Advertisement

ಯುಜಿಡಿ ಬಳಸಿ ನಗರದ ಸ್ವಚ್ಛತೆಯನ್ನು ಕಾಪಾಡಿ : ಶಾಸಕ ಸವದಿ

06:54 PM Jan 31, 2022 | Team Udayavani |

ರಬಕವಿ-ಬನಹಟ್ಟಿ : ರಬಕವಿ-ಬನಹಟ್ಟಿ ನಗರಸಭೆಯ ಸಮಾನ್ಯ ಸಭೆ ನಗರಸಭೆ ಅಧ್ಯಕ್ಷ  ಶ್ರೀಶೈಲ ಬೀಳಗಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

Advertisement

ಸೋಮವಾರ ರಾಮಪುರನ ನಗರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಒಟ್ಟು 20ಕ್ಕೂ ಹೆಚ್ಚೂ ವಿಷಯಗಳ ಕುರಿತು ಚರ್ಚಿಸಲಾಯಿತು.

ಈ ವೇಳೆ ಶಾಸಕ ಸಿದ್ದು ಸವದಿ ಮಾತನಾಡಿ, ನಗರಸಭೆಯಾದ್ಯಂತ ಯುಜಿಡಿ ಕಾರ್ಯ ಶೇ. 50 ರಷ್ಟು ಪೂರ್ಣಗೊಂಡಿದ್ದು, ನಗರದ ಸ್ವಚ್ಛತೆ ದೃಷ್ಠಿಯಿಂದ ಪ್ರತಿಯೊಬ್ಬರು ಯುಜಿಡಿಯ ಸಂಪರ್ಕ ಪಡೆದುಕೊಳ್ಳುವುದು ಅವಶ್ಯವಾಗಿದೆ. ಇಲ್ಲವಾದಲ್ಲಿ ನಗರಸಭೆಯ ಯಾವುದೇ ಉತಾರೆ ಸೇರಿದಂತೆ ಸೌಲಭ್ಯಗಳನ್ನು ನೀಡುವುದಿಲ್ಲ. ಈ ಕುರಿತು ನಗರಸಭೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಯುಜಿಡಿ ಬಳಸಿ ನಗರದ ಸ್ವಚ್ಛತೆಯನ್ನು ಕಾಪಾಡಿ ಎಂದು ತಿಳಿಸಿದರು.

ನಗರಸಭೆಯ ಎಲ್ಲ ವಿಭಾಗಗಳ ಟೆಂಡರ್‌ಗಳು ಮುಗಿಯುವ ಮುಂಚೆ ಅವುಗಳಿಗೆ ಟೆಂಡರ್ ಕರೆಯಬೇಕು ಎಂದು ಸದಸ್ಯ ಅರುಣ ಬುದ್ನಿ ಆಗ್ರಹಿಸಿದಾಗ ಪೌರಾಯುಕ್ತ ಶ್ರೀನಿವಾಸ ಜಾಧವ ಟೆಂಡರ್‌ಗಳನ್ನು ನಿಗದಿತ ಅವಧಿಯ ಮುಂಚಿತವಾಗಿ ರೆಡಿ ಮಾಡಿಟ್ಟುಕೊಂಡು ಅವಧಿಯ ಒಳಗಾಘಿ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚಿಸಿದರು.

ನಗರ ಯೋಜನಾ ಪ್ರಾಧಿಕಾರಕ್ಕೆ ಜಾಗೆ ಮಂಜೂರ ಮಾಡಲು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನದ ಉತಾರೆ ಮಾಡಿಕೊಡಲು ಸಭೆ ಠರಾವು ಪಾಸ್ ಮಾಡಿ ಮುಂದಿನ ಕ್ರಮಕ್ಕಾಗಿ ಸಕ್ಷಮ ಅಧಿಕಾರಕ್ಕೆ ಕಳುಹಿಸಲು ತಿಳಿಸಲಾಯಿತು.

Advertisement

ನಗರಸಭೆ ಆಸ್ತಿಗಳನ್ನು ಉಳಿಸಿ ಎಂಬ ಕೂಗು ಸಾಮನ್ಯ ಸಭೆಯಲ್ಲಿ ಕೇಳಿ ಬಂತು. ನಗರಸಭೆ ಸದಸ್ಯರಾದ ಅರುಣ ಬುದ್ನಿ, ಪ್ರಭಾಕರ ಮೊಳೇದ, ಇನೂಸ್ ಚೌಗಲಾ, ಶಿವಾನಂದ ಬುದ್ನಿ ಮಾತನಾಡಿ ನಮ್ಮ ನಗರಸಭೆ ವ್ಯಾಪ್ತಿಯಲ್ಲಿರುವ ನಗರಸಭೆ ಉದ್ಯಾನವನದ ಜಾಗೆಗಳು ಏಷ್ಟು ಇವೆ. ಅವುಗಳಿಗೆ ಮೊದಲು ತಂತಿ ಬೇಲಿ ಅಥವಾ ಗೋಡೆ ನಿರ್ಮಿಸಿ ಈ ಕುರಿತು ಹಲವಾರು ಸಭೆಗಳಲ್ಲಿ ಹೇಳಿದರು ಅಧಿಕಾರಗಳು ಕ್ಯಾರೆ ಎನ್ನುತ್ತಿಲ್ಲ. ಅಲ್ಲದೇ ನಗರದ ರಸ್ತೆಗಳು ಕಿರಿದಾಗುತ್ತಾ ಹೋಗುತ್ತಿವೆ. ಈ ಕುರಿತು ಕಡಿವಾಣ ಹಾಕಿ ಕೂಡಲೇ ನಗರಸಭೆ ಆಸ್ತಿ ಎಷ್ಟಿವೆ ಎಷ್ಟು ಅತಿಕ್ರಮಣಗೊಂಡಿವೆ ಎಂಬುದು ತಿಳಿಸಬೇಕು ಎಂದರು.

