Advertisement

ಶಿರಾಡಿಯಲ್ಲಿ  ಸುರಂಗ ಮಾರ್ಗ: ಮುಂದಿನ ವರ್ಷ ಕಾಮಗಾರಿ?

02:55 PM Mar 27, 2017 | Team Udayavani |

ಮಂಗಳೂರು: ಬೆಂಗಳೂರು- ಮಂಗಳೂರು ಸಂಪರ್ಕ ವ್ಯವಸ್ಥೆಯನ್ನು ಇನ್ನಷ್ಟು ಸುಲಭ ಮಾಡುವ ಉದ್ದೇಶ ದಿಂದ, ಶಿರಾಡಿ ಘಾಟಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ, ದೇಶದ ಪ್ರಥಮ ಷಟ³ಥ ಸುರಂಗ ಮಾರ್ಗದ ಕಾಮಗಾರಿ ಮುಂದಿನ ವರ್ಷದಲ್ಲಿ ಆರಂಭ ವಾಗುವ ನಿರೀಕ್ಷೆ ಇದೆ. 

Advertisement

ಬಹುನಿರೀಕ್ಷಿತ ಸುರಂಗ ಮಾರ್ಗದ ಅಂತಿಮ ಯೋಜನಾ ವರದಿ ಈ ವರ್ಷದ ಜುಲೈಯಲ್ಲಿ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಲಿದ್ದು, ಇದು ಅನುಮೋದನೆಯಾದ ಬಳಿಕ 2018ರ ಜನವರಿಯಲ್ಲಿ ಟೆಂಡರ್‌ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಬಳಿಕ ಕಾಮಗಾರಿ ಹಂತಗಳು ಪ್ರಾರಂಭವಾಗಲಿವೆ.

ಈ ಯೋಜನೆಯ ಸಮಾಲೋಚಕರಾದ ಗುರಗಾಂವ್‌ನ ಮೆ| ಜಿಯೋ ಕನ್ಸಲ್ಟೆಂಟ್‌ನ ಭೂ ವಿಜ್ಞಾನ ಸಮಿತಿಯು, ಪ್ರಸ್ತುತ ಶಿರಾಡಿಯಲ್ಲಿ ಸುರಂಗ ಹಾಗೂ ಸೇತುವೆಗಳು ಬರುವ ಸ್ಥಳಗಳಲ್ಲಿ ಭೂರಂಧ್ರಗಳನ್ನು ಕೊರೆದು ಅಧ್ಯಯನ ನಡೆಸುತ್ತಿದ್ದಾರೆ. ಈಗಾಗಲೇ ಇಲ್ಲಿ 21 ಬೋರ್‌ವೆಲ್‌ಗ‌ಳನ್ನು ಕೊರೆದು ಅಧ್ಯಯನ ಮಾಡಣಲಾಗಿದೆ. ಪೂರ್ಣವಾಗಿ ಈ ಅಧ್ಯಯನಗಳು ನಡೆದ ಬಳಿಕ, ಭೂ ವಿಜ್ಞಾನ ಅಧ್ಯಯನ ವರದಿ ಹಾಗೂ ಅಂತಿಮ ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲಾಗುತ್ತದೆ.

ಈ ಕಾಮಗಾರಿಯ ಸಾಧ್ಯಾಸಾಧ್ಯತೆ ಹಾಗೂ ಡಿಪಿಆರ್‌ ಕಾರ್ಯಕ್ಕಾಗಿ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯದವರು, ಗುರಗಾಂವ್‌ನ ಮೆ| ಜಿಯೋ ಕನ್ಸಲ್ಟೆಂಟ್‌ ಅವರನ್ನು 2015ರ ಜೂ. 25ರಂದು ಸಮಾಲೋಚಕರನ್ನಾಗಿ ನಿಯೋಜಿಸಿದ್ದರು. ಇದಕ್ಕಾಗಿ 10.15 ಕೋ.ರೂ. ಅನುದಾನ ಮಂಜೂರು ಮಾಡಿದ್ದರು. ಸಂಬಂಧಿತ ಸಮಾಲೋಚಕರು ಯೋಜನೆಯ ಪ್ರಾಥಮಿಕ ವರದಿ, ಗುಣಮಟ್ಟ ದೃಢೀಕರಣ ವರದಿ ಹಾಗೂ ಕರಡು ಯೋಜನಾ ವರದಿಯನ್ನು ರಾಜ್ಯ ಸರಕಾರಕ್ಕೆ ನೀಡಿ, ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಈಗಾಗಲೇ ಸಲ್ಲಿಸಲಾಗಿದೆ.

