Advertisement

ಸಭ್ಯತೆ ಸರ್ವರಿಗೂ ಘನತೆ

05:07 PM Mar 02, 2021 | Team Udayavani |

ಈಗಂತೂ ಎಲ್ಲರ ಕೈಯಲ್ಲೂ ಸ್ಮಾರ್ಟ್‌ ಫೋನಿದೆ. ಫೋನು ಸ್ಮಾರ್ಟಾದ ಮೇಲೆ ಅದರಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‌ ಬುಕ್‌, ಟ್ವಿಟ್ಟರ್‌ ನೋಡದೇ ಇರೋದು ಹೇಗೆ? ಸುಮ್ನೆ ನೋಡೋಕಾಗುತ್ತಾ? ಅದಕ್ಕೊಂದು ಅಕೌಂಟ್‌ ಮಾಡ್ಬೇಕು. ಅಕೌಂಟ್‌ ಮಾಡಿ ಬೇರೆಯವರನ್ನು ನೋಡ್ತಾ ಎಷ್ಟು ದಿನ ಕೂರೋದು? ನಮ್ಮದೂ ಒಂದು ಪೋಸ್ಟೋ, ಕಮೆಂಟೋ ಹಾಕಿದ್ರಾಯ್ತು ಅಷ್ಟೆ ಅಂತೀರಾ? ಇದು ಅಂದ್ಕೊಂಡಷ್ಟು ಸರಳವಲ್ಲ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋ ಹಾಗೆ, ನಿಮ್ಮ ಒಂದು ಪೋಸ್ಟು, ಕಮೆಂಟು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನು ಎಬ್ಬಿಸಬಹುದು, ಸ್ನೇಹ ಸಂಬಂಧಗಳನ್ನೇ ಬುಡಮೇಲು ಮಾಡಬಹುದು ಎನ್ನೋ ಕಲ್ಪನೆಯೂ ನಿಮಗಿರಲಿಕ್ಕಿಲ್ಲ. ನಮಗೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ನಮ್ಮ ಫೋನುಗಳಲ್ಲಿ ನಮಗನಿಸೋದನ್ನ ಬರೆದು ಹಾಕೋದ್ರಲ್ಲೇನಿದೆ ತಪ್ಪು ಅಂತೀರಾ? ಅಲ್ಲೇ ಇರೋದು ಕತೆ.

Advertisement

ಸಾಮಾಜಿಕ ತಾಣವೋ, ಕುಸ್ತಿ ಅಖಾಡವೋ? : ನೀವು ನಿಮ್ಮ ಫೋನ್‌ನಲ್ಲೇ ಟೈಪ್‌ ಮಾಡಿ ಹಾಕಿದ ಒಂದು ಪೋಸ್ಟ್ ಸಾಮಾಜಿಕ ಜಾಲತಾಣಗಳ ಮೂಲಕ ಅದೆಷ್ಟೋ ಸಾವಿರ ಜನರಿಗೆ ತಲುಪಬಹುದು. ಕೆಲವು ಪೋಸ್ಟ್ ಗಳಿಂದಲೇ ರಾತ್ರೋರಾತ್ರಿ ಪ್ರಸಿದ್ಧರಾದ ಜನರಂತೆಯೇ ತಮ್ಮ ಖ್ಯಾತಿಯನ್ನೆಲ್ಲಾ ಸಾಮಾಜಿಕ  ಜಾಲಗಳಲ್ಲಿನ ಪೋಸ್ಟಿನ ಮೂಲಕ ಹಾಳು ಮಾಡಿಕೊಂಡ ಖ್ಯಾತರೂಇದ್ದಾರೆ. ಶಾಲೆಯಲ್ಲೋ ಸಭೆಯಲ್ಲೋ ಮಾತಾಡೋಕೆ ಒಂದಿಷ್ಟು ನಿಯಮಾವಳಿಗಳು,ನಡಾವಳಿಗಳು ಅಂತ ಇರುತ್ತೆ. ಆದರೆ, ಈ ಸಾಮಾಜಿಕ ತಾಣಗಳಲ್ಲಿ ಅದೇನೂ ಇಲ್ಲ. ಏನಾದ್ರೂ, ಹೇಗಾದ್ರೂ ಬರಿಯಬಹುದು ಅಂತ ತಿಳಿದುಕೊಂಡು ಕೆಲವರು ಮನಸ್ಸಿಗೆ ಬಂದ ಹಾಗೆ ಏನೇನೋ ಬರೀತಾರೆ. ಇತ್ತೀಚೆಗೆ ನಡೆದ ದೆಹಲಿಯಲ್ಲಿನ ರೈತರ ಪ್ರತಿಭಟನೆಯನ್ನೋಪೆಟ್ರೋಲ್‌ ಬೆಲೆಯೇರಿಕೆಯನ್ನೋ ತೆಗೆದುಕೊಳ್ಳಿ.ಅದರ ಪರ, ವಿರುದ್ಧವಾಗಿ ಫೇಸ್‌ಬುಕ್‌,ಟ್ವಿಟ್ಟರುಗಳಲ್ಲಿ ಲಕ್ಷಗಟ್ಟಲೇ ಪೋಸ್ಟುಗಳು ಬಂದಿದ್ದವು. ನಮ್ಮದೂ ಒಂದಿರ್ಲಿ ಅಂತ ಎಲ್ಲರೂ ಮನಸಿಗನಿಸಿದ್ದನ್ನು ಬರೆದಿದ್ದೋ ಬರೆದಿದ್ದು. ತಮ್ಮ ಪರವನ್ನು ಸಮರ್ಥಿಸೋ ಭರದಲ್ಲಿ ವಿರೋಧಿಸುವವರ ಬಗ್ಗೆ ವಾಚಾಮಗೋಚರವಾಗಿ ಬೈದಿದ್ದು, ನೀವು-ತಾವು ಹೋಗಿ ನೀನು-ತಾನು ಎಂದು ವೈಯುಕ್ತಿಕವಾಗಿ ಬೈದಾಡಿಕೊಂಡಿದ್ದು, ಕುಸ್ತಿ ಮಾಡಿಕೊಂಡಿದ್ದು ಇನ್ನೂ ಹಳತಾಗಿಲ್ಲ.

