Advertisement

ಹಾ ಸೀತಾ! ಏಕಾಂಗಿ ತಾಯಂದಿರು

06:35 AM Oct 27, 2017 | |

ತಾಯಿ ಜಾನಕೀ,
ಅಯೋಧ್ಯೆಯಲ್ಲಿ ರಾಣಿಯಾಗಿ ಮೆರೆಯುತ್ತಿದ್ದ ನೀನು ಲವಕುಶರನ್ನು ಮಡಿಲಲ್ಲಿ ಪಡೆಯುವ ಹೊತ್ತಿಗೆ, ಎಲ್ಲ ವೈಭೋಗಗಳನ್ನೂ, ಜೊತೆಗೆ ಗಂಡನ ಬಲವನ್ನೂ ಕಳೆದುಕೊಂಡು, ಕೇವಲ ಗಟ್ಟಿ ಗುಂಡಿಗೆಯ ಒಂಟಿ ತಾಯಿ ಮಾತ್ರವಾಗಿದ್ದೆ. “ಇಹ-ಪರಕ್ಕೆಲ್ಲಕ್ಕೂ ನೀನೇ ಗತಿ’ ಎಂದು ಸಂಪೂರ್ಣವಾಗಿ ಗಂಡನನ್ನೇ ನಂಬಿಕೊಂಡಿದ್ದ ನೀನು ಹೀಗೆ ನಡು ಬದುಕಿನಲ್ಲಿ ಏಕಾಂಗಿಯಾದೆಯಲ್ಲಾ? ಅದೂ ಒಂದಲ್ಲ, ಎರಡು ಮಕ್ಕಳ ಹೊಟ್ಟೆ , ಬಟ್ಟೆ , ಸಂಸ್ಕಾರಯುತ ಬದುಕು ನಿನ್ನೊಬ್ಬಳ ಹೊಣೆ ಎನ್ನುವುದು ಅರಿವಿಗೆ ಬರುತ್ತಿದ್ದಂತೆ ಯಾವ ನೆಪಕ್ಕೂ ತಡಕಾಡದೇ ತಯಾರಾಗಿ ನಿಂತೆಯಲ್ಲಾ! ಭಲೇ ತಾಯಿ! ಸಿಡಿಲಿನಂತೆ ಅಕಸ್ಮಾತ್ತಾಗಿ ಬಂದೆರಗುವ ಇಂತಹ ಸನ್ನಿವೇಶಗಳು ನಿನ್ನಂತಹ ತಾಯಂದಿರಿಗೆ ಯಾವ ಪೂರ್ವಸಿದ್ಧತೆಗೂ ಎಡೆ ಕೊಟ್ಟಿರುವುದಿಲ್ಲ. ಹಾಗಿದ್ದರೂ ಇದು ಹೇಗೆ ಸಾಧ್ಯವಾಗುತ್ತದೆ?

Advertisement

ಗೇರುಬೀಜದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಲೇ ಪಟ್ಟಾಂಗಕ್ಕಿಳಿದಿರುವ ಇಬ್ಬರು ತಾಯಂದಿರ ಮಾತುಗಳಿಗೆ ತುಸು ಹೊತ್ತು ಕಿವಿಯಾಗೋಣವೆ?

