Advertisement

ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ಇಂತ ಭ್ರಷ್ಟ ಸರ್ಕಾರವನ್ನ ನೋಡಿಲ್ಲ : ಸಿದ್ದು ವಾಗ್ದಾಳಿ

07:39 PM Apr 19, 2022 | Team Udayavani |

ಚಾಮರಾಜನಗರ: ದೇಶ ಮತ್ತು ರಾಜ್ಯದಲ್ಲಿ ಜನವಿರೋಧಿ, ರೈತ ವಿರೋಧಿ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ಸರ್ಕಾರವನ್ನು ನಾವು ನೋಡುತ್ತಿದ್ದೇವೆ. ಇಷ್ಟು ಭ್ರಷ್ಟ , ಸುಳ್ಳು ಹೇಳುವ, ಅಶಾಂತಿ ನಿರ್ಮಾಣ ಮಾಡಿ, ದ್ವೇಷದ ವಿಷ ಬೀಜ ಬಿತ್ತುವ ಸರ್ಕಾರವನ್ನು ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ನೋಡಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

Advertisement

ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನ ಬಂಧಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ, ನಗರದ ಮಾರಿಗುಡಿ ಮುಂಭಾಗ, ಮಂಗಳವಾರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಹಿಂದೆಂದು ಕೇಳರಿಯದ ಭ್ರಷ್ಟ ಸರ್ಕಾರ ಇದೆ. ಇದನ್ನು ಕಾಂಗ್ರೆಸ್‌ನವರು ಹೇಳುತ್ತಿಲ್ಲ. ಇಡೀ ರಾಜ್ಯದ ಜನರು, ಅಧಿಕಾರಿಗಳು ಮಾತನಾಡುತ್ತಿದಾರೆ. 2021ರ ಜೂನ್ 7 ರಂದು ರಾಜ್ಯ ಗುತ್ತಿಗೆದಾರರ ಸಂಘದವರು ದೇಶದ ಪ್ರಧಾನಿ ನರೇಂದ್ರಮೋದಿಯವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದ ಕಾಮಗಾರಿಗಳಿಗೆ ಗುತ್ತಿಗೆ ಮಾಡಬೇಕಾದರೆ ಅದಕ್ಕೆ ಶೇ. 40 ಕಮಿಷನ್ ಕೊಡಬೇಕು. ನಾವು 40 ಪರ್ಸೆಂಟ್ ಕಮಿಷನ್ ಕೊಟ್ಟು ಗುಣಮಟ್ಟದ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಈ ರಾಜ್ಯ ಸರ್ಕಾರ ಕಿರುಕುಳ ನೀಡುತ್ತಿದೆ. ದಯಮಾಡಿ ಇದನ್ನು ತಪ್ಪಿಸಿ, ಕೂಡಲೇ ಕ್ರಮ ಕೈಗೊಳ್ಳಿ ಎಂದು ಗುತ್ತಿಗೆದಾರರ ಸಂಘದ ಕೆಂಪಣ್ಣ ಎಂಬುವರು ಪತ್ರ ಬರೆದರು. ಕರ್ನಾಟಕದ ಇತಿಹಾಸದಲ್ಲಿ 75 ವರ್ಷಗಳ ಸ್ವಾತಂತ್ರ್ಯಾನಂತರ, ಗುತ್ತಿಗೆದಾರರ ಸಂಘದವರು ಪತ್ರದ ಮೂಲಕ ಶೇ. 40 ಲಂಚ ಹೊಡೆಯುತ್ತಿದ್ದಾರೆ ಎಂದು ಪ್ರಧಾನಿಯವರಿಗೆ ಪತ್ರ ಬರೆದಿರುವುದು ಇದೇ ಮೊದಲು ಎಂದು ಅವರು ಟೀಕಿಸಿದರು.

