Advertisement

ವಿಮಾನ ನಿಲ್ದಾಣದಲ್ಲಿ ಸ್ಮಾರ್ಟ್‌ ಸೆಕ್ಯೂರಿಟಿ ಲೇನ್‌

12:19 PM Oct 09, 2018 | |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ “ಸ್ಮಾರ್ಟ್‌ ಸೆಕ್ಯುರಿಟಿ ಲೇನ್‌’ ಮತ್ತು “ಸ್ವಯಂಚಾಲಿತ ಟ್ರೇ ರಿಟ್ರೈವಲ್‌ ವ್ಯವಸ್ಥೆ’ (ಎಟಿಆರ್‌ಎಸ್‌) ಪರಿಚಯಿಸಲಾಗಿದೆ.

Advertisement

ಈ ವಿನೂತನ ವ್ಯವಸ್ಥೆಯಿಂದ ಪ್ರಯಾಣಿಕರ ಭದ್ರತಾ ತಪಾಸಣಾ ಸಮಯ ಸಾಕಷ್ಟು ಉಳಿತಾಯ ಆಗಲಿದೆ. ಜತೆಗೆ ಏಕಕಾಲದಲ್ಲಿ ಇಡೀ ಕುಟುಂಬದ ತಪಾಸಣೆ ಒಮ್ಮೆಲೆ ನಡೆಸಲು ಅನುಕೂಲ ಆಗಲಿದೆ. ಮಾನವ ಹಸ್ತಕ್ಷೇಪವೂ ತಗ್ಗಲಿದ್ದು, ಇದರಿಂದ ಕಾರ್ಯಕ್ಷಮತೆ ಮತ್ತಷ್ಟು ಸುಧಾರಣೆ ಆಗಲಿದೆ. ಈ ಸಂಬಂಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌) ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ ಎಲ್‌-3 ಮೆಕ್‌ಡೊನಾಲ್ಡ್‌ ಹಂಫ್ರಿ (ಆಟೋಮೇಷನ್‌) ಇಂಡಿಯಾ ಪ್ರç.ಲಿ., ಜತೆ ಒಡಂಬಡಿಕೆ ಮಾಡಿಕೊಂಡಿದೆ.

ಈ ಮೊದಲು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಭದ್ರತಾ ತಪಾಸಣೆ ನಡೆಯುತ್ತಿತ್ತು. ಈಗ ಒಟ್ಟಿಗೆ ಅಲ್ಪಾವಧಿಯಲ್ಲಿ ಈ ಪ್ರಕ್ರಿಯೆ ನಡೆಸಬಹುದು. ಭಾರತದಲ್ಲಿ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಹೊಂದಿದ ಹೆಗ್ಗಳಿಕೆಗೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ. 2017ರ ಆರಂಭದಲ್ಲಿ ಇದನ್ನು ಪರೀಕ್ಷಾರ್ಥ ಪರಿಚಯಿಸಲಾಗಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿದೆ.

ಪ್ರಸ್ತುತ ಈ ಸೇವೆ ಕೆಲವು ಭಾಗಗಳಿಗೆ ಸೀಮಿತವಾಗಿದೆ. ಸಂಪೂರ್ಣವಾಗಿ ಈ ವ್ಯವಸ್ಥೆ ವಿಸ್ತರಣೆಯಾದರೆ, ತಪಾಸಣೆ ಸಾಮರ್ಥ್ಯ ಶೇ.50ರಷ್ಟು ವೃದ್ಧಿಸಲಿದೆ. ಒಟ್ಟಾರೆ ಕಾರ್ಯಾಚರಣೆ ಕಾರ್ಯಕ್ಷಮತೆ ಸುಧಾರಣೆ ಜತೆಗೆ ಸುರಕ್ಷತೆ ಮತ್ತು ಭದ್ರತೆ ಹೆಚ್ಚಲಿದೆ. ಹಾಗೂ ಪ್ರಯಾಣಿಕರ ದಟ್ಟಣೆ ಉಂಟಾಗುವುದಿಲ್ಲ. ಈ ಸ್ವಯಂಚಾಲಿತ ವ್ಯವಸ್ಥೆ ಅಳವಡಿಸುವ ಕಾರ್ಯ ಹಂತ-ಹಂತವಾಗಿ ನಡೆಯಲಿದ್ದು,  2019ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬಿಐಎಎಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾವೆದ್‌ ಮಲಿಕ್‌ ತಿಳಿಸಿದ್ದಾರೆ. 

ಅನುಮಾನ ಬಂದರೆ ಅಧಿಕಾರಿಗಳ ತಪಾಸಣೆ: ಅನುಮಾನಾಸ್ಪದ ವಸ್ತುಗಳನ್ನು ಟಚ್‌ಸ್ಕ್ರೀನ್‌ನಲ್ಲಿ ಗುರುತು ಮಾಡಿ, ತ್ವರಿತವಾಗಿ ಪತ್ತೆಹಚ್ಚಲಿಕ್ಕೂ ಈ ವ್ಯವಸ್ಥೆ ನೆರವಾಗಲಿದೆ. ತಪಾಸಣೆಗೆ ಲಗೇಜುಗಳನ್ನು ಸಾಗಿಸುವ ಟ್ರೇಗಳ ಫೋಟೋ ಮತ್ತು ಎಕ್ಸ್‌ರೇ ಇಮೇಜ್‌ಗಳನ್ನು ಸೆರೆಹಿಡಿಯಲಾಗುತ್ತದೆ. ಅನುಮಾನಾಸ್ಪದವಾಗಿ ಕಂಡುಬರುವ ವಸ್ತುಗಳನ್ನು ಟಚ್‌ಸ್ಕ್ರೀನ್‌ನಲ್ಲಿ ಗುರುತು ಮಾಡಲಾಗುತ್ತದೆ. ಹೀಗೆ ಗುರುತು ಮಾಡಿದ ಚಿತ್ರಗಳು ಭೌತಿಕ ಪರೀಕ್ಷೆ ನಡೆಸುವ ಅಧಿಕಾರಿಗಳಿಗೆ ರವಾನೆ ಆಗುತ್ತದೆ. ಅಲ್ಲಿ ಅವರು ಈ ವಸ್ತುಗಳನ್ನು ಸುಲಭವಾಗಿ ಪತ್ತೆಹಚ್ಚಿ, ಅಗತ್ಯಬಿದ್ದರೆ ಪ್ರತ್ಯೇಕಿಸಬಹುದು ಎಂದು ಬಿಐಎಎಲ್‌ ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next