ಭೂಮಿಯ 35 ಅಡಿ ಆಳದಲ್ಲಿ 14 ಮೀಟರ್‌ ಅಗಲ ಹಾಗೂ 7.5 ಮೀಟರ್‌ ಎತ್ತರದ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಸುರಂಗ ಮಾರ್ಗದಿಂದ ಪಶ್ಚಿಮಘಟ್ಟದ ಸಸ್ಯ ಸಂಕುಲಕ್ಕಾಗಲಿ, ಪ್ರಾಣಿ ಸಂಕುಲಕ್ಕಾಗಲಿ ಹಾನಿ ಆಗುವುದಿಲ್ಲ ಎಂದು ಸಮೀಕ್ಷೆ ನಡೆಸಿದ ಜಿಯೋ ಕನ್ಸಲ್ಟೆಂಟ್‌ ಸಂಸ್ಥೆಯವರು ಸರಕಾರಕ್ಕೆ ಈಗಾಗಲೇ 
ಮಾಹಿತಿ ನೀಡಿದ್ದಾರೆ.

Advertisement

ಪರಿಸರದ ಮೇಲಿನ ದೌರ್ಜನ್ಯಕ್ಕೆ ಯಾರು ಹೊಣೆ?
“ಈಗಾಗಲೇ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಂಗಳೂರು- ಬೆಂಗಳೂರು ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ, ಗುಂಡ್ಯದಲ್ಲಿ ಜಲವಿದ್ಯುತ್‌ ಸ್ಥಾವರ, ಗುಂಡ್ಯ-ಬಿ.ಸಿ. ರೋಡ್‌ ಹೆದ್ದಾರಿಗಾಗಿ ಮರಗಳ ಕಡಿತ ಹೀಗೆ ವಿವಿಧ ರೀತಿಯಲ್ಲಿ ಪಶ್ಚಿಮ ಘಟ್ಟಕ್ಕೆ ಹೊಡೆತ ಬಿದ್ದಿದ್ದು, ಇದೀಗ ಎತ್ತಿನಹೊಳೆಯೆಂಬ ಮಹಾ ಯೋಜನೆ ಪಶ್ಚಿಮಘಟ್ಟವನ್ನು ಬರಿದು ಮಾಡುತ್ತಿದೆ. ಇದರ ಮಧ್ಯೆಯೇ ಇದೀಗ ಹೆದ್ದಾರಿಗಾಗಿ ಸುರಂಗ ತೋಡಲು ಸರಕಾರ ಹೊರಟಿದೆ. ಅಭಿವೃದ್ಧಿ ಬೇಕು ಮತ್ತು ಅಗತ್ಯ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ದಿನಕ್ಕೊಂದು ರೀತಿಯಲ್ಲಿ ಪೆಟ್ಟು ತಿನ್ನುತ್ತಿರುವ ಪಶ್ಚಿಮಘಟ್ಟದ ಬಗೆಗಿನ ಕಾಳಜಿ ವಹಿಸಬೇಕಾದವರು ಯಾರು ಎಂಬುದು ಪ್ರಶ್ನೆ. ಅಲ್ಲಿ ಪರಿಸರದ ಮೇಲಾಗುತ್ತಿರುವ ದೌರ್ಜನ್ಯವನ್ನು ಯಾರೂ ಗಮನಿಸುತ್ತಿಲ್ಲ ಎಂಬುದೇ ಬೇಸರದ ಸಂಗತಿ’ ಎನ್ನುತ್ತಾರೆ ಪರಿಸರ ಹೋರಾಟಗಾರ ದಿನೇಶ್‌ ಹೊಳ್ಳ.