2018ರಲ್ಲಿ ಪ್ರಧಾನಿ ನರೇಂದ್ರಮೋದಿ ರಾಜ್ಯಕ್ಕೆ ಬಂದು ಚುನಾವಣಾ ಭಾಷಣ ಮಾಡಿದ್ದರು. ಸಿದ್ದರಾಮಯ್ಯ ಸರ್ಕಾರ, 10 ಪರ್ಸೆಂಟ್ ಸರ್ಕಾರ ಎಂದು ಟೀಕಿಸಿದ್ದರು. ನಿಮ್ಮ ಬಳಿ ಅಧಿಕಾರ ಇದೆ. ನಿಮ್ಮ ಬಳಿ ಅನೇಕ ಏಜೆನ್ಸಿಗಳಿವೆ. ನಿಮಗೆ ಮಾಹಿತಿ, ದಾಖಲಾತಿ ಇದ್ದರೆ ತನಿಖೆ ಮಾಡಿಸಿ. ಆಧಾರ ರಹಿತ ಆರೋಪ ಮಾಡಬೇಡಿ ಎಂದು ಪ್ರಧಾನಿಯವರಿಗೆ ಆಗ್ರಹಿಸಿದ್ದೆ. ಇವತ್ತು, ನಿಮಗೆ ಗುತ್ತಿಗೆದಾರ ಸಂಘದವರು ಪತ್ರ ಬರೆದಿದ್ದಾರೆ. ಏಕೆ ಮೌನ ವಾಗಿದ್ದೀರಿ? ಭ್ರಷ್ಟಾಚಾರಕ್ಕೆ ನಿಮ್ಮ ಕುಮ್ಮಕ್ಕಿದೆ ಎಂದು ಇದರ ಅರ್ಥ ಎಂದು ಆರೋಪಿಸಿದರು.

ಇದನ್ನೂ ಓದಿ : ಕೃಷಿ ಸಚಿವರ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ಸಾಗುತ್ತಿದ್ದವರು ರಸ್ತೆ ಅಪಘಾತದಲ್ಲಿ ಸಾವು

Advertisement

1 ಕೋಟಿ 20 ಲಕ್ಷ ಟನ್ ಡಿಎಪಿ ಒಂದು ವರ್ಷಕ್ಕೆ ಖರ್ಚಾಗುತ್ತದೆ. ಇದಕ್ಕೆ ಹಾಕುವ ತೆರಿಗೆಯಿಂದ 3600 ಕೋಟಿ ತೆರಿಗೆ ಲೂಟಿ ಮಾಡಲಾಗಿದೆ. ಭತ್ತ , ತೊಗರಿ, ಮೆಕ್ಕಜೋಳ, ರಾಗಿ, ಅರಿಶಿನ ಕೊಳ್ಳುವವರಿಲ್ಲ. ಯಾಕೆ ಸರ್ಕಾರದಲ್ಲಿದ್ದೀರಿ? ನಿಮಗೆ ತಾಕತ್ತಿದ್ದರೆ ಕುರ್ಚಿಯಲ್ಲಿರಿ. ಇಲ್ಲದಿದ್ದರೆ ಅಧಿಕಾರದಿಂದ ಇಳಿಯಿರಿ.

ಈ ಸರ್ಕಾರ ಬಂದು 3 ವರ್ಷಗಳಾಯಿತು. ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ನಾಚಿಗೆ ಆಗಲ್ಲ ನಿಮಗೆ. ನಾನು ಕೊಟ್ಟಿದ್ದ ಹಣವನ್ನೇ ಬಿಡುಗಡೆ ಮಾಡಿಲ್ಲ. ನಾನು ಸಿಎಂ ಆಗಿದ್ದಾಗ 5 ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಿದ್ದೆವು. ಇವರ ಯೋಗ್ಯತೆಗೆ ಒಂದು ಮನೆ ಮಂಜೂರು ಮಾಡಿಲ್ಲ. ಇದು ರೈತ, ಪರಿಶಿಷ್ಟರ ಪರವಾಗಿರುವ ಸರ್ಕಾರವೇ? ಎಂದು ಪ್ರಶ್ನಿಸಿದರು.

