Advertisement

 ಸರ್ವ ವ್ಯವಸ್ಥೆ ಸಮ್ಮಿಲಿತ ರಸ್ತೆ ಕಾಮಗಾರಿ ಸ್ಮಾರ್ಟ್ ಸಿಟಿಗೆ  ಅಗತ್ಯ

12:32 PM Sep 16, 2018 | |

ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಾಣಗೊಂಡ ರಸ್ತೆಯನ್ನು ಕೆಲವೇ ದಿನಗಳಲ್ಲಿ ಅಗೆಯುತ್ತಾರೆ, ಮತ್ತೆ ತೇಪೆ ಹಾಕುತ್ತಾರೆ. ಇಂಥ ಕಾಮಗಾರಿ ಅಲ್ಲಲ್ಲಿ ನಡೆಯುತ್ತಿರುವುದರಿಂದ ಸುಂದರವಾದ ರಸ್ತೆಗಳೂ ತೇಪೆಯಿಂದ ತುಂಬಿ ಹೋಗುತ್ತಿದೆ. ಇದರ ಬದಲು ರಸ್ತೆ ಕಾಮಗಾರಿ ನಡೆಸುವ ಸಂದರ್ಭದಲ್ಲೇ ಭವಿಷ್ಯದ ಕುರಿತು ಯೋಚನೆ ಮಾಡಿ ದುರಸ್ತಿ ಮಾಡಬೇಕಾಗಿರುವ ಸ್ಥಳಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿದರೆ ರಸ್ತೆಯೂ ಹಾಳಾಗುವುದಿಲ್ಲ, ಕಾಮಗಾರಿಗೆ ಖರ್ಚು ಮಾಡಿದ ಹಣವೂ ವ್ಯರ್ಥವಾಗುವುದಿಲ್ಲ.

Advertisement

ಮಂಗಳೂರು ನಗರದಲ್ಲಿ ಕಾಂಕ್ರೀಟೀಕರಣ ಮಾಡುವಾಗ ಒಳಚರಂಡಿ, ಫುಟ್‌ಪಾತ್‌, ಯುಟಿಲಿಟಿ ಕಾಮಗಾರಿಗಳನ್ನು ಕಡೆಗಣಿಸಿರುವುದು ಸಮಸ್ಯೆಯಾಗಿ ಕಾಡತೊಡಗಿದೆ. ಕಾಂಕ್ರೀಟೀಕರಣಗೊಂಡಿರುವ ರಸ್ತೆಗಳನ್ನು ಅಲ್ಲಲ್ಲಿ ತುಂಡರಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ನೀರು ಸರಬರಾಜು ಕೊಳವೆಗಳು, ಟೆಲಿಪೋನ್‌ ಕಂಪೆನಿಗಳ ಕಂಬಗಳು, ತಂತಿಗಳು, ಒಳಚರಂಡಿ ಮುಂತಾದವುಗಳನ್ನು ರಸ್ತೆ ಮಧ್ಯದಲ್ಲೇ ಉಳಿಸಿಕೊಂಡು ಕಾಮಗಾರಿ ನಡೆಸಿರುವ ಪರಿಣಾಮವಾಗಿ ಸಮಸ್ಯೆ ನಿರ್ಮಿಸಿದಾಗ ಕಾಂಕ್ರೀಟ್‌ ರಸ್ತೆಯನ್ನೇ ತುಂಡರಿಸಿಯೇ ಇವುಗಳನ್ನು ಸರಿಪಡಿಸಬೇಕಾಗಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಮೂಲ ಕಾಂಕ್ರೀಟ್‌ ಮಾಯವಾಗಿ ತೇಪೆಗಳ ರಸ್ತೆಯಾಗಿ ಮಾರ್ಪಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.

