Advertisement

ತ್ಯಾಜ್ಯ ವಿಂಗಡಿಸದಿದ್ದರೆ ನಿರಾಕರಿಸುತ್ತೆ!

09:11 AM May 15, 2020 | Suhan S |

ಹುಬ್ಬಳ್ಳಿ: ತ್ಯಾಜ್ಯ ಸುರಿಯಲು ಹೋದರೆ ತನ್ನಿಂದತಾನೆ ತೆರೆದುಕೊಳ್ಳುತ್ತದೆ, ತ್ಯಾಜ್ಯ ವಿಂಗಡಿಸದೇ ಹಾಕಲು ಹೋದರೆ ನಿರಾಕರಿಸುತ್ತದೆ, ತ್ಯಾಜ್ಯ ಪ್ರಮಾಣ ಭರ್ತಿಯಾದರೆ, ಸಾಗಣೆಗೆ ಸಂಬಂಧಿಸಿದವರಿಗೆ ಸಂದೇಶ ರವಾನಿಸುತ್ತದೆ. ಇದು ಸ್ಮಾರ್ಟ್‌ ಯುಗವಾಗಿದ್ದು, ಇದಕ್ಕೆ ಪೂರಕವಾಗಿ ಸ್ಮಾರ್ಟ್‌ ಕಸದ ತೊಟ್ಟಿ (ಸ್ಮಾರ್ಟ್‌ ಗಾರ್ಬೆಜ್‌) ರೂಪುಗೊಂಡಿದೆ.

Advertisement

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆಯ ನಗರವಾಗಿದ್ದು, ಕೇಂದ್ರ ಸರಕಾರದ ಸೂಚನೆ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆ ನಿಯಮದಂತೆ ವಿವಿಧ ಯೋಜನೆ, ಸೌಕರ್ಯಗಳನ್ನು ಸ್ಮಾರ್ಟ್‌ ಆಗಿಸಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಎಸ್‌ಎಸ್‌ಇ ಪ್ರೊಟೆಕ್‌ ಸಂಸ್ಥೆ ಸ್ಮಾರ್ಟ್‌ ಕಸದ ತೊಟ್ಟಿ ತಯಾರುಗೊಳಿಸುವ ಮೂಲಕ ಗಮನ ಸೆಳೆದಿದೆ.

ಸ್ಮಾರ್ಟ್‌ ಕಸದ ತೊಟ್ಟಿಯನ್ನು ಮನೆಗಳಿಗೂ ಬಳಸಬಹುದು. ಅಲ್ಲದೆ ಗುಂಪು ಮನೆಗಳಿರುವ ಅಪಾರ್ಟ್‌ಮೆಂಟ್‌, ಹೋಟೆಲ್‌, ಆಸ್ಪತ್ರೆಗಳಲ್ಲಿ ಇದನ್ನು ಬಳಸಬಹುದಾಗಿದೆ. ತ್ಯಾಜ್ಯ ಸಾಗಣೆ ನಿಟ್ಟಿನಲ್ಲಿ ಸಂಬಂಧಿಸಿದವರಿಗೆ ಸಂದೇಶ ರವಾನಿಸುವ ಮೂಲಕ ತ್ಯಾಜ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ.

ವಿಂಗಡಿಸದಿದ್ದರೆ ತೆಗೆದುಕೊಳ್ಳಲ್ಲ: ಘನತ್ಯಾಜ್ಯ ವಿಲೇವಾರಿ ದೇಶಕ್ಕೆ ಬಹುದೊಡ್ಡ ಸವಾಲು ರೂಪದಲ್ಲಿ ಕಾಡುತ್ತಿದೆ. ತ್ಯಾಜ್ಯ ಸಂಗ್ರಹ, ಸಾಗಣೆ ಒಂದು ರೀತಿಯದ್ದಾದರೆ, ಅದರ ವೈಜ್ಞಾನಿಕ ವಿಲೇವಾರಿ ಮತ್ತೂಂದು ಸವಾಲಿನದ್ದಾಗಿದೆ. ತ್ಯಾಜ್ಯ ವಿಂಗಡಣೆ ಇಂದಿಗೂ ಬಹುತೇಕ ಕಡೆ ಸಾಧ್ಯವಾಗುತ್ತಿಲ್ಲ. ತ್ಯಾಜ್ಯದ ಮೂಲದಲ್ಲಿಯೇ ಹಸಿ-ಒಣ ತ್ಯಾಜ್ಯ ವಿಂಗಡಣೆ ಮಾಡುವಂತೆ ಸ್ಥಳೀಯ ಆಡಳಿತಗಳು ಎಷ್ಟು ಹೇಳಿದರೂ, ಜಾಗೃತಿ ಮೂಡಿಸಿದರೂ ಬಹುತೇಕರು ತ್ಯಾಜ್ಯ ವಿಂಗಡಣೆ ಮಾಡದೆಯೇ ನೀಡುತ್ತಿದ್ದಾರೆ. ಇನ್ನೊಂದು ಕಡೆ ಜಾಗೃತಿ ಮೂಡಿಸುವ ಸ್ಥಳೀಯ ಆಡಳಿತದ ತ್ಯಾಜ್ಯ ಸಂಗ್ರಹ ವಾಹನಗಳು ನಾಗರಿಕರು ತ್ಯಾಜ್ಯ ವಿಂಗಡಣೆ ಮಾಡಿ ನೀಡಿದರೂ, ವಾಹನಕ್ಕೆ ಹಾಕುವಾಗ ಮಾತ್ರ ಒಂದೇ ಕಡೆ ಹಾಕಿ ತೆಗೆದುಕೊಂಡು ಹೋಗುವ ನಿದರ್ಶನಗಳು ಅನೇಕ ಇವೆ.

