್ದ ವಾತಾವರಣ, ನಮ್ಮಂಥ‌ವರಿಗೆ ಅಸುರಕ್ಷಿತವೆಂಬ ಭೀತಿ ಮನಸ್ಸಲ್ಲಿ ಖಾಯಂ ಆಗಿರುವುದರಿಂದ ಮನೆಯಿಂದ ಹೊರಗಡೆ ಕಾಲಿಡಲೂ ಮನಸ್ಸು ಹಿಂಜರಿಯುವಂತಿರುತ್ತಿತ್ತು. ಆದರೆ, ಬಂದ್‌ನ ಮರುದಿನ ಹಾಗಿರಲಿಲ್ಲ. ಹೊರಗಡೆ ಎಂದಿನಂತೆ ಸದ್ದು ಗದ್ದಲ ಕೇಳಿ ಬರುತ್ತಿತ್ತು. ಬಂದ್‌ ಯಾರ ಮೇಲೂ ಅಷ್ಟೊಂದು ಪರಿಣಾಮ ಬೀರಲಿಲ್ಲವೇನೋ! ನಮ್ಮ ಅಗತ್ಯವನ್ನು ಪೂರೈಸಿಕೊಳ್ಳುವುದಕ್ಕೆ ಅಡ್ಡಿ ಇಲ್ಲವೆಂದುಕೊಂಡು ಬೆಳಗ್ಗಿನ ಸುಮಾರು 10.30ರ ಹೊತ್ತಿಗೆ, ಒಂದು ಬಟ್ಟೆಯ ಚೀಲ ಮತ್ತು ಪರ್ಸನ್ನು ಹಿಡಿದುಕೊಂಡು ಬೀದಿಗಿಳಿದೆ. ಒಂದಷ್ಟು ದೂರ ಹೋಗುವವರೆಗೂ ಎಲ್ಲವೂ ಮುಂಚಿನಂತೆಯೇ ಇತ್ತು. ದಿನಸಿ ಅಂಗಡಿಗಳೆಲ್ಲ ತೆರೆದಿದ್ದವು. ಬೀದಿಯಲ್ಲಿ ಹೂ-ಹಣ್ಣು ತರಕಾರಿ ಮಾರುವವರೆಲ್ಲ ತಮ್ಮ ಪಾಡಿಗೆ ವ್ಯಾಪಾರದಲ್ಲಿ ನಿರತರಾಗಿದ್ದರು. ಬಂದು ಹೋಗುವವರ, ಚೌಕಾಶಿ ಮಾಡುವವರ ಸಂಖ್ಯೆಯೂ ಎಂದಿಗಿಂತ ಕಡಿಮೆಯೇನಿರಲಿಲ್ಲ. ಆಟೋದವರು ಕೂಡ  ಪ್ರಯಾಣಿಕರನ್ನು ಹೊತ್ತು ಸಾಗಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದನ್ನೆಲ್ಲ ಗಮನಿಸಿದಾಗ, “ಓಹ್‌! ಭಾರತ್‌ ಬಂದ್‌ಗೆ ಯಾರೂ ತಲೆಕೆಡಿಸಿಕೊಂಡಿಲ್ಲ’ ಅನ್ನಿಸಿ, ಜನರ ಕಾರ್ಯತತ್ಪರತೆಯ ಬಗೆಗೆ ಹೆಮ್ಮೆ ಅನಿಸಿತು.

ಅಲ್ಲಿಂದ ಮುಂದೆ ಬಲಗಡೆ ರಸ್ತೆಗೆ ತಿರುಗಿದಾಗ, ಕೆಲವ‌ರು ತಮ್ಮ ಪಕ್ಷದ ಗುರುತಿನ ಶಾಲನ್ನು ಹೆಗಲಿಗೇರಿಸಿಕೊಂಡು ಬೈಕಿನಲ್ಲಿ ಸುತ್ತಾಡುತ್ತಿರುವುದು ಕಂಡು ಬಂತು. ಪ್ರತಿಯೊಂದು ಅಂಗಡಿ ಬಾಗಿಲಿನಲ್ಲಿ ನಿಲ್ಲಿಸಿ “ಶಟರ್‌ ಬಂದ್‌ ಕರೋ’ ಎಂದು ಮುಂದೆ ಹೋಗುತ್ತಿದ್ದರು. ಅಂಗಡಿಯ ಮಾಲಕರು ತಲೆಯಲ್ಲಾಡಿಸಿ ಬಂದ್‌ ಮಾಡಲು ಮನಸ್ಸಿಲ್ಲದೆ ನಿಂತಿದ್ದಾಗ ಇನ್ನೊಂದು ಗುಂಪು ಬಂದು ಏರು ಸ್ವರದಲ್ಲಿ ಮಾತಾಡುತ್ತಿರುವುದು ಕೇಳಿಬರುತ್ತಿತ್ತು. ಅವರಲ್ಲಿ ಒಬ್ಬೊಬ್ಬರೇ ಬೀದಿಯಲ್ಲಿ ತರಕಾರಿ ಮಾರುವವರ ಬಳಿಗೂ ಬಂದರು. 

