Advertisement

ಸೋಯಾ ಅವರೆ ಬೆಳೆಗೆ ಬಸವನ ಹುಳುವಿನ ಕಾಟ

06:06 PM Jun 30, 2022 | Team Udayavani |

ಭಾಲ್ಕಿ: ತಾಲೂಕಿನ ವ್ಯಾಪ್ತಿಯ ಅಲ್ಲಲ್ಲಿ ಉತ್ತಮ ಮಳೆ ಆಗಿದ್ದು ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಬಹುತೇಕ ಕಡೆಗಳಲ್ಲಿ ಪ್ರಮುಖ ಬೆಳೆ ಸೋಯಾ ಅವರೆ ಬೆಳೆ ಬಿತ್ತನೆಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಈ ಮೊದಲು ಬಿತ್ತನೆಯಾದ ಲಖಗಾಂವ ಹೋಬಳಿಯ ತಳವಾಡ(ಎಂ) ಗ್ರಾಮದ ಕೆಲ ರೈತರ ಸೋಯಾ ಅವರೆ ಬೆಳೆಯಲ್ಲಿ ಬಸವನ ಹುಳುವಿನ ಬಾಧೆ ಕಂಡು ಬಂದಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ರೂಪಾ.ಎಂ ತಿಳಿಸಿದ್ದಾರೆ.

Advertisement

ತಾಲೂಕಿನ ವಿವಿಧೆಡೆ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಿಸಿ ಮಾತನಾಡಿದ ಅವರು, ಸೋಯಾ, ಉದ್ದು, ಹೆಸರು ಮತ್ತು ತೊಗರಿ ಬೆಳೆಗಳು 2-4 ಎಲೆಯ ಹಂತದಲ್ಲಿವೆ. ಆದರೆ ಬೆಳೆಯುತ್ತಿರುವ ಎಲೆಗಳನ್ನು ಬಸವನ ಹುಳು ನಾಶಪಡಿಸುತ್ತಿವೆ. ಮಳೆಗಾಲದಲ್ಲಿ ತುಂತುರು ಮಳೆ ಹಾಗೂ ಸೂರ್ಯನ ಮಂದ ಪ್ರಕಾಶವಿರುವಾಗ ಹಗಲಿನಲ್ಲಿಯೂ ಇವುಗಳ ಬಾಧೆ ಕಾಣಬಹುದು.

ಮಳೆಗಾಲದಲ್ಲಿ ನೀರಿನ ಮೂಲದ ಸುತ್ತಮುತ್ತ ಹೊಲದಲ್ಲಿರುವ ನಡೆದಾಡಲು ಬಳಸುವ ಕಟ್ಟೆಗಳು, ಒಡಾಡುವ ಸ್ಥಳ, ಕಳೆ ಕಸಗಳು ಈ ಬಸವನ ಹುಳುವಿನ ತಾಣಗಳು. ಬಸವನ ಹುಳು ತನ್ನ ಜೀವಿತಾವ ಧಿಯಲ್ಲಿ 100-500 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿದ್ದು, 3-5 ಸೆಂ.ಮೀ. ಆಳದಲ್ಲಿ ಭೂಮಿಯ ಒಳಗಡೆ ಇಟ್ಟು ಅವುಗಳನ್ನು ಜಿಗುಟಾದ ವಸ್ತುವಿನಿಂದ ಮುಚ್ಚುತ್ತದೆ.

ಅನುಕೂಲಕರ ವಾತಾವರಣವಿದ್ದಲ್ಲಿ ಮೊಟ್ಟೆಯಿಂದ ಮರಿಗಳು ಹೊರಬಂದು ಜೀವಿಸುವುದನ್ನು ನೋಡುತ್ತೇವೆ. ಇಲ್ಲವಾದಲ್ಲಿ ಸುಪ್ತಾವಸ್ಥೆಗೆ ಹೋಗುತ್ತದೆ. ಬಸವನ ಹುಳುಗಳ ಸಮರ್ಥ ನಿಯಂತ್ರಣಕ್ಕಾಗಿ, ಸಮಗ್ರ ಮತ್ತು ಸಾಮೂಹಿಕ ನಿರ್ವಹಣೆ ಅತ್ಯಗತ್ಯ.