ಸ್ಮಾರ್ಟ್‌ ಕಸದ ತೊಟ್ಟಿ ಮಾತ್ರ ತ್ಯಾಜ್ಯ ವಿಂಗಡಿಸದಿದ್ದರೆ ತ್ಯಾಜ್ಯವನ್ನು ತೆಗೆದುಕೊಳ್ಳುವುದೇ ಇಲ್ಲ. ಸ್ಮಾರ್ಟ್‌ ಕಸದ ತೊಟ್ಟಿಯಲ್ಲಿ ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯ ಎಂದು ಎರಡು ಭಾಗಗಳಾಗಿ ಮಾಡಲಾಗಿದೆ. ಸೆನ್ಸರ್‌ ಆಧಾರಿತವಾಗಿ ಇದು ಕಾರ್ಯನಿರ್ವಹಿಸುತ್ತಿದ್ದು, ಹಸಿ ತ್ಯಾಜ್ಯದ ಭಾಗದಲ್ಲಿ ಒಣ ತ್ಯಾಜ್ಯ, ಒಣ ತ್ಯಾಜ್ಯ ಭಾಗದಲ್ಲಿ ಹಸಿ ತ್ಯಾಜ್ಯ ಹಾಕಲು ಮುಂದಾದರೆ ಅದು ತೆರೆದುಕೊಳ್ಳುವುದೇ ಇಲ್ಲ. ತ್ಯಾಜ್ಯ ಭರ್ತಿಯಾದರೆ ತೆರೆದುಕೊಳ್ಳುವುದಿಲ್ಲ. ಜತೆಗೆ, ಭರ್ತಿಯಾಗಿದೆ ಎಂಬ ಸಂದೇಶ ನೀಡುತ್ತದೆ.

Advertisement

ಅಲ್ಲದೇ ತ್ಯಾಜ್ಯ ಭರ್ತಿಯಾಗಿದ್ದು, ಸಾಗಣೆಗೆ ಮುಂದಾಗುವಂತೆ ಸಂಬಂಧಿಸಿದವರಿಗೆ ಸಂದೇಶ ರವಾನಿಸುತ್ತದೆ. ತ್ಯಾಜ್ಯ ಸಾಗಣೆ ಮಾಡುವವರು ಇದರ ಸಾಗಣೆ ಸಕಾಲಕ್ಕೆ ಮಾಡದಿದ್ದರೆ, ಅದರ ಸಂದೇಶವನ್ನು ಸ್ಥಳೀಯ ಆಡಳಿತ ಮುಖ್ಯಸ್ಥರಿಗೂ ರವಾನಿಸುತ್ತದೆ. ಜತೆಗೆ ಸ್ಮಾರ್ಟ್‌ ಕಸದ ತೊಟ್ಟಿ ಇರುವ ಪ್ರದೇಶದ ತ್ಯಾಜ್ಯ ನಿರ್ವಹಣೆಯನ್ನು ಜಿಎಸ್‌ಎಂ ನೆರವಿನೊಂದಿಗೆ ಸ್ಥಳೀಯ ಆಡಳಿತ ಮುಖ್ಯಸ್ಥರು ತಮ್ಮ ಮೊಬೈಲ್‌ನಲ್ಲಿಯೇ ವೀಕ್ಷಣೆ ಮಾಡಬಹುದು, ಮಾಹಿತಿ ಪಡೆಯಬಹುದಾಗಿದೆ. ಮೊಬೈಲ್‌ ಆ್ಯಪ್‌ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.

