Advertisement

ಅಧಿಕಾರದ ಹಿಂದೆ ಹೋಗದ “ಕಾರ್ಯಕರ್ತ’ ; ಉಡುಪಿ ಅಭಿವೃದ್ಧಿಯ ಕನಸುಗಾರ ಸೋಮಣ್ಣ ಇನ್ನಿಲ್ಲ

12:00 AM Feb 05, 2024 | Team Udayavani |

ಉಡುಪಿ: ರವಿವಾರ ನಿಧನ ಹೊಂದಿದ ಬಿಜೆಪಿ ಹಿರಿಯ ಧುರೀಣ, ನಗರಸಭೆ ಮಾಜಿ ಅಧ್ಯಕ್ಷ ಮಲ್ಪೆ ಸೋಮಶೇಖರ್‌ ಭಟ್‌ ಅವರು ಉಡುಪಿಯ ನಗರದ ಸಮಗ್ರ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

Advertisement

ಇವರು ಎರಡು ಬಾರಿ ಉಡುಪಿ ನಗರಸಭೆಯ ಸದಸ್ಯರಾಗಿದ್ದರು. 1983ರಿಂದ ನಗರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದರು. 1969ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವಹಿಂದೂ ಪರಿಷತ್‌ನ ಮೊದಲ ಪ್ರಾಂತ್ಯ ಸಮ್ಮೇಳನದ ಸಕ್ರಿಯ ಸಂಘಟಕರಲ್ಲಿ ಒಬ್ಬರಾಗಿದ್ದರು. ಭಾರತೀಯ ಜನಸಂಘದ ಉಡುಪಿ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಆರೆಸ್ಸೆಸ್‌ನ ಹಿರಿಯ ಪ್ರಚಾರಕರು ಹಾಗೂ ಪ್ರಮುಖರ ಒಡನಾಟದಲ್ಲಿದ್ದರು. ಅವರಿಗೆ ಅಂದಿನ ದಿನಗಳಲ್ಲಿದ್ದ ಸಂಪರ್ಕದ ಆಧಾರದಲ್ಲಿ, ವಿಧಾನ ಪರಿಷತ್‌ / ನಿಗಮ ಮಂಡಳಿ ಇತ್ಯಾದಿ ಸುಲಭದಲ್ಲಿ ಸಿಗಬಹುದಾಗಿತ್ತಾದರರೂ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದ ಅವರು ಎಂದೂ ಅಧಿಕಾರದ ಹಿಂದೆ ಹೋದವರಲ್ಲ.

ಸೋಮಣ್ಣನವರು ಡಾ| ವಿ.ಎಸ್‌. ಆಚಾರ್ಯ, ಗುಜ್ಜಾಡಿ ಪ್ರಭಾಕರ ನಾಯಕ್‌ ಅವರು ಒಟ್ಟಾಗಿ ಚರ್ಚಿಸಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಉಡುಪಿಯಲ್ಲಿ ಕೈಗಾರಿಕೆ (ವರುಣ್‌ ಪೈಪ್‌ ಮಾಲಕರು) ಆರಂಭದ ಪೂರ್ವದಲ್ಲಿ ಕೊಡಗು ಜಿಲ್ಲೆಯ ಜನಸಂಘದ ಕಾರ್ಯದರ್ಶಿಯಾಗಿ 2 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು.

ಅನಂತರ ಉಡುಪಿಗೆ ಬಂದು ರಾಜಕೀಯ ಪ್ರವೇಶ ಮಾಡಿದರು. ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸ್ಥಾಪಕ ಸದಸ್ಯರಾಗಿದ್ದರು. ಕೊರೊನಾ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು ಇವರಿಗೆ ಕರೆ ಮಾಡಿ ಆರೋಗ್ಯ, ಯೋಗಕ್ಷೇಮ ವಿಚಾರಿಸಿದ್ದರು. ಉಡುಪಿಯ ಅಷ್ಟ ಮಠಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

Advertisement

ಉಡುಪಿಯ ಸಂಘ ಪರಿವಾರ, ಬಿಜೆಪಿಯ ಎಲ್ಲ ಕಾರ್ಯಕ್ರಮಗಳ ಬೆನ್ನೆಲುಬಾಗಿದ್ದರು. ಇತ್ತೀಚೆಗಿನ ವರ್ಷಗಳ ವರೆಗೂ ಸಕ್ರಿಯರಾಗಿದ್ದರು. ಪಕ್ಷ ಮತ್ತು ಪರಿವಾರ ಸಂಘಟನೆಯ ಎಲ್ಲ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.

