Advertisement

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

01:50 AM Mar 29, 2020 | Sriram |

ಜಗತ್ತು ನಿಶ್ಚಲವಾಗಿಬಿಟ್ಟಿದೆ. ಕೋವಿಡ್ 19 ಎಂಬ ಮಹಾರೋಗವು ಸದಾ ಗಿಜುಗುಡುತ್ತಿದ್ದ ಮಹಾನಗರಗಳನ್ನೆಲ್ಲ ಬಿಕೋ ಎನ್ನುವಂತೆ ಮಾಡಿಬಿಟ್ಟಿದೆ. ಕಿಕ್ಕಿರಿದು ತುಂಬಿರುತ್ತಿದ್ದ ಮೈದಾನಗಳೂ ಖಾಲಿ, ಅದ್ದೂರಿ ಮಾಲುಗಳು ಖಾಲಿ, ಗಿವಿಗಡಚಿಕ್ಕುವ ಹಾರ್ನ್ ಬಾರಿಸುವ ಅಗಣಿತ ವಾಹನಗಳಿಂದ ತುಂಬಿರುತ್ತಿದ್ದ ರಸ್ತೆಗಳೂ ಖಾಲಿ. ಈಗ ಎಲ್ಲರೂ ಮನೆಯಲ್ಲೇ ಇರಬೇಕು. ಯಾರೂ ಮನೆಯಿಂದ ಹೊರಗೆ ಅಡಿ ಇಡಬಾರದೆಂದು ಎಲ್ಲಾ ದೇಶಗಳೂ ಕಡ್ಡಾಯಗೊಳಿಸಿಬಿಟ್ಟಿವೆ.

Advertisement

ಮೊದಲಿನಿಂದಲೂ ಮನೆಯಲ್ಲೇ ಇರುವ ಹಿರಿಯರಿಗೆ ಈ ನಿಯಮದಿಂದ ಸಮಸ್ಯೆಯೇನೂ ಆಗುತ್ತಿಲ್ಲ. ಆದರೆ, ಸದಾ ಹೊರಗೇ ಇರುತ್ತಿದ್ದ, ವೇಗದ ಬದುಕಿನ ರೇಸ್ನಲ್ಲಿ ಓಡುತ್ತಿದ್ದ ಯುವಕರಿಗೆ ಈ ಹೊಸ ನಿರ್ಬಂಧಗಳು ದೊಡ್ಡ ಸಂಕಟವಾಗಿ ಪರಿಣಮಿಸಿಬಿಟ್ಟಿವೆ. ಎಲ್ಲರಿಗೂ ಇದೊಂದು ಮಹಾ ಶಿಕ್ಷೆಯಂತೆ, ಜೈಲುವಾಸದಂತೆ ಭಾಸವಾಗತೊಡಗಿದೆ. ಮನೆಯಲ್ಲಿ ಹೇಗೆ ಇರುವುದು? ಏನು ಮಾಡುವುದು? ಎಂದು ಯುವ ಸಮೂಹ ದಿಕ್ಕು ತೋಚದೆ ಪರದಾಡಲಾರಂಭಿಸಿದೆ. ನನ್ನ ಪ್ರವಚನ ಕೇಳಲು ಬರುತ್ತಿದ್ದ ಕಿರಿಯ ಮಿತ್ರನಂತೂ ಕ್ವಾರಂಟೈನೆ(ಸಂಪರ್ಕ ರೋಧ)ಕ್ಕೆ ಹೋಗುವ ಮುನ್ನ ಬಹಳ ಗೋಳಾಡಿಬಿಟ್ಟ. ಅವನಿಗೆ ತಿರುಗಾಟದ ಹುಚ್ಚು ಹೆಚ್ಚು. ಆಲ್ಪ್ ಪರ್ವತ ಶ್ರೇಣಿಯಿಂದ ಹಿಡಿದು, ಹಿಮಾಲಯದವರೆಗೆ ಅವನು ಏರದ ಶಿಖರಗಳಿಲ್ಲ. ಅವನ ಕಾಲುಗಳು ಅಡಿಯಿಡದ ಕಾನನಗಳಿಲ್ಲ, ಅವನು ಅಲೆದಾಡದ ದೇಶವಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಸದಾ ಹೊಸ ಹೊಸ ಜಾಗಗಳನ್ನು ಅನ್ವೇಷಿಸುತ್ತಲೇ ಇರುವ ಗುಣ ಅವನದ್ದು. ಇಂಥ ವ್ಯಕ್ತಿಗೆ ಈಗ ಮನೆಯಲ್ಲೇ ಇರಬೇಕು ಎನ್ನುವುದು ಘನಘೋರ ಶಿಕ್ಷೆಯಂತೆ ಭಾಸವಾಗುತ್ತಿದೆ. “ಈ ಸಮಸ್ಯೆ ಇನ್ನೆಷ್ಟು ದಿನವಿರುತ್ತದೋ, ಪ್ರವಾಸ ಮಾಡದಿದ್ದರೆ ನನಗೆ ಹುಚ್ಚೇ ಹಿಡಿದಂತಾಗುತ್ತದೆ. ಮನೆಯಲ್ಲಿ ಕುಳಿತು ಏನು ಮಾಡುವುದು?” ಎಂದು ಪೇಚಾಡಿದ.

