Advertisement

ಐತಿಹಾಸಿಕ ಸ್ಥಳ ಪುನರುತ್ಥಾನ ಕಾರ್ಯಗಳಿಗೆ ಶಿಲಾನ್ಯಾಸ

03:45 AM Feb 20, 2017 | Team Udayavani |

ಪುತ್ತೂರು: “ವಸುಧೈವ ಕುಟುಂಬಕಂ’ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ಆಶಯದಂತೆ ಶಾಂತಿ ನೆಲೆಸಬೇಕಾದರೆ ಧರ್ಮ ಕ್ಷೇತ್ರಗಳ ಉನ್ನತಿಯಾಗಬೇಕು. ರಾಮ-ಲಕ್ಷ್ಮಣರಿಗೆ ಸಮಾನರಾದ ಕೋಟಿ-ಚೆನ್ನಯರು, ಮಾತೆ ದೇಯಿ ಬೈದ್ಯೆತಿಯ ಕ್ಷೇತ್ರ ಅಭಿವೃದ್ಧಿಗೆ ಕೈಂಕರ್ಯ ತೊಡುವ ಮೂಲಕ ಸುವರ್ಣಾಕ್ಷರದಲ್ಲಿ ಬರೆದಿಡುವ ಸಂದರ್ಭ ಸೃಷ್ಟಿಯಾಗಿದೆ ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

Advertisement

ಮಾತೆ ದೇಯಿ ಬೈದ್ಯೆತಿ ಮತ್ತು ಕೋಟಿ-ಚೆನ್ನಯರ ಮೂಲಸ್ಥಾನವಾಗಿರುವ ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತ್ಲ್‌ನಲ್ಲಿ ಮೂಲಸ್ಥಾನ ಗರಡಿ ಸೇರಿ 9 ಐತಿಹಾಸಿಕ ಸ್ಥಳಗಳ ಪುನರುತ್ಥಾನಕ್ಕೆ ರವಿವಾರ ನಡೆದ ಶಿಲಾನ್ಯಾಸ ಕಾರ್ಕ್ರಮದ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಅಭಿವೃದ್ಧಿಗೆ ಸಹಕಾರ
ಸಭಾ ಕಾರ್ಯಕ್ರಮ ಉದ್ಘಾಟಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಸಾಮಾಜಿಕ ಅಸಮಾನತೆ ವಿರುದ್ಧ ಧ್ವನಿಯೆತ್ತಿ ಹೋರಾಟದ ಕಿಚ್ಚು ಹಚ್ಚಿದವರು ಕೋಟಿ-ಚೆನ್ನಯರು. ಅವರ ಮೂಲ ಕ್ಷೇತ್ರ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಲಾಗುವುದು. ನಾರಾಯಣ ಗುರುಸ್ವಾಮಿ ಅವರ ಸಿದ್ಧಾಂತ ವರ್ತಮಾನ ದಲ್ಲಿ ಅನುಷ್ಠಾನದ ಅಗತ್ಯವಿದೆ. ಪಡುಮಲೆ ಕ್ಷೇತ್ರದ ಮುಡುಪಿನಡ್ಕದಲ್ಲಿ ಮಾತೆ ದೇಯಿ ಬೈದ್ಯೆತಿ ಔಷಧ ವನ ನಿರ್ಮಾಣದ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಿದೆ. 2ನೇ ಹಂತದ ಅಭಿವೃದ್ಧಿ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಬಲಾಡ್ಯತೆ ಹೊಂದಬೇಕು
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರು ಕ್ಷೇತ್ರದ ವೆಬ್‌ಸೈಟ್‌ ಲೋಕಾರ್ಪಣೆ ಮಾಡಿ ಮಾತನಾಡಿ, ಹಿಂದೂ ಧರ್ಮದಲ್ಲೇ ಇದ್ದು ಹಿಂದುಳಿದ ವರ್ಗ ಅನುಭವಿಸುತ್ತಿದ್ದ ಅಸಮಾನತೆಯನ್ನು ವಿರೋಧಿಸಿ ಅವರಿಗಾಗಿ ದೇವಸ್ಥಾನ ಆರಂಭಿಸಿ ಸ್ವಾಭಿಮಾನದ ಬದುಕಿಗೆ ಮೆಟ್ಟಿಲು ಹಾಕಿದವರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಬಿಲ್ಲವ ಸಮುದಾಯದವರು ಸಾಮಾಜಿಕ, ರಾಜಕೀಯವಾಗಿ ಬಲಾಡ್ಯತೆ ಹೊಂದಬೇಕು. ಗೆಜ್ಜೆಗಿರಿ ಕ್ಷೇತ್ರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಒದಗಿಸಲಾಗುವುದು ಎಂದರು.

ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್‌ ಕಂಕನಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಗೆಜ್ಜೆಗಿರಿ ನಂದನ ಸಾಕ್ಷ éಚಿತ್ರ ಬಿಡುಗಡೆಗೊಳಿಸಿದರು. ಸಂಸದೀಯ ಕಾರ್ಯದರ್ಶಿ, ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಶ್ರೀ ಕ್ಷೇತ್ರದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಬೆಳ್ತಂಗಡಿ ಶಾಸಕ ಬಿ.ಕೆ. ವಸಂತ ಬಂಗೇರ ನಿಧಿ ಸಮರ್ಪಣಾ ಪತ್ರ ಬಿಡುಗಡೆಗೊಳಿಸಿದರು.

Advertisement

ಕೇರಳ ವರ್ಕಳ ಶಿವಗಿರಿ ಮಠಾಧೀಶ ಶ್ರೀ ವಿಶುದ್ಧಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭ ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರನಟ, ನಿರ್ಮಾಪಕ ಡಾ| ರಾಜಶೇಖರ ಕೋಟ್ಯಾನ್‌ ಅವರನ್ನು ಸಮ್ಮಾನಿಸಲಾಯಿತು.

ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ವಿನಯ ಕುಮಾರ್‌ ಸೊರಕೆ, ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಮಧು ಬಂಗಾರಪ್ಪ, ರಾಜ್ಯ ಮಹಿಳಾ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಸದಸ್ಯ ರಾಧಾಕೃಷ್ಣ ಬೋರ್ಕರ್‌, ಬಡಗನ್ನೂರು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ, ವಿವಿಧ ಕಡೆಗಳ ಬಿಲ್ಲವ ಸಂಘಗಳ ಪ್ರಮುಖರು, ವಿವಿಧ ಮುಖಂಡರು ವೇದಿಕೆಯಲ್ಲಿದ್ದರು.

ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ಲೀಲಾವತಿ ಪೂಜಾರಿ ಮತ್ತು ಮಕ್ಕಳು, ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಕಾರ್ಯಾಧ್ಯಕ್ಷರಾದ ಪೀತಾಂಬರ ಹೇರಾಜೆ, ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಸುಧಾಕರ ಸುವರ್ಣ, ಉಲ್ಲಾಸ್‌ ಕೋಟ್ಯಾನ್‌, ಕೋಶಾಧಿಕಾರಿ ದೀಪಕ್‌ ಕೋಟ್ಯಾನ್‌, ದೇಯಿ-ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡರು.

ಕ್ಷೇತ್ರದಲ್ಲಿ ಪುನರುತ್ಥಾನ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಅವಿಭಜಿತ ದ.ಕ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದ ಭಕ್ತರ ವಾಹನ ಜಾಥಾಕ್ಕೆ ಪುತ್ತೂರು ದರ್ಬೆ ಬೈಪಾಸ್‌ ವೃತ್ತದ ಬಳಿ ಚಾಲನೆ ನೀಡಲಾಯಿತು. ಬಳಿಕ ವಾಹನ ಜಾಥಾ ಕ್ಷೇತ್ರದತ್ತ ಸಾಗಿಬಂತು.