ರಸ್ತೆ ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲೇ ಎಲ್ಲ ಪೂರಕ ವ್ಯವಸ್ಥೆಗಳನ್ನು ಒಳಗೊಂಡು ಯೋಜನೆ ಕಾರ್ಯಗತಗೊಂಡರೆ ಅದು ವ್ಯವಸ್ಥಿತ ರಸ್ತೆಯಾಗಿ ರೂಪುಗೊಳ್ಳುತ್ತದೆ. ಮಂಗಳೂರು ನಗರದಲ್ಲಿ ಪ್ರಸ್ತುತ ಕಾಂಕ್ರೀಟೀಕರಣಗೊಂಡಿರುವ ರಸ್ತೆಗಳಲ್ಲಿ ಬಹುತೇಕ ರಸ್ತೆಗಳಲ್ಲಿ ವ್ಯವಸ್ಥಿತ ಕಾರ್ಯಯೋಜನೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಸರಕಾರದ ಅನುದಾನವನ್ನು ವಿನಿಯೋಗಿಸುವ ಧಾವಂತದಲ್ಲಿ ತರಾತುರಿಯಲ್ಲಿ ಕಾಮಗಾರಿಗಳನ್ನು ನಡೆಸಿರುವುದು ವಾಸ್ತವ. ಇದರ ಪರಿಣಾಮಗಳು ಪ್ರಸ್ತುತ ವಿವಿಧ ಸಮಸ್ಯೆಗಳ ರೂಪದಲ್ಲಿ ಗೋಚರಿಸತೊಡಗಿವೆ. ಕೆಲವು ರಸ್ತೆಗಳ ಕಾಂಕ್ರೀಟ್‌ ಕಾಮಗಾರಿ ನಡೆದು ವರ್ಷಗಳೇ ಕಳೆದರೂ ಇನ್ನೂ ಫುಟ್‌ಪಾತ್‌, ಚರಂಡಿಗಳು ನಿರ್ಮಾಣ ಆಗಿಲ್ಲ.