ನಾನಂದೆ: “ಮನೆಯಲ್ಲೇ ಕುಳಿತು ಪ್ರವಾಸ ಮಾಡಬಹುದಲ್ಲ?!’ನನ್ನ ಮಾತು ಕೇಳಿ ಅವನಿಗೆ ಅಚ್ಚರಿಯಾಯಿತು. “”ಹಿ ಹಿ, ನೀವು ತಮಾಷೆ ಮಾಡಬೇಡಿ ಸ್ವಾಮೀಜಿ” ಅಂದ.””ನಾನು ತಮಾಷೆ ಮಾಡುತ್ತಿಲ್ಲವಯ್ಯ, ಮನೆಯಲ್ಲೇ ಕುಳಿತು ಪ್ರವಾಸ ಮಾಡು ಎನ್ನುತ್ತಿದ್ದೇನೆ” ಎಂದೆ.
“”ಅದು ಹೇಗೆ?” ಎಂದು ಹುಬ್ಬೇರಿಸಿದ. “”ಇಷ್ಟು ದಿನ ಬರೀ ಬಾಹ್ಯ ಜಗತ್ತನ್ನು ಅನ್ವೇಷಿಸುತ್ತಿದ್ದೆಯಲ್ಲ, ಈಗ ನಿನ್ನ ಆಂತರಿಕ ಜಗತ್ತನ್ನು ಅನ್ವೇಷಿಸಲು ಹಾಗೂ ನಿನ್ನ ಮನೋಲೋಕದಲ್ಲಿ ಪ್ರವಾಸ ಮಾಡಲು ಬೃಹತ್‌ ಅವಕಾಶ ಎದುರಾಗಿದೆ.