ಇದನ್ನೂ ಓದಿ : ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸಬಾರದು: ಈಶ್ವರಪ್ಪಗೆ ಮನವಿ

ಈ ಸಂದರ್ಭದಲ್ಲಿ ಪೌರಾಯುಕ್ತ ಶ್ರೀನಿವಾಸ ಜಾಧವ ಮಾತನಾಡಿ, ಅಧಿಕಾರಿಗಳು ಒಂದು ತಿಂಗಳೊಳಗಾಗಿ ಎಲ್ಲ ನಗರಸಭೆಯ ವಾರ್ಡ್ ಗಳ ಬಗ್ಗೆ ಸರ್ವೆ ಮಾಡಿ ವರದಿ ಸಲ್ಲಿಸಬೇಕು. ಇಲ್ಲವಾದರೆ ಅಂತಹ ಅಧಿಕಾರಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಲುಷಿತ ನೀರು ನದಿಗೆ, ಕೆರೆಗೆ ಸೇರದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ಸೂಚಿಸಿದ್ದು ಆ ಹಿನ್ನಲೆಯಲ್ಲಿ ಶಾಸಕರ ಗಮನಕ್ಕೆ ತಂದಿದ್ದು, ನಗರಸಭೆಯ ಕಲುಷಿತ ನೀರು ನದಿಗೆ ಸೇರದಂತೆ ತಡೆಯುವ ನಿಟ್ಟಿನಲ್ಲಿ ಬೃಹತ್ ಪ್ರಮಾಣದ ಚರಂಡಿ ನಿರ್ಮಾಣ ಮಾಡಲು ಕ್ರಿಯಾ ಯೋಜನೆ ತಯಾರಿಸಿ, ಎಷ್ಟು ಅನುದಾನ ಬೇಕಾಗುತ್ತದೆ ಎಂಬುದನ್ನು ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಬೇಕಾಗಿದ್ದು ಸದಸ್ಯರು ಠರಾವು ಪಾಸು ಮಾಡಬೇಕು ಎಂದರು. ಅದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ನಳದ ತೆರಿಗೆ 2ಕೋಟಿ 22 ಲಕ್ಷ 3 ಸಾವಿರ ಬಾಕಿ ! : ನಗರಸಭೆಯಾದ್ಯಂತ ನಳದ ತೆರಿಗೆ ಬಾಕಿ 2ಕೋಟಿ 22 ಲಕ್ಷ 3 ಸಾವಿರ ಇದ್ದು ಮಾರ್ಚ್ ವೇಳೆಗೆ ಎಲ್ಲ ಬಾಕಿ ವಸೂಲಿ ಮಾಡಲಾಗುವುದು. ಈ ಕುರಿತು ಒಂದು ತಂಡವನ್ನು ರಚಿಸಲಾಗುವುದು. ಅನಧಿಕೃತ ನಳಗಳನ್ನು ಪಡೆದವರು ಹಾಗೂ ಬಾಕಿ ಉಳಿಸಿಕೊಂಡವರು ಆದಷ್ಟು ಬೇಗನೆ ಹಣ ತುಂಬಿ ನಳಗಳನ್ನು ಅಧಿಕೃತ ಗೊಳಿಸಬೇಕು ಹಾಗೂ ಬಾಕಿ ಇರುವವರು ಬಾಕಿ ತುಂಬಿ ನಗರಸಭೆಗೆ ಸಹಕರಿಸಬೇಕು ಇಲ್ಲವಾದಲ್ಲಿ ಅಂತವರ ವಿರುದ್ದ ಸೂಕ್ತ ಕ್ರಮತೆಗೆದುಕೊಳ್ಳಲಾಗುವುದು ಎಂದು ಪೌರಾಯುಕ್ತರು ಖಡಕ ಸಂದೇಶ ರವಾನಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಬಾಳವ್ವ ಕಾಖಂಡಕಿ, ನಗರಸಬೆ ಸದಸ್ಯರಾದ ಗೌರಿ ಮಿಳ್ಳಿ, ಜಯಶ್ರೀ ಬಾಗೇವಾಡಿ, ದೀಪಾ ಕೊಣ್ಣೂರ, ಸಂಜಯ ತೆಗ್ಗಿ, ಶ್ರೀಶೈಲ ಆಲಗೂರ, ಚಿದಾನಂದ ಹೊರಟ್ಟಿ, ವಿಜಯ ಕಲಾಲ, ಬಸವರಾಜ ಗುಡೋಡಗಿ, ರೇಖಾ ಕೊರ್ತಿ, ವಿದ್ಯಾ ಧಬಾಡಿ, ನಗರಸಭೆ ಅಧಿಕಾರಿಗಳಾದ ಬಸವರಾಜ ಶರಣಪ್ಪನವರ, ಬಿ. ಎಂ. ಡಾಂಗೆ, ಸುಭಾಸ ಖುದಾನಪುರ, ವೈಶಾಲಿ ಹಿಪ್ಪರಗಿ, ರಮೇಶ ಮಳ್ಳಿ, ಎಂ. ಎಂ. ಮುಘಳಖೋಡ, ವಿ. ಆಯ್. ಬೀಳಗಿ, ಶೋಭಾ ಹೊಸಮನಿ, ರಾಜಕುಮಾರ ಹೊಸೂರ, ಸಂಗೀತಾ ಕೋಳಿ ಸೇರಿದಂತೆ ಅನೇಕ ಸದಸ್ಯರು ಹಾಗೂ ನಗರಸಭೆ ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next