Advertisement

ಗ್ರಾಮೀಣ ಸಮಸ್ಯೆಗಳಿಗೆ ಪರಿಹಾರ: ಆಚಾರ್‌

02:30 PM Sep 18, 2022 | Team Udayavani |

ಯಲಬುರ್ಗಾ: ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಉದ್ದೇಶ ಈ ಕಾರ್ಯಕ್ರಮ ಹೊಂದಿದೆ. ಜನತೆ ಅಧಿಕಾರಿಗಳನ್ನು ಕೇಳಿ ಸೌಲಭ್ಯ ಪಡೆದುಕೊಳ್ಳಿ ಜೊತೆಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರದ ಕಂದಾಯ ಸಚಿವ ಆರ್‌. ಅಶೋಕ ಅವರ ಹೊಸ ಆಲೋಚನೆಯ ಕಾರ್ಯಕ್ರಮವಾಗಿದೆ. ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಕ್ರಿಯಾಶೀಲರಾಗಿದ್ದು, ಜನಸೇವೆ ಮಾಡುವ ತುಡಿತ ಹೊಂದಿದ್ದಾರೆ ಒಳ್ಳೆಯ ಅಧಿಕಾರಿಗಳನ್ನು ಪ್ರಶಂಸಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಗ್ರಾಮದ ಕಲ್ಲಿನಾಥೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮದ ಜನತೆ ಬಹಳ ಸ್ವಾಭಿಮಾನಿಗಳು, ಮುಗ್ಧರಾಗಿದ್ದಾರೆ. ಕುಡಗುಂಟಿ-ಕಲ್ಲೂರು ಗ್ರಾಮಗಳ ಮಧ್ಯೆ ಬರುವ ಹಳ್ಳಗಳಿಗೆ ಹಲವಾರು ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಚೆಕ್‌ ಡ್ಯಾಂನಿಂದ ಅಂತರ್ಜಲ ಹೆಚ್ಚಳವಾಗುತ್ತದೆ. ಶೀಘ್ರದಲ್ಲೇ ಬ್ರಿಡ್ಜ್ ಕಂ ಬ್ಯಾರೇಜ್‌ ಸಹ ನಿರ್ಮಾಣ ಮಾಡಲಾಗುತ್ತದೆ. ತಾಲೂಕು ಬಡತನ-ಬರತನಕ್ಕೆ ಹೆಸರುವಾಸಿಯಾಗಿದ್ದನ್ನು ಗಮನದಲ್ಲಿಟ್ಟಿಕೊಂಡು ಶಿಕ್ಷಣ ಹಾಗೂ ನೀರಾವರಿಗೆ ಹೆಚ್ಚು ಒತ್ತು ನೀಡಿದ್ದೇನೆ. ಕ್ಷೇತ್ರದ ಜನರ ಆಶೀರ್ವಾದದಿಂದ ಮೊದಲ ಬಾರಿ ಶಾಸಕನಾದ ನನಗೆ ಸಚಿವ ಸ್ಥಾನ ಸಿಕ್ಕಿದೆ. ನನಗೆ ವಹಿಸಿದ ಖಾತೆಗಳನ್ನು ಸರ್ಮಪಕವಾಗಿ ನಿಭಾಯಿಸುವ ಜೊತೆಗೆ ಅವುಗಳನ್ನು ಮಾದರಿ ಇಲಾಖೆಗಳನ್ನಾಗಿ ರೂಪಿಸುತ್ತಿರುವೆ. ಕ್ಷೇತ್ರದ ಯರೇ ಭಾಗದ ಕೆರೆಗಳನ್ನು ಜೀಣೋದ್ಧಾರ ಮಾಡಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದರು.

ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಮಾತನಾಡಿ, ಸರಕಾರಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವುದು ನಮ್ಮ ಉದ್ದೇಶವಾಗಿದೆ. ಸಚಿವ ಹಾಲಪ್ಪ ಆಚಾರ್‌ ಅವರು ಜಿಲ್ಲೆಗೆ ಹಲವಾರು ಯೋಜನೆಗಳನ್ನು ಮಂಜೂರುಗೊಳಿಸಿದ್ದಾರೆ ಎಂದರು.

Advertisement

ಗ್ರಾಪಂ ಅಧ್ಯಕ್ಷ ಕಲ್ಲಪ್ಪ ಕವಳಕೇರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಒ ಫೌಜಿಯ ತರುನ್ನಮ್ಮ, ಉಪವಿಭಾಗಾಧಿಕಾರಿ ಬಸವಣೆಪ್ಪ ಕಲ್ಲಶೆಟ್ರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಅಲ್ಕಾನಂದ, ತಹಶೀಲ್ದಾರ್‌ ಶ್ರೀಶೈಲ ತಳವಾರ, ತಾಪಂ ಇಒ ಸಂತೋಷ ಪಾಟೀಲ, ಅಧಿಕಾರಿಗಳಾದ ಶರಣಬಸವರಾಜ, ನಾಗನಗೌಡ, ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ರತನ ದೇಸಾಯಿ, ವಿಶ್ವನಾಥ ಮರಿಬಸಪ್ಪನವರ, ತಾಲೂಕುಮಟ್ಟದ ಅಧಿಕಾರಿಗಳು, ಗ್ರಾಪಂ ಸದಸ್ಯರು, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next