Advertisement

ರೇಷ್ಮೆ ನಗರಕ್ಕಿಲ್ಲ ಮೂಲ ಸೌಕರ್ಯಗಳ ಭಾಗ್ಯ

04:44 PM Mar 26, 2018 | Team Udayavani |

ಚಿಕ್ಕಬಳ್ಳಾಪುರ ಎತ್ತ ಕಣ್ಣಾಯಿಸಿದರೂ ಅನೈರ್ಮಲ್ಯ, ಕುಡಿವ ನೀರಿಗೆ ಪರದಾಟ… ಒಳಚರಂಡಿ ಅವ್ಯವಸ್ಥೆಯಿಂದ ಸೊಳ್ಳೆಗಳ ಕಾಟ.. ಕಿಷ್ಕಿಂದೆಯಂತಹ ಬಸ್‌ ನಿಲ್ದಾಣದಲ್ಲಿ ಜನತೆ ಕೂಗಾಟ… ಹೈಟೆಕ್‌ ರೇಷ್ಮಗೂಡು ಮಾರುಕಟ್ಟೆಗೆ ರೈತರ ಸೆಣಸಾಟ…  ಇಡೀ ಏಷ್ಯಾ ಖಂಡದಲ್ಲಿಯೇ ರೇಷ್ಮೆ ಕೃಷಿಯಲ್ಲಿ ತನ್ನದೇ ಆದ ಖ್ಯಾತಿ ಹೊಂದಿರುವ ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟ ಪಟ್ಟಣದಲ್ಲಿ ಮೂಲ ಸೌಕರ್ಯಗಳ ಕೊರತೆ ಇಂತಹ ದುಸ್ಥಿತಿಗಳು ಎದುರಾಗಿವೆ.

Advertisement

 ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಅಖಾಡಕ್ಕೆ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಬಿರುಸಾಗಿಯೇ ಸಜ್ಜಾಗುತ್ತಿವೆ. ಆದರೆ ಕ್ಷೇತ್ರದಲ್ಲಿ ಜನಪ್ರತಿನಿಧಿಗಳು ಬದಲಾದರೂ ಕ್ಷೇತ್ರದ ಸ್ಥಿತಿಗತಿಗಳು ಮಾತ್ರ ಬದಲಾಗುತ್ತಿಲ್ಲ ಎಂಬ ಆಕ್ರೋಶ, ಸಿಟ್ಟು, ಅಸಮಾಧಾನ ಕ್ಷೇತ್ರದ ಮತದಾರರಲ್ಲಿ ಹೊಗೆಯಾಡುತ್ತಲೇ ಇದೆ.

ರೈತಾಪಿ ಕೂಲಿ ಕಾರ್ಮಿಕರನ್ನು ಹೆಚ್ಚು ಹೊಂದಿರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಹೇಳಿ ಕೇಳಿ ರೇಷ್ಮೆ ಕೃಷಿಯನ್ನು ಅಶ್ರಯಿಸಿರುವ ತಾಲೂಕು. ಬರೋಬ್ಬರಿ 6,240 ಹೆಕ್ಟೇರ್‌ನಲ್ಲಿ ರೈತರು ಹಿಪ್ಪುನೇರಳೆ ರೇಷ್ಮೆ ಬೆಳೆಯುತ್ತಿದ್ದಾರೆ. ಸರಾಸರಿ ಪ್ರತಿ ವರ್ಷ 5 ಸಾವಿರ ಟನ್‌ಗೂ ಮೀರಿ ರೇಷ್ಮೆಗೂಡು ಉತ್ಪಾದನೆಯಾಗುವ ಶಿಡ್ಲಘಟ್ಟದಲ್ಲಿ ಸುಸಜ್ಜಿತ ರೇಷ್ಮೆಗೂಡು ಮಾರುಕಟ್ಟೆ ಇಲ್ಲ. ಹಳೆಯ ಶೆಡ್‌ಗಳಲ್ಲಿಯೇ ನಿರ್ಮಿಸಲಾಗಿರುವ ಮಾರುಕಟ್ಟೆ ಇಂದಿಗೂ ಮುಂದುವರಿದಿದೆ.

ಅತ್ಯಾಧುನಿಕ ಮಾದರಿಯಲ್ಲಿ ರೇಷ್ಮೆಗೂಡು ಮಾರುಕಟ್ಟೆ ನಿರ್ಮಿಸುವ ಜನಪ್ರತಿನಿಧಿಗಳ ಭರವಸೆ ದಶಕಗಳು ಕಳೆದರೂ ಈಡೇರದೆ ಹುಸಿಯಾಗಿದೆ. ಇನ್ನೂ ರೇಷ್ಮೆ ಕೃಷಿ ಪ್ರಧಾನವಾಗಿರುವ ತಾಲೂಕಿನಲ್ಲಿ ರೇಷ್ಮೆ ಕೃಷಿ ಸಂಶೋಧನೆಗೆ ಪೂರಕ ಕೇಂದ್ರ ತೆರೆಯಬೇಕೆಂಬ ಬದ್ಧತೆ ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ.

ಕುಡಿಯುವ ನೀರಿಗೂ ಪರದಾಟ: ಯಾವುದೇ ನದಿ ಮೂಲಗಳನ್ನು ಹಾಗೂ ಕೆರೆ, ಕುಂಟೆಗಳ ನೀರಿನ ಆಶ್ರಯ ಇಲ್ಲದ ಶಿಡ್ಲಘಟ್ಟ ನೀರಿಗೆ ಪರದಾಟ ತಪ್ಪಿಲ್ಲ. ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ದೂರದೃಷ್ಟಿ ಕೊರತೆಯಿಂದ ಪಟ್ಟಣಕ್ಕೆ ಶಾಶ್ವತ ನೀರು ಪೂರೈಸುವ ಕೆರೆ, ಕಟ್ಟೆಗಳ ಅಭಿವೃದ್ಧಿ ಆಗಿಲ್ಲ. ಶಿಡ್ಲಘಟ್ಟಕ್ಕೆ ಅಂಟಿಕೊಂಡಿರುವ ಗೌಡನಕೆರೆ, ಅಮಾನಿ ಕೆರೆ ಬಹುಪಾಲು ನಿರ್ಲಕ್ಷ್ಯಕ್ಕೆ ಒಳಗಾಗಿ ಭೂಗಳ್ಳರ ಪಾಲಾಗಿದೆ. ಕನಿಷ್ಠ ಈ 2 ಕೆರೆಗಳನ್ನು ಪುನಚ್ಚೇತನಗೊಳಿಸಿ ದ್ದರೆ ಶಿಡ್ಲಘಟ್ಟಕ್ಕೆ ಕುಡಿಯುವ ನೀರಿನ
ಅಶ್ರಯ ಮೂಲವಾಗುತ್ತಿತ್ತು.

Advertisement

ಅನೈರ್ಮಲ್ಯ ತಾಂಡವ: ಪುರಸಭೆಯಿಂದ ನಗರಸಭೆಗೆ ಬಡ್ತಿ ಪಡೆದಿರುವ ಶಿಡ್ಲಘಟ್ಟ ಅಶುಚಿತ್ವವಾದ ತಾಣ. ಹಾದಿ ಬೀದಿಗಳಲ್ಲಿ ಕಸದ ರಾಶಿಗಳು ಕಣ್ಣಿಗೆ ರಾಚುತ್ತವೆ. ಒಳಚರಂಡಿ ವ್ಯವಸ್ಥೆ ಇದ್ದರೂ ನಿರ್ವಹಣೆ ಇಲ್ಲ. ಇನ್ನೂ ಕೊಳಚೆ ನೀರನ್ನು ಸಂಸ್ಕರಿಸುವ ಎಸ್‌ಟಿಪಿ ಘಟಕ ನಿರ್ವಹಣೆ ಆಗದೇ ಘನ ತಾಜ್ಯ ವಸ್ತುಗಳ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಶಿಡ್ಲಘಟ್ಟ ಸ್ವತ್ಛತೆಯಲ್ಲಿ ಹಿಂದೆ ಬಿದ್ದು ಕೊಳಚೆ ನಗರ ಎಂಬ ಅಪಖ್ಯಾತಿ ಅಂಟಿಕೊಂಡಿದೆ.

ಶಿಡ್ಲಘಟ್ಟ ಕ್ಷೇತ್ರವನ್ನು ಮಾದರಿಯಾಗಿ ಪರಿವರ್ತಿಸಲು ನನ್ನ ಅವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಮೂಲ ಸೌಲಭ್ಯ ಒದಗಿಸಲು ಪ್ರಥಮ ಆದ್ಯತೆ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸುಮಾರು ಶೇ.90 ರಷ್ಟು ಹಳ್ಳಿಗಳಿಗೆ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಸಿಆರ್‌ಎಫ್ ಯೋಜನೆಯಡಿ 6-7 ಕೋಟಿ ರೂ.,ಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಷ್ಟಾನಗೊಳಿಸಲಾಗಿದೆ. ಶಾಸಕರಾಗುವ ಮೊದಲು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದ್ದೇನೆ.
 ಎಂ.ರಾಜಣ್ಣ, ಶಾಸಕರು

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಒದಗಿಸಲು ಶಾಸಕ ರಾಜಣ್ಣ ವಿಫ‌ಲರಾಗಿದ್ದಾರೆ. ವಿಶೇಷವಾಗಿ ಕ್ಷೇತ್ರದಲ್ಲಿ ಯಾವುದೇ ಶಾಶ್ವತ ಅಭಿವೃದ್ಧಿ ಕಾಮಗಾರಿ ನಡೆಸಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ತಮ್ಮ ಯೋಜನೆ ಗಳೆಂದು ಬಿಂಬಿಸಿಕೊಳ್ಳಲು ಮಗ್ನರಾಗಿದ್ದಾರೆ. ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಿಂದ ಕೂಡಿದ್ದು ನನ್ನ ಅವಧಿಯಲ್ಲಿ ಮಂಜೂರಾಗಿ ನಿರ್ಮಾಣಗೊಂಡ ಕಾಮಗಾರಿಗಳನ್ನು ಮಾತ್ರ ಉದ್ಘಾಟಿಸಿದ್ದಾರೆ.
 ವಿ.ಮುನಿಯಪ್ಪ, ಮಾಜಿ ಶಾಸಕರು

ಕೃಷಿ ಮಾರುಕಟ್ಟೆ ಇಲ್ಲ: ವಿಪರ್ಯಾಸದ ಸಂಗತಿಯೆಂದರೆ ಶಿಡ್ಲಘಟ್ಟದಲ್ಲಿ ಇಂದಿಗೂ ಕೃಷಿ ಉತ್ಪನ್ನ ಮಾರುಕಟ್ಟೆ ಇಲ್ಲ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಾರುಕಟ್ಟೆ ಇದೆ. ಆದರೆ, ಶಿಡ್ಲಘಟ್ಟದ ರೈತರು ಬೆಳೆಯುವ ಹಣ್ಣು, ತರಕಾರಿ ಮತ್ತಿತರ ಉತ್ಪನ್ನಗಳನ್ನು ಚಿಕ್ಕಬಳ್ಳಾಪುರ ಅಥವಾ ಚಿಂತಾಮಣಿ ಮಾರುಕಟ್ಟೆಗೆ ತರಬೇಕು. ಪಟ್ಟಣದಲ್ಲಿ ಎಪಿಎಂಸಿ ತೆರೆಯಬೇಕೆಂಬ ಆಗ್ರಹ ತಾಲೂಕಿನ ರೈತರಿಂದ ಕೇಳಿ ಬರುತ್ತಿದ್ದರೂ ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲ.

ಕೈಗಾರಿಕೆಗಳಿಗೂ ಬರ: ರೇಷ್ಮೆ ಕೃಷಿ ಪ್ರಧಾನವಾಗಿರುವ ಶಿಡ್ಲಘಟ್ಟದಲ್ಲಿ ರೇಷ್ಮೆಗೂಡು ನೂಲು ಬಿಚ್ಚಣೆಕೆದಾರರು ಅಸಂಖ್ಯಾತವಾಗಿದ್ದಾರೆ. ಶಿಡ್ಲಘಟ್ಟದ ರೇಷ್ಮೆ ದೇಶ ಸೇರಿ ವಿದೇಶಗಳಲ್ಲಿಯೂ ಸದ್ದು ಮಾಡಿರುವ ಉದಾಹರಣೆಯಿದೆ. ಆದರೆ. ರೇಷ್ಮೆ ಉದ್ಯಮ ಪ್ರೋತ್ಸಾಹಿಸಲು ಒಂದು ಜವಳಿ ಟೆಕ್ಸ್‌ಟೈಲ್ಸ್‌ ಸ್ಥಾಪಿಸಬೇಕೆಂಬ ಇಚ್ಚಾಶಕ್ತಿಯನ್ನು ಜನಪ್ರತಿನಿಧಿಗಳು ಪ್ರದರ್ಶಿಸಿಲ್ಲ. ಈ ಹಿಂದೆ 2004ರಲ್ಲಿ ಅವಿಭಜತ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿ ವಿ.ಮುನಿಯಪ್ಪ ಜವಳಿ ಟೆಕ್ಸ್‌ಟೈಲ್ಸ್‌ ಕೈಗಾರಿಕೆ ಸ್ಥಾಪನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿದ್ದರು. ಆದರೆ, ಇದುವರೆಗೂ ಈಡೇರಲೇ ಇಲ್ಲ. ಹೀಗಾಗಿ ಯುವಕರಿಗೆ ಉದ್ಯೋಗ ಸಿಗದೆ ಟೆಕ್ಸ್‌ಟೈಲ್ಸ್‌ ಕಾರ್ಖಾನೆ ಇನ್ನೂ ಕನಸಾಗಿಯೇ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next