Advertisement

ಮಡಿವಾಳ ಮಾಚಿದೇವರ ಕತೆ ಸಾರುವ ಶಿವಾನಂದ ಲಹರಿ

08:10 PM Feb 13, 2020 | Sriram |

ವೀರಭದ್ರನ ಇನ್ನೊಂದು ಅವತಾರ ಮಡಿವಾಳ ಮಾಚಯ್ಯ ಅಥವಾ ಮಾಚಿದೇವರ ಕತೆ ಶಿವಾನಂದ ಲಹರಿ. ಶಿವ ಜಟೆಯಿಂದ ಸೃಷ್ಟಿಯಾದ ವೀರಭದ್ರ ದಕ್ಷಯಾಗದಲ್ಲಿ ದಕ್ಷನ ತಲೆ ಕಡಿದು ಅತ್ಯುತ್ಸಾಹದಲ್ಲಿ ಶಿವನಲ್ಲಿಗೆ ಹೋಗುವಾಗ ಶಿವಭಕ್ತರಿಗೆ ರಕ್ತಸಿಕ್ತ ಉತ್ತರೀಯ ತಾಗುತ್ತದೆ. ಮಲಿನ ಬಟ್ಟೆ ಸೋಕಿದ್ದರಿಂದ ಕೆರಳಿದವರು ಭೂಲೋಕದಲ್ಲಿ ವಸ್ತ್ರ ಮಡಿ ಮಾಡುವ ಮಡಿವಾಳನಾಗಿ ಜನಿಸು ಎಂದು ಶಪಿಸುತ್ತಾರೆ. ಕಂಗಾಲಾದ ವೀರಭದ್ರ ಶಿವನ ಮೊರೆಯಿಟ್ಟಾಗ, ಭೂಲೋಕದಲ್ಲಿ ಶರಣ ಶ್ರೇಷ್ಠನಾಗಿ ಜನಿಸಲಿದ್ದಿ, ಶಿವಾಂಶ ಸಂಭೂತ ಅಲ್ಲಮಪ್ರಭು, ನಂದಿ ಅಂಶ ಸಂಭೂತ ಬಸವಣ್ಣ, ಪಾರ್ವತಿ ಅಂಶ ಸಂಭೂತೆ ಅಕ್ಕಮಹಾದೇವಿ ಮೊದಲಾದವರ ಒಡನಾಡಿಯಾಗಲಿದ್ದಿ ಎಂದು ಹೇಳುತ್ತಾನೆ. ಹಾಗೆ ಮುಂದುವರಿಯುವ ಮಾಚಿದೇವನ ಕತೆಯೇ ಶಿವಾನಂದ ಲಹರಿ.

Advertisement

ಹನುಮಗಿರಿ ಮೇಳದವರು ಉಡುಪಿ ದೊಡ್ಡನಗುಡ್ಡೆ ಆದಿಪರಾಶಕ್ತಿ ಕ್ಷೇತ್ರದಲ್ಲಿ ನಡೆಸಿದ ಯಕ್ಷಗಾನ ಪ್ರದರ್ಶನ ಒಂದು ಐತಿಹಾಸಿಕ ಕತೆಯನ್ನು ಜನಮನಕ್ಕೆ ತಲುಪಿಸಿತು. ಎಂ.ಕೆ. ರಮೇಶ ಆಚಾರ್ಯರು ಪದ್ಯ ಬರೆದ ಈ ಪ್ರಸಂಗದಲ್ಲಿ ಮೊದಲಿಗೆ ದಕ್ಷಯಜ್ಞ. ಯುವ ಭಾಗವತ ಚಿನ್ಮಯ ಕಲ್ಲಡ್ಕ ಸುಶ್ರಾವ್ಯವಾಗಿ ಹಾಡಿದ್ದಾರೆ. ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್‌, ಚೈತನ್ಯಕೃಷ್ಣ ಪದ್ಯಾಣ. ಈಶ್ವರನಾಗಿ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ, ದಕ್ಷನಾಗಿ ಜಗದಭಿರಾಮ ಪಡುಬಿದ್ರೆ, ದಾಕ್ಷಾಯಿಣಿಯಾಗಿ ಸಂತೋಷ್‌ ಹಿಲಿಯಾಣ, ದೇವೇಂದ್ರನಾಗಿ ಜಯಾನಂದ ಸಂಪಾಜೆ, ಮರೀಚಿ ಬ್ರಹ್ಮನಾಗಿ ಪ್ರಸಾದ್‌ ಸವಣೂರು, ಬ್ರಾಹ್ಮಣರಾಗಿ ಜಯರಾಮ ಆಚಾರ್ಯ, ಪ್ರಜ್ವಲ್‌ ಕುಮಾರ್‌ ಗುರುವಾಯನಕೆರೆ, ಪ್ರಕಾಶ್‌ ನಾಯಕ್‌ ನೀರ್ಚಾಲ್‌, ಪುರೋಹಿತರಾಗಿ ಸೀತಾರಾಮ್‌ ಕುಮಾರ್‌ ಕಟೀಲ್‌, ವೀರಭದ್ರನಾಗಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್‌ ಅಭಿನಯಿಸಿದ್ದರು.