“”ಅಲ್ಲಾ ಪದ್ದೂ, ಈ ಹೊತ್ತು ನನಗನ್ನಿಸುವುದು ಇಷ್ಟೆ , ಅರ್ಧ ಆಯುಷ್ಯದಲ್ಲೇ ನೇಣಿಗೆ ಕೊರಳೊಡ್ಡುವಂತಹದ್ದೇನಾಗಿತ್ತು ನನ್ನ ಗಂಡನಿಗೆ, ಅಂತ! ಹೌದು, ಎರಡೆರಡು ಹೆಣ್ಣು ಮಕ್ಕಳು ನಮಗೆ, ಜವಾಬ್ದಾರಿ ಸಣ್ಣದೇನಲ್ಲ, ಒಪ್ಪುತ್ತೇನೆ. ಆದರೆ ಅವರು ಕೆಲಸ ಮಾಡುತ್ತಿದ್ದ ಆ ಕಚೇರಿಯಲ್ಲಿ ಕೊಡುತ್ತಿದ್ದ ಸಂಬಳ ತುಂಬ ಕಡಿಮೆಯೇನೂ ಆಗಿರಲಿಲ್ಲ. ಆದರೆ, ಅವರ ಇಸ್ಪೀಟ್‌ ಆಟದ ಚಟಕ್ಕೆ ಅದು ಸಾಕಾಗುತ್ತಿರಲಿಲ್ಲ ಅಷ್ಟೆ. ಅದಕ್ಕಾಗಿಯೇ ಎಲ್ಲೆಲ್ಲಿ ಹುಟ್ಟುತ್ತೋ ಅಲ್ಲೆಲ್ಲ ಸಾಲ ಎತ್ತಿ, ಅದನ್ನ ತೀರಿಸಲಿಕ್ಕಾಗದೇ ಒದ್ದಾಡಿ, ಮನೆಗೆ ಬಂದು ಗುಮ್ಮನ ತರ ಮಾತಿಲ್ಲದೇ ಇದ್ದು ಬಿಡುವುದು! ನಾನು ಸಾರಿ ಸಾರಿ ಹೇಳಿದ್ದೆ, ಆ ಆಟದ ಚಟ ಒಂದು ಬಿಡಿ, ನಾವಿಬ್ಬರೂ ಸೇರಿ ಹೊಟ್ಟೆಬಟ್ಟೆ ಕಟ್ಟಿ ಸಾಲ ತೀರಿಸೋಣ. ಮಕ್ಕಳಿಗೆ ಓದಿಸುವ ಅಂತ! ಈ ಹೆಂಗಸರ ಮಾತು ಗಂಡಸರಿಗೆ ಪಥ್ಯ ಆಗುತ್ತಾ ಹೇಳು? ಒಂದು ದಿನ ನಸುಕಿಗೇ ಎದ್ದು, ಪಡಸಾಲೆ ಬಾಗಿಲು ದೂಡಿ ಒಳಗೆ ಹೋಗಿ ನೋಡ್ತೇನೆ… ಏನ್‌ ನೋಡೋದು? ಇವರು ಮಾಡಿನ ಜಂತಿಗೆ ಹಗ್ಗ ಬಿಗಿದು…. ಹೋದವರು ಸೀದಾ ಹೋದರು. ಮಕ್ಕಳಿನ್ನೂ ಸಣ್ಣವು. ಆಮೇಲೆ ನಾನು ಅನುಭವಿಸಿದ್ದೇನು ಸಾಧಾರಣದ ಬೇನೆಯೇ? ಅವರ ಕಚೇರಿ ಬಾಗಿಲಿಗೆ ತಿಂಗಳುಗಟ್ಟಲೆ ಅಲೆದೆ. ಓದು-ಬರಹ ಕಲಿಯದೇ ಇರುವ ನಮ್ಮಂಥವರು ಅಲ್ಲೆಲ್ಲಾ ಹೋದರೆ, ಕಣ್ಣಿಗೆ ಪಟ್ಟಿ ಕಟ್ಟಿ ಬಿಟ್ಟ ಹಾಗೆ ಆಗುತ್ತೆ ನೋಡು. ಯಾವುದರಧ್ದೋ ಹಣ ಸಿಕ್ಕತ್ತೆ ಅಂತ ಹೇಳಿದ್ರು. ಆದರೆ ಆ ಹಣ ಕೈಗೆ ಸಿಗುವಾಗ ಮುಕ್ಕಾಲಂಶ ಸಾಲಕ್ಕೆ ಅಂತ ಮುರೊRಂಡು ಬಿಟ್ಟರು. 

ನಂತರ ನೆಂಟರು-ಇಷ್ಟರ ಮನೆಗೆ ಹೋಗೋದು, ಹಪ್ಪಳ, ಉಪ್ಪಿನಕಾಯಿ ಮಾಡೋದು, ಒಂದೇ ಎರಡೆ? ಅಪ್ಪಿತಪ್ಪಿ ಒಂದು ನಗು ನಮ್ಮ ಮುಖದ ಮೇಲೆ ಮೂಡಿತೋ, ಒಂದು ಮಾತು ನಮ್ಮ ಬಾಯಿಂದ ಉದುರಿತೋ “ಗಂಡ ಸತ್ತವಳು, ಬಿನ್ನಾಣಕ್ಕೇನೂ ಕಡಿಮೆಯಿಲ್ಲ’ ಅನ್ನುವ ಕೊಂಕು ಚುಚ್ಚುತ್ತೆ. ಅಲ್ಲಾ, ಗಂಡ ಸತ್ತ ಅಂತ ಇಡೀ ದಿನ ಕಣ್ಣೀರು ಹಾಕಬೇಕು ಅನ್ನೋದು ಇವರ ಕಾನೂನಾ? ಇಂತದ್ದಕ್ಕೆಲ್ಲಾ ಎದೆಗಟ್ಟಿ ಮಾಡ್ಕೊಂಡು, ಹಗಲೂ ರಾತ್ರಿ ಗೈದು ಮಕ್ಕಳನ್ನು ದೊಡ್ಡದು ಮಾಡಲಿಲ್ವೆ ನಾನು? ಇವೊತ್ತು ಅವರಿದ್ದಿದ್ರೆ ಇದೇ ಹೇಳ್ತಿದ್ದೆ. ನಿಮ್ಮ  ಮಕ್ಕಳನ್ನು ಅತಂತ್ರ ಮಾಡಿ ಹೋಗಲಿಲ್ಲ ನಾನು ಅಂತ ಹೇಳ್ತಿದ್ದೆ. ಆದ್ರೆ ಒಂದ್‌ ಮಾತು ಪದ್ದು, ಇಷ್ಟೆಲ್ಲಾ ಅನುಭವಿಸಿದರೂ ಒಂದು ದಿನವೂ “ಈ ಬದುಕು ಸಾಕು’ ಅಂತ ನನಗನ್ನಿಸಿದ್ದಿಲ್ಲ ನೋಡು! 