ನೀನು ಊಹಿಸಲಾಗದಂಥ ಅಚ್ಚರಿಗಳು, ನಿನ್ನ ಗಮನಕ್ಕೇ ಬಾರದ ಅನೇಕ ಸತ್ಯಗಳು ನಿನ್ನೊಳಗೇ ಇರುತ್ತವೆ. ನಿನ್ನ ದೌರ್ಬಲ್ಯಗಳು, ಕೀಳರಿಮೆಗಳು, ದೋಷಗಳು, ಭಯಗಳನ್ನು ಸರಿಯಾಗಿ ಹುಡುಕಿ ಅವುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಇದು ಉತ್ತಮ ಅವಕಾಶವಲ್ಲವೇ? ಹೊರಗಿನ ಜಗತ್ತು ಎಷ್ಟು ಗಲಾಟೆಯಿಂದ ತುಂಬಿರುತ್ತದೆ ಎಂದರೆ, ನಮ್ಮ ಮನಸ್ಸಿನ ಮಾತುಗಳು ಆ ಗದ್ದಲದಲ್ಲಿ ಕೇಳುವುದೇ ಇಲ್ಲ. ಬಾಹ್ಯ ಥಳಕು-ಬಳಕು ಎಷ್ಟು ಕಣ್ಣುಕುಕ್ಕಿಸುತ್ತಿರುತ್ತದೆ ಎಂದರೆ ಮನಸ್ಸೆಂಬ ಬ್ರಹ್ಮಾಂಡ ಸ್ವರೂಪಿ ಲೋಕದಲ್ಲಿ ಏನೆಲ್ಲ ಇದೆ ಎನ್ನುವುದನ್ನು ನಾವು ಅನ್ವೇಷಿಸುವುದಕ್ಕೇ ಹೋಗುವುದಿಲ್ಲ.” ಎಂದೆ.

ಟೈಂ ಪಾಸ್‌ ಅಲ್ಲ, ಟೈಂ ಯೂಸ್‌ ಮಾಡಿ ಕೊಳ್ಳಿ ಅನೇಕರು, ಮನೆಯಲ್ಲಿ ಕುಳಿತು ಟೈಂಪಾಸ್‌ ಮಾಡುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದಾರೆ. ಟೈಂಪಾಸ್‌ ಮಾಡುವುದು ನಮ್ಮ ಉದ್ದೇಶವಾಗಬಾರದು. “ಟೈಂ ಯೂಸ್‌’ ಮಾಡುವುದು ನಮ್ಮ ಗುರಿಯಾಗಬೇಕು. ಟೈಂಪಾಸ್‌ ಮಾಡುವುದು ಎಂದರೇನು? ಸಮಯವನ್ನು ಕಳೆಯುವಂಥ ಮಾರ್ಗಗಳಿಗೆ ಮೊರೆ ಹೋಗುವುದು. ಇಂದು ಫೋನ್‌ ಕೈಗೆತ್ತಿಕೊಂಡರೆ, ಸಮಯ ಹೋದದ್ದೇ ಗೊತ್ತಾಗುವುದಿಲ್ಲ. ಒಂದು ತಿಂಗಳಲ್ಲ, ಒಂದು ವರ್ಷವನ್ನೂ ಆರಾಮಾಗಿ ಕಳೆದುಬಿಡಬಹುದು. ಆದರೆ ಅದು ಸಮಯವನ್ನು ಕಳೆಯುವ(ಹಾಳು ಮಾಡು ವ) ಕೆಲಸವೇ ಹೊರತು, ಸಮಯದ ಸದ್ಬಳಕೆ ಆಗುವುದಿಲ್ಲ. ಸಮಯದ ಸದ್ಬಳಕೆ ಆಗಬೇಕು ಎಂದರೆ ನಿಮ್ಮ ಫೋನಿನ ಬಳಕೆಯನ್ನು ತಗ್ಗಿಸಿ. ಮನಶಾಸ್ತ್ರದಲ್ಲಿ ಇದನ್ನು “ಡಿಜಿಟಲ್‌ ಡಿಟಾಕ’ ಎಂದು ಕರೆಯುತ್ತಾರೆ. “ಡಿಟಾಕ’ ಎಂದರೆ, ಕಲ್ಮಶಗಳನ್ನು ಸ್ವತ್ಛಗೊಳಿಸುವುದು, ಟಾಕ್ಸಿನಳನ್ನು ತೊಲಗಿಸುವುದು ಎಂದರ್ಥ. ಒಮ್ಮೆ ನೀವು ಫೋನಿನ ಬಳಕೆಯನ್ನು ತಗ್ಗಿಸಿದರೆ, ನಿಮ್ಮ ಬಳಿ ಇರುವುದು ನೀವೊಬ್ಬರು ಮಾತ್ರವೇ.