ಶಿರಾಡಿ 2ನೇ ಹಂತಕ್ಕೆ ಮರು ಟೆಂಡರ್‌
ಶಿರಾಡಿ ಘಾಟಿಯ  2ನೇ ಹಂತದ ಕಾಮಗಾರಿಗೆ ರಿಜಿಡ್‌ ಪೇವ್‌ಮೆಂಟ್‌ ಕಾರ್ಯವನ್ನು ಮಾಡಬೇಕಾಗಿತ್ತು. ಆದರೆ ಗುತ್ತಿಗೆದಾರರು ರಸ್ತೆಯನ್ನು ಹಸ್ತಾಂತರಿಸಿರುವ 2015ರ ಡಿ. 23ರಿಂದ 6 ತಿಂಗಳೊಳಗೆ (22-6-2016ರಂದು) ಕಾಮಗಾರಿಯ ಶೇ. 10ರಷ್ಟು ಅಂದರೆ 9.02 ಕೋ.ರೂ. ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾಗಿತ್ತು. ಆದರೆ ಸಂಬಂಧಪಟ್ಟ ಗುತ್ತಿಗೆದಾರರು ಈ ವರ್ಷದ ಜ.3ರಂದೂ ಸಹ ಮೊದಲ ಆರ್ಥಿಕ ಪ್ರಗತಿಯನ್ನು ಸಾಧಿಸಿಲ್ಲ. ಆದ್ದರಿಂದ ಸಂಬಂಧಪಟ್ಟ ಗುತ್ತಿಗೆ ಕರಾರನ್ನು ರಾ.ಹೆ.ಯ ಮುಖ್ಯ ಎಂಜಿನಿಯರ್‌ ಅವರು ಜ.4ರಂದು ರದ್ದುಗೊಳಿಸಿದ್ದಾರೆ. ಹೀಗಾಗಿ ಈ ಕಾಮಗಾರಿಯ ಮರು ಟೆಂಡರ್‌ ಕರೆಯಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರಕಾರ ಈಗಾಗಲೇ ತಿಳಿಸಿದೆ.

14 ಮೀ. ಅಗಲ-7.5 ಮೀ. ಎತ್ತರದ ಸುರಂಗ
ರಾಜ್ಯ ಲೋಕೋಪಯೋಗಿ ಸಚಿವ ಡಾ| ಎಚ್‌.ಸಿ. ಮಹಾದೇವಪ್ಪ ಈಗಾಗಲೇ ತಿಳಿಸಿದಂತೆ, ಶಿರಾಡಿಯ ಹೆಗ್ಗದ್ದೆಯಿಂದ ಅಡ್ಡಹೊಳೆಯ ಸೈಂಟ್‌ ಜೋಸೆಫ್‌ ಚರ್ಚ್‌ ವರೆಗೆ ನಿರ್ಮಿಸುವ ಈ ಸುರಂಗ ರಸ್ತೆಯಲ್ಲಿ 7 ಸುರಂಗಗಳು ಬರಲಿವೆ. 12.41 ಕಿ.ಮೀ. ಒಟ್ಟು ಉದ್ದದ ಸುರಂಗದಲ್ಲಿ 2.7 ಕಿ.ಮೀ. ಅತೀ ಉದ್ದದ ಸುರಂಗವಾಗಲಿದೆ. ಸುರಂಗವು 14 ಮೀ. ಅಗಲ ಮತ್ತು 7.5 ಮೀ. ಎತ್ತರ ಇರಲಿದೆ. 6.72 ಕಿ.ಮೀ.ನಲ್ಲಿ ಒಟ್ಟು 10 ಸೇತುವೆಗಳು ನಿರ್ಮಾಣಗೊಳ್ಳಲಿವೆ.

ಸುಮಾರು 77 ಹೆಕ್ಟೇರ್‌ ಅರಣ್ಯ ಭೂಮಿ ಅಗತ್ಯವಿದೆ. ಸಮಗ್ರ ಸಮೀಕ್ಷೆ ಹಾಗೂ ಭೂತಾಂತ್ರಿಕ ತನಿಖಾ ವರದಿ ಗಮನಿಸಿ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ಅನುಮೋದನೆ ನೀಡಲಿದೆ. ಯೋಜನೆ ಪೂರ್ಣಗೊಳ್ಳಲು ಹೆಚ್ಚಾ ಕಡಿಮೆ 4 ವರ್ಷ ಅವಧಿ ಬೇಕಾಗಬಹುದು ಎಂದು ಹೇಳಿದ್ದಾರೆ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next