ಈಗ ಮಹಾನಗರ ಪಾಲಿಕೆಯಲ್ಲಿ ಹೊಸದಾಗಿ ಕೆಲವು ರಸ್ತೆಗಳ ಕಾಂಕ್ರೀಟೀಕರಣ, ಒಳಚರಂಡಿ, ಫುಟ್‌ಪಾತ್‌ ನಿರ್ಮಾಣ ಯೋಜನೆಗಳು ಸಿದ್ಧಗೊಂಡು ಟೆಂಡರ್‌ ಪ್ರಕ್ರಿಯೆಯಲ್ಲಿವೆ. ಇನ್ನು ಕೆಲವು ಹೊಸ ಯೋಜನೆಗಳ ಪ್ರಸ್ತಾವನೆ ಸಿದ್ಧಗೊಳ್ಳುತ್ತಿವೆ. ಟೆಂಡರ್‌ ಆಗಿರುವ ಕಾಮಗಾರಿಗಳು ಮಳೆಗಾಲ ಕಳೆದು ನವೆಂಬರ್‌ನಲ್ಲಿ ಪ್ರಾರಂಭಗೊಳ್ಳಲಿವೆ. ವಾಸ್ತವದಲ್ಲಿ ನಗರದಲ್ಲಿ ಕೆಲವು ರಸ್ತೆಗಳ ಕಾಂಕ್ರೀಟೀಕರಣ ಕಾಮಗಾರಿ ನಡೆದು ವರ್ಷಗಳೇ ಕಳೆದರೂ ಅಲ್ಲಿ ಇನ್ನೂ ಚರಂಡಿ, ಫುಟ್‌ಪಾತ್‌ಗಳು ನಿರ್ಮಾಣವಾಗಿಲ್ಲ. ಬಂಟ್ಸ್‌ಹಾಸ್ಟೆಲ್‌- ಪಿವಿಎಸ್‌ ರಸ್ತೆ, ಬಂಟ್ಸ್‌ಹಾಸ್ಟೆಲ್‌- ಅಂಬೇಡ್ಕರ್‌ ವೃತ್ತ , ಬಲ್ಮಠ- ಬೆಂದೂರುವೆಲ್‌ ರಸ್ತೆ , ಕೆಎಸ್‌ಆರ್‌ ಟಿಸಿ- ಬಿಜೈ ರಸ್ತೆ ಮುಂತಾದುವುಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಪರಿಣಾಮ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿವೆ. ಸಾರ್ವಜನಿಕರು ಫ‌ುಟ್‌ಪಾತ್‌ ಇಲ್ಲದೆ ವಾಹನಗಳ ಜತೆಗೆ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಮುಂದೆ ನಡೆಯುವ ಕಾಮಗಾರಿಗಳ ವೇಳೆ ಪೂರ್ವದಲ್ಲೇ ವ್ಯವಸ್ಥಿತವಾಗಿ ಕಾಮಗಾರಿಗಳನ್ನು ರೂಪಿಸಿ ಕಾರ್ಯಗತಗೊಳಿಸಿದರೆ ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಕೆಲವು ಮಾದರಿಗಳು ಮಂಗಳೂರು ನಗರದಲ್ಲಿ ಕೇಬಲ್‌, ಕುಡಿಯುವ ನೀರಿನ ಪೈಪ್‌ ಗಳು , ಕೊಳವೆ, ಒಎಫ್‌ಸಿ ಮುಂತಾದವುಗಳನ್ನು ಅಳವಡಿಸಲು ರಸ್ತೆ ಆಗೆಯುವುದು ಇತ್ತೀಚಿನ ವರ್ಷಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಇವು ಕೆಲವು ಬಾರಿ ಅಧಿಕೃತವಾಗಿ ಮತ್ತು ಇನ್ನು ಕೆಲವು ಬಾರಿ ಅನಧಿಕೃತವಾಗಿ ನಡೆಯುತ್ತವೆ. ಕೆಲಸ ಮುಗಿದ ಬಳಿಕ ರಸ್ತೆಯ ಬಗ್ಗೆ ಯಾರೂ ಕೇಳುವವರಿಲ್ಲ. ಅಧಿಕೃತವಾಗಿ ಅನುಮತಿ ಪಡೆದು ಅಗೆದಿದ್ದರೆ ಅದಕ್ಕೆ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗೆ ಮೊದಲೇ ಹಣ ಪಾವತಿಯಾಗಿರುತ್ತದೆ. ಆದರೆ ಕೆಲಸ ಮುಗಿದ ಬಳಿಕ ಸ್ಥಳೀಯಾಡಳಿತ ಸಂಸ್ಥೆ ಇದನ್ನು ದುರಸ್ತಿ ಮಾಡುವ ಗೋಜಿಗೆ ಹೋಗದಿರುವ ಪ್ರಮೇಯಗಳೇ ಜಾಸ್ತಿ. 

Advertisement

ಇಂತಹ ಲೋಪಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಬೆಂಗಳೂರು ಸಹಿತ ಕೆಲವು ನಗರಗಳಲ್ಲಿ ಆನ್‌ಲೈನ್‌ ಅಪ್‌ಡೇಟ್‌, ಟೆಂಡರ್‌ ಶ್ಯೂರ್‌ ಮುಂತಾದ ಆಧುನಿಕ ಮಾದರಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಒಂದೊಮ್ಮೆ ಕೇಬಲ್‌, ಕೊಳವೆ, ಒಎಫ್‌ಸಿ ಮುಂತಾದ ಜಾಲಗಳನ್ನು ಅಳವಡಿಸಲು ರಸ್ತೆಗಳನ್ನು ಅಗೆಯ ಬೇಕಾದುದು ಅನಿವಾರ್ಯವಾದರೆ ಅದಕ್ಕೊಂದು ಪರಿಹಾರಬೇಕಾಗುತ್ತದೆ. ಅಗೆದವರಿಗೆ ಮತ್ತು ಅನುಮತಿ ನೀಡಿದವರಿಗೆ ಉತ್ತರದಾಯಿತ್ವ ನಿಗದಿಪಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿದ್ಧಗೊಂಡಿರುವುದು ಆನ್‌ಲೈನ್‌ ಅಪ್‌ಡೇಟ್‌ ವ್ಯವಸ್ಥೆ, ಅನುಮತಿ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ದುರಸ್ತಿ ಬಗ್ಗೆ ನಿಗಾ ಇದರಲ್ಲಿ ವಹಿಸಲಾಗುತ್ತದೆ. ಅಗೆದ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿಪಡಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರಗಿಸಲಾಗುತ್ತದೆ. ಬೆಂಗಳೂರಿನಲ್ಲಿ ಈ ವ್ಯವಸ್ಥೆ ಈಗಾಗಲೇ ಅನುಷ್ಠಾನದಲ್ಲಿದೆ.

