Advertisement

ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ತೀವ್ರ ಇಳಿಮುಖ; ಮೆಕ್ಕೆಜೋಳ ಬೆಳೆಗೆ ರೈತರ ಒಲವು

06:06 PM Jun 02, 2022 | Team Udayavani |

ಹಾಸನ: ಒಂದು ದಶಕದ ಹಿಂದೆ ಹಾಸನ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುತ್ತಿದ್ದ ಆಲೂಗಡ್ಡೆ ಬೆಳೆ, ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಬರುತ್ತಿದೆ. ಈ ವರ್ಷವೂ ಆಲೂಗಡ್ಡೆ ಬಿತ್ತನೆಗೆ ರೈತರು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.50ರಷ್ಟು ಬಿತ್ತನೆಯಾಗಬಹುದು ಎಂದು ಅಂದಾಜಿಸಲಾಗಿದೆ.

Advertisement

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಆಲೂಗಡ್ಡೆಗೆ ರೋಗ ಬಾಧೆ, ಇಳುವರಿ ಕುಂಠಿತ ಹಾಗೂ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸುತ್ತಲೇ ಬಂದ ರೈತರು, ಕಳೆದೆರೆಡು ವರ್ಷಗಳಿಂದ ಆಲೂಗಡ್ಡೆ ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷ ಸುಮಾರು 10 ಸಾವಿರ ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆ ಆಗಿತ್ತು ಎಂಬುದು ತೋಟಗಾರಿಕೆ ಇಲಾಖೆ ಅಂದಾಜು. ಈ ವರ್ಷ ಬಿತ್ತನೆ ವೇಗ ಗಮನಿಸಿದರೆ 5 ರಿಂದ 6 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಬಿತ್ತನ ಬೀಜ ಮಾರಾಟ ಕುಸಿತ: ಜಿಲ್ಲೆಯಲ್ಲಿ ಮೇ ಮೊದಲ ವಾರದಿಂದಲೇ ಬಿತ್ತನೆ ಆಲೂಗಡ್ಡೆ ಮಾರಾಟ ಆರಂಭವಾಯಿತು. ಈ ವರ್ಷ ಪಂಜಾಬ್‌ನಿಂದ ಬಂದ ಆಲೂಗಡ್ಡೆ ಶೀತಲ ಗೃಹಗಳಿಗೆ ಹೋಗದೆ ನೇರ ಮಾರಾಟ ನಡೆಯುತ್ತಿದೆ. ಮೇ 2ನೇ ವಾರದಿಂದ ಬಿತ್ತನೆ ಆರಂಭವಾದರೂ ಇದುವರೆಗೂ ವೇಗ ಪಡೆದು ಕೊಳ್ಳಲಿಲ್ಲ. ಮೇ 3ನೇ ವಾರದಿಂದ ನಿರಂತ ರವಾಗಿ ಮಳೆ ಸುರಿಯಲಾರಂಭಿಸಿದ್ದರಿಂದ ಆಲೂಗಡ್ಡೆ ಬಿತ್ತನೆಗೆ ಹಿನ್ನಡೆಯಾಯಿತು. ಇನ್ನು ಜೂ.2ನೇ ವಾರದವರೆಗೆ ಮಾತ್ರ ಜಿಲ್ಲೆಯಲ್ಲಿ ಆಲೂಗಡೆಡ ಬಿತ್ತನೆ ಸಾಧ್ಯ.

ಇನ್ನೆರಡು ವಾರ ಬಿತ್ತನೆ ಕಾರ್ಯ: ಮಾನ್ಸೂನ್‌ ಮಳೆ ಆರಂಭವಾದ ತಕ್ಷಣವೇ ಆಲೂಗಡ್ಡೆ ಬಿತ್ತನೆಯೂ ಬಹುತೇಕ ಸ್ಥಗಿತವಾಗುತ್ತದೆ. ಇದುವರೆಗೂ 3000 ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆಯಾಗಿರಬಹುದೆಂದು ತೋಟಗಾ ರಿಕೆ ಇಲಾಖೆ ಅಂದಾಜು ಮಾಡಿದೆ. ಇನ್ನು 2 ವಾರಗಳಲ್ಲಿ 2 ರಿಂದ 3 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬಹುದೆಂದು ಅಂದಾಜು ಮಾಡಿದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.50ರಷ್ಟು ಆಲೂಗಡ್ಡೆ ಬಿತ್ತನೆಯಾಗಬಹುದು ಎಂದು ಅಂದಾಜು ಮಾಡಲಾಗುತ್ತಿದೆ.