ಹುಟ್ಟೂರ ಆರಾಧನೆ ಸೌಭಾಗ್ಯ
ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರಿಗೆ 500 ವರ್ಷಗಳ ಅನಂತರ ಮೊದಲ ಬಾರಿಗೆ ಹುಟ್ಟೂರಿನಲ್ಲಿ ಆರಾಧನೆ ನಡೆಯುವ ಸೌಭಾಗ್ಯ ಬಂದಿದೆ. ಮಾತೆ ದೇಯಿ ಬೈದ್ಯೆತಿ ಮತ್ತು ಕೋಟಿ-ಚೆನ್ನಯರ ಮೂಲಸ್ಥಾನವಾಗಿರುವ ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತ್ಲ್‌ನಲ್ಲಿ ಮೂಲಸ್ಥಾನ ಗರಡಿ ಸೇರಿ 9 ಐತಿಹಾಸಿಕ ಸ್ಥಳಗಳ ಪುನರುತ್ಥಾನಕ್ಕೆ 20,000ಕ್ಕೂ ಮಿಕ್ಕಿ ಭಕ್ತರ ಉಪಸ್ಥಿತಿಯಲ್ಲಿ ರವಿವಾರ ಶಿಲಾನ್ಯಾಸ ನಡೆಯಿತು.

ಪುನರುತ್ಥಾನಕ್ಕೆ ಶಿಲಾನ್ಯಾಸ
ಕೋಟಿ-ಚೆನ್ನಯ ಮೂಲಸ್ಥಾನ ಗರಡಿ ನಿರ್ಮಾಣ, ಗರಡಿಯ ಬಾಹ್ಯದಲ್ಲಿ ಬೆರ್ಮೆರ್‌ ಗುಂಡ, ಗೆಜ್ಜೆಗಿರಿಯ ತಪ್ಪಲಲ್ಲಿ 450 ವರ್ಷಗಳಿಂದಲೂ ಸುಪ್ತವಾಗಿರುವ ಮಾತೆ ದೇಯಿ ಬೈದ್ಯೆತಿಯ ಸಮಾಧಿಗೆ ಹೊಸ ರೂಪ, ಚಾರಿತ್ರಿಕ ಮಹತ್ವ ಹೊಂದಿರುವ ಸರೋಳಿ ಸೈಮಂಜ ಕಟ್ಟೆ ಅಭಿವೃದ್ಧಿ, ಸಾಯನ ಬೈದ್ಯರು, ದೇಯಿ ಬೈದ್ಯೆತಿ ಮತ್ತು ಕೋಟಿ-ಚೆನ್ನಯರು ಬಾಳಿ ಬೆಳಗಿದ್ದ ಮನೆಗೆ ಮತ್ತೆ ಪಾರಂಪರಿಕ ರೂಪ ಕೊಟ್ಟು ಭವ್ಯ ಧರ್ಮ ಚಾವಡಿ ನಿರ್ಮಾಣ, ಧರ್ಮದೈವ ಧೂಮಾವತಿ ದೈವಸ್ಥಾನ, ಜೀರ್ಣಾವಸ್ಥೆ ತಲುಪಿರುವ ಕುಪ್ಪೆ ಪಂಜುರ್ಲಿ ದೈವಸ್ಥಾನ ಪುನರ್‌ ನಿರ್ಮಾಣ, ಕಲ್ಲಾಲ್ದಾಯ ಸಾನ್ನಿಧ್ಯ, ಆನುವಂಶಿಕ ಮೊಕ್ತೇಸರರ ಮನೆ ನಿರ್ಮಾಣಕ್ಕೆ ಕ್ಷೇತ್ರದ ತಂತ್ರಿವರ್ಯ ಲೋಕೇಶ್‌ ಶಾಂತಿ ಪೌರೋಹಿತ್ಯದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next