ಇನ್ನೂ ವ್ಯಾಪಾರವನ್ನು ಮುಂದುವರಿಸಿದರೆ ಏನಾಗಬಹುದೆಂಬ ಎಚ್ಚರಿಕೆಯನ್ನು ನೀಡುತ್ತಿದ್ದರು. ಅಲ್ಲಿಂದ ಮನೆಗೆ ತಿರುಗುವಷ್ಟರ ಹೊತ್ತಿಗೆ, ರಸ್ತೆಯಲ್ಲಿ ಆವರೆಗೆ ಓಡಾಡುತ್ತಿದ್ದ ವಾಹನಗಳ ಅಬ್ಬರವೂ ಕಡಿಮೆಯಾಗಿತ್ತು. ತೆರೆದಿದ್ದ ಎಲ್ಲ ಅಂಗಡಿಗಳೂ ಮುಚ್ಚಲ್ಪಟ್ಟಿದ್ದವು. ಮುಷ್ಕರದ ಕಾವೇರಲಾರಂಭಿಸಿತು. ಸದ್ದಿಲ್ಲದೆ ಬೀದಿಯಲ್ಲಿರುವ ಜನ ಸಂಚಾರ ವಿರಳವಾಗತೊಡಗಿತು. 

ಭಾರತ ಬಂದ್‌ ಹೊಸ ಸಂಗತಿ ಏನಲ್ಲ. ಆಡಳಿತದಲ್ಲಿ ಯಾವುದೇ ಪಕ್ಷವಿರಲಿ, ಉಳಿದ ಪಕ್ಷಗಳು ಜೊತೆಯಾಗಿ ಬಂದ್‌ಗೆ ಕರೆನೀಡುತ್ತವೆ. ಈ ಸಲದ ಬಂದ್‌ಗೆ ಒಂದು ಪಕ್ಷ ಬೆಂಬಲ ನೀಡಿದರೆ, ಮತ್ತೂಮ್ಮೆ ಮತ್ತೂಂದು ಪಕ್ಷದ ಬೆಂಬಲದಿಂದ ಬಂದ್‌ ನಡೆಯುತ್ತದೆ, ಪ್ರತಿಬಾರಿ ಬಂದ್‌ನಿರತ ಪಕ್ಷವು ಆಡಳಿತಾರೂಢ ಪಕ್ಷವನ್ನು ದೂಷಿಸುತ್ತದೆ. ಇವೆರಡರ ಜಗಳದಲ್ಲಿ ಸಾಮಾನ್ಯ ಮನುಷ್ಯ ಬವಣೆ ಪಡುತ್ತಾನೆ.ಬಂದ್‌ಗೆ ಬೆಂಬಲ ನೀಡಿದ್ದು ಯಾವ ಪಕ್ಷವೆಂದು ಮುಖ್ಯವಲ್ಲ. ಆದರೆ, ಒತ್ತಾಯಪೂರ್ವಕವಾಗಿ ಬಂದ್‌ ನಡೆಸುವವರ ಬೂಟುಗಾಲಿನ ಸದ್ದಿನಲ್ಲಿ ನನಗೆ ಮೊದಲ ದಿನ ನೋಡಿದ ನಾಟಕವೇ ಕಣ್ಣೆದುರು ಬರುತ್ತಿತ್ತು.

Advertisement

ಮೊನ್ನೆಯ ದಿನ ಬೂಟುಗಾಲಿನ ಸದ್ದಿನಲ್ಲಿ ಕಾಣಿಸಿದ ಸತ್ಯ ಪ್ರತ್ಯಕ್ಷವಾಗಿ ಕಂಡಂತಿತ್ತು. ಹಿಂದೆ ಬ್ರಿಟಿಷರ ದಬ್ಟಾಳಿಕೆ, ಹೈದರಾಬಾದಿನಲ್ಲಿ ನಿಜಾಮರ ಹಿಂಸಾಚಾರ ಇವೆಲ್ಲವುಗಳಿಂದ ಮುಕ್ತಿ ಪಡೆದು ಎಲ್ಲ ರಾಜ್ಯಗಳು ಒಗ್ಗೂಡಿ ಸ್ವತಂತ್ರ ಭಾರತವಾದಾಗ, ನಮ್ಮವರೊಳಗೆಯೇ ಕಚ್ಚಾಟ ನಡೆಯುವ ದುರಂತ ಚಿತ್ರಣವನ್ನು ನಾಟಕದಲ್ಲಿ ಕಂಡು, ನಮ್ಮ ದೇಶದ ಇಂದಿನ ಸ್ಥಿತಿಗೆ ಮನಸ್ಸು ಮರುಗಿತ್ತು. ಆ ನಾಟಕವೇನೋ ಮೊದಲ ಬಹುಮಾನ ಗಳಿಸಿತು. ಆದರೆ, ಜನರ ಮನಸ್ಥಿತಿಯ ಪರಿವರ್ತನೆ ಎಂದಾಗುವುದೋ ಎನ್ನುವ ವಿಷಾದಭಾವ ಮೊನ್ನೆಯ ಭಾರತ್‌ಬಂದ್‌ನ ದಿನದಲ್ಲಿ ನಡೆದ ಅವಾಂತರಗಳಿಗೆ ಕನ್ನಡಿಯಾಗಿ ನಿಂತಿತ್ತು. 