ಆಲೂಗಡ್ಡೆ ಕೃಷಿ ಹಿನ್ನಡೆಗೆ ಕಾರಣ ಏನು?: ಬಿತ್ತನೆ ಮಾಡಿದ ಮೂರು ತಿಂಗಳಲ್ಲೇ ಫ‌ಲ ಸಿಗುವ ಆಲೂಗಡ್ಡೆ ಬೆಳೆಯಿಂದ ತಕ್ಷಣಕ್ಕೆ ಹಣ ಸಿಗುತ್ತದೆ. ಆಲೂಗಡ್ಡೆ ಬೆಳೆಯ ನಂತರ ಮತ್ತೂಂದು ಬೆಳೆಯಬಹುದೆಂದು ಜಿಲ್ಲೆಯಲ್ಲಿ ಮಳೆಯಾಶ್ರಯದಲ್ಲಿ ಆಲೂಗಡ್ಡೆಯನ್ನು ಬೆಳೆಯಲಾಗುತ್ತಿತ್ತು. ಆದರೆ, ಪ್ರತಿ ವರ್ಷವೂ ಆಲೂಗಡ್ಡೆ ಬಿತ್ತನೆ ಮಾಡುತ್ತಲೇ ಬರುತ್ತಿದ್ದ ಕಾರಣದಿಂದಾಗಿ ಕಾಲ ಕ್ರಮೇಣ ಇಳುವರಿ ಕುಸಿಯುತ್ತಾ ಬಂದಿತು.

Advertisement

ಜೊತೆಗೆ ಅಂಗಮಾರಿ ರೋಗ ಸೇರಿದಂತೆ ರೋಗಬಾಧೆ ಹೆಚ್ಚುತ್ತಾ ಬಂದಿದ್ದರಿಂ ದ ಆಲೂಗಡ್ಡೆ ಬೆಳೆಗಾರರು ನಷ್ಟ ಅನುಭವಿಸುತ್ತಲೇ ಬರತೊಡಗಿದರು. ಬಿತ್ತನೆ ಬೀಜದ ದರ ಏರಿಕೆ ಹಾಗೂ ಕೃಷಿ ವೆಚ್ಚ ಏರುತ್ತಾ ಬಂದಿತು. ಈ ಎಲ್ಲ ಕಾರಣ ಗಳಿಂದಾಗಿ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಆಲೂಗಡ್ಡೆ ಕೃಷಿ ಪ್ರಮಾಣ ಇಳಿಯುತ್ತಾ ಬಂದಿತು. ಕಡಿಮೆ ಖರ್ಚಿನ ಮೆಕ್ಕೆಜೋಳವನ್ನು ಪರ್ಯಾಯ ಬೆಳೆಯಾಗಿ ಜಿಲ್ಲೆಯ ರೈತರು ಆಶ್ರಯಿಸುತ್ತಾ ಬಂದರು. ಈಗ ಜಿಲ್ಲೆಯ ಒಟ್ಟು ಬಿತ್ತನೆ ಪ್ರದೇಶದಲ್ಲಿ ಶೇ.70ರಷ್ಟನ್ನು ಮೆಕ್ಕೆ ಜೋಳ ಆವರಿಸತೊಡಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೊಂದು ದಶಕದಲ್ಲಿ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ಕಣ್ಮರೆಯಾಗಬಹುದು.

ಇನ್ನೂ 2 ವಾರ ಬಿತ್ತನೆಯ ಅವಕಾಶ: ಸಹಜವಾಗಿ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಪ್ರಮಾಣ ಕಡಿಮೆ ಆಗುತ್ತಾ ಬರುತ್ತಿದೆ. ಈ ವರ್ಷ ಮಾರ್ಚ್‌-ಏಪ್ರಿಲ್‌ನಿಂದಲೂ ಮಳೆ ಸುರಿಯುತ್ತಲೇ ಬಂದಿದೆ. ಮೇ ಮಾಸದಲ್ಲಿ ಆಲೂಗಡ್ಡೆ ಬಿತ್ತನೆಗೆ ಸಕಾಲ. ಆದರೆ, ಮೇ 2ನೇ ವಾರದಿಂದ ಈವರೆಗೂ ಮಳೆ ಬರುತ್ತಲೇ ಇದೆ. ಹಾಗಾಗಿ ರೈತರಿಗೆ ಆಲೂಗಡ್ಡೆ ಬಿತ್ತನೆಗೆ ಅವಕಾಶ ಸಿಗಲಿಲ್ಲ. ಇನ್ನೂ ಎರಡ್ಮೂರು ವಾರ ಆಲೂಗಡ್ಡೆ ಬಿತ್ತನೆಗೆ ಅವಕಾಶವಿದೆ. ಆದರೆ, ಈ ವರ್ಷ ಬಿತ್ತನೆ ವೇಗ ಗಮ ನಿಸಿದರೆ ಕಳೆದ ವರ್ಷದಷ್ಟು ಬಿತ್ತನೆ ಈ ವರ್ಷ ಆಗಲಾರದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೀಶ್‌ ಅವರು ಅಭಿಪ್ರಾಯಪಡುತ್ತಾರೆ.

ಮೆಕ್ಕೆ ಜೋಳದತ್ತ ರೈತರ ಒಲವು: ಕೃಷಿ ಖರ್ಚು ಕಡಿಮೆ ಹಾಗೂ ಉತ್ತಮ ಬೆಲೆ ಸಿಗುವುದೆಂಬ ಉದ್ದೇಶದಿಂದ ರೈತರು ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ರೈತರು ಆಲೂಗಡ್ಡೆಗೆ ಪರ್ಯಾಯ ಬೆಳೆಯಾಗಿ ಮೆಕ್ಕೆಜೋಳವನ್ನು ಅಶ್ರಯಿಸುತ್ತಿದ್ದಾರೆ. ಈ ವರ್ಷ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಇರುವುದರಿಂದ ರೈತರು ಮೆಕ್ಕೆಜೋಳವನ್ನು ಬಿತ್ತನೆ ಮಾಡುತ್ತಿರುವುದರಿಂದ ಈ ವರ್ಷ ಆಲೂಗಡ್ಡೆಗೆ ಬೇಡಿಕೆ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.50ರಷ್ಟು ಆಲೂಗಡ್ಡೆ ವ್ಯಾಪಾರ ವೂ ಆಗಿಲ್ಲ. ಹಾಗಾಗಿ ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಪ್ರಮಾಣ ಕಡಿಮೆಯಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು, ಬೀರೂರು ಭಾಗದ ರೈತರು ಹಾಗೂ ಚಾಮರಾಜನಗರ ಜಿಲ್ಲೆಯ ರೈತರು ಬಿತ್ತನೆ ಆಲೂಗಡ್ಡೆ ಖರೀದಿಗೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಆಲೂಗಡ್ಡೆ ವರ್ತಕ ನಂಜರಾಜಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.

ಆಲೂಗಡ್ಡೆ ಮಾರಾಟ ಕುಸಿತ
ಮುಂಗಾರು ಹಂಗಾಮಿನಲ್ಲಿ ಹಾಸನದ ಎಪಿಎಂಸಿ ಪ್ರಾಂಗಣದಲ್ಲಿ ದಿನಕ್ಕೆ 100 ರಿಂದ 150 ಲಾರಿ ಲೋಡ್‌ ಬಿತ್ತನೆ ಆಲೂಗಡ್ಡೆ ಮಾರಾಟವಾಗುತ್ತಿದ್ದು ದೂ ಉಂಟು. ಅಂದರೆ ರೈತರು ಆಲೂಗಡ್ಡೆಯನ್ನು ಮುಗಿಬಿದ್ದು ಖರೀದಿಸಿ ಬಿತ್ತನೆ ಮಾಡುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ದಿನಕ್ಕೆ 25ಲಾರಿ ಲೋಡ್‌ ಆಲೂಗಡ್ಡೆ ಮಾರಾಟವಾದರೆ ಅದೇ ಬಂಪರ್‌ ಬಿಸಿನೆಸ್‌. ಆದರೆ ಈಗ ಬಿತ್ತನೆ ಹಂಗಾಮು ಆಗಿದ್ದರೂ ದಿನಕ್ಕೆ ಸರಾಸರಿ 8 ರಿಂದ 10 ಲಾರಿ ಲೋಡ್‌ ಮಾರಾಟ ವಾಗುತ್ತಿದೆ. ಇದುವರೆಗೂ 120 ಲಾರಿ ಲೋಡ್‌ ಮಾರಾಟ ವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜು. ಈಗ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆ ಕ್ವಿಂಟಲ್‌ಗೆ 2200 ರಿಂದ 2500 ರೂ. ದರದಲ್ಲಿ ಮಾರಾಟವಾಗುತ್ತಿದೆ.

ಮೆಕ್ಕೆಜೋಳ ಬೆಳೆಗೆ ರೈತರ ಒಲವು
ಒಂದು ಎಕರೆಯಲ್ಲಿ ಆಲೂಗಡ್ಡೆ ಬೆಳೆಯಲು ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕ ಸೇರಿದಂತೆ ರೈತರಿಗೆ ಕನಿಷ್ಠ 20 ರಿಂದ 25 ಸಾವಿರ ರೂ. ವೆಚ್ಚವಾಗುವುದು. ಆದರೆ, ಒಂದು ಎಕರೆಯಲ್ಲಿ ಮೆಕ್ಕೆ ಜೋಳದ ಬೆಳೆಗೆ 10 ರಿಂದ 12 ಸಾವಿರ ರೂ. ಖರ್ಚು ಬರುತ್ತದೆ. ನಿರ್ವಹಣೆ ವೆಚ್ಚವೂ ಕಡಿಮೆ. ಹಾಗಾಗಿ ರೈತರು ಮೆಕ್ಕೆ ಜೋಳದ ಬೆಳೆಗೆ ಆಸಕ್ತಿ ತೋರುತ್ತಿದ್ದಾರೆ.

● ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next