ವಾಸನೆ ಬಾರದು: ಸ್ಮಾರ್ಟ್‌ ಕಸದ ತೊಟ್ಟಿಯಲ್ಲಿ ತ್ಯಾಜ್ಯ ಹಾಕಿದ ನಂತರ ಸ್ವಯಂ ಮುಚ್ಚಿಕೊಳ್ಳುತ್ತದೆ. ಜತೆಗೆ ತ್ಯಾಜ್ಯದ ಯಾವುದೇ ವಾಸನೆ ಬಾರದಂತೆ ಭದ್ರವಾಗಿ ಮುಚ್ಚಿಕೊಳ್ಳುವ ವ್ಯವಸ್ಥೆ ಅಳವಡಿಸಲಾಗಿದೆ. ಸ್ಮಾರ್ಟ್‌ ಕಸದ ತೊಟ್ಟಿಗೆ ಒಂದು ಬಾರಿ ಹೂಡಿಕೆ ಮಾಡಿದರೆ ಸುಮಾರು 20ರಿಂದ 30 ವರ್ಷ ಯಾವುದೇ ಸಮಸ್ಯೆ ಬಾರದು ಎಂಬುದು ಕಂಪನಿ ಅನಿಸಿಕೆ.

ಎಸ್‌ಎಸ್‌ಇ ಪ್ರೊಟೆಕ್‌ ಕಂಪನಿ ಪ್ರಸ್ತುತ ಸುಮಾರು 144 ಲೀಟರ್‌ ಸಾಮರ್ಥ್ಯ ಹಾಗೂ 80 ಲೀಟರ್‌ ಸಾಮರ್ಥ್ಯದಲ್ಲಿ ಸ್ಮಾರ್ಟ್‌ ಕಸದ ತೊಟ್ಟಿ ತಯಾರಿಸಿದೆ. 144 ಲೀಟರ್‌ ಸಾಮರ್ಥ್ಯದ ತೊಟ್ಟಿ ನಾಲ್ಕು ಅಡಿ ಎತ್ತರ ಇದ್ದು, ಅದೇ ರೀತಿ 80 ಲೀಟರ್‌ ಸಾಮರ್ಥ್ಯವಿದ್ದು, ಮೂರು ಅಡಿ ಎತ್ತರ ಇದೆ. ಸುಮಾರು 15ರಿಂದ 22 ಸಾವಿರ ರೂ. ವೆಚ್ಚದಲ್ಲಿ ಇವು ದೊರೆಯಲಿವೆ. ಜತೆಗೆ ಇದೇ ಸ್ಮಾರ್ಟ್‌ ಕಸದ ತೊಟ್ಟಿಯಲ್ಲಿ ಹಸಿತ್ಯಾಜ್ಯ ಬಳಿಸಿ ಕಾಂಪೊಸ್ಟ್‌ ಸಹ ತಯಾರು ಮಾಡಬಹುದಾಗಿದೆ.

ಸ್ಮಾರ್ಟ್‌ ನಗರಕ್ಕೆ ಸ್ಮಾರ್ಟ್‌ ಯೋಜನೆ :  ತ್ಯಾಜ್ಯ ವಿಂಗಡಣೆ ಹಾಗೂ ಸಂಗ್ರಹ ನಿಟ್ಟಿನಲ್ಲಿ ಸ್ಮಾರ್ಟ್‌ ಕಸದ ತೊಟ್ಟಿ ಉತ್ತಮ ಸಹಕಾರಿ ಆಗಲಿದೆ. ಜತೆಗೆ ಸ್ಥಳೀಯ ಆಡಳಿತಕ್ಕೂ ತ್ಯಾಜ್ಯ ಸಂಗ್ರಹ ಬಗ್ಗೆ ಸಂದೇಶ ರವಾನಿಸುತ್ತಿದ್ದು, ಸಮರ್ಪಕ ಸಾಗಣೆ ಆಗಿದೆಯೋ ಇಲ್ಲವೋ ಎನ್ನುವ ಮಾಹಿತಿಯನ್ನು ಇದ್ದಲ್ಲಿಂದಲೇ ತಿಳಿದುಕೊಳ್ಳಬಹುದಾಗಿದೆ. – ಬಿ.ಎಚ್‌. ಸುರೇಶರಾಜು, ವ್ಯವಸ್ಥಾಪಕ ನಿರ್ದೇಶಕ, ಎಎಸ್‌ಇ ಪ್ರೊಟೆಕ್‌

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next