Advertisement

ಅಂ. ಕಾರ್ಯಕರ್ತೆಯರಿಗೆ ಶೀಘ್ರ ಸ್ಮಾರ್ಟ್‌ ಫೋನ್‌

11:43 PM Jan 27, 2020 | Sriram |

ಆರೋಗ್ಯವಂತ ಮಗುವಿನ ಉದ್ದೇಶದಿಂದ “ಪೋಷಣ್‌’ ಅಭಿಯಾನ ಜಾರಿಗೆ ಬಂದಿದ್ದು, ಇದರ ಸಮರ್ಪಕ ಅನುಷ್ಠಾನಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ನೀಡಲಾಗುತ್ತಿದೆ.

Advertisement

ಕುಂದಾಪುರ: ಕೇಂದ್ರ ಸರಕಾರದ ರಾಷ್ಟ್ರೀಯ ಪೋಷಣ್‌ ಅಭಿಯಾನ ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ನೀಡಲಿದ್ದು ಎಪ್ರಿಲ್‌ ವೇಳೆಗೆ ದೊರೆಯುವ ನಿರೀಕ್ಷೆ ಇದೆ.

ತರಬೇತಿ
ಉಡುಪಿ ಜಿಲ್ಲೆ ಎರಡನೆ ಹಂತದ ತರಬೇತಿಯ ಜಿಲ್ಲೆಗಳ ಪಟ್ಟಿಯಲ್ಲಿದ್ದು ಮಾರ್ಚ್‌ ಅಂತ್ಯದಲ್ಲಿ ತರಬೇತಿ ಮುಗಿಯಲಿದೆ. ಕಳೆದ ವಾರ ರಾಜ್ಯ ಮಟ್ಟದ ತರಬೇತಿ
ಯಾಗಿದೆ. ಇನ್ನು ಮೂರು ಹಂತಗಳಲ್ಲಿ ತರಬೇತಿ ನಡೆಯ ಲಿದ್ದು 15 ದಿನಗಳ ಅಂತರವಿರಲಿದೆ. ಜಿಲ್ಲೆ, ಬ್ಲಾಕ್‌ ಹಾಗೂ ವಲಯ ಮಟ್ಟದ ತರಬೇತಿಗಳಾಗಬೇಕಿದೆ.

ಪೋಷಣ್‌ ಅಭಿಯಾನ
ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರು 1,000 ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರ ಪಡೆದು, ಆರೋಗ್ಯವಂತರನ್ನಾಗಿಸುವ ಉದ್ದೇಶ ದಿಂದ ಜಾರಿಗೆ ತರಲಾಗಿರುವ ಕೇಂದ್ರ ಸರಕಾರದ ಯೋಜ ನೆಯೇ ಪೋಷಣ್‌ ಅಭಿಯಾನ. ಈ ಯೋಜನೆಯಡಿ ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರು 1,000 ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರ ಸೇವನೆ ಮಾಡುವುದು, ರಕ್ತ ಹೀನತೆ, ಅತಿಸಾರ ಭೇದಿ ತಡೆಗಟ್ಟುವುದು, ಪೌಷ್ಟಿಕ ಆಹಾರ ಪೂರೈಕೆ ಮಾಡುವುದರ ಮೂಲಕ ತಾಯಿ ಮತ್ತು ಶಿಶುವಿನ ಉತ್ತಮ ಆರೋಗ್ಯ ಕಾಪಾಡುವುದು ಮುಖ್ಯ ಉದ್ದೇಶ.

