Advertisement

ಹೆಚ್ಚು ಅಂಕಗಳಿಸಲು ಸರಳ ಸಮಾಜ ವಿಜ್ಞಾನ

12:33 AM Mar 15, 2022 | Team Udayavani |

ಸಮಾಜ ವಿಜ್ಞಾನ ಒಂದು ಆಸಕ್ತಿಯ ವಿಷಯ. ಆದರೆ ಇದರಲ್ಲಿ ಓದುವುದಕ್ಕೆ ಮತ್ತು ಬರೆಯಲಿಕ್ಕೆ ಹೆಚ್ಚು ಎಂಬುದು ಹೆಚ್ಚಿನವರ ಅಭಿಪ್ರಾಯ. ನಮ್ಮ ಚರಿತ್ರೆ ತಿಳಿಯುವ ಮತ್ತು ಜ್ಞಾನ ಹೆಚ್ಚಿಸುವ ಈ ವಿಷಯದಲ್ಲಿಯೂ ಇತರ ಕೆಲವು ವಿಷಯಗಳಂತೆ ಹೆಚ್ಚಿನ ಅಂಕ ಗಳಿಸುವುದಕ್ಕೆ ಸಾಧ್ಯವಿದೆ. ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ಯಾವ ಪಾಠಗಳಿಗೆ ಹೆಚ್ಚು ಗಮನ ನೀಡಬೇಕು. ಯಾವ್ಯಾವ ಪಾಠಗಳಿಂದ ಎಷ್ಟೆಷ್ಟು ಅಂಕಗಳ ಪ್ರಶ್ನೆ ಬರುತ್ತದೆ ಎಂಬುದನ್ನು ಅರಿತುಕೊಂಡು ಓದಿದರೆ ಕೊನೆಯ ಕ್ಷಣದಲ್ಲಿ ಗೊಂದಲಕ್ಕೆ ಒಳಗಾಗುವುದು ಕೂಡ ತಪ್ಪುತ್ತದೆ. ಎಸೆಸೆಲ್ಸಿ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳು ಸಮಾಜ ವಿಜ್ಞಾನ ವಿಷಯವನ್ನು ಹೇಗೆ ಅಧ್ಯಯನ ನಡೆಸಬೇಕು, ಓದಿನ ವೇಳೆ ಯಾವೆಲ್ಲ ಅಧ್ಯಾಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂಬೆಲ್ಲ ವಿಷಯಗಳ ಬಗೆಗೆ ವಿಷಯ ತಜ್ಞರು ವಿದ್ಯಾರ್ಥಿಗಳಿಗೆ ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

Advertisement

ಸಮಾಜ ವಿಜ್ಞಾನದಲ್ಲಿ ಉತ್ತರಗಳನ್ನು ಪಾಯಿಂಟ್‌ ರೂಪದಲ್ಲಿ ಬರೆಯುವಾಗ ಚುಕ್ಕಿ (*) ಹಾಕಿ ಬರೆಯುವ ಬದಲು ಅಂಕಿಯಲ್ಲಿ ಬರೆದರೆ ಮೌಲ್ಯಮಾಪಕರು ಅಂಕ ನೀಡುವಾಗ ಸುಲಭವಾಗುತ್ತದೆ. ಇದರಲ್ಲಿ ಆರು ವಿಭಾಗ ಇರುವುದರಿಂದ ಎಲ್ಲವನ್ನೂ ಪ್ರತ್ಯೇಕ ವಾಗಿಯೇ ಓದಬೇಕಾ ಗುತ್ತದೆ. ಒಂದೊಂದು ವಿಭಾಗದಲ್ಲಿ ಕೆಲವು ಅಧ್ಯಾಯಗಳು ಒಂದಕ್ಕೊಂದು ಕೊಂಡಿಯಂತಿರುತ್ತವೆ. ಹೀಗಾಗಿ ಎರಡು ಅಥವಾ ಮೂರು ಅಂಕದ ಪ್ರಶ್ನೆಗಳನ್ನು ಎರಡು ಪಾಠವನ್ನು ಸೇರಿಸಿ ಕೇಳುವ ಸಾಧ್ಯತೆ ಇರುತ್ತದೆ. ಭಾರತದ ನಕ್ಷೆ, ಪ್ರಮುಖ ಸ್ಥಳಗಳನ್ನು ನೆನಪಿಟ್ಟು ಕೊಳ್ಳಲೇಬೇಕು ಎಂದು ಸಮಾಜ ವಿಜ್ಞಾನ ವಿಷಯ ತಜ್ಞರೂ ಆದ ಕಾರ್ಕಳ ತಾಲೂಕಿನ ರೇಂಜಾಳದ ಸರಕಾರಿ ಪ್ರೌಢಶಾಲೆಯ ವಿನಾಯಕ ನಾಯ್ಕ ಅವರು ವಿವರ ನೀಡಿದ್ದಾರೆ.

