Advertisement

Belthangady Somavati River; ನೀರಿನ ಆಶ್ರಯದ ಜೀವನದಿ ಮೂಲವೇ ಬರಿದು

01:36 PM Apr 26, 2023 | Team Udayavani |

ಬೆಳ್ತಂಗಡಿ: ಪ್ರತೀ ಬೇಸಗೆಯಲ್ಲಿ ನೀರಿನ ಹಾಹಾಕಾರ ಸಹಜ. ಆದರೆ ಪ್ರಸಕ್ತ ವರ್ಷದ ತಾಪಮಾನ ಹಿಂದೆಂದಿಗಿಂತಲೂ ತೀಕ್ಷ್ಣವಾಗಿರುವ ಪರಿಣಾಮ ನೀರಿನ ಆಶ್ರಯಗಳು ನಿರೀಕ್ಷೆಗಿಂತೆ ಮೊದಲೆ ಬರಿದಾಗಿದೆ.

Advertisement

ತಾಲೂಕಿನ ಪಶ್ಚಿಮ ಘಟ್ಟದಿಂದ ಉದಯಿಸುವ ನೇತ್ರಾವತಿ, ಮೃತ್ಯುಂಜಯ, ಸೋಮಾವತಿ, ಫಲ್ಗುಣಿ, ಕಪಿಲ ನದಿಗಳು ಬರಿದಾಗಿ ಬಯಲಿನಂತಾಗಿದ್ದು ಬಾವಿ, ಕೊಳವೆಬಾವಿಯ ನೀರಿನ ಮಟ್ಟ ಇಳಿದಿದೆ. ನೀರಿಗೆ ರಾಜಾಶ್ರಯ ನೀಡಬೇಕಿದ್ದ ನದಿಗಳು ನೀರಿನ ಒಳಹರಿವು ನಿಲ್ಲಿಸಿದ್ದರಿಂದ ವಾರಗಳಲ್ಲಿ ಮಳೆ ಬಾರದೇ ಹೋದಲ್ಲಿ ನೀರಿನ ಕೊರತೆ ಎದುರಿಸಬೇಕಾದೀತು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

81 ಗ್ರಾಮಗಳ ಗುಡ್ಡಗಾಡು ಮನೆಗಳಿಗೆ ಕೊರತೆ
ತಾಲೂಕಿನ 81 ಗ್ರಾಮಗಳಲ್ಲಿ ಕಳೆದ ವಾರಕ್ಕಿಂತ ಈಬಾರಿ ಪರಿಸ್ಥಿತಿ ಹದಗೆಟ್ಟಿದೆ. ಲಾೖಲ, ಅಳದಂಗಡಿ, ಬಡಗಕಾರಂದೂರು, ಕಣಿಯೂರು ಗ್ರಾಮದ ಕಾರಿಂಜ ಬೈಲಿನ 60 ಮನೆಗಳು ಸಹಿತ, ಕಳಿಯ, ಕೊಯ್ಯೂರು ಪಿಜಕ್ಕಳ, ಚಾರ್ಮಾಡಿ, ನಡ, ಇಂದಬೆಟ್ಟು ಸಹಿತ ಹಲವೆಡೆ ಕುಡಿವ ನೀರಿನ ಬರ ಎದುರಿಸುತ್ತಿದೆ. ನೀರಿಲ್ಲದಲ್ಲಿ ಕೊಳವೆ ಬಾವಿ ಕೊರೆಯಲು ಅನುದಾನ ಒದಗಿಸಲಾಗಿದೆ. ಆದರೆ ನೀತಿ ಸಂಹಿತೆಯಿಂದಾಗಿ ಮೆಸ್ಕಾಂ ಇಲಾಖೆ ಟಿ.ಸಿ. ಅಳವಡಿಸಲು ಮುಂದಾಗದೆ ಕೆಲವೆಡೆ ಅಡಚಣೆಯಾಗಿದೆ.

ಎತ್ತರ ಪ್ರದೇಶಗಳಲ್ಲಿ ನೀರಿನ ಕೊರತೆ
ತಾಲೂಕಿನ 81 ಗ್ರಾಮಗಳಲ್ಲಿ ಖಾಸಗಿ ಸಹಿತ ಸರಕಾರಿ ಸೇರಿ 10 ರಿಂದ 15 ಸಾವಿರವರೆಗೆ ಕೊಳವೆಬಾವಿಗಳಿವೆ. ಆದರೂ ನೀರಿನ
ಅಭಾವವಿದೆ. ತೆಕ್ಕಾರು, ಬಾರ್ಯ, ಮಚ್ಚಿನ, ಮಡಂತ್ಯಾರು, ಕುಕ್ಕಳ, ಇಂದಬೆಟ್ಟು, ಅರಸಿನಮಕ್ಕಿ ಸಹಿತ ಎತ್ತರ ಪ್ರದೇಶಗಳಿಗೆ
ನೀರು ಸರಬರಾಜಾಗದೆ ಅಡ್ಡಿಯಾಗಿದೆ.