Advertisement

ತನ್ನೊಂದಿಗೆ ತಾನಿರಲು ಹೆದರಿಕೆ 
ಮನುಷ್ಯ ತನ್ನೊಂದಿಗೆ ತಾನಿರಲು ಬಹಳ ಹೆದರುತ್ತಾನೆ. ತನ್ನ ಮನಸ್ಸಿನ ಮಾತುಗಳಿಗೆ ಕಿವಿಯಾಗಲು ಅವನಿಗೆ ಕಸಿವಿಸಿಯಾಗುತ್ತದೆ. ಏಕೆಂದರೆ, ಮನಸ್ಸು ಹಲವು ಕಠೊರ ಸತ್ಯಗಳನ್ನು ಹೇಳುತ್ತಿರುತ್ತದೆ. ಅದನ್ನು ಕೇಳುವುದರಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಅವನು ಪಲಾಯನ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾನೆ. ಅಂತರ್ಜಾಲ ಎನ್ನುವುದು ಅಂಥ ಪಲಾಯನ ಮಾರ್ಗಗಳಲ್ಲಿ ಒಂದು.

ಈ ಬಿಡುವಿನ ಸಮಯದಲ್ಲಿ ಏನು ಮಾಡಬೇಕು ಎನ್ನುವ ಚರ್ಚೆಗಳು ನಡೆದಿವೆ. “ಏನಾದರೂ ಹೊಸತನ್ನು ಕಲಿಯಿರಿ, ಹೊಸತನ್ನು ಓದಿ’ ಎಂಬ ಸಲಹೆಗಳು ಕೇಳಿಬರುವುದು ಸಹಜವೇ. ಆದರೆ ನಾನನ್ನುತ್ತೇನೆ, ಹೊಸತು ಕಲಿಯುವ ಅಗತ್ಯವಿಲ್ಲ. ಈಗಾಗಲೇ ನೀವು ಬಹಳಷ್ಟು ಕಲಿತಿರುತ್ತೀರಿ! ನಿಮ್ಮೊಳಗೆ ಅದಮ್ಯ ಅನುಭವಗಳ ಭಂಡಾರವಿರುತ್ತದೆ. ಬದುಕಿನ ಗಲಾಟೆಯಲ್ಲಿ, ಮುಂದೋಡುವ ಭರದಲ್ಲಿ ಆ ಭಂಡಾರವನ್ನು ನೀವು ಮರೆತುಬಿಟ್ಟಿರುತ್ತೀರಿ. ಕಲಿತದ್ದನ್ನು ಮನನ ಮಾಡಿಕೊಳ್ಳುವ ಅಗತ್ಯ ಈಗ ಎದುರಾಗಿದೆ.