ಇತಿಹಾಸ
ಬ್ರಿಟಿಷ್‌ ಆಳ್ವಿಕೆಯ ಪರಿಣಾಮ, ಕರ್ನಾಟಕ ದಲ್ಲಿ ಬ್ರಿಟಿಷ್‌ ಆಳ್ವಿಕೆಗೆ ಪ್ರತಿರೋಧಗಳು- ಈ ಅಧ್ಯಾಯಗಳ ಜತೆಗೆ ಗಾಂಧಿಯುಗ ಹಾಗೂ ರಾಷ್ಟ್ರೀಯ ಹೋರಾಟ ಅಧ್ಯಾಯನವನ್ನು ಒಟ್ಟಿಗೆ ಸೇರಿಸಿ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇರುತ್ತದೆ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ-1857 ಹಾಗೂ ಸ್ವಾತಂತ್ರ್ಯ ಹೋರಾಟ- ಇವುಗಳು ಮೂರು ಮತ್ತು ನಾಲ್ಕು ಅಂಕಕ್ಕೆ ಬರುತ್ತವೆ. ಸ್ವಾತಂತ್ರೊéàತ್ತರ ಭಾರತ ಹಾಗೂ ಭಾರತಕ್ಕೆ ಯುರೋಪಿಯನ್ನರ ಆಗಮನದ ಬಗ್ಗೆ 2 ಅಂಕಕ್ಕೆ ಕೇಳುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ಅಧ್ಯಾಯಗಳನ್ನು ವಿಶೇಷವಾಗಿ ಓದಬೇಕಾಗುತ್ತದೆ.

ರಾಜಶಾಸ್ತ್ರ
ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು ಅಧ್ಯಾಯದ ಮೇಲೆ ನಾಲ್ಕು ಅಂಕ ಅಥವಾ ಮೂರು ಅಂಕಗಳ ಪ್ರಶ್ನೆಗಳು ಇರುತ್ತವೆ. ಭಾರತದ ವಿದೇಶಾಂಗ ನೀತಿ ಹಾಗೂ ಅನ್ಯ ರಾಷ್ಟ್ರದೊಂದಿಗೆ ಭಾರತದ ಸಂಬಂಧ ಈ ಅಧ್ಯಾಯಗಳಿಂದ ಮೂರು ಅಂಕದ ಪ್ರಶ್ನೆಗಳು ಹೆಚ್ಚಿರುತ್ತವೆ. ಈ ವರ್ಷ ಭಾರತ-ರಷ್ಯಾ, ಭಾರತ-ಅಮೆರಿಕ ಅಥವಾ ಭಾರತ ಉಕ್ರೇನ್‌ ಸಂಬಂಧದ ಬಗ್ಗೆಯೂ ಕೇಳಬಹುದು. ಜಾಗತಿಕ ಸಮಸ್ಯೆಗಳು ಅಧ್ಯಾಯದಿಂದ ಎರಡು ಅಂಕಕ್ಕೆ ಪ್ರಶ್ನೆ ಕೇಳುವ ಸಾಧ್ಯತೆ ಇರುತ್ತದೆ.