ಬೆಳ್ತಂಗಡಿ ಪಟ್ಟಣಕ್ಕೆ 1.05 ಎಂ.ಎಲ್‌.ಡಿ
ಬೆಳ್ತಂಗಡಿ ಪಟ್ಟಣ ಸೋಮಾವತಿ ನದಿ ನೀರು ಸಹಿತ 12 ಕೊಳವೆ ಬಾವಿಗಳನ್ನು ಆಶ್ರಯಿಸಿದೆ. ನಗರದಲ್ಲಿ ಗೃಹ, ವಾಣಿಜ್ಯ, ಕಚೇರಿ ಸೇರಿ 11 ವಾರ್ಡ್‌ ಗಳಲ್ಲಿ 1820 ನಳ್ಳಿ ನೀರಿನ ಸಂಪರ್ಕವಿದೆ. ಪ್ರತೀ ದಿನ 1.05 ಎಂ.ಎಲ್‌.ಡಿ. (10.50 ಲಕ್ಷ ಲೀಟರ್‌) ನೀರಿನ ಆವಶ್ಯಕತೆಯಿದೆ. ಆದರೆ ನದಿಯಿಂದ ಪ್ರಸಕ್ತ 0.70 ಎಂ.ಎಲ್‌.ಡಿ. ನೀರು ಲಭ್ಯವಾಗುತ್ತಿದೆ. ಉಳಿದಂತೆ ಕೊಳವೆಬಾವಿ ಆಶ್ರಯಿಸಿದೆ.

Advertisement

ನೀರಿನ ಕೊರತೆ ಕಂಡು ನಗರದ ಗುಂಪಲಾಜೆ, ಸುದೆಮುಗೇರು, ಬೊಟ್ಟುಗುಡ್ಡೆ, ಸಿ.ವಿ.ಸಿ.ಹಾಲ್‌ ಸೇರಿ 4 ಹೊಸ ಕೊಳವೆ ಬಾವಿ ತೆಗೆಯಲಾಗಿದೆ. 2 ಖಾಸಗಿ ಕೊಳವೆಬಾವಿಯನ್ನು ಆಶ್ರಯಿಸಲಾಗಿದೆ. ನಗರದ ಸೋಮಾವತಿ ನದಿಯಲ್ಲಿ ಒಂದು ವಾರಕ್ಕಷ್ಟೆ ನೀರು ಲಭ್ಯವಾಗಲಿದೆ. ಕುಡಿಯುವ ನೀರನ್ನು ಅನ್ಯ ಕಾರ್ಯಕ್ಕೆ ಬಳಸಿದರೆ ಸಂಪರ್ಕ ಕಡಿತ ಮಾಡಲಾಗುವುದು ಎಂದು ಪ.ಪಂ. ಎಂಜಿನಿಯರ್‌ ಮಹಾವೀರ ಆರಿಗ ತಿಳಿಸಿದ್ದಾರೆ.

ಧರ್ಮಸ್ಥಳ ಸ್ನಾನಘಟ್ಟ ಶಾಂತ
ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನೇತ್ರಾವತಿ ಹರಿವು ಶಾಂತವಾಗಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ಪ್ರತಿನಿತ್ಯ 32 ಲಕ್ಷ ಲೀಟರ್‌ ನೀರು ಆವಶ್ಯಕತೆಯಿದೆ. ಇದಕ್ಕೆ ನೇತ್ರಾವತಿ ನೀರನ್ನೆ ಅವಲಂಬಿಸಲಾಗಿದೆ. 2019ರಲ್ಲಿ ಆದ ಸ್ಥಿತಿ ಬಾರದಂತೆ ಮುನ್ನೆಚ್ಚರಿಕೆಯಾಗಿ ಸ್ನಾನಘಟ್ಟದಲ್ಲಿ ಭಕ್ತರಿಗೆ ಸ್ನಾನಕ್ಕೆ ನಿರ್ಬಂಧ ಹೇರಲಾಗಿದೆ. ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ನೀರಿನ ಮಟ್ಟವನ್ನು ವೀಕ್ಷಿಸಿ ನೀರಿನ ಮಿತ ಬಳಕೆ ಮಾಡುವಂತೆ ಸೂಚಿಸಿದ್ದಾರೆ.

ದುರ್ಬಳಕೆ ಸಲ್ಲ
ಕೊಳವೆಬಾವಿಗೆ ಮರು ಪೂರಣ ಅಗತ್ಯ, ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ ಅವಧಿ ಯಲ್ಲಿ ಜನಸಾಮಾನ್ಯರು ನೀರಿನ ಮಿತಬಳಕೆಗೆ ಒತ್ತು ನೀಡಬೇಕು. ಉಚಿತ ವಿದ್ಯುತ್‌ ಇದೆಯೆಂದು ಅನಿಯಮಿತವಾಗಿ ಪಂಪ್‌ ಬಳಸಿ ನೀರಿನ ದುರ್ಬಳಕೆ ಸಲ್ಲ. ಮುಂದಿನ 10 ದಿನಗಳೊಳಗೆ ಉತ್ತಮ ಮಳೆಯಾಗದಿದ್ದಲ್ಲಿ ಪರ್ಯಾಯ ಚಿಂತನೆ ನಡೆಸಬೇಕಾಗಿದೆ.
ಕುಸುಮಾಧರ್‌ ಬಿ.,ತಾ.ಪಂ. ಇಒ, ಬೆಳ್ತಂಗಡಿ

*ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next