ವೈರಸ್‌ ಅನ್ನು ಹೇಗೆ ಕೈ ತೊಳೆದು ದೂರಮಾಡುತ್ತಿದ್ದೀರೋ, ಅದೇ ರೀತಿ ಆತ್ಮಾವಲೋಕನವೆಂಬ ಸೋಪಿನ ಮೂಲಕ ನಿಮ್ಮ ಮನಸ್ಸನ್ನು ಸ್ವತ್ಛಮಾಡಿಕೊಳ್ಳಲು ಭಗವಂತ ನಮಗೊಂದು ದೊಡ್ಡ ಅವಕಾಶವನ್ನು ಕೊಟ್ಟಿದ್ದಾನೆ. ಬಾಗಿಲು ಹಾಕಿಕೊಳ್ಳಿ, ಒಬ್ಬರೇ ಕೂಡಿ. ನೀವು ಮಾಡಿದ ತಪ್ಪುಗಳನ್ನು ಪಟ್ಟಿ ಮಾಡಿ, ನಿಮ್ಮಲ್ಲಿ ಆಗಬೇಕಿರುವ ಬದಲಾವಣೆಗಳ ಬಗ್ಗೆ ಸ್ಪಷ್ಟತೆ ಮೂಡಿಸಿಕೊಳ್ಳಿ. ನೆನಪಿರಲಿ, ಏಕಾಂತದಲ್ಲಿ ಅದಮ್ಯ ಶಕ್ತಿಯಿದೆ. ಜಗತ್ತಿನ ಅತಿದೊಡ್ಡ ಸಂತರು, ಮೇಧಾವಿಗಳು, ಕವಿಗಳು, ಸಾಹಿತಿಗಳು, ತತ್ವಜ್ಞಾನಿಗಳು ಮನಶಾಸ್ತ್ರಜ್ಞರನ್ನು ಮೇರುಮಟ್ಟಕ್ಕೆ ಬೆಳೆಸಿದ್ದು, ಈ ಏಕಾಂತ. ಏಕಾಂತವೆಂದರೆ ಶಿಕ್ಷೆಯಲ್ಲ, ಅದು ನಮ್ಮೊಳಗೆ ನಾವು ಸಂಚರಿಸಲು ಅನುವುಮಾಡುವ ಮಹಾಪಯಣದ ಹೆಬ್ಟಾಗಿಲು.

ಇಡೀ ಜಗತ್ತಿನ ಜನರೆಲ್ಲ ಕೋವಿಡ್ 19 ಎಂಬ ರೋಗಕ್ಕೆ ಹೆದರಿ ಮನೆಯಲ್ಲಿ ಕುಳಿತಿದ್ದಾರೆ. ಮನುಷ್ಯನ ಗದ್ದಲದಿಂದ ಹೈರಾಣಾಗಿದ್ದ ಜಗತ್ತಿಗೂ ಸ್ವಲ್ಪ ನಿಟ್ಟುಸಿರುಬಿಡಲು, ಸುಧಾರಿಸಿಕೊಳ್ಳಲು ಈಗ ಅವಕಾಶ ಸಿಕ್ಕಿದೆ. ಹಠಾತ್ತನೆ ಜಾಗತಿಕ ಮಾಲಿನ್ಯ ಕಡಿಮೆಯಾಗಲಾರಂಭಿಸಿದೆ, ಪಶು-ಪಕ್ಷಿಗಳಿಗೆ ಮನುಷ್ಯನ ಕಾಟ ತಪ್ಪಿದೆ. ಭೂಮಂಡಲ ತನ್ನನ್ನು ತಾನು ಸ್ವತ್ಛಗೊಳಿಸಿಕೊಳ್ಳಲು, ಸುಧಾರಿಸಿಕೊಳ್ಳಲು ಆರಂಭಿಸಿದೆ.

ಕ್ವಾರಂಟೈನ್‌ ಎಂಬ ಈ ದಿಗ್ಬಂಧನವು ಮುಗಿಯಲು ತಿಂಗಳುಗಟ್ಟಲೇ ಸಮಯ ಹಿಡಿಯಬಹುದು. ಅಷ್ಟರಲ್ಲೇ ಜಗತ್ತೂ ಕಲ್ಮಶಗಳನ್ನೆಲ್ಲ ತೊಳೆದುಕೊಳ್ಳಲು ಸಕಲ ರೀತಿಯಲ್ಲೂ ಪ್ರಯತ್ನಿಸಿರುತ್ತದೆ. ಹಾಗಿದ್ದರೆ, ಆ ಸಮಯದಲ್ಲಿ ನೀವೇನು ಮಾಡುತ್ತೀರಿ? ನೀವೂ ಹೊಸ ವ್ಯಕ್ತಿಗಳಾಗಿ, ಹೊಸ ಶಕ್ತಿಯಾಗಿ ಹೊರಹೊಮ್ಮುತ್ತೀರೋ ಅಥವಾ ಅದೇ ಹಳೆಯ ವ್ಯಕ್ತಿಯೇ ಆಗಿರುತ್ತೀರೋ?