ಭೂಗೋಳಶಾಸ್ತ್ರ
ಭಾರತದ ಸ್ಥಾನ ಮತ್ತು ವಿಸ್ತೀರ್ಣ ಎನ್ನುವ ಅಧ್ಯಾಯದಲ್ಲಿ ನಕ್ಷೆ(ಮ್ಯಾಪ್‌), ಅಕ್ಷಾಂಶ ಮತ್ತು ರೇಖಾಂಶ ಕೇಳುತ್ತಾರೆ. ಭಾರತದ ಮೇಲ್ಮೆ„ ಲಕ್ಷಣಗಳು, ಭಾರತದ ವಾಯುಗುಣದ ಪಾಠ ಬಹು ಆಯ್ಕೆಗೆ ಕೇಳುತ್ತಾರೆ. ಭಾರತದ ಮಣ್ಣುಗಳು, ಭಾರತದ ಅರಣ್ಯಗಳು ಇದು ಮೂರು ಅಂಕಗಳಿಗೆ ಬರುತ್ತವೆ. ಭಾರತದ ಜಲಸಂಪನ್ಮೂಲ, ಇದರಲ್ಲಿ ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳು (ದಾಮೋದರ, ಬಾಕ್ರಾನಂಗಲ್‌, ತುಂಗ ಭದ್ರಾ ಇತ್ಯಾದಿ) ಹಾಗೂ ಮ್ಯಾಪ್‌ ಕೂಡ ಕೇಳುವ ಸಾಧ್ಯತೆಯಿದೆ. ಭಾರತದ ಭೂ ಸಂಪನ್ಮೂಲ -ಕೃಷಿಯ ವಿಧಗಳು, ಕೃಷಿ ಪದ್ಧತಿ. ಕೈಗಾರಿಕೆಗಳು- ಪ್ರಾಮುಖ್ಯತೆ, ಸ್ಥಾನೀಕರಣದ ಅಂಶಗಳು. ಸಾರಿಗೆ ಮತ್ತು ಸಂಪರ್ಕ, ಭಾರತದ ನೈಸರ್ಗಿಕ ವಿಪತ್ತುಗಳು ಮೂರು ಅಂಕಕ್ಕೆ ಬಂದೇ ಬರುತ್ತವೆ. ಭೂಕಂಪದ ಪರಿಣಾಮ, ಸಂಭವಿಸುವುದು ಹೇಗೆ, ಕಾರಣ, ಪ್ರವಾಹದ ಬಗ್ಗೆ ಕೇಳುವ ಸಾಧ್ಯತೆ ಹೆಚ್ಚಿರುತ್ತದೆ.

Advertisement

ಅರ್ಥಶಾಸ್ತ್ರ
ಇದರಲ್ಲಿ ಎರಡೇ ಪಾಠ ಇರುವುದು. ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ. ಇವುಗಳಲ್ಲಿ ಯಾವುದಾದರೂ ಸುಲಭ ಇರುವ ಒಂದು ಪಾಠವನ್ನು ಚೆನ್ನಾಗಿ ಓದಬೇಕಾಗುತ್ತದೆ. ಗ್ರಾಮಗಳ ಅಭಿವೃದ್ಧಿ, ನೀರು, ಶಾಲೆ, ಬೀದಿದೀಪ ಇತ್ಯಾದಿಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದಾಗಿದೆ.

ಸಮಾಜಶಾಸ್ತ್ರ
ಸಾಮಾಜಿಕ ಸ್ತರ ವಿನ್ಯಾಸ, ದುಡಿಮೆ, ಸಾಮಾಜಿಕ ಚಳವಳಿಗಳು ಪಾಠಗಳಲ್ಲಿ ಅಸಂಘಟಿತ ವಲಯದ ಸಮಸ್ಯೆ, ಸಾಮಾಜಿಕ ಸ್ತರ ವಿನ್ಯಾಸದ ವಿಧಗಳು, ಪರಿಸರ ಚಳವಳಿಗಳು ಹೀಗೆ ಸುಲಭವಾದ ಪ್ರಶ್ನೆಗಳು ಬರುತ್ತದೆ. ಯಾವುದಾದರೂ ಎರಡು ಪಾಠವನ್ನು ಚೆನ್ನಾಗಿ ಓದಿಕೊಂಡರೆ ಸುಲಭವಾಗಿ ಅಂಕ ಪಡೆಯಬಹುದು.