ಸೋಮಶೇಖರ್‌ ಭಟ್‌ ಅವರ ತಂದೆ ಮಲ್ಪೆ ವಾಮನ ಭಟ್‌ ಗಾಂಧಿವಾದಿಯಾಗಿ, ಖಾದಿಧಾರಿಯಾಗಿ, ಜಿಲ್ಲೆ ಯ ಹಿರಿಯ ಸಹಕಾರಿಯಾಗಿದ್ದರು. ಉತ್ತಮ ಭಜನೆಪಟುವಾಗಿದ್ದ ಅವರ ಇಡೀ ಕುಟುಂಬವೇ ಭಜನೆ ತಂಡ ವಾಗಿತ್ತು¤ ಮತ್ತು ಇಂದಿಗೂ ಅದು ನಡೆದುಕೊಂಡು ಬರುತ್ತಿದೆ.

ಸೋಮಣ್ಣ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 18 ತಿಂಗಳು ಬೆಂಗಳೂರಿನಲ್ಲಿ ಲಾಲ್‌ಕೃಷ್ಣ ಆಡ್ವಾಣಿ ಅವರೊಂದಿಗೆ ಸೆರೆವಾಸವನ್ನು ಅನುಭವಿಸಿದ್ದರು. ಅಯೋಧ್ಯೆ ರಾಮಮಂದಿರ ಹೋರಾಟದ ಕರಸೇವೆಯಲ್ಲಿ ಮುಂಚೂಣಿಯಲ್ಲಿ ಇದ್ದರು. ಆಡ್ವಾಣಿಯವರ ಪ್ರಮುಖ ರಥಯಾತ್ರೆ ಹಾಗೂ ಜನಸಂಘ/ ಬಿಜೆಪಿಯ ರಾಷ್ಟ್ರೀಯ, ರಾಜ್ಯ ನಾಯಕರ ಕಾರ್ಯಕ್ರಮ, ಪಕ್ಷ ಹಾಗೂ ಪರಿವಾರ ಸಂಘಟನೆಗಳ ಕಾರ್ಯಕ್ರಮಗಳ ಆಯೋಜನೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.

ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಕುಂಜಿಬೆಟ್ಟು ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಉಡುಪಿ ಜಿಲ್ಲೆಯ ಹಿರಿಯ ಕೈಗಾರಿಕೋದ್ಯಮಿಯಾಗಿದ್ದ ಅವರು ಕೊಡುಗೈ ದಾನಿಯಾಗಿದ್ದರು.

ಅಂತಿಮ ದರ್ಶನಕ್ಕೆ ಅವಕಾಶ
ಫೆ. 5ರ ಬೆಳಗ್ಗೆ 8.30ರಿಂದ11 ಗಂಟೆಯ ತನಕ ಎಂ. ಸೋಮಶೇಖರ್‌ ಭಟ್ಟರ ಕಾಡುಬೆಟ್ಟಿನ ನಳಂದ ಸ್ವಗೃಹದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅನಂತರ ಬೀಡಿನಗುಡ್ಡೆಯ ರುದ್ರಭೂಮಿಯ ಅಂತಿಮ ಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಗಣ್ಯರ ಸಂತಾಪ
ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಯಶ್‌ಪಾಲ್‌ ಎ. ಸುವರ್ಣ, ವಿಧಾನ ಪರಿಷತ್‌ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಕೆ. ರಘುಪತಿ ಭಟ್‌, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ, ಪ್ರಮುಖರಾದ ಗುಜ್ಜಾಡಿ ಪ್ರಭಾಕರ ನಾಯಕ್‌, ರಾಘವೇಂದ್ರ ಕಿಣಿ, ಮಟ್ಟಾರು ರತ್ನಾಕರ ಹೆಗ್ಡೆ ಮೊದಲಾದ ಗಣ್ಯರು, ಬಿಜೆಪಿ ಹಾಗೂ ಸಂಘ ಪರಿವಾರದ ಅನೇಕ ಪ್ರಮುಖ ನಾಯಕರು ಭಟ್ಟರ ನಿಧನಕ್ಕೆ ಸಂತಾಪ ಸೂಚಿಸಿದ್ದಾ ರೆ.

Advertisement

Udayavani is now on Telegram. Click here to join our channel and stay updated with the latest news.

Next