ಹೆಚ್ಚುವರಿ ಕೆಲಸ
ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಮಗು ಹುಟ್ಟಿದ ಒಂದೂವರೆ ತಿಂಗಳವರೆಗೆ ಆ ಮಗುವಿನ ಮನೆಗೆ 6 ಬಾರಿ ಭೇಟಿ ನೀಡಿ, ಆರೋಗ್ಯ ವಿಚಾರಿಸುತ್ತಿದ್ದರು. ಈಗ ಇದನ್ನು 15 ತಿಂಗಳವರೆಗೆ ವಿಸ್ತರಿಸಲಾಗಿದ್ದು, 11 ಬಾರಿ ಮಗುವಿನ ಯೋಗಕ್ಷೇಮ ವಿಚಾರಿಸಬೇಕಾಗುತ್ತದೆ.

Advertisement

ಮಾಹಿತಿ ಕೋರಿಕೆ
ಪೋಷಣ್‌ ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕರ್ನಾಟಕ ಸಹಿತ ಐದು ರಾಜ್ಯಗಳು ಮಾತ್ರ ಕೇಂದ್ರಕ್ಕೆ ಬೇಡಿಕೆ ಸಂಖ್ಯೆಯ ಮಾಹಿತಿ ನೀಡಿಲ್ಲ. ಕೇಂದ್ರ ಸರಕಾರ 129.7 ಕೋ.ರೂ. ನೀಡಲಿದ್ದು ಇದರಲ್ಲಿ ಶೇ.90 ಸ್ಮಾರ್ಟ್‌ಫೋನಿಗೆ, ಶೇ.10ರಷ್ಟು ತರಬೇತಿಗೆ ಖರ್ಚಾಗಲಿದೆ. 1.28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ದೊರೆಯಲಿದೆ.

ಏನಿದೆ?
ಸ್ಮಾರ್ಟ್‌ ಫೋನ್‌ ಹಾಗೂ ಟ್ಯಾಬ್‌ಗಳಲ್ಲಿ ಐಸಿಡಿಎಸ್‌-ಸಿಎಎಸ್‌ (ಇಂಟಗ್ರೇಟೆಡ್‌ ಚೈಲ್ಡ್‌ ಡೆವಲಪ್‌ಮೆಂಟ್‌ ಸರ್ವಿಸಸ್‌ ಕಾಮನ್‌ ಎಪ್ಲಿಕೇಶನ್‌ ಸಾಫ್ಟ್ವೇರ್‌) ಅಳವಡಿಸ
ಲಾಗಿರುತ್ತದೆ. ರಾಜ್ಯದ 65,911 ಅಂಗನವಾಡಿಗಳ ಮಾಹಿತಿ ಇದರಲ್ಲಿ ಅಡಗಿರುತ್ತದೆ. ಇದರಲ್ಲಿ ಮಕ್ಕಳಿಗೆ ಲಸಿಕೆ ಹಾಕುವುದು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ಆಯಾ ಸಂದರ್ಭಕ್ಕೆ ತಕ್ಕಂತೆ ತುಂಬಿಸಬೇಕು.