ತಮಗನಿಸಿದ್ದೇ ಸರಿ ಎಂದು ವಾದಿಸೋ ಭರದಲ್ಲಿ ಬಳಸಿದ ಭಾಷೆಯ ಮೇಲೆ ಹತೋಟಿ ಕಳೆದುಕೊಂಡಿದ್ದರಿಂದ ಅದೆಷ್ಟೋ ವರ್ಷಗಳ ಸ್ನೇಹ, ಸಂಬಂಧಗಳು ಮುರಿದಿದ್ದು ಕಣ್ಣ ಮುಂದೇ ಇದೆ. ಇದೇ ಸಮಯದಲ್ಲಿ ಫೇಸ್ಬುಕ್ಕು, ಟ್ವಿಟ್ಟರ್‌ ಅಂದ್ರೆ ಗಲಾಟೆ ಅಂತ ಬೇಸತ್ತ ಅದೆಷ್ಟೋ ಜನರು ತಮ್ಮ ಖಾತೆಗಳನ್ನು ಮುಚ್ಚಿದ್ದೂ ಇದೆ! ಥಂಡಿಯಾಯ್ತು ಅಂತ ಮೂಗು ಕೊಯ್ದುಕೊಳ್ಳೋದು ಹೇಗೆ ಸರಿಯಲ್ಲವೋ ಹಾಗೇ ಜಾಲತಾಣ ಸರಿಯಿಲ್ಲ ಎಂದು ಖಾತೆ ಮುಚ್ಚೋದೂ ಸರಿಯಲ್ಲ. ಹಾಗಾದ್ರೆಏನು ಮಾಡಬೇಕು ಅಂತೀರಾ? ಜಾಲತಾಣಗಳ ಬಳಕೆಯಲ್ಲಿ ಕೆಳಗಿನ ನಿಯಮಗಳನ್ನು ಪಾಲಿಸಬಹುದು.

ಸಿಟ್ಯಾಕೋ ಗೆಳೆಯ? :