 ವ್ಯವಹಾರ ಅಧ್ಯಯನ
ಇದರಲ್ಲಿ ಬ್ಯಾಂಕ್‌ನ ವ್ಯವಹಾರಗಳು ಅಧ್ಯಾಯದಲ್ಲಿ ಬ್ಯಾಂಕ್‌ನ ನಿತ್ಯದ ವ್ಯವಹಾರಗಳ ಬಗ್ಗೆ ಕೇಳಲಾಗುತ್ತದೆ. ಅಂಚೆ ಕಚೇರಿ, ಬ್ಯಾಂಕ್‌ ಸೇವೆಗಳ ವಿವರ ವನ್ನು ಕೇಳಬಹುದು. ಉದ್ಯಮಗಾರಿಕೆ ಅಧ್ಯಾಯದಲ್ಲಿ ಉದ್ಯಮಗಾರಿಕೆಯ ಲಕ್ಷಣ, ಯಶಸ್ವಿ ಉದ್ಯಮಿಯಾಗುವುದು ಹೇಗೆ? ಗ್ರಾಹಕ ರಕ್ಷಣ ಅಧ್ಯಾಯದಲ್ಲಿ ಗ್ರಾಹಕರು ನ್ಯಾಯಾಲಯಕ್ಕೆ ದೂರು ಸಲ್ಲಿಸುವಲ್ಲಿ ವಹಿಸಬೇಕಾದ ಕ್ರಮಗಳ ಬಗ್ಗೆ ಒಂದು ಪ್ರಶ್ನೆ ಇದ್ದೇ ಇರುತ್ತದೆ.

ಭಾರತದ ನಕ್ಷೆ
ಇದು ವಿದ್ಯಾರ್ಥಿಗಳಿಗೆ ಜೇಬಿನಲ್ಲಿ ಹಣ ಇದ್ದಂತೆ. ಐದು ಅಂಕ ಸುಲಭವಾಗಿ ಪಡೆಯಬಹುದು. ಅಕ್ಷಾಂಶ ಎಂದರೆ ಅಡ್ಡರೇಖೆ, ರೇಖಾಂಶ ಎಂದರೆ ಲಂಬ ರೇಖೆ ಎಂಬುದು ಸ್ಪಷ್ಟವಾಗಿ ತಿಳಿದಿರಬೇಕು. ಭಾರತದ ನಕ್ಷೆ ಬಿಡಿಸಿ, ಸ್ಥಳ ಗುರುತಿಸಿ ಎಂದು ಕೇಳುತ್ತಾರೆ. ಅದರಲ್ಲಿ ಕನ್ಯಾಕುಮಾರಿ, ಇಂದಿರಾ ಪಾಯಿಂಟ್‌, ನೀಲಗಿರಿ, ಅರಾವಳಿ ಪರ್ವತ, ಗುರುಶಿಖರ, ನಾಲ್ಕು ತೀರಗಳು, ಮ್ಯಾಂಗ್ರೋ ಅರಣ್ಯಗಳು, ಪಾಕ್‌ ಜಲಸಂಧಿ, ಬಾಕ್ರಾನಂಗಲ್‌, ಪ್ರಮುಖ ವಿಮಾನ ನಿಲ್ದಾಣಗಳನ್ನೇ ಹೆಚ್ಚಾಗಿ ಕೇಳಲಾಗುತ್ತದೆ.
– ವಿನಾಯಕ ನಾಯ್ಕ

 

Advertisement

Udayavani is now on Telegram. Click here to join our channel and stay updated with the latest news.

Next