ಗೊಂದಲ
ಅಸಲಿಗೆ ಸ್ನೇಹ ಆ್ಯಪ್‌ ಪ್ರತ್ಯೇಕ, ಪೋಷಣ್‌ ಅಭಿಯಾನ ಪ್ರತ್ಯೇಕ. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಈ ಕುರಿತು ಗೊಂದಲವಾಗಿದೆ ಎಂದು ಇಲಾಖಾಧಿಕಾರಿಗಳು ಹೇಳುತ್ತಾರೆ. ಸ್ನೇಹ ಆ್ಯಪ್‌ನಲ್ಲಿ ಅಂಗನವಾಡಿಗಳ ದಾಖಲೆ ನಿರ್ವಹಣೆ ಮಾಡಲಾಗುತ್ತದೆ. ಜ.15ರ ಒಳಗೆ ಇದರ ಮಾಹಿತಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು. ಸ್ನೇಹ ಆ್ಯಪ್‌ ತಮ್ಮ ಸ್ವಂತ ಫೋನಿನಲ್ಲಿ ಬಳಸಿದರೆ ಪೋಷಣ್‌ ಕೂಡಾ ಅದರಲ್ಲೇ ಮಾಡಬೇಕಾಗಿ ಬರಬಹುದು ಎಂಬ ಸಂಶಯ ಇತ್ತು. ಆದರೆ ಪೋಷಣ್‌ಗೆ ಪ್ರತ್ಯೇಕ ಫೋನ್‌ ದೊರೆಯಲಿದೆ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಪೋಷಣ್‌ ಅಭಿಯಾನವನ್ನು ಅನುಷ್ಠಾನಗೊಳಿಸಲು ಜಿಲ್ಲಾ ಹಾಗೂ ಯೋಜನಾ ಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಇದರನ್ವಯ ನೇರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಜಿಲ್ಲಾ ಸಂಯೋಜಕರು, ಜಿಲ್ಲಾ ಯೋಜನಾ ಸಹಾಯಕರು, ಬ್ಲಾಕ್‌ಗೆ ಓರ್ವರಂತೆ ಶಿಶು ಅಭಿವೃದ್ಧಿ ಯೋಜನೆ ಬ್ಲಾಕ್‌ ಸಂಯೋಜಕರು, ಬ್ಲಾಕ್‌ಗೆ ಓರ್ವರಂತೆ ಯೋಜನಾ ಸಹಾಯಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

ನಿರಾಕರಣೆ
ಸರಕಾರ ಈಗಾಗಲೇ ಜಾರಿಗೊಳಿಸಿರುವ ಸ್ನೇಹ ಆ್ಯಪ್‌ (ಸೊಲ್ಯೂಷನ್‌ ಫಾರ್‌ ನ್ಯೂಟ್ರಿಶನ್‌ ಆ್ಯಂಡ್‌ ಎಫೆಕ್ಟಿವ್‌ ಹೆಲ್ತ್‌ ಎಕ್ಸೆಸ್‌) ಕಾರ್ಯಕ್ರಮ ಮಾಡಬೇಕಾದರೆ ಸರಕಾರದಿಂದ ಮೊಬೈಲ್‌ ಕೊಟ್ಟು ರೀಚಾರ್ಜ್‌ ಮಾಡಿಸಿದರೆ ಮಾತ್ರ ಅಂಗನವಾಡಿಗಳ ವರದಿಯನ್ನು ಸಲ್ಲಿಸಲಾಗುವುದು. ಸ್ನೇಹ ಆ್ಯಪ್‌ನ್ನು ಕಾರ್ಯಕರ್ತರ ಮೊಬೈಲ್‌ನಲ್ಲಿ ಮಾಡುವುದಿಲ್ಲ ಎಂದು ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದಿಂದ ನಿರ್ಣಯ ಕೈಗೊಳ್ಳಲಾಗಿದೆ.

ಜನಪರ
ಆಧುನಿಕ ತಂತ್ರಜ್ಞಾನದ ನೆರವು ಪಡೆದು ಕಾರ್ಯಕ್ರಮ ಎಲ್ಲೂ ಲೋಪವಾಗದಂತೆ ಯಶಸ್ವಿ ಅನುಷ್ಠಾನಗೊಳಿಸುವ ಉದ್ದೇಶ ಸರಕಾರದ್ದಾಗಬೇಕು.

ಅನುದಾನ ಬಂದಿದೆ
ತರಬೇತಿ ಅನುದಾನ ಬಂದಿದ್ದು ವಿವಿಧ ಹಂತಗಳಲ್ಲಿ ತರಬೇತಿ ನಡೆಯಲಿದೆ. ಸ್ಮಾರ್ಟ್‌ ಫೋನ್‌ ವಿತರಣೆಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ತರಬೇತಿ ಪೂರ್ಣವಾದ ಬಳಿಕ ದೊರೆಯುವ ನಿರೀಕ್ಷೆಯಿದೆ.
-ಶ್ವೇತಾ, ಸಿಡಿಪಿಒ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕುಂದಾಪುರ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next