Advertisement

ಸ್ವಂತ ಸೂರೂ ಇಲ್ಲ: ಸೌಲಭ್ಯವೂ ಇಲ್ಲ!

01:06 PM Oct 31, 2019 | |

ಸೊರಬ: ಎ.ಪಿ.ಜೆ. ಅಬ್ದುಲ್‌ ಕಲಾಂ ಹೇಳುವಂತೆ “ಒಂದು ಅತ್ಯುತ್ತಮ ಪುಸ್ತಕ ನೂರು ಉತ್ತಮ ಸ್ನೇಹಿತರಿಗೆ ಸಮ. ಒಬ್ಬ ಅತ್ಯುತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ’. ಹೌದು ಗ್ರಂಥಾಲಯಗಳು ಯಾವುದೇ ಬೇಧಭಾವವಿಲ್ಲದೇ ಪ್ರತಿಯೊಬ್ಬರಿಗೂ ಜ್ಞಾನ ಒದಗಿಸಿಕೊಡುವ ಕೇಂದ್ರಗಳು. ಆದರೆ ಸಾರ್ವಜನಿಕ ಗ್ರಂಥಾಲಯಗಳು ಹೆಚ್ಚಿದ್ದರೂ ಸ್ವಂತ ಕಟ್ಟಡಗಳ ಸಮಸ್ಯೆಯ ಜೊತೆಗೆ ಮೂಲ ಸಮಸ್ಯೆಗಳಿಂದ ಬಳಲುತ್ತಿವೆ.

Advertisement

ತಾಲೂಕು ಕೇಂದ್ರವಾದ ಸೊರಬ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ 1988ರಲ್ಲಿ ಆರಂಭವಾದ ಸಾರ್ವಜನಿಕ ಗ್ರಂಥಾಲಯಕ್ಕೆ 31 ವರ್ಷಗಳು ಸವೆದಿವೆ. ಸುಮಾರು 25,762 ಪುಸ್ತಕಗಳಿದ್ದು, 1,192 ಸದಸ್ಯರಿದ್ದಾರೆ. ಆದರೆ, ನಿತ್ಯ ಗ್ರಂಥಾಲಯಕ್ಕೆ ಭೇಟಿ ಕೊಡುವವರ ಸಂಖ್ಯೆ ಸುಮಾರು 100 ಮಾತ್ರ! ಸ್ವಂತ ಕಟ್ಟಡ ಸೇರಿದಂತೆ ಸೂಕ್ತ ಸೌಲಭ್ಯಗಳ ಕೊರತೆ ಹಾಗೂ ಜನನಿಬಿಡ ಪ್ರದೇಶದಲ್ಲಿರದಿರುವುದೇ ಇದಕ್ಕೆ ಕಾರಣವಾಗಿದೆ.

ಪಟ್ಟಣ ಗ್ರಂಥಾಲಯಕ್ಕೆ 15 ಸಾವಿರ ಹೊಸ ಪುಸ್ತಕಗಳು ಸರ್ಕಾರದಿಂದ ಬಂದಿದ್ದರೂ ಪುಸ್ತಕ ಇಡಲು ಜಾಗವಿಲ್ಲ. ಜೊತೆಗೆ ಗ್ರಂಥಾಲಯದ ಪಕ್ಕದಲ್ಲಿಯೇ ಇರುವ ಹಾಳು ಬಿದ್ದಿರುವ ಜಾಗದಿಂದ ಇಲಿ, ಹೆಗ್ಗಣಗಳು ಬಂದು ಪುಸ್ತಕ ತಿನ್ನುವ ಭಯದಿಂದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿಯೇ ಇಡಲಾಗಿದೆ.

ಯುವಕರ ಸೆಳೆಯಬೇಕಿದೆ: ಯುವಜನತೆ ಮೊಬೈಲ್‌, ಇಂಟರ್‌ನೆಟ್‌ಗಳ ಅಗಾಧ ಬಳಕೆಯಿಂದ ಪುಸ್ತಕಗಳತ್ತ ಮುಖ ಮಾಡುವುದೇ ಕಡಿಮೆಯಾಗಿದೆ. ಸುಮಾರು 390 ಹಳ್ಳಿಗಳನೊಳ್ಳಗೊಂಡ ತಾಲೂಕಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಪೂ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್‌, ಐಟಿಐ ಕಾಲೇಜುಗಳಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಅನೇಕರು ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಕೈಗೊಂಡಿದ್ದಾರೆ. ಗ್ರಂಥಾಲಯವನ್ನು ಪಟ್ಟಣದ ಕೇಂದ್ರದಲ್ಲಿ ಸ್ಥಾಪಿಸಿದರೆ ವಿದ್ಯಾರ್ಥಿಗಳು ಹಾಗೂ ಯುವ ಜನತೆಯನ್ನು ಓದಿನಡೆಗೆ ಸೆಳೆಯಬಹುದು.

Advertisement

ಸ್ವಂತ ಕಟ್ಟಡಗಳ ಕೊರತೆ: ತಾಲೂಕಿನಲ್ಲಿ 39 ಸಾರ್ವಜನಿಕ ಗ್ರಂಥಾಲಯಗಳಿದ್ದು, ಚಂದ್ರಗುತ್ತಿ, ತವನಂದಿ, ಕುಪ್ಪಗಡ್ಡೆ ಗ್ರಾಮಗಳಲ್ಲಿ ಮಾತ್ರ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಉಳಿದಂತೆ ಪಂಚಾಯತ್‌ ಕಟ್ಟಡ, ಖಾಸಗಿ ಕಟ್ಟಡಗಳಲ್ಲಿ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಕೂಗು ಓದುಗ ಬಳಗದಿಂದ ವ್ಯಕ್ತವಾಗುತ್ತಿದೆ.

ಶೌಚಗೃಹ ಸಮಸ್ಯೆ: ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯದಲ್ಲಿ ಶೌಚಗೃಹದ ಸಮಸ್ಯೆ ಓದುಗರನ್ನು ಕಾಡುತ್ತಿದೆ. ಕಟ್ಟಡದ ಪಕ್ಕದಲ್ಲಿಯೇ ಪಪಂಗೆ ಸೇರಿದ ಸಾರ್ವಜನಿಕ ಶೌಚಗೃಹವಿದ್ದರೂ, ಬಳಕೆಗೆ ಯೋಗ್ಯವಾಗಿಲ್ಲ.

ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. ಗ್ರಂಥಾಲಯದಲ್ಲಿ ಮೂಗು ಮುಚ್ಚಿಕೊಂಡೇ ಓದುವ ಸ್ಥಿತಿ ಇದ್ದು, ಇನ್ನು ಮಹಿಳಾ ಓದುಗರಂತೂ ಇತ್ತ ಕಡೆ ಮುಖವನ್ನೇ ಮಾಡದಂತಾಗಿದೆ. ಪಟ್ಟಣದ ಹಳೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಜಾಗದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡುವ ಯೋಜನೆ ಇದ್ದು, ಇದಕ್ಕೆ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದರೂ ಈವರೆಗೂ ಯಾವುದೇ ಪ್ರಕ್ರಿಯೆ ಪ್ರಾರಂಭವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next