ಮಾಚಿದೇವನ ಕಥೆಗೆ ರವಿಚಂದ್ರ ಕನ್ನಡಿಕಟ್ಟೆ ಭಾಗವತಿಕೆ, ಶ್ರೀಧರ ವಿಟ್ಲ, ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಹಿಮ್ಮೇಳವಿತ್ತು.

ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಪರ್ವತಯ್ಯ(ಜಯರಾಮ ಆಚಾರ್ಯ) ಸುಜ್ಞಾನಾಂಬಿಕೆ ದಂಪತಿಯ ಪುತ್ರನಾಗಿ ಜನಿಸುವ ಮಾಚಿದೇವನಿಗೆ, ಶೂದ್ರರಿಗೆ ಪಾಠ ಹೇಳುವುದಿಲ್ಲ ಎಂಬ ಕಾಲದಲ್ಲೂ ಮಲ್ಲಿಕಾರ್ಜುನಯ್ಯ ಸ್ವಾಮಿಗಳು ಪಾಠ ಬೋಧಿಸುತ್ತಾರೆ. ಬಾಲ ಮಾಚಿದೇವನಾಗಿ (ಅಕ್ಷಯ್‌ ಭಟ್‌ ಮೂಡಬಿದಿರೆ), ಅನಂತರದ ಮಾಚಿದೇವನಾಗಿ ರಕ್ಷಿತ್‌ ಪಡ್ರೆ, ಬಸವಣ್ಣನಾಗಿ ಪೆರ್ಮುದೆ ಅವರ ಅಭಿನಯ, ವಾಕ್‌ ಚಾತುರ್ಯದ ಚಾಕಚಕ್ಯತೆ ಕಾಣುತ್ತಿತ್ತು. ತೈಲಪ (ಶಿವರಾಮ ಜೋಗಿ)ನನ್ನು ಬಿಜ್ಜಳ (ಸದಾಶಿವ ಕುಲಾಲ್‌ ವೇಣೂರು) ಮೋಸದಿಂದ ಕೊಂದು ರಾಜ್ಯಭಾರ ಮಾಡುತ್ತಾನೆ. ಬಿಜ್ಜಳನ ಸಹವರ್ತಿಗಳಾದ ಮಂತ್ರಿ ಮಂಜಣ್ಣ (ಪ್ರಜ್ವಲ್‌) ಹಾಗೂ ನಾತಿರಾಜ (ಶಬರೀಶ ಮಾನ್ಯ) ಅವರು ಬಿಜ್ಜಳನ ಕುಕೃತ್ಯಗಳಿಗೆ ದುಷೆøàರಣೆ ನೀಡುತ್ತಾರೆ.

