Advertisement

ಸಿದ್ದು ಚುನಾವಣೆಲಿ ಗೆಲ್ಲದಂತೆ ನೋಡಿಕೊಳ್ಳಿ

12:01 PM Oct 27, 2017 | Team Udayavani |

ಮೈಸೂರು: ತವರು ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದರೂ ಸಿದ್ದರಾಮಯ್ಯ ಅವರನ್ನು ಗೆಲ್ಲದಂತೆ ನೋಡಿಕೊಳ್ಳಲು ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಜಿಲ್ಲಾ ಬಿಜೆಪಿ ಹಾಗೂ ರೈತ ಮೋರ್ಚಾ ಘಟಕದಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ರೈತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಿದ್ದರಾಮಯ್ಯ 2018ರ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುವುದರ ಜೊತೆ ಜೊತೆಗೆ ಗೆ ನ.2ರಿಂದ ಆರಂಭವಾಗಲಿರುವ ಪಕ್ಷ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಪ್ರತಿ ನಿತ್ಯ ಒಂದು ಹಗರಣವನ್ನು ಬಯಲು ಮಾಡಿ, ಸಿದ್ದರಾಮಯ್ಯ ಸರ್ಕಾರವನ್ನು ರಸ್ತೆಯಲ್ಲಿ ಹರಾಜು ಹಾಕುತ್ತೇವೆ ಎಂದು ಗುಡುಗಿದರು. 

ಸುವರ್ಣ ಕರ್ನಾಟಕದ ಭವ್ಯಕನಸು ನನಸು ಮಾಡಲು 3 ತಿಂಗಳ ಕಾಲ ರಾಜ್ಯ ಪ್ರವಾಸ ಮಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ ಜನರಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ತುಘಲಕ್‌ ದರ್ಬಾರ್‌ ಮನವರಿಕೆ ಮಾಡಿಕೊಡುವ ಜತೆಗೆ ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಿರುವುದಾಗಿ ಹೇಳಿದರು.

ಮೈಸೂರಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ. ಜ.28ರ ಪರಿವರ್ತನಾ ಯಾತ್ರೆ ಸಮಾರೋಪದಲ್ಲಿ ಪ್ರಧಾನಿ ನರೇಂದ್ರಮೋದಿ ಭಾಗವಹಿಸಲಿದ್ದಾರೆಂದರು. ಸ್ಥಳೀಯವಾಗಿಯೂ ಬೇರೆ ಪಕ್ಷದ ಮುಖಂಡರು ಬಿಜೆಪಿ ಸೇರುವಂತೆ ನೋಡಿಕೊಳ್ಳಿ ಎಂದು ತಮ್ಮ ಪಕ್ಷದ ಮುಖಂಡರಿಗೆ ಸಲಹೆ ನೀಡಿದರು.

ಕಮೀಷನ್‌ ಏಜೆಂಟ್‌: ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿನ ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಗಳಲ್ಲಿನ ಯಾವುದೇ ಕಾಮಗಾರಿಗಳಿಗೆ ಅಂದಾಜು ವೆಚ್ಚಕ್ಕಿಂತ ಶೇ.25ರಿಂದ 30ರಷ್ಟು ಹೆಚ್ಚು ಮೊತ್ತದ ಅಂದಾಜುಪಟ್ಟಿ ತಯಾರಿಸಿ, ಆ ಹಣದ ಕಮೀಷನ್‌ ಪಡೆದ ನಂತರ ಕಾಮಗಾರಿ ಮಂಜೂರಾತಿ ನೀಡಲಾಗುತ್ತಿದೆ. ಸರ್ಕಾರದ ಖಜಾನೆಯನ್ನು ಈ ಸರ್ಕಾರ ಮನಬಂದಂತೆ ಲೂಟಿ ಹೊಡೆದು, ಹಗಲು ದರೋಡೆ ಮಾಡುತ್ತಿದೆ ಎಂದು ಆರೋಪಿಸಿದರು.

Advertisement

ರಾಜ್ಯದಲ್ಲಿ ಉಂಟಾದ ಅತಿವೃಷ್ಟಿ, ಅನಾವೃಷ್ಟಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣ ಬಿಟ್ಟರೆ, ರಾಜ್ಯಸರ್ಕಾರ ನಯಾಪೈಸೆ ಕೊಟ್ಟಿಲ್ಲ ಎಂದು ಸ್ವತಃ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಬೆಂಗಳೂರಲ್ಲಿ ಮೂಲೆ ನಿವೇಶನಗಳನ್ನು ಸಾವಿರ ಕೋಟಿ ರೂ.ಗೆ ಒತ್ತೆ ಇಟ್ಟಿದೆ. ಎಂಎಂಎಲ್‌ನ 1400 ಕೋಟಿ ರೂ. ಹಣದ ಮೇಲೆ ಕಣ್ಣು ಹಾಕಿದೆ ಎಂದು ದೂರಿದರು.

ಲಾಭ ದೊರೆತಿಲ್ಲ: ರೈತರ ಸಾಲಮನ್ನಾ ಮಾಡಿ 120 ದಿನ ಕಳೆದರೂ ಈವರೆಗೆ ರೈತರಿಗೆ ಯೋಜನೆ ಲಾಭ ದೊರೆತಿಲ್ಲ. ಇದೊಂದು ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು. ವಿಧಾನಪರಿಷತ್‌ ಸದಸ್ಯ ಡಿ.ಎಸ್‌.ವೀರಯ್ಯ, ಮಾಜಿ ಸಚಿವ ಎಸ್‌.ಎ.ರಾಮದಾಸ್‌, ಮಾಜಿ ಸಂಸದೆ ತೇಜಸ್ವನಿ ರಮೇಶ್‌, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌,

-ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಪ್ರಸನ್ನ ಎನ್‌.ಗೌಡ, ಮುಖಂಡರಾದ ಡಿ.ಮಾದೇಗೌಡ, ಗೋ.ಮಧುಸೂದನ್‌, ಎ.ಆರ್‌.ಕೃಷ್ಣಮೂರ್ತಿ, ಸಿ.ರಮೇಶ್‌, ತೋಂಟದಾರ್ಯ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಬಿ.ಸಿದ್ದರಾಜು, ಆರ್‌.ರಘು, ಯಶಸ್ವಿನಿ ಸೋಮಶೇಖರ್‌, ಎಲ್‌.ನಾಗೇಂದ್ರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next