ಆರೋಗ್ಯ ಸಚಿವ ಅತ್ಯಂತ ಭ್ರಷ್ಟ:
ಲಂಚ, ಲಂಚ, ಲಂಚ, ಕೋವಿಡ್ ರೋಗ ಬಂದಿದ್ದಾಗ 2300 ಕೋಟಿ ಭ್ರಷ್ಟಾಚಾರ ನಡೆಸಿದರು. ಅತ್ಯಂತ ಭ್ರಷ್ಟ ಇಲಾಖೆ ಆರೋಗ್ಯ ಇಲಾಖೆ, ಅತ್ಯಂತ ಭ್ರಷ್ಟ ಮಂತ್ರಿ ಆರೋಗ್ಯ ಮಂತ್ರಿ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಗುತ್ತಿಗದಾರ , ಅಮಾಯಕ ಸಂತೋಷ್ ಪಾಟೀಲ್ ಸಾಮಾನ್ಯ ಕುಟುಂಬದಿಂದ ಬಂದವರು. 4 ಕೋಟಿ ಕೆಲಸ ಮಾಡಿದ್ದರು. ಜಾತ್ರೆ ಗೆ ರಸ್ತೆ ಮಾಡಬೇಕು ಎಂದು ಈಶ್ವರಪ್ಪ ಸೂಚನೆ ನೀಡಿದರು. ಕೆಲಸ ಮಾಡಿದ ನಂತರ ಹಣ ನೀಡಲಿಲ್ಲ. ಶೇ. 40 ಕಮಿಷನ್ ಕೊಡಬೇಕು ಎಂದು ಹೇಳಿದರು. ಸಂತೋಷ್ ಕೆ ಪಾಟೀಲ್, ಆರ್‌ಡಿಪಿಆರ್ ಸಚಿವರಿಗೆ ಪತ್ರ ಬರೆದಿದ್ದಾನೆ. ಶೇ. 40ರಷ್ಟು ಕಮಿಷನ್ ಕೊಡಲು ಸಾಧ್ಯವಿಲ್ಲ. ಎಂದು ಹೇಳಿದ್ದಾನೆ. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರು.

ಸಂತೋಷ್ ತಮ್ಮ, ಪ್ರಶಾಂತ್ ಅವರ ತಾಯಿ ಮತ್ತು ಹೆಂಡತಿ ಎಲ್ಲರೂ, ಸಂತೋಷ್ ಸಾವಿಗೆ ಈಶ್ವರಪ್ಪನವರೇ ಕಾಣ ಎಂದು ಹೇಳಿದ್ದಾರೆ. ಸಂತೋಷ್ ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಬರೆದಿದ್ದಾರೆ. ಇಷ್ಟಾದರೂ, ಎಫ್‌ಐಆರ್‌ನಲ್ಲಿ ಲಂಚ ನಿರೋಧಕ ಕಾಯ್ದೆಯಡಿ ಪ್ರಕರಣ ದಾಖಲಾಗಲಿಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಆಂಟಿ ಕರಪ್ಷನ್ ಕೇಸ್ ದಾಖಲಿಸಬೇಕು. ಈಶ್ವರಪ್ಪನವರನ್ನು ದಸ್ತಗಿರಿ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಅನುದಾನ ಪಡೆಯಲು ದಿಂಗಾಲೇಶ್ವರರು ಲಂಚ ನೀಡಿದ್ದು ತಪ್ಪಲ್ಲವೇ :ಯತ್ನಾಳ್

ಸಂತೋಷ್ ಕುಟುಂಬದವರಿಗೆ 1 ಕೋಟಿ ರೂ. ಪರಿಹಾರ ಕೊಡಿ. ಅವರ ಪತ್ನಿಗೆ ಸರ್ಕಾರಿ ನೌಕರಿ ಕೊಡಿ. ಇದು ನಮ್ಮ ಒತ್ತಾಯ. ಇದಕ್ಕೆಲ್ಲ ಕುಮ್ಮಕ್ಕು ಕೊಡುತ್ತಿರುವವರು ಸಿಎಂ ಬಸವರಾಜ ಬೊಮ್ಮಾಯಿ. ಅವರಿಗೆ ಕುರ್ಚಿಯಲ್ಲಿ ಉಳಿಯಲು ನೈತಿಕತೆ ಇಲ್ಲ. ಪ್ಲೀಸ್ ಗೆಟ್ ಔಟ್ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಮುಂದಿನ ಚುನಾವಣೆಯಲ್ಲಿ ಈ ಭ್ರಷ್ಟಾಚಾರಿ ಸರ್ಕಾರವನ್ನು ಕಿತ್ತೊಗೆಯಬೇಕು. ಇವರು ರಾಷ್ಟ್ರಭಕ್ತರಲ್ಲ, ರಾಷ್ಟ್ರದೊ್ರೀಹಿಗಳು. ಇವರು ಅಧಿಕಾರಲ್ಲಿರಲು ಯೋಗ್ಯರಲ್ಲ. ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಬೇಕು. ಹಿಜಾಬ್, ಹಲಾಲ್, ಭಗವದ್ಗೀತೆ, ಆಜಾನ್ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದ್ದಾರೆ. ಇವರ ವೈಫಲ್ಯವನ್ನು ಮುಚ್ಚಿಕೊಳ್ಳಲು, ಸುಳ್ಳು ಹೇಳಿ, ದ್ವೇಷದ ಬೀಜ ಬಿತ್ತುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕರಾದ ಪುಟ್ಟರಂಗಶೆಟ್ಟಿ, ನರೇಂದ್ರ, ಡಾ. ತಿಮ್ಮಯ್ಯ ಮಾತನಾಡಿದರು. ಡಿಸಿಸಿ ಅಧ್ಯಕ್ಷ ಪಿ. ಮರಿಸ್ವಾಮಿ, ಮಾಜಿ ಸಂಸದರಾದ ಎ. ಸಿದ್ದರಾಜು, ಎಂ. ಶಿವಣ್ಣ, ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ,ಜಯಣ್ಣ, ಕಾಂಗ್ರೆಸ್ ಮಹಿಳಾ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರನಾಥ್, ಚಾಮುಲ್ ಅಧ್ಯಕ್ಷ ನಂಜುಂಡಪ್ರಸಾದ್, ಮುಖಂಡರಾದ ಗಣೇಶ್‌ಪ್ರಸಾದ್, ಎಚ್.ಎಸ್.ನಂಜಪ್ಪ, ಕೆ.ಪಿ. ಸದಾಶಿವಮೂರ್ತಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಉಪಸ್ಥಿತರಿದ್ದರು.