ಶರಣರ ಬಟ್ಟೆಯನ್ನಷ್ಟೇ ಮಡಿ ಮಾಡುವ ಮಾಚಿದೇವ ಸೋಮಾರಿಗಳ,ದುರ್ಗುಣಿಗಳ ಬಟ್ಟೆಯನ್ನು ಮುಟ್ಟದೇ ಅರಸುತನ ಮೇಲಲ್ಲ ಅಗಸತನ ಕೀಳಲ್ಲ ಎಂದು ಸಾರಿದ್ದರು. ಹೆಂಡ ಮಾರಾಟದ ವ್ಯಕ್ತಿ (ಸೀತಾರಾಮ ಕುಮಾರ್‌) ಅವರಿಂದ ಹೆಂಡ ಕುಡಿದ ಬಿಜ್ಜಳನ ಬಂಟ (ಶಬರೀಶ) ತನ್ನ ಬಟ್ಟೆ ಮಡಿ ಮಾಡುವಂತೆ ಒತ್ತಾಯಿಸಿದಾಗ ಅವನನ್ನು ಮಾಚಿದೇವ ಕೊಲ್ಲುತ್ತಾರೆ. ಆಗ ಬಿಜ್ಜಳನಿಗೆ ಮಡಿವಾಳನ ಕುರಿತು ಸುಳ್ಳು ದೂರು ಹೋಗುತ್ತದೆ. ರಾಜ ವಿವೇಚನೆಯಿಲ್ಲದೆ ಮಾಚಿದೇವನನ್ನು ಕೊಲ್ಲಲು ಆದೇಶಿಸುವಾಗ ಸಾವು ಮಾಚಿದೇವನ ಸನಿಹವೂ ಬರುವುದಿಲ್ಲ. ಮಂತ್ರಿ ಬಸವಣ್ಣ ನೀಡಿದ ಹಿತವಚನದಂತೆ ರಾಜ ವಚನಕಾರ, ಕದನಕಲಿ ಮಾಚಿದೇವನನ್ನು ಹಿಂಸಿಸುವುದನ್ನು ಬಿಡುತ್ತಾನೆ. ಮಾಚಿದೇವ ಅರಸನನ್ನು ಕ್ಷಮಿಸುತ್ತಾರೆ.

Advertisement

ಬಿದಿರು ಕಡಿದು ಬಂದ ದುಡಿಮೆ ಹಣದಲ್ಲಿ ದಾಸೋಹ ನೀಡುವ ಕೇತಯ್ಯ (ಪ್ರಸಾದ್‌ ಸವಣೂರು) ತಾಯವ್ವ (ಪ್ರಕಾಶ್‌ ನೀರ್ಚಾಲ್‌) ದಂಪತಿಯನ್ನು ಪರೀಕ್ಷಿಸಲು ಶಿವ ಬಸವಣ್ಣನ ವೇಷದಲ್ಲಿ ದಾಸೋಹದ ಬಳಿಕ ಚಿನ್ನದ ಗಂಟನ್ನು ಊಟದ ಜಾಗದಲ್ಲಿ ಇಡುತ್ತಾನೆ. ಇದನ್ನು ನೋಡಿದ ಕೇತಯ್ಯ ಆ ಗಂಟನ್ನು ತಿಪ್ಪೆಗೆ ಎಸೆಯುತ್ತಾನೆ. ಬಳಿಕ ಬಿದಿರು ಮೆಳೆಗೆ ಸಿಲುಕಿ ಸಾಯುತ್ತಾನೆ. ಇದನ್ನು ನೋಡಿ ತನ್ನಿಂದಾಗಿ ಹೀಗಾಯಿತು ಎಂದು ಬಸವಣ್ಣರೂ ಪ್ರಾಣ ಕಳೆದುಕೊಳ್ಳುತ್ತಾರೆ. ಇವರಿಬ್ಬರ ಸ್ಥಿತಿ ನೋಡಿ ಮಡಿವಾಳ ಮಾಚಿದೇವ ಕೆರಳಿದಾಗ ಶಿವ ಇಬ್ಬರ ಪ್ರಾಣ ಮರಳಿಸುತ್ತಾನೆ.

