Advertisement

ಮೃದು ಕುಸುಮ; ವಜ್ರಕಠಿನ ಎಂಬ ಜಾರ್ಜ್‌

12:50 AM Jan 30, 2019 | Team Udayavani |

ಕೊಂಕಣ ರೈಲ್ವೇ ಎಂಬ ಅಪೂರ್ವ ಯೋಜನೆಯನ್ನು ಕರ್ನಾಟಕದ ಕರಾವಳಿಗೆ ನೀಡಿ ಹುಟ್ಟೂರಿನ ಅಪ್ರತಿಮ ಪ್ರೀತಿ ದಾಖಲಿಸಿದವರು ಜಾರ್ಜ್‌ ಫೆರ್ನಾಂಡಿಸ್‌. ಕೇಂದ್ರದಲ್ಲಿ ರೈಲ್ವೇ ಸಚಿವರಾಗಿದ್ದಾಗ, ಅವರ ಛಲದಿಂದ ಈ ಯೋಜನೆ ಸಾಕ್ಷಾತ್ಕಾರ ಗೊಂಡಿತು. ಪ್ರತ್ಯೇಕ ನಿಗಮ ಸ್ಥಾಪಿಸಿ, ಅನುದಾನ ಒದಗಿಸಿ, ಯೋಜನೆಯ ಎಲ್ಲ ಹಂತಗಳನ್ನೂ ಪರಿಶೀಲಿಸಿ, ಉದ್ಘಾಟನೆಯ ಹಸಿರು ನಿಶಾನೆಯನ್ನೂ ಅವರು ತೋರಿದರು. ಆವರೆಗೆ ಈ ಯೋಜನೆ ವಿವಿಧ ಸ್ಥಾಪಿತ ಹಿತಾಸಕ್ತಿಗಳ ಕಾರಣದಿಂದ ಬಾಲಗ್ರಹ ಪೀಡೆಗೆ ಒಳಗಾಗಿತ್ತು. ಜಾರ್ಜ್‌ ಅವೆಲ್ಲವನ್ನೂ ವಸ್ತುಶಃ ನಿವಾರಿಸಿದರು. ಅವರ ಹೆಸರು ಈ ಮೂಲಕ ಇಲ್ಲಿ ಅಜರಾಮರ.

Advertisement

ಮಂಗಳೂರು ಕೇಂದ್ರವಾಗಿ ಕರಾ ವಳಿಯ ಈ ಯೋಜನೆಯಿಂದ ಮುಂಬಯಿ  ಮಹಾನಗರಿಗೆ ಸುಮಾರು 780 ಕಿ.ಮೀ. ಹತ್ತಿರ ವಾಯಿತು. ಅಲ್ಲಿ ಉದ್ಯೋಗಿ­ಗಳಾಗಿರುವ ಈ ಪ್ರದೇಶದ ಜನತೆಗೆ ಇದು ಸಂಪರ್ಕದ ವರದಾನ­ ವಾಯಿತು. ಜಾರ್ಜ್‌ ಅವರ ವ್ಯಕ್ತಿತ್ವವೇ ಹಾಗೆ. ಸಮಾಜವಾದಿ ಚಿಂತನೆಯೇ ಉಸಿರು. ಜನ ಸಾಮಾನ್ಯರ, ವಿಶೇಷವಾಗಿ ಕಾರ್ಮಿಕರ ಸಂಘಟನೆಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡವರು.

ಮಂಗಳೂರಿನ  ಬಿಜೈ ಕಾಪಿಕಾಡ್‌ನ‌ ಡಾ| ಸಿ ಮಥಾಯಿಸ್‌ ರಸ್ತೆಯಲ್ಲಿರುವ ಜಾನ್‌ ಜೋಸೆಫ್‌ ಫೆರ್ನಾಂಡಿಸ್‌- ಎಲೀಸ್‌ ಮಾರ್ತ ದಂಪತಿಯ ಆರು ಮಂದಿ ಮಕ್ಕಳ ಪೈಕಿ ಮೊದಲ ಪುತ್ರನಾಗಿ 1930ರ ಜೂನ್‌ 3ರಂದು ಜನನ.

ಮಂಗಳೂರಿನ ಸೈಂಟ್‌ ಅಲೋಸಿಯಸ್‌ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ. ಅಲ್ಲಿಂದ ಮುಂದೆ ಮುಂಬೈಗೆ ಪಯಣ. ಅಲ್ಲಿನ ಖ್ಯಾತ ಕಾರ್ಮಿಕ ನಾಯಕ ಪ್ಲಾಸಿಸ್‌ ಡಿಮೆಲ್ಲೊ ಅವರಿಂದಾಗಿ ಜಾರ್ಜ್‌ ಕಾರ್ಮಿಕ  ನಾಯಕನಾಗಿ ರೂಪುಗೊಂಡರು. ಜಾರ್ಜ್‌ ಫೆರ್ನಾಂಡಿಸ್‌ ಕರೆ ನೀಡಿದರೆ ಮುಂಬಯಿಗೆ ಮುಂಬಯಿ  ಸ್ತಬ್ಧ ಎಂಬಷ್ಟರ ಮಟ್ಟಿನ ವರ್ಚಸ್ಸು. ಕಾರ್ಮಿಕ ನಾಯಕ, ಪತ್ರಕರ್ತ, ಕೃಷಿಕ, ರಾಜಕಾರಣಿ, ಸಚಿವ, ಆಡಳಿತಗಾರ… ಹೀಗೆ ಬಹುಮುಖೀ ವ್ಯಕ್ತಿತ್ವ.

ಜಾರ್ಜ್‌ ಕರಾವಳಿಯ ಭಾಗದಲ್ಲಿ ಜನಪ್ರಿಯರಾ ಗಲು ಇಂದಿರಾಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯೂ ಒಂದು ಕಾರಣವಾಗಿತ್ತು. ಮಂಗಳೂರಿನ ಈ ಸಾಧಕನನ್ನು ಮತ್ತು ಅವರ ಇಬ್ಬರು ಸಹೋದರರನ್ನು ಆಗ ಬಂಧಿಸಲಾಗಿತ್ತು. ತುರ್ತು ಸ್ಥಿತಿಯ ನಡುವೆ ಚುನಾವಣೆಯು 1977ರಲ್ಲಿ ಘೋಷಣೆಯಾದಾಗ ಜಾರ್ಜ್‌  ಜೈಲಿನಲ್ಲಿ ಇದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿದರು. (ಆಗ ಕಾಲೇಜು ವಿದ್ಯಾರ್ಥಿಯಾಗಿದ್ದ ನಾನು ಬಂಧಮುಕ್ತರಾಗಿದ್ದ ಜಾರ್ಜ್‌ ಸಹೋದರರ ಮಂಗಳೂರಿನ ಸಾರ್ವಜನಿಕ ಚುನಾವಣಾ ಪ್ರಚಾರ ಕಾರ್ಯವನ್ನು ವೀಕ್ಷಿಸುತ್ತಿದ್ದೆ.) ಜಾರ್ಜ್‌ ಜೈಲಲ್ಲಿದ್ದೇ ಜನತಾ ಪಕ್ಷದಿಂದ ಗೆದ್ದರು. ಮಂಗಳೂರಲ್ಲಿ ಜನತಾ ಪಕ್ಷದ ವತಿಯಿಂದ ಭರ್ಜರಿ ವಿಜಯೋತ್ಸವ ನಡೆದಿತ್ತು. ಬಂಧುಮುಕ್ತರಾದ ಜಾರ್ಜ್‌ ಬಳಿಕ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಸಚಿವರಾದರು. ಮಂಗಳೂರು ನೆಹರೂ ಮೈದಾನದಲ್ಲಿ ಅವರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಮುಂದೆ, ಬೇರೆ ಬೇರೆ ಸರಕಾರಗಳಲ್ಲಿ ರೈಲ್ವೇ ರಕ್ಷಣಾ ಮುಂತಾದ ಮಹತ್ವದ ಖಾತೆಗಳನ್ನು ನಿರ್ವಹಿಸಿದವರು ಅವರು.

Advertisement

ಹುಟ್ಟೂರ ಅಭಿಮಾನ 
ಮಂಗಳೂರು ಸಹಿತ ಈ ಪ್ರದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದವರಾ­ಗಿ­ದ್ದರು ಜಾರ್ಜ್‌ ಫೆರ್ನಾಂಡಿಸ್‌. 
ಮಂಗಳೂರಿನಲ್ಲಿ ನಡೆದ ಪ್ರಥಮ ವಿಶ್ವ ಬಂಟರ ಸಮ್ಮೇಳನದಲ್ಲಿ ರೈಲ್ವೇ ಸಚಿವರಾಗಿ (21-12-2002) ಭಾಗವಹಿಸಿದ್ದರು. ವಿವಿಧ ಸಂಸ್ಥೆ ಗಳಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ರಾಷ್ಟ್ರಪತಿ­ಯಾಗಿದ್ದ ದಿ| ಎ.ಪಿ.ಜೆ. ಅಬ್ದುಲ್‌ ಕಲಾಂ ಜತೆ ಧರ್ಮಸ್ಥಳದ ಸಮಾರಂಭದಲ್ಲಿ ಭಾಗವಹಿಸಿ­ದ್ದರು.

ಜಾರ್ಜ್‌ ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಹಿರಿಯ ಪ್ರಾಥಮಿಕ ಶಾಲೆಯಲ್ಲಿ­ದ್ದಾಗ ಅವರು ಕ್ವಿಟ್‌ ಇಂಡಿಯಾ ಚಳವಳಿ­ಯಲ್ಲಿ ಭಾಗವಹಿಸಿದ್ದನ್ನು ಅನೇಕ ಕಾರ್ಯ­ಕ್ರಮಗಳಲ್ಲಿ ನೆನಪಿಸಿ­ಕೊಳ್ಳುತ್ತಿದ್ದರು. 1942 ಸೆ. 9ರಂದು ಬ್ರಿಟಿಷರ ವಿರುದ್ಧ ನಗರದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಆಗಿತ್ತು. ಕೋರ್ಟ್‌­ ಗುಡ್ಡೆಯಿಂದ ಅವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು!

ಸ್ವಾತಂತ್ರÂ ಹೋರಾಟಗಾರ ಡಾ| ಅಮ್ಮೆಂಬಳ ಬಾಳಪ್ಪರ ಸ್ನೇಹಿತರಾಗಿದ್ದ ಜಾರ್ಜ್‌ 2006ರ ಅಕ್ಟೋಬರ್‌ 2ರಂದು ಬಂಟ್ವಾಳದಲ್ಲಿ ಜರಗಿದ ಬಾಳಪ್ಪ- 85 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ, ತನ್ನ ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಕೂಡಾ ಆಗಮಿಸಿದ್ದರು.

2000ರ ಕರಾವಳಿ ಉತ್ಸವದ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಜಾರ್ಜ್‌, ಆಗ ಕೆನರಾ- 200 ಅಂಗವಾಗಿ ಸಿದ್ಧಪಡಿಸಲಾಗಿದ್ದ “ಪೊಲಿ’ ಸ್ಮರಣ ಸಂಚಿಕೆಯನ್ನು ಮಂಗಳಾ ಕ್ರೀಡಾಂಗಣದಲ್ಲಿ ಬಿಡು ಗಡೆಗೊಳಿಸಿದ್ದರು. (ಕಾರ್ಯಕ್ರಮ ನಿರೂಪಿಸಿದ್ದ ನನ್ನನ್ನು ಕರೆದು ಅವರು ಪೊಲಿ ಎಂದರೆ ಏನರ್ಥ ಎಂದು ಕೇಳಿದ್ದರು. ಬಳಿಕ, ತಮ್ಮ ಭಾಷಣದಲ್ಲಿ ಕೂಡಾ “ನಿರೂಪಕರು ತಿಳಿಸಿದಂತೆ’ ಎಂದು ಉಲ್ಲೇಖೀಸಿದ್ದರು. ಅಷ್ಟೊಂದು ಸರಳ. ನಿಗರ್ವಿ ಅವರು).
ಜಾರ್ಜ್‌  ಫೆರ್ನಾಂಡಿಸ್‌ಗೆ ಅವರೇ ಸಾಟಿ…

ಸೈನ್‌ ಆರ್‌ ರಿಸೈನ್‌!
ಮೊರಾರ್ಜಿ ಸಂಪುಟದಲ್ಲಿ ಸಚಿವರಾಗಿದ್ದ ಜಾರ್ಜ್‌ ಮಂಗಳೂರಿನ ನೆಹರೂ ಮೈದಾನದಲ್ಲಿ ಹೇಳಿದ್ದ “ಸೈನ್‌ ಆರ್‌ ರಿಸೈನ್‌’ ಎಂಬುದು ಆ ಕಾಲಕ್ಕೆ ಪ್ರಸಿದ್ಧ ಉದ್ಘೋಷವಾಗಿತ್ತು. ಕೆಲವು ರಾಜ್ಯ ಸರಕಾರಗಳನ್ನು ವಿಸರ್ಜಿಸಲು ಕೇಂದ್ರ ಸೂಚಿಸಿದ್ದಾಗ ಆಗಿನ ಪ್ರಭಾರ ರಾಷ್ಟ್ರಪತಿ ನಿರಾಕರಿಸಿದ್ದರು. ಆಗ ಕೇಂದ್ರ ಪ್ರಭಾರಿಗೆ ಸೈನ್‌ ಆರ್‌ ರಿಸೈನ್‌ ಎಂದಿತ್ತು. ತತ್‌ಕ್ಷಣ ಆದೇಶಕ್ಕೆ ಅಂಕಿತ ಬಿತ್ತು ಎಂದಿದ್ದರು.

–  ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next