ಮೊದಲನೆಯದಾಗಿ ತೋಟಗಳಲ್ಲಿ ಹೊಲ-ಗದ್ದೆಗಳಲ್ಲಿ ಪೀಡೆಗೆ ಆಸರೆಯಾಗುವ ಅಡಗು ತಾಣಗಳಾದ ಬದುಗಳು, ಬಿದ್ದ ಕಸಕಡ್ಡಿ ಮತ್ತು ಕಾಲುವೆಗಳನ್ನು ಕಾಲಕಾಲಕ್ಕೆ ಸ್ವತ್ಛ ಮಾಡಿ, ಅಲ್ಲಿರುವ ಕಸಕಡ್ಡಿಗಳನ್ನು ತೆಗೆದು ಬಸವನ ಹುಳುಗಳು ಅಡಗಿಕೊಳ್ಳಲು ಆಸ್ಪದವಿಲ್ಲದಂತೆ ಮಾಡಬೇಕು.

Advertisement

ಪ್ರತಿದಿನ ಮುಂಜಾನೆ (ಕನಿಷ್ಠ ವಾರದಲ್ಲಿ ಎರಡು ದಿನ) ನೆರಳಿನಲ್ಲಿ ಅಡಗಿರುವ ಹುಳುಗಳನ್ನು ಸಂಗ್ರಹಿಸಿ, ಒಂದು ಆಳವಾದ ಗುಂಡಿಯಲ್ಲಿ ಹಾಕಿ, ಅದರ ಮೇಲೆ ಉಪ್ಪು, ಸುಣ್ಣ, ಬ್ಲಿಚಿಂಗ್‌ ಪುಡಿ ಹಾಕಿ, ಹುಳುಗಳು ಸತ್ತ ನಂತರ ಮಣ್ಣಿನಿಂದ ಮುಚ್ಚಬೇಕು. (ಇಲ್ಲವಾದರೆ ವಾತಾವರಣದಲ್ಲಿ ಕೆಟ್ಟ ವಾಸನೆ ಮತ್ತು ನೊಣಗಳು ಹೆಚ್ಚಾಗಿ ಅಸಯ್ಯ ಹುಟ್ಟಿಸುತ್ತದೆ). ಇದೇ ರೀತಿ ವಿಷರಹಿತವಾಗಿ ಬಸವನ ಹುಳುಗಳ ನಿರ್ವಹಣೆಗೆ ಹುಳುಗಳ ಅಡಗು ತಾಣಗಳ ಸುತ್ತ ಮತ್ತು ಬದುಗಳ ಅರೆಟಿನಲ್ಲಿ ಸುಣ್ಣದ ಪುಡಿ, ಬ್ಲಿಚಿಂಗ್‌ ಪುಡಿ, ಕೋಳಿ ಮೊಟ್ಟೆಯ ಸಿಪ್ಪೆಯ ಪುಡಿಯನ್ನು ರಂಗೋಲಿಯಂತೆ ಹಾಕುವುದು ಸರಳ ಕ್ರಮ. ಆದರೆ, ಮಣ್ಣಿನಲ್ಲಿ ತೇವಾಂಶ ಹೆಚ್ಚಿದಾಗ ಮತ್ತು ಮಳೆಯಾದಾಗ ಉಪಚಾರಗಳ ಪರಿಣಾಮ ಕಡಿಮೆಯಾಗುತ್ತದೆ.

ರಾಸಾಯನಿಕ ಕ್ರಮವಾಗಿ, ಮೆಟಾಲ್ಡಿಹೈಡ್‌ ಎಂಬ ಬಸವನ ಹುಳು ಆಕರ್ಷಕ ಮತ್ತು ಕೊಲ್ಲುವ ಗುಳಿಗೆಗಳನ್ನು ಬಳಸಿ, ಆಕರ್ಷಿಸಿ ಕೊಲ್ಲಲು ಸಾಧ್ಯ. ಆರಂಭಿಕ ಹಂತಗಳಲ್ಲಿ (ಕಡಿಮೆ ಹಾವಳಿ ಇದ್ದಾಗ) ಎಕರೆಗೆ 2-4 ಕೆ.ಜಿ. ಮೆಟಾಲ್ಡಿಹೈಡ್‌ ಅನ್ನು ಬಳಸಬೇಕು. ಹಾವಳಿ ಹೆಚ್ಚಾದರೆ ಎಕರೆಗೆ 10-15 ಕೆ.ಜಿ. ಬಳಸಬೇಕಾಗುತ್ತದೆ. ಮಣ್ಣಿನಲ್ಲಿ ತೇವಾಂಶ ಹೆಚ್ಚಿದ್ದರೆ ಅಥವಾ ಮಳೆ ಬಿದ್ದಾಗ ಇದರ ಪರಿಣಾಮ ಸ್ವಲ್ಪ ಕಡಿಮೆಯಾಗುತ್ತದೆ. ಇದು ಪರಿಸರಕ್ಕೆ ಸ್ವಲ್ಪ ಮಟ್ಟಿಗೆ ಹಾನಿಕಾರಕವೇ.

ಮೆಟಾಲ್ಡಿಹೈಡ್‌ ಲಭ್ಯವಿಲ್ಲದ ಪಕ್ಷದಲ್ಲಿ 50 ಮಿ.ಲೀ. ಇಮಿಡಾಕ್ಲೊಪ್ರಿಡ್‌ 600 ಎಫ್‌.ಎಸ್‌. ಮತ್ತು ಅರ್ಧ ಕೆ.ಜಿ. ಬೆಲ್ಲವನ್ನು ಒಂದು ಲೀಟರ್‌ ನೀರಿನಲ್ಲಿ ಕರಗಿಸಿ ಇದನ್ನು 10-15 ಲೀ. ಪುರಿ (ಅಳ್ಳು) ಯಲ್ಲಿ ಬೆರೆಸಿ ಸಂಜೆಯ ವೇಳೆ ಅವುಗಳ ಅಡಗು ತಾಣಗಳ ಸಮೀಪ ಬದುಗಳ ಪಕ್ಕದಲ್ಲಿ ಸಾಲು ಬಿಟ್ಟಂತೆ ಹಾಕುವುದು. ಮೆಟಾಲ್ಡಿಹೈಡ್‌ ಮತ್ತು ಇಮಿಡಾಕ್ಲೊಪ್ರಿಡ್‌ ಉಪಚರಿತ ಪುರಿ ಬಳಸಿದಾಗ ನಮ್ಮ ಸಾಕು ಪ್ರಾಣಿ, ಪಕ್ಷಿಗಳು ಮತ್ತು ಇತರೆ ಕಾಡು ಪ್ರಾಣಿಗಳು ಉಪಚರಿಸಿದ
ಪ್ರದೇಶಗಳಿಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಪರಿಸರಕ್ಕೆ ಭರಿಸಲಾಗದ ನಷ್ಟವಾಗುತ್ತದೆ. ಎಲ್ಲ ನಿರ್ವಹಣೆ ಕ್ರಮಗಳನ್ನು ಸಾಮೂಹಿಕವಾಗಿ ಆ ಪ್ರದೇಶದ ಎಲ್ಲ ರೈತರು ಅಳವಡಿಸಿಕೊಳ್ಳುವುದರಿಂದ ಬಸವನ ಹುಳುವಿನ ಬಾಧೆಯನ್ನು ಸಮರ್ಪಕವಾಗಿ ತಡೆಗಟ್ಟಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next