ಜಾಲತಾಣಗಳಲ್ಲಿ ಕೆಲವರು ಮನಸ್ಸಿಗೆಬಂದಂತೆ ಬರೀತಾರೆ ಅಂದ ಮಾತ್ರಕ್ಕೆ ನಾವೂಅವರಂತಾಗಬೇಕು ಎಂದೇನಿಲ್ಲ.ನಮ್ಮ ಗೆಳೆಯರ ಬಳಗದಲ್ಲಿರೋಗೆಳೆಯರೇ ಏನೋ ಅಸಂಬದ್ಧವಾಗಿ ಬರೆದರು ಎಂದಮಾತ್ರಕ್ಕೆ ನಾವು ಅವರ ವಿರುದ್ಧಕೋಪಗೊಳ್ಳೋ ಅವಶ್ಯಕತೆಯಿಲ್ಲ.ನಮ್ಮ ತಾಳ್ಮೆಯನ್ನುಕಾಯ್ದುಕೊಂಡರೆ, ಸಿಟ್ಟಿನ ಭರದಲ್ಲಿ ಏನೇನೋ ಬರೆದು ಸಂಬಂಧಗಳನ್ನು ಹಾಳುಮಾಡಿಕೊಳ್ಳೋದನ್ನು ತಪ್ಪಿಸಿಕೊಳ್ಳಬಹುದು.

Advertisement

ಭಾಷೆಯ ಮೇಲೆ ಹಿಡಿತ :

ನಾವು ಹಿರಿಯರೊಂದಿಗೆ ಮಾತಾಡುವಾಗ ಅವರು ಏನೇ ಅಂದರೂ ಅವರನ್ನು ಬಹುವಚನದ ಬದಲುಏಕವಚನದಲ್ಲಿ ಸಂಬೋಧಿಸೋಲ್ಲ ತಾನೇ?ಸಾಮಾಜಿಕ ಜಾಲತಾಣದಲ್ಲೂ ಹಾಗೇ ವರ್ತಿಸಬೇಕು. ಏಕೆಂದರೆ ನಾವು ಫೇಸ್ಬುಕ್ಕಲ್ಲೋ ಟ್ವಿಟ್ಟರಲ್ಲೋ ಬರೆಯೋದನ್ನು ಹಿರಿಯರುನೋಡುತ್ತಿರುತ್ತಾರೆ. ನಾವು ಯಾರನ್ನೋವೈಯಕ್ತಿಕವಾಗಿ ಟೀಕಿಸಿ ವಾದದಲ್ಲಿ ಗೆದ್ದ ಖುಷಿಯಲ್ಲಿಬೀಗಬಹುದು. ಆದರೆ, ನಮ್ಮ ಹಿರಿಯರೆದುರುವೈಯುಕ್ತಿಕವಾಗಿ ಸೋತಿರುತ್ತೀವಿ. ಅವರು ಕೊಟ್ಟ ಸಂಸ್ಕಾರಗಳು ಸೋತಿರುತ್ತೆ. ಸಿಟ್ಟು ಎಷ್ಟೇ ಇರಲಿ, ಬಳಸೋ ಭಾಷೆ , ಪದಗಳು ಸರಿಯಾಗಿರಲಿ, ಬೀದಿ ಬದಿಯ ಜಗಳದಂತಿರದೇ ಇರಲಿ.

ವಿರೋಧ ವಿಷಯದ ಮೇಲಿರಲಿ, ವ್ಯಕ್ತಿಯ ಮೇಲಲ್ಲ : ಇಂಗ್ಲೀಷಲ್ಲಿ ಒಂದು ಮಾತಿದೆ Let us Agree to Disagree  ಅಂತ. ವಿಷಯ ಎಂದಮೇಲೆ ಅದರ ಪರ ಮತ್ತು ವಿರೋಧವಾದ ಎರಡೂ ಮುಖಗಳಿರುತ್ತೆ. ಯಾರೋ ಬರೆದಿದ್ದುಇಷ್ಟವಾಗಲಿಲ್ಲ ಎಂದರೆ ಅದರಲ್ಲಿ ನಿಮಗೆ ಏನುಇಷ್ಟವಾಗಲಿಲ್ಲ ಎಂಬ ಮಟ್ಟಿಗೆ ಟೀಕೆಯಿರಲಿ, ಆ ವ್ಯಕ್ತಿಬರೆಯೋದೇ ಸರಿಯಿಲ್ಲ ಎಂಬ ಧಾಟಿಯಲ್ಲಲ್ಲ. ಈಸಾಮಾಜಿಕ ಜಾಲತಾಣಗಳೆಲ್ಲ ಇರೋದು ಒಂದಿಷ್ಟುಕಾಲಹರಣಕ್ಕೆ, ಹೊಸ ಸ್ನೇಹಿತರ ಗಳಿಸೋಕೇಹೊರತು ಇರೋ ನೆಮ್ಮದಿಯ, ಸ್ನೇಹಗಳ ಹರಣಕ್ಕಲ್ಲ ಅಲ್ಲವೇ?

ಜಾಲತಾಣವಿರೋದು ಜಗಳಕ್ಕಲ್ಲ :

ಆರ್ಕುಟ್, ಫೇಸ್ಬುಕ್ಕಿನಂತಹ ಜಾಲತಾಣ ಶುರುವಾದ ಹೊಸತರಲ್ಲಿ ಅದನ್ನು ಮಾಹಿತಿಹಂಚಿಕೊಳ್ಳೋಕೋ, ಕತೆ, ಕವನ ಬರೆಯೋಕೋಉಪಯೋಗಿಸ್ತಿದ್ರು. ಆದರೆ, ಈಗೀಗ ಅದುಜಗಳಗಳಿಗೆ ಮಾತ್ರ ಬಳಕೆಯಾಗುವಂತಿದೆ. ಜಾಲತಾಣಗಳಲ್ಲಿ ಏನೇ ಬರಲಿ, ನಾವು ನಮ್ಮ ಪಾಡಿಗೆ ಕತೆ, ಕವನಗಳನ್ನೋ ಮಾಹಿತಿಗಳನ್ನೋ ಹಂಚುತ್ತಾ, ನೋಡುತ್ತಾ ಇರೋಣ ಎಂಬ ಪ್ರಯತ್ನಮಾಡಬಹುದು. ಇದರಿಂದ ಓದಿ ಬರೆಯೋ ಹವ್ಯಾಸವನ್ನು ಮುಂದುವರೆಸಿದಂತೆಯೂ ಆಗುತ್ತೆ. ಮಾನಸಿಕ ನೆಮ್ಮದಿಯೂ ಸಿಗುತ್ತೆ.

 ಜಾಲತಾಣ ವ್ಯಸನವಾಗದಿರಲಿ :

ಕೆಲವರು ದಿನಕ್ಕೆ ನಾಲ್ಕೈದು ಸಲ ಮೊಬೈಲ್‌ ತೆಗೆದು ಅದರಲ್ಲಿನ ಅಪ್ಡೆàಟ್‌ ನೋಡದಿದ್ದರೆ ಏನನ್ನೋ ಕಳೆದುಕೊಂಡಂತೆ ಚಡಪಡಿಸುತ್ತಾರೆ. ತಮ್ಮಪೋಸ್ಟಿಗೆ ಎಷ್ಟು ಜನ ಲೈಕ್‌ ಮಾಡಿದರು, ಕಮೆಂಟ್‌ಮಾಡಿದರು, ಹೆಚ್ಚೆಚ್ಚು ಕಾಮೆಂಟ್‌ ಬರೋ ತರ ಬರೆಯೋದು ಹೇಗೆ ಎಂಬ ಆಲೋಚನೆಯಲ್ಲಿಯೇದಿನ ಕಳೆಯುತ್ತಾರೆ! ಈ ಜಾಲತಾಣಗಳು ನಮ್ಮದೈನಂದಿನ ಊಟದಲ್ಲಿನ ಉಪ್ಪಿನಕಾಯಿ ಆಗಬೇಕೇಹೊರತು ಉಪ್ಪಿನ ಕಾಯಿಯೇಊಟವಾಗಬಾರದು. ದಿನಕ್ಕೆ ಅರ್ಧ ಘಂಟೆ ಅಥವಾಒಂದು ಘಂಟೆಗಿಂತಲೂ ಹೆಚ್ಚು ಹೊತ್ತು ನಾನುಜಾಲತಾಣಗಳಲ್ಲಿ ವ್ಯಯಿಸೋದಿಲ್ಲ ಎಂಬ ಸ್ವಯಂನಿಯಂತ್ರಣವನ್ನು ಹೇರಿಕೊಂಡರೆ ಜಾಲತಾಣದವ್ಯಸನ ಅಂಟಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು. ಈ ಪಂಚಸೂತ್ರಗಳ ಪಾಲನೆಯಿಂದ ಇಂಟರ್‌ ನೆಟ್‌ನ ಈ ದಿನದಲ್ಲಿ ನೆಟ್ಟಗಿರೋಣ, ವಿವಾದಗಳ ಸುಳಿಯಲ್ಲಿ ಮುಳುಗದೇ ಗಟ್ಟಿಯಿರೋಣ.

 

– ಪ್ರಶಸ್ತಿ. ಪಿ.

Advertisement

Udayavani is now on Telegram. Click here to join our channel and stay updated with the latest news.

Next