ಪುಣೆ: ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ನೂತನ ಕೃಷಿ ಕಾಯ್ದೆ ವಿರುದ್ಧ ಶನಿವಾರ(ಜನವರಿ 30)ದಿಂದ ಧರಣಿ ನಡೆಸಲು ಮುಂದಾಗಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ದಿಢೀರ್ ಯೂಟರ್ನ್ ಹೊಡೆದಿದ್ದು, ಧರಣಿಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:5 ರಾಜ್ಯಗಳಲ್ಲಿ 5 ಸಾವಿರ ಡೋಸ್ ಲಸಿಕೆ ವೇಸ್ಟ್!
ಬಿಜೆಪಿ ಹಿರಿಯ ಮುಖಂಡ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಮ್ಮುಖದಲ್ಲಿ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ.ನಾನು ತುಂಬಾ ದೀರ್ಘಕಾಲದಿಂದ ಹಲವಾರು ಸಮಸ್ಯೆಗಳ ಬಗ್ಗೆ ಚಳವಳಿ ನಡೆಸುತ್ತಾ ಬಂದಿದ್ದೇನೆ. ಶಾಂತಿಯುತವಾಗಿ ಪ್ರತಿಭಟಿಸುವುದು ಅಪರಾಧವಲ್ಲ.
ಕಳೆದ ಮೂರು ವರ್ಷಗಳಿಂದ ರೈತರ ವಿಷಯದ ಕುರಿತು ಧ್ವನಿ ಎತ್ತುತ್ತಲ್ಲೇ ಬಂದಿದ್ದೇನೆ. ತಮ್ಮ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಏತನ್ಮಧ್ಯೆ ಸರ್ಕಾರ ಶೇ.50ರಷ್ಟು ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಯನ್ನು ನಿಗದಿಗೊಳಿಸಿದೆ. ಈ ಬಗ್ಗೆ ನನಗೆ ಪತ್ರ ಬಂದಿರುವುದಾಗಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಇದನ್ನೂ ಓದಿ:4 ಲಕ್ಷದತ್ತ ರಾಜಧಾನಿ ಕೊರೊನಾ ಕೇಸ್: ರಾಜ್ಯದ ಅರ್ಧದಷ್ಟು ಪ್ರಕರಣಗಳು ರಾಜಧಾನಿಯಲ್ಲಿ ಪತ್ತೆ
“ ನನ್ನ 15 ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರ ಪರಿಶೀಲನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ನಾನು ಶನಿವಾರದಿಂದ ಆರಂಭಿಸಬೇಕಿದ್ದ ಉಪವಾಸ ಸತ್ಯಾಗ್ರಹವನ್ನು ರದ್ದುಗೊಳಿಸಿದ್ದೇನೆ” ಎಂದು ಹೇಳಿದರು.
ದೆಹಲಿಯ ಗಡಿಯಲ್ಲಿ ಕೇಂದ್ರದ ಕೃಷಿ ನೀತಿಯನ್ನು ವಿರೋಧಿಸಿ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟ ಪ್ರಜಾಪ್ರಭುತ್ವ ಮೌಲ್ಯಕ್ಕೆ ಅನುಗುಣವಾಗಿಲ್ಲ ಎಂದು ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.