Advertisement

ಶ್ರದ್ಧಾಂಜಲಿ ಸೇವೆಗೂ ಬರಲಿದೆ 108 ವಾಹನ

03:45 AM Mar 10, 2017 | |

ಬೆಂಗಳೂರು:ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬಡವರ್ಗಕ್ಕೆ ವೈದ್ಯಕೀಯ ಸೇವೆ ಒದಗಿಸುತ್ತಿರುವ “108 ಆ್ಯಂಬುಲೆನ್ಸ್‌ ಜತೆಗೆ ಇನ್ಮುಂದೆ “ಶ್ರದ್ಧಾಂಜಲಿ’ ವಾಹನ ಸೇವೆಯೂ ಲಭ್ಯವಾಗಲಿದೆ.

Advertisement

ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟ ಬಡರೋಗಿಗಳ ಮೃತದೇಹ ಮನೆಗೆ ರವಾನಿಸುವುದು ಅಥವಾ ಮನೆಯಲ್ಲೇ ಮೃತಪಟ್ಟ ಸಂದರ್ಭಗಳಲ್ಲಿ ಅಂತ್ಯಕ್ರಿಯೆಗಾಗಿ ಚಿತಾಗಾರ ಅಥವಾ ರುದ್ರಭೂಮಿಗೆ ಸಾಗಿಸಲು ಈ “ಶ್ರದ್ಧಾಂಜಲಿ’ ಸೇವೆ ಬಳಕೆ ಮಾಡಿಕೊಳ್ಳಬಹುದು. ಇದು ಉಚಿತ ಸೇವೆಯಾಗಿದೆ.

108 ಕ್ಕೆ ಕರೆ ಮಾಡಿದರೂ ಈ ಸೇವೆ ಲಭ್ಯವಾಗಲಿದೆ.  ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 30 ಶ್ರದ್ಧಾಂಜಲಿ ವಾಹನ ಸೇವೆ ಒದಗಿಸಲಾಗಿದ್ದು ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ  ಈ ಯೋಜನೆಗೆ ಇದೀಗ ಚಾಲನೆ ದೊರೆತಿದೆ. ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಯುವತಿಯೊಬ್ಬಳ ಶವವನ್ನು ಪೋಷಕರು ಟಿವಿಎಸ್‌ ಮೊಪೆಡ್‌ನ‌ಲ್ಲಿ ಸಾಗಣೆ ಮಾಡಿದ್ದ ಮನ ಕಲಕುವ ಘಟನೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಈ ಘಟನೆ ಬಳಿಕ ಎಚ್ಚೆತ್ತುಕೊಂಡ ಸರಕಾರವು 108 ಆ್ಯಂಬುಲೆನ್ಸ್‌ ಸಹಾಯವಾಣಿ ಮೂಲಕ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಶ್ರದ್ಧಾಂಜಲಿ ವಾಹನ ಸೇವೆಗೆ ಚಾಲನೆ ನೀಡಿದೆ.

ಇದರ ಜತೆಗೆ ತುರ್ತು ಸಂದರ್ಭದಲ್ಲಿ 108 ಆ್ಯಂಬುಲೆನ್ಸ್‌ ಸಹ ಮೃತ ದೇಹ ಸಾಗಣೆಗೆ ಬಳಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್‌ ಅವರು,108 ಆರೋಗ್ಯ ಕವಚ ಸೇವೆಯಿಂದ ವಾಪಸ್‌ ಪಡೆದುಕೊಂಡಿರುವ  ಹಳೇ ಆ್ಯಂಬುಲೆನ್ಸ್‌ ವಾಹನಗಳನ್ನು ಶ್ರದ್ಧಾಂಜಲಿ ವಾಹನಗಳಾಗಿ ಪರಿವರ್ತಿಸಿ  ಮೃತದೇಹ ಸಾಗಣೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ, ಶ್ರದ್ಧಾಂಜಲಿ ವಾಹನಗಳ ಸೇವೆ ಹೊರಗುತ್ತಿಗೆ ಪಡೆದು ನಿರ್ವಹಣೆ ಮಾಡುವುದಕ್ಕೆ ಖಾಸಗಿ ಸಂಘ-ಸಂಸ್ಥೆಗಳಿಂದ ಸೂಕ್ತ ಸ್ಪಂದನೆ ದೊರೆತಿರಲಿಲ್ಲ. ಹೀಗಾಗಿ, ಶ್ರದ್ಧಾಂಜಲಿ ವಾಹನಗಳು ಸಿದ್ಧಗೊಂಡಿದ್ದರೂ ಅವುಗಳ ಉಪಯೋಗ ಸಾರ್ವಜನಿಕರಿಗೆ ಲಭ್ಯವಾಗಿರಲಿಲ್ಲ.

Advertisement

ಇದೀಗ, ಶ್ರದ್ಧಾಂಜಲಿ ವಾಹನಕ್ಕೆ ಬೇಕಾಗುವ ಒಬ್ಬ ಚಾಲಕನನ್ನು ಹೊರ ಗುತ್ತಿಗೆ ಆಧಾರದಲ್ಲಿ ಆಯಾ ಜಿಲ್ಲೆಗಳಲ್ಲಿ ನೇಮಕ ಮಾಡಿಕೊಳ್ಳಲು ಹಾಗೂ ಈ ವಾಹನಗಳ ಚಾಲಕರಿಗೆ ಒಂದು ಜತೆ ಸಮವಸ್ತ್ರ ಮತ್ತು ಕಪ್ಪು ಶೂಗಳನ್ನು ಖರೀದಿಸಿ ಕೊಡಲು, ವಾಹನದಲ್ಲಿ ಮೃತರ ಸಂಬಂಧಿಕರಿಗೆ ಕುಳಿತುಕೊಳ್ಳುವುದಕ್ಕೆ ಸೂಕ್ತ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಶ್ರದ್ಧಾಂಜಲಿ ವಾಹನವು ಆಯಾ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿಲುಗಡೆಗೊಂಡಿರುತ್ತದೆ. ಸಾರ್ವಜನಿಕರು, 108 ಸಹಾಯವಾಣಿ ಮೂಲಕ ಕರೆ ಮಾಡಿದರೆ, ತಕ್ಷಣ ವಾಹನವು ಮೃತ ದೇಹವಿರುವ ಸ್ಥಳಕ್ಕೆ ಆಗಮಿಸಿ, ಮನೆ ಅಥವಾ ಚಿತಾಗಾರಕ್ಕೆ ಉಚಿತವಾಗಿ ಸಾಗಿಸುತ್ತದೆ. ಹೀಗಾಗಿ, ಶ್ರದ್ಧಾಂಜಲಿ ವಾಹನದಲ್ಲಿ ಕನಿಷ್ಟ 200 ಕಿಮೀ. ದೂರ ಕ್ರಮಿಸುವುದಕ್ಕೆ ಬೇಕಾಗುವಷ್ಟು ಇಂಧನ ಶೇಖರಣೆಯಾಗಿರುವಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ.

*ಬಡ ವರ್ಗದವರಿಗೆ ಅನುಕೂಲವಾಗುವಂತೆ, “ಶ್ರದ್ಧಾಂಜಲಿ’ ವಾಹನ ಸೇವೆ ಚಾಲನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು 108 ಆ್ಯಂಬುಲೆನ್ಸ್‌ ಸಹಾಯವಾಣಿ ಮೂಲಕ ಶ್ರದ್ಧಾಂಜಲಿ ವಾಹನ ಸೌಲಭ್ಯ ಪಡೆದುಕೊಳ್ಳುವುದಕ್ಕೂ ಸಂಪರ್ಕ ಮಾಡಬಹುದು.
– ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next