Advertisement

ಸಿಟ್ಟಿಗೆದ್ದು ಟ್ವಿಟರ್‌ ಅಕೌಂಟ್‌ ಡಿಲೀಟ್‌ ಮಾಡಿದ ಸೋನು

02:44 AM May 25, 2017 | Team Udayavani |

ಮುಂಬಯಿ: ಇತ್ತೀಚೆಗೆ ಬೆಳಗ್ಗಿನ ಆಜಾನ್‌ ಅನ್ನು ಮೈಕ್‌ನಲ್ಲಿ ಹೇಳುವುದಕ್ಕೆ ಟ್ವಿಟರ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿ ಸುದ್ದಿಯಾಗಿದ್ದ ಖ್ಯಾತ ಗಾಯಕ ಸೋನು ನಿಗಮ್‌ ಇದೀಗ ಮತ್ತೆ ಟ್ವಿಟರ್‌ ಬಿಟ್ಟ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಟ್ವಿಟರ್‌ನಲ್ಲಿ ಸೆಲೆಬ್ರೆಟಿಗಳ ಕಾದಾಟ ನಡೆಯುತ್ತಿರುವಂತೆಯೇ ಟ್ವಿಟರ್‌ ಪಕ್ಷಪಾತಿಯಾಗಿದೆ ಎಂದು ಆರೋಪಿಸಿ, ಅವರು ಹೊರನಡೆದಿದ್ದಾರೆ.

Advertisement

ಈ ಬಗ್ಗೆ ಅವರು 24 ಟ್ವೀಟ್‌ಗಳನ್ನು ಮಾಡಿದ್ದು, ಟ್ವಿಟರ್‌ನಲ್ಲಿ ಆಗುತ್ತಿರುವ ಎಡ – ಬಲ ಸೈದ್ಧಾಂತಿಕ ಕಾದಾಟಗಳು, ರಾಷ್ಟ್ರೀಯವಾದ ಕುರಿತ ಚರ್ಚೆಗಳು ದಿಕ್ಕುತಪ್ಪುತ್ತಿದ್ದು, ಒಂದು ವರ್ಗವನ್ನು ಮಾತ್ರ ಗುರಿಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಲೇಖಕಿ ಅರುಂಧತಿ ರಾಯ್‌ ವಿರುದ್ಧ ನಟ, ಸಂಸದ ಪರೇಶ್‌ ರಾವಲ್‌ ಅವರ ಟ್ವೀಟ್‌, ಶೈಲಾ ರಶೀದ್‌ ಕುರಿತ ಪ್ರಕರಣದಲ್ಲಿ ಗಾಯಕ ಅಭಿಜಿತ್‌ ಭಟ್ಟಾಚಾರ್ಯ ವಿರುದ್ಧ ಟ್ವಿಟರ್‌ ಇಂಡಿಯಾ ಖಾತೆಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಸೋನು ನಿಗಮ್‌ ಹೀಗೆ ಮಾಡಿದ್ದಾರೆ. ಬುಧವಾರ ಬೆಳಗ್ಗೆ 10.13ಕ್ಕೆ ಈ ಸಂಬಂಧ ಅವರು ಮೊದಲ ಟ್ವೀಟ್‌ ಮಾಡಿದ್ದು, ಟ್ವಿಟರ್‌ನಲ್ಲಿ ತಮ್ಮ 70 ಲಕ್ಷ ಹಿಂಬಾಲಕರನ್ನು ಬಿಟ್ಟು ಹೊರಹೋಗುವುದಾಗಿ ಹೇಳಿದ್ದಾರೆ. ಇದು ಕೆಲವರಿಗೆ ದುಃಖ ತಂದರೆ, ಮತ್ತೆ ಕೆಲವರಿಗೆ ಅತ್ಯಂತ ಖುಷಿ ತರಬಹುದು ಎಂದು ಟ್ವೀಟ್‌ ಮಾಡಿದ್ದಾರೆ.

ಪರೇಶ್‌ ರಾವಲ್‌ರಿಂದ ಟ್ವೀಟ್‌ ಡಿಲೀಟ್‌: ಗುಜರಾತ್‌ನ ಸಂಸದ ಪರೇಶ್‌ ರಾವಲ್‌ ‘ಕಾಶ್ಮೀರ ವಿಚಾರದಲ್ಲಿ ಸೇನೆ ಕಲ್ಲೆಸೆತಗಾರರಿಂದ ರಕ್ಷಿಸಿಕೊಳ್ಳಲು ಪ್ರತಿಭಟನಕಾರ ಯುವಕನನ್ನು ಜೀಪಿಗೆ ಕಟ್ಟಿದಂತೆ ಲೇಖಕಿ ಅರುಂಧತಿ ರಾಯ್‌ ಅವರನ್ನೂ ಜೀಪಿಗೆ ಕಟ್ಟಬೇಕು’ ಎಂದು ಟ್ವೀಟ್‌ ಮಾಡಿದ್ದರು. ಇದೂ ಟ್ವಿಟರ್‌ನಲ್ಲಿ ಪರ-ವಿರೋಧ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಬಳಿಕ ಟ್ವಿಟರ್‌ ಇಂಡಿಯಾ ಪರೇಶ್‌ ರಾವಲ್‌ ಅವರ ಬಳಿ ಟ್ವೀಟ್‌ ಅನ್ನು ಡಿಲೀಟ್‌ ಮಾಡುವಂತೆ ಹೇಳಿದ್ದು, ಅವರದನ್ನು ಅಳಿಸಿ ಹಾಕಿದ್ದರು. ಈ ಪ್ರಕರಣದಲ್ಲೂ ಭಾರತ ವಿರೋಧಿ ಹೇಳಿಕೆ ನೀಡಿದ್ದ ಅರುಂಧತಿ ರಾಯ್‌ ಅವರನ್ನು ಬೆಂಬಲಿಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಪಾಕ್‌ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ ರಾಯ್‌, ಕಾಶ್ಮೀರ ವಶಪಡಿಸಿದ ಭಾರತದ ಕೃತ್ಯ ನಾಚಿಕೆಗೇಡು ಮತ್ತು ಸೇನೆಯ ಸಂಖ್ಯೆ ಎಷ್ಟಿದ್ದರೂ ಪ್ರತಿಭಟನಕಾರರನ್ನು ಹತ್ತಿಕ್ಕಲಾಗದು ಎಂದಿದ್ದರು ಎಂದು ಹೇಳಲಾಗಿತ್ತು. ಅಲ್ಲದೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಪರೇಶ್‌ ರಾವಲ್‌, ಒತ್ತಡದಿಂದಾಗಿ ನಾನು ಟ್ವೀಟ್‌ ಡಿಲೀಟ್‌ ಮಾಡಬೇಕಾಯಿತು ಎಂದು ಹೇಳಿದ್ದಾರೆ.

ಮೋದಿ ಮತ್ತು ಹಿಂದೂ ವಿರೋಧಿ ಟ್ವಿಟರ್‌ !
ಗಾಯಕ ಅಭಿಜೀತ್‌ ಭಟ್ಟಾಚಾರ್ಯ ಇತ್ತೀಚೆಗೆ ಜೆಎನ್‌ಯುವಿನ ಹಳೆ ವಿದ್ಯಾರ್ಥಿ, ಹೋರಾಟಗಾರ್ತಿ ಶೆಹ್ಲಾ ರಶೀದ್‌ ವಿರುದ್ಧ ಜೆಎನ್‌ಯು ವಿದ್ಯಾರ್ಥಿಯೊಬ್ಬರು ಬರೆದ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿದ್ದರು. ಇದರ ವಿರುದ್ಧ ಟ್ವಿಟರ್‌ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.  ಜೊತೆಗೆ ಈ ಟ್ವೀಟ್‌ ಮಹಿಳೆಯೊಬ್ಬರ ವಿರುದ್ಧ ತೀವ್ರ ಅಶ್ಲೀಲ ಆಕ್ಷೇಪಾರ್ಹವಾಗಿದೆ ಎಂಬ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಟ್ವಿಟರ್‌ ಇಂಡಿಯಾ ವಜಾಗೊಳಿಸಿತ್ತು. ಇದರ ವಿರುದ್ಧ ಅವರು ಹೇಳಿಕೆ ನೀಡಿ, ‘ಟ್ವಿಟರ್‌ನಲ್ಲಿ ಮೋದಿ ವಿರೋಧಿಗಳು, ರಾಷ್ಟ್ರವಿರೋಧಿಗಳು, ದೇಶದ ಸೇನೆಯ ವಿರೋಧಿಗಳು, ಹಿಂದೂ ವಿರೋಧಿಗಳು, ಉಗ್ರರ ಬೆಂಬಲಿಗರು, ನಕ್ಸಲರ ಬೆಂಬಲಿಗರು ತುಂಬಿಕೊಂಡಿದ್ದಾರೆ ಎಂದಿದ್ದಾರೆ. ಅಲ್ಲದೇ ಈ ನಕ್ಸಲರಿಗೆ ನಾನು ಒಂದು ಮಾತು ಹೇಳುತ್ತೇನೆ. ಅವರನ್ನೆಲ್ಲ ಕಠಿಣವಾಗಿ ಶಿಕ್ಷಿಸಬೇಕು. ಇದೊಂದು ಜಿಹಾದಿ ಟ್ವಿಟರ್‌’ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next