ಬ್ರಾಹ್ಮಣ ಮಧುವರಸ (ಸೀತಾರಾಮ ಕುಮಾರ್‌) ಹರಳಯ್ಯ (ಜಯಾನಂದ) ತನ್ನ ಹಾಗೂ ಪತ್ನಿಯ ತೊಡೆಯ ಚರ್ಮದಿಂದ ಮಾಡಿದ ಚಪ್ಪಲಿಯನ್ನು ಬಸವಣ್ಣರಿಗೆ ನೀಡಲು ಕೊಂಡೊಯ್ಯುವಾಗ ಸೆಳೆದು ತೆಗೆದು ಹಾಕಿಕೊಂಡಾಗ ಮೈಯೆಲ್ಲ ಉರಿ ಬಂದು ಹರಳಯ್ಯನ ಮನೆ ಬಾವಿ ನೀರಿನಿಂದ ಉರಿಶಮನವಾಗುತ್ತದೆ. ನಂತರದ ದಿನಗಳಲ್ಲಿ ನೀರಿಗೆ ಬಿದ್ದ ಬ್ರಾಹ್ಮಣ ಕುವರಿ ಮಂಜುಳಾ (ಹಿಲಿಯಾಣ)ಳನ್ನು ಹರಳಯ್ಯನ ಮಗ ವೀರಣ್ಣ (ಪೆರ್ಲ ಜಗನ್ನಾಥ ಶೆಟ್ಟಿ) ರಕ್ಷಿಸಿ ಪ್ರೇಮಾಂಕುರವಾಗಿ ಅಲ್ಲಮಪ್ರಭುಗಳ ನೇತೃತ್ವದಲ್ಲಿ ಶರಣ ಸಂಪ್ರದಾಯದಂತೆ ವಿವಾಹವಾಗುತ್ತದೆ.

ತೈಲಪನ ಮಡದಿ ಸೋಮಲಾದೇವಿ (ರಮೇಶ ಆಚಾರ್ಯ) ಪತಿಯ ಸಾವಿನ ಬಳಿಕ ಅಜ್ಞಾತವಾಸದಲ್ಲಿ ಮಕ್ಕಳಾದ ಬೊಪ್ಪಣ್ಣ (ಶಿವರಾಜ್‌ ಬಜಕೂಡ್ಲು) ಜಗದೇವ (ಅಕ್ಷಯ್‌ ಭಟ್‌)ನ ಜತೆಗಿದ್ದರು. ಅವರು ದೊಡ್ಡವರಾದ ಮೇಲೆ ತಂದೆಯ ಮರಣದ ಹಿಂದಿನ ಮೋಸವನ್ನು ಹೇಳಿ ತೈಲಪನ ಸಾವಿಗೆ ಪ್ರತೀಕಾರ ತೀರಿಸಬೇಕೆಂದು ಹೇಳಿ ಕಳುಹಿಸಿಕೊಡುತ್ತಾಳೆ. ಅವರಿಬ್ಬರೂ ಬಿಜ್ಜಳನ ಸಂಸ್ಥಾನ ಸೇರಿ ನಂಬಿಕೆ ಬರುವಂತೆ ಮಾಡಿ ಬೇಟೆಗೆ ಹೋದಾಗ ಅವನನ್ನು ಕೊಲ್ಲುತ್ತಾರೆ. ಇದು ತಿಳಿದು ಬಿಜ್ಜಳನ ಮಂತ್ರಿ ಮಂಜಣ್ಣ ಬೊಪ್ಪಣ್ಣನನ್ನು ಕೊಲ್ಲುತ್ತಾನೆ. ಜಗದೇವನನ್ನು ಕೊಲ್ಲಲು ಮುಂದಾದಾಗ ಮಾಚಿದೇವನೇ ಮಂಜಣ್ಣನನ್ನು ಕೊಲ್ಲುತ್ತಾನೆ. ಬಸವಣ್ಣ, ಮಾಚಿದೇವರು ಜಗದೇವನಿಗೆ ಪಟ್ಟಾಭಿಷೇಕ ಮಾಡಿಸಿ ವಚನಗ್ರಂಥಗಳೊಂದಿಗೆ ಬಾಗೇವಾಡಿ ಹಿಪ್ಪರಗಿಗೆ ನಿರ್ಗಮಿಸುತ್ತಾರೆ . ಇದಿಷ್ಟು ಅಂಶಗಳು ಅಂದಿನ ಪ್ರದರ್ಶನದಲ್ಲಿದ್ದವು.

ಅನುಭವ ಮಂಟಪ, ಅಕ್ಕಮಹಾದೇವಿ ಇತ್ಯಾದಿಗಳನ್ನು ಸಮಯಾಭಾವದಿಂದ ಕೈ ಬಿಡಲಾಗಿತ್ತು. ಬಸವಣ್ಣನವರ ವಚನಗಳು, ಮಾಚಿದೇವರ ವಚನಗಳು ಪ್ರಸಂಗದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿತು. ಇದೆಲ್ಲಕ್ಕಿಂತ ಮುಖ್ಯವಾಗಿ ಒಂದು ಐತಿಹಾಸಿಕ, ಸಾಮಾಜಿಕ ಪ್ರಸಂಗ ಪೌರಾಣಿಕ ಪ್ರಸಂಗದ ಮಾದರಿಯಲ್ಲೇ ಕತೆಯನ್ನು ಕೊಂಡೊಯ್ದಂತೆ ಸಾಗಿದ ನಿರೂಪಣೆ. ಇಲ್ಲಿ ಯಾವುದೇ ಕಲಾವಿದರು ಕನ್ನಡ ಸ್ನಾತಕೋತ್ತರ ಪದವಿ ಮಾಡದೇ ಇದ್ದರೂ ವಚನಗಳನ್ನು, ಐತಿಹಾಸಿಕ ಕತೆಯನ್ನು ಲೀಲಾಜಾಲವಾಗಿ ಎಲ್ಲೂ ಕತೆ, ಭಾಷೆ, ಇತಿಹಾಸ, ಸಾಮಾಜಿಕ ವರ್ತುಲಗಳಿಗೆ ಚ್ಯುತಿ ಬಾರದಂತೆ ಕೊಂಡೊಯ್ದ ರೀತಿ ಪ್ರಶಂಸನೀಯ. ಅಂದಿನ ಕಾಲದ ವರ್ಣವೈಷಮ್ಯವನ್ನು ಕೂಡಾ ನಾಜೂಕಾಗಿ ಹೆಣೆದು ಹೇಳಿದ ರೀತಿ ಮಾದರಿಯಾಗಿತ್ತು. ಅಸಂಬದ್ಧಕ್ಕೆ ಆಸ್ಪದವೇ ಇರಲಿಲ್ಲ. ಹುಳುಕು ಹುಡುಕಲು ಅವಕಾಶ ಇಲ್ಲದಂತೆ ಅಚ್ಚುಕಟ್ಟಾಗಿ ಅಭಿನಯಿಸಿದ್ದರು. ಪದ್ಯಗಳೆಲ್ಲವೂ ನವನವೀನವಾಗಿದ್ದು ಇಬ್ಬರೂ ಭಾಗವತರು ಮಾಧುರ್ಯಭರಿತವಾಗಿ ಪ್ರಸಂಗವನ್ನು ಕೊಂಡೊಯ್ದರು. ಅದರಲ್ಲೂ ಸಾಮಾಜಿಕ ಕಥೆಯಾದ ಮಾಚಿದೇವನ ಪ್ರಸಂಗದ ನಡೆ ಕನ್ನಡಿಕಟ್ಟೆಯವರ ಭಾಗವತಿಕೆಯಲ್ಲಿ ಅತ್ಯಂತ ಪ್ರಬುದ್ಧವಾಗಿ ಸಾಗಿತು.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next