“”ಅಯ್ಯೋ ಗಂಗಮ್ಮಾ, ವಿಚಿತ್ರ ಎಲ್ಲಾ ಈ ಗಂಡಸರದ್ದೇ. ನನ್ನ ಗಂಡ ಹೇಗಿದ್ದ? ಸಂಸಾರದ ಜವಾಬ್ದಾರಿ ಒಂಚೂರೂ ಮೈಯಿಗೆ ಅಂಟಿಸಿಕೊಳ್ಳದೇ ಇರುವ ಗಂಡಸು ಅದು. ನನ್ನ ಮೂರು ಮಕ್ಕಳೊಟ್ಟಿಗೆ ಅವನ ಹೊಟ್ಟೆಗೂ ನಾನೇ ದುಡೀಬೇಕಿತ್ತು. ಮೈಯೆÂಲ್ಲಾ ಉರಿದು, ನಾನೂ ಗಟ್ಟಿ ಗಂಟಲಲ್ಲಿ ಅವನನ್ನು ಬೈಯ್ಯುತ್ತ ಇದ್ದೆ. ಆದರೆ ಅವನು ನಮ್ಮನ್ನೆಲ್ಲಾ ದಾರಿಮೇಲೆ ಹಾಕಿ ಹೀಗೆ ನಾಪತ್ತೆಯಾಗುತ್ತಾನೆಂದು ಸ್ವಪ್ನದಲ್ಲೂ ಎಣಿಸಿರಲಿಲ್ಲ ನಾನು. ಊರವರ ಬಾಯಿಗೆ ಕೋಲು ಹಾಕಿದ ಹಾಗಾಯ್ತು. “”ರಾಟಾಳಿ ಹೆಂಡತಿ, ಕಾಟ ತಡೆದುಕೊಳ್ಳಲಿಕ್ಕಾಗದೇ ಗಂಡ ಮನೆಬಿಟ್ಟು ಓಡಿಹೋದ” ಅಂತ ಸುತ್ತೆಲ್ಲ ಗುಲ್ಲೆಬ್ಬಿಸಿ ಬಿಟ್ಟರು. ಅಲ್ಲಾ , ಗಂಗಮ್ಮಾ, ಅಂವ ಎಂತದೇ ಮಾಡಲಿ, ಗಂಡ ಬೇಡ ಅಂತ ನಮಗೆ ಅನ್ನಿಸ್ತದೇನು? ಕೆಲಸಕ್ಕಿಲ್ಲ, ಕಾರ್ಯಕ್ಕಿಲ್ಲ, ಮಕ್ಕಳಿಗೆ ಅಪ್ಪ ಇದ್ದೂ ಇಲ್ಲದ ಹಾಗಾಯ್ತಲ್ಲಾ ಈಗ. ನೀವು ಏನೇ ಹೇಳಿ, ಗಂಡ ಬಿಟ್ಟವಳು ಅಂತಾದಾಗ ಬದುಕೋದು ದೊಡ್ಡ ನರಕ, ಗಂಗಮ್ಮ”

Advertisement

“”ಪದ್ದೂ, ನಳ ಮಹಾರಾಜನ ಕಥೆ ಗೊತ್ತಾ ನಿನಗೆ? ಅವನು ಜೂಜಿನ ಚಟಕ್ಕೆ ಬಿದ್ದು ರಾಜ್ಯ, ಕೋಶ ಎಲ್ಲ ಕಳ್ಕೊಳ್ಳುತ್ತಾನೆ. ಇಷ್ಟು ಸಾಲದು ಅಂತ ಕಾಡಿನ ಮಧ್ಯೆ ತನ್ನ ಮುದ್ದಿನ ಹೆಂಡತಿ ದಮಯಂತಿಯನ್ನೂ ಒಬ್ಬಂಟಿ ಬಿಟ್ಟು ನಡೆದುಬಿಟ್ಟ. ಇದ್ದ ಒಂದು ವಸ್ತ್ರವನ್ನೂ ಎರಡು ತುಂಡುಮಾಡಿ ಅದನ್ನೇ ಉಟ್ಟು ಕಾಡಲ್ಲಿ ಕಾಲ ಕಳೀತಿದ್ದ ಗಂಡ-ಹೆಂಡತಿ ಅವರು. ಇದ್ದಕ್ಕಿದ್ದ ಹಾಗೆ ಗಂಡ ಕಣ್ಣಿಗೆ ಕಾಣಲಿಲ್ಲ! ಸುತ್ತಮುತ್ತ ಬೇಟೆಗೆ, ಬೇಟಕ್ಕೆ ಹೊಂಚು ಹಾಕ್ತಿರೋ ಕ್ರೂರಪ್ರಾಣಿಗಳು, ಕಿರಾತರು! ಆ ಹೆಣ್ಣು ಹೆಂಗಸು ದಮಯಂತಿ ಏನು ಮಾಡಬೇಕು ಹೇಳು! ಚತುರೆ ಅವಳು, ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಅಪ್ಪನ ಮನೆ ಸೇರಿದಳು. “ದಮಯಂತಿ ಪುನರ್‌ ಸ್ವಯಂವರ’ ಅಂತ ಡಂಗುರ ಸಾರಿಸಿ, ಎಲ್ಲಿದೊ°à ನಳಮಹಾರಾಜ, ತನ್ನ ಗಂಡ ತನ್ನ ಹತ್ತಿರ ಓಡಿಬರುವ ಹಾಗೆ ಮಾಡ್ಕೊಂಡಳು”.
“”ಪದ್ದೂ, ನೀನೂ ಯಾಕೆ ಇನ್ನೊಂದು ಮದುವೆ ಮಾಡ್ಕೊàತೇನೇ ಅಂತ ಸುದ್ದಿ ಹಬ್ಬಿಸ  ಬಾರದು? ನಿನ್ನ ಗಂಡ ಎಲ್ಲೇ ಇರಲಿ, ನಿನ್ನನ್ನು ಹುಡುಕಿಕೊಂಡು ಓಡಿ ಬರಲಿಲ್ಲ ಅಂದ್ರೆ ಕೇಳು!”