ನೆನಪಿರಲಿ, ನಮ್ಮ ರೂಮುಗಳಲ್ಲಿ ಕುಳಿತು, ಆತ್ಮಾವಲೋಕನಕ್ಕೆ ತೆರೆದುಕೊಳ್ಳುವುದರಿಂದ ನಮ್ಮ ಮನಸ್ಸಿಗೆ ತನ್ನನ್ನು ತಾನು ಅರ್ಥಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ನಮ್ಮ ಭಯಗಳು, ಅಸಮಾಧಾನಗಳು ಮತ್ತು ನಿರೀಕ್ಷೆಗಳನ್ನು ಸ್ಪಷ್ಟವಾಗಿ ಹೆಸರಿಸಲು ಸಾಧ್ಯವಾಗುತ್ತದೆ. ನಮ್ಮ ಮುಂದಿನ ಹೆಜ್ಜೆ ಹೇಗಿರಬೇಕು ಎಂದು ನಿರ್ಧರಿಸಲು ಸುಲಭಸಾಧ್ಯವಾಗುತ್ತದೆ. ನಮ್ಮನ್ನು ನಾವು ಮತ್ತಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಈ ಮೌನ, ಈ ಏಕಾಂತ ಅವಕಾಶಮಾಡಿಕೊಡುತ್ತದೆ. ಕೋವಿಡ್ 19 ದೂರವಾಗಿ, ಕ್ವಾರಂಟೀನ್‌ ಅಂತ್ಯವಾಗಿ ಜಗತ್ತಿನ ಮುಚ್ಚಿದ ಬಾಗಿಲುಗಳೆಲ್ಲ ತೆರೆದಾಗ ಹೊರ ಬರುವವರೆಲ್ಲರೂ ಹೊಸ ವ್ಯಕ್ತಿಗಳಾಗಿರಬೇಕು…ಇದು ಬಂಧನವಲ್ಲ, ಮನೋಲೋಕದಲ್ಲಿ ಸಂಚರಿಸಲು, ಸ್ವಯಂನಲ್ಲಿ ಸೋಲೋ ರೈಡ್‌ ಮಾಡಲು ಭಗವಂತನೇ ಕಲ್ಪಿಸಿರುವ ಅವಕಾಶ.

ಎಲ್ಲರಿಗೂ ಇದೊಂದು ಮಹಾ ಶಿಕ್ಷೆಯಂತೆ, ಜೈಲುವಾಸದಂತೆ ಭಾಸವಾಗತೊಡಗಿದೆ. ಮನೆಯಲ್ಲಿ ಹೇಗೆ ಇರುವುದು? ಏನು ಮಾಡುವುದು? ಎಂದು ಯುವ ಸಮೂಹ ಪರದಾಡಲಾರಂಭಿಸಿದೆ.
ಮನುಷ್ಯನ ಗದ್ದಲದಿಂದ ಹೈರಾಣಾಗಿದ್ದ ಜಗತ್ತಿಗೂ ಸ್ವಲ್ಪ ನಿಟ್ಟುಸಿರುಬಿಡಲು, ಸುಧಾರಿಸಿಕೊಳ್ಳಲು ಈಗ ಅವಕಾಶ ಸಿಕ್ಕಿದೆ. ಹಠಾತ್ತನೆ ಜಾಗತಿಕ ಮಾಲಿನ್ಯ ಕಡಿಮೆಯಾಗಲಾರಂಭಿಸಿದೆ,

 ಜೆನ್‌ ಕೆಲ್ಸಂಗ್‌ ರಿಗ್ಬಾ

Advertisement

Udayavani is now on Telegram. Click here to join our channel and stay updated with the latest news.

Next