ಕೆಲವು ವರ್ಷಗಳ ಹಿಂದೆ ಬೆಳಗಾತ ಯಾವ ಸೂಚನೆಯೂ ಇಲ್ಲದೆ  ರೈಲು ಮುಷ್ಕರ ನಡೆದಿತ್ತು. ಲಕ್ಷಾಂತರ ಜನರು ರೈಲು ನಿಲ್ದಾಣಗಳಲ್ಲಿ, ರಸ್ತೆಯಲ್ಲಿ ಪರದಾಡುವ ಸ್ಥಿತಿ ಬಂದೊದಗಿತ್ತು. ದೂರದ ಊರುಗಳಿಗೆ ಹೋಗಿ ಹಾಲು ಮಾರುವ ಹಳ್ಳಿಯ ಬಡ ವ್ಯಾಪಾರಿಗಳು, ಅಂದು ಬೀದಿಯ ಬದಿಯಲ್ಲಿ ಕೂತು ಅರ್ಧ ಕ್ರಯಕ್ಕೆ ಹಾಲನ್ನು ಮಾರಾಟ ಮಾಡುತ್ತಿದ್ದರು. ಮುಷ್ಕರವಾದಾಗಲೆಲ್ಲ ಇಂಥವರೇ ಹೆಚ್ಚಾಗಿ ನಷ್ಟವನ್ನು ಅನುಭವಿಸುವವರು. ಇಂಥ ಸಮಸ್ಯೆಗಳು ವರ್ಷಕ್ಕೆ ಹಲವಾರು ಬಾರಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಬಂದ್‌ ಒಂದೇ ಪರಿಹಾರವೆ? ಉಳ್ಳವರಿಗೆ ಇದರಿಂದ ಹೇಳುವಂಥ ತೊಂದರೆ ಏನೂ ಆಗದು. ಅದರೆ, ನಿತ್ಯ ಬೀದಿಯಲ್ಲಿ ನಿಂತು ಒಂದಷ್ಟು ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರು ಮಾರಾಟಕಿಟ್ಟಿದ್ದ ತರಕಾರಿ ಕಸದ ಬುಟ್ಟಿಗೆ ಸೇರಿದಾಗ ಅವರು ಪಡುವ ಪಾಡನ್ನು ಯಾರು ನೆನೆಯುತ್ತಾರೆ?

ಒಂದು ನಾಟಕದಿಂದಾಗಿ ಇಡೀ ಸಂದರ್ಭವನ್ನು ಬೇರೆಯದೇ ರೀತಿಯಲ್ಲಿ ನೋಡುವುದಕ್ಕೆ ಸಾಧ್ಯವಾಯಿತು. ಮೊದಲಾದರೆ, ಧರಣಿ, ಬಂದ್‌ ಇವೆಲ್ಲ ಮಾಮೂಲಿ, ನಾಳೆ ಎಂದಿನಂತಾಗುತ್ತದೆ ಎಂಬ ನಿರ್ಭಾವುಕ ಧೋರಣೆಯಲ್ಲಿರುತ್ತದೆ. ಆದರೆ, ಮೊನ್ನೆಯ ಭಾರತ ಬಂದ್‌ ಮಾತ್ರ ತುಂಬ ಯೋಚಿಸುವಂತೆ ಮಾಡಿದೆ. ಯಾವ ಪಕ್ಷವೇ ಬಂದ್‌ನ್ನು ಘೋಷಿಸಲಿ, ಅದು ಜನರ ಪ್ರಾತಿನಿಧಿಕ ಧ್ವನಿಯೇ ಆಗಿರಲಿ ಆದರೆ, ಅದರಿಂದಾಗುವ ನಷ್ಟ ಮಾತ್ರ ಯಾವ ಉದ್ದೇಶದಿಂದ ಬಂದ್‌ ಆಚರಿಸುತ್ತೇವೆಯೋ ಅದರ ಉದ್ದೇಶವನ್ನು ಹಾಳುಗೆಡವುತ್ತದೆ. ದುಡಿಯುವ ವರ್ಗದ ಪರವಾಗಿರದೆ, ಕೇವಲ ಬೂಟ್‌ಗಾಲಿನ ಸದ್ದು ಮೊಳಗುವುದಕ್ಕೆ ಮಾತ್ರ ಇದು ಸೀಮಿತವಾಗುತ್ತದೆ.        

– ಅನಿತಾ ಪಿ. ತಾಕೊಡೆ

Advertisement

Udayavani is now on Telegram. Click here to join our channel and stay updated with the latest news.

Next