ನಗರದ ರಸ್ತೆಗಳು ಯಾವುದೇ ಸೂಕ್ತ ಮಾರ್ಗದರ್ಶನವಿಲ್ಲದೆ ಯರ್ರಾಬ್ರಿರಿಯಾಗಿದ್ದುದನ್ನು ಒಂದು ಪರಿಕಲ್ಪಿತ ರೂಪದಲ್ಲಿ ಸುಂದರವಾಗಿ ನಿರ್ಮಿಸುವುದು ಟೆಂಡರ್‌ ಶ್ಯೂರ್‌ನ ಮುಖ್ಯ ಉದ್ದೇಶವಾಗಿದ್ದು, ನಾಗರಿಕ ಏಜೆನ್ಸಿಗಳು ಒಂದೇ ರಸ್ತೆಯಲ್ಲಿ ಸಮನ್ವಯತೆ ಇಲ್ಲದೆ ಮನಬಂದಂತೆ ಪದೇಪದೇ ಅಗೆದು ಹಾಳುಗೆಡವುದನ್ನು ನಿವಾರಿಸುವ ದಿಸೆಯಲ್ಲಿ ಇದು ಉಪಕ್ರಮವಾಗಿದೆ. ರಸ್ತೆಗಳು, ಪಾದಚಾರಿ ಮಾರ್ಗಗಳು , ಯುಟಿಲಿಟಿ ಡಕ್ಕ್ ಗಳು, ಬಸ್‌ ಬೇಗಳ ಮತ್ತು ರಸ್ತೆ ಬದಿಯ ವ್ಯಾಪಾರದ ಸ್ಥಳಗಳು ಎಲ್ಲವೂ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿರುವಂತೆ ಮಾಡುವ ಪರಿಕಲ್ಪನೆ ಹೊಂದಿದೆ. ಇಂತಹ ವ್ಯವಸ್ಥೆ ಮಂಗಳೂರಿನಲ್ಲೂ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದರೆ ರಸ್ತೆಗಳ ಬೇಕಾಬಿಟ್ಟಿ ಅಗೆತ ತಡೆಯುವುದು ಮತ್ತು ರಸ್ತೆಗಳ ಸುಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಪೂರಕವಾಗಬಹುದು.

ಮಂಗಳೂರಿನಲ್ಲಿ ಸ್ಮಾರ್ಟ್‌ ನಗರ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಇದರಲ್ಲಿ ವ್ಯವಸ್ಥೆಗಳು ಕೂಡ ಸ್ಮಾರ್ಟ್‌ಗೊಳ್ಳುವುದು ಅವಶ್ಯ. ಹಾಗಾಗಿ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ಅದಕ್ಕೆ ಹೊಂದಿಕೊಂಡಿರುವಂತಹ ಎಲ್ಲ ಪೂರಕ ವ್ಯವಸ್ಥೆಗಳನ್ನು ಜತೆಯಲ್ಲೇ ಕೈಗೊಂಡರೆ ಮುಂದಕ್ಕೆ ಅವುಗಳನ್ನು ಅಗೆದು, ತುಂಡರಿಸಿ ವಿರೂಪಗೊಳಿಸುವ ಪ್ರಸಂಗಗಳನ್ನು ತಪ್ಪಿಸಬಹುದು.

 ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next