“”ಏನಂದ್ರಿ, ಗಂಗಮ್ಮಾ ಮದುವೆ…?”

“”ಯಾಕೆ ಪದ್ದೂ, ಮುಖ ಕಪ್ಪಾಯ್ತು? ಒಂದು ಮದುವೆಗೇ ಸಾಕ್‌ ಸಾಕಾಯ್ತು. ಈಗ ಇನ್ನೊಂದು ಮದುವೆಯಾ ಅಂತ ಗಾಬರಿಯಾಯ್ತಾ? ಅಥವಾ ಓಡಿ ಹೋದವನೆಲ್ಲಾದರೂ ತಿರುಗಿ ಬಂದರೆ ಮತ್ತೆ ಹಳೇ ಬದುಕು ಮರುಕಳಿಸುತ್ತದೆ ಅಂತ ಹೆದರಿಕೆಯಾ?”

ಕೇಳಿಸುತ್ತಿದೆಯೇ ಸೀತೆ, ಈ ಮಾತುಗಳನ್ನಾಡುತ್ತಲೇ ಹೆಂಗಸರಿಬ್ಬರೂ ನಗುತ್ತಿದ್ದಾರೆ. ಕಷ್ಟದ ಕಲ್ಲುಬಂಡೆಗಳು ಅವರ ಮೇಲೆರಗಿದರೂ, ಅವರ ಜೀವನೋತ್ಸಾಹ ತಗ್ಗಿಲ್ಲ. ತಮ್ಮ ನಗುವನ್ನು ಪ್ರಶ್ನಿಸುವ ಮಂದಿಯೆದುರು ಸೆಟೆದು ನಿಲ್ಲುವ ಛಾತಿಯನ್ನವರು ತೋರಬಲ್ಲರು. “ಮೊದಲಲ್ಲಿ ತಂದೆಗೆ, ನಡುವಲ್ಲಿ ಗಂಡಂಗೆ, ಕೊನೆಯಲ್ಲಿ ಮಗನಿಗೆ ಅಧೀನಳಾಗಿ ಬಾಳು’ ಎಂಬ ಪಾಠ ಕೇಳುತ್ತಲೇ ಬೆಳೆದ ಇವರಿಗೆ ಅರ್ಧ ದಾರಿ ಸಾಗುವಾಗ ತಮ್ಮ ಮುಂದೆ-ಹಿಂದೆ ಯಾರೂ ಇಲ್ಲ, ಇರುವುದು, ಕೈಹಿಡಿದು ಜೊತೆಯಲ್ಲಿ  ನಡೆಯುತ್ತಿರುವ ಮಕ್ಕಳು ಮಾತ್ರ ಎಂಬುದು ಅನುಭವಕ್ಕೆ ಬರುತ್ತದೆ. ಆಗ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ಶುರು ಮಾಡುತ್ತಾರೆ. ಒಮ್ಮೊಮ್ಮೆ ಬೀಸುವ ಬಿರುಗಾಳಿಗೆ, ಹುಚ್ಚೆದ್ದು ಸುರಿಯುವ ಮಳೆಗೆ ಆ ಬದುಕು ಚಿಂದಿ ಚಿಂದಿಯಾಗುತ್ತದೆ. ಆದರೆ ಆಗಲೂ ಈ ಗಟ್ಟಿಗಿತ್ತಿಯರು ಕೈಚೆಲ್ಲಿ ಸುಮ್ಮನುಳಿಯುವುದಿಲ್ಲ. ಮತ್ತೆ ಆ ಚೂರುಗಳನ್ನೆಲ್ಲ ಹೆಕ್ಕಿ ಚೆಂದದ ಬಾಳಬಟ್ಟೆಯನ್ನು ನೇಯುತ್ತಾರೆ, ತಮಗಾಗಿ, ತಮ್ಮ ಮಕ್ಕಳಿಗಾಗಿ.

ಸಾಲ, ನಷ್ಟ ಅಂತೆಲ್ಲಾ ಬದುಕಿಗೆ ಬೆನ್ನು ತಿರುಗಿಸಿದ ಹೆಣ್ಣುಗಳ ಸಂಖ್ಯೆ ಈ ಪ್ರಪಂಚದಲ್ಲಿ ತೀರಾ ವಿರಳ. ಆದರೆ ಬದುಕಿರುವವರೆಗೆ ಜೊತೆಗಿರುತ್ತೇವೆ ಎಂದು ಮದುವೆ ಹೊತ್ತಲ್ಲಿ ವಾಗ್ಧಾನ ನೀಡಿದ ಗಂಡಂದಿರೇಕೆ ನಡುವಿನಲ್ಲಿಯೇ ಸಂಸಾರಕ್ಕೆ ವಿಮುಖರಾಗುತ್ತಾರೆ? ಹೆಂಡಿರು ಗಟ್ಟಿ ನಿಂತು ಎದೆಯೊಡ್ಡಬಲ್ಲ ಕಟು ಸನ್ನಿವೇಶಗಳು ಇವರನ್ನೇಕೆ ಅಧೀರರನ್ನಾಗಿಸುತ್ತವೆ? ವಿಪರ್ಯಾಸವೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಈ ನತದೃಷ್ಟ ಗಂಡಸರು ತಮ್ಮ ಕೆಡುಕಿಗೆ ತಾವೇ ಕಾರಣರಾಗಿರುತ್ತಾರೆ. ಬಹುಶಃ ಬಾಲ್ಯದಲ್ಲಿ ಈ ಬಗೆಗೆ ಸಿಕ್ಕುವ ಪಾಠ ಗಂಡ ಮಕ್ಕಳಿಗೆ ತುಸು ಹೆಚ್ಚಿಸಬೇಕೇನೊ!

ಸೀತಮ್ಮಾ, ಸಂಸಾರ ನೊಗಕ್ಕೆ ಒಂಟಿಯಾಗಿ ಹೆಗಲು ಕೊಡುವ ನಿನ್ನಂತಹ ತಾಯಂದಿರು ಅದೆಂತಹ ಗಟ್ಟಿಗಿತ್ತಿಯರು! ಏನೇ ಬರಲಿ, ತುಟಿ ಕಚ್ಚಿ, ತುದಿ ಮುಟ್ಟಿಯೇ ವಿರಮಿಸುವರು. ಬಾನು ಕಾಲಕಾಲಕ್ಕೆ ಮಳೆ ಸುರಿಸಲಿ, ಸುರಿಸದೇ ಇರಲಿ, ಸಸ್ಯ ಸಂಕುಲದ ಜೀವವನ್ನು ಕಾಪಿಡುವ ಗುಟ್ಟು ಈ ಮಣ್ಣಿಗೆ ಗೊತ್ತಿರುತ್ತದೆ ಅಲ್ಲವೇ?

– ಅಭಿಲಾಷಾ ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next