ನರೇಂದ್ರಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಇದುವರೆಗೆ ಬಂದಿರಲಿಲ್ಲ
ಚಾಮರಾಜನಗರ: ನಾನು ಈ ದೇಶದ ಚೌಕಿದಾರ. ಕಾವಲುಗಾರ. ನ ಖಾವೂಂಗಾ, ನ ಖಾನೇ ದೂಂಗಾ? ನಾನು ತಿನ್ನಲ್ಲ, ತಿನ್ನಲು ಬಿಡಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದರು. ಗುತ್ತಿಗೆದಾರರ ಸಂಘದವರು ಕರ್ನಾಟಕದಲ್ಲಿ 40 ಪರ್ಸೆಂಟ್ ಕಮಿಷನ್ ಕೊಡಬೇಕು ಎಂದು ಹೇಳಿದರೂ, 9 ತಿಂಗಳಿಂದ ಸುಮ್ಮನೆ ಇದ್ದೀರಲ್ಲ ನರೇಂದ್ರ ಮೋದಿಯವರೇ? ನಿಮ್ಮ ಮಾತು ಎಲ್ಲಿ ಹೋಯಿತು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಬೂಟಾಟಿಕೆ, ನಾಟಕ, ಸುಳ್ಳು ಹೇಳುವುದು, ಜನರನ್ನು ದಾರಿ ತಪ್ಪಿಸುವುದು. ಇದೇ ನಿಮ್ಮ ಕೆಲಸ. ಸ್ವತಂತ್ರ ಭಾರತದಲ್ಲಿ ಅನೇಕ ಪ್ರಧಾನಿ ಬಂದು ಹೋಗಿದ್ದಾರೆ. ಆದರೆ ನರೇಂದ್ರಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಇದುವರೆಗೂ ಬಂದಿಲ್ಲ. ಇದು ಆರೋಪವಲ್ಲ. ಇದು ಕಟು ಸತ್ಯ.

ನೀವು ಕೊಟ್ಟಿರುವ ಭರವಸೆಗಳನ್ನು ಯಾವುದನ್ನು ಈಡೇರಿಸಿದ್ದೀರಿ? ಅಚ್ಚೇ ದಿನ್ ಬರುತ್ತವೆ ಎಂದು ಹೇಳಿದ್ದೀರಿ. 14.2 ಕೆಜಿ ಅಡುಗೆ ಅನಿಲ ಸಿಲಿಂಡರ್‌ಗೆ ಮನ ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, 414 ರೂ. ಇವತ್ತು 1000 ರೂ. ಆಗಿದೆ. 586 ರೂ ಜಾಸ್ತಿಯಾಯಿತು. ಇದಕ್ಕೆ ಯಾರು ಕಾರಣ? ಇದಕ್ಕೆ ಮಿಸ್ಟರ್ ನರೇಂದ್ರಮೋದಿಯವರೇ ಕಾರಣ.

2014ರಲ್ಲಿ ಪೆಟ್ರೋಲ್ 68 ರೂ. ಇವತ್ತು 111 ರೂ. ಡೀಸೆಲ್ 46 ರೂ ಇದ್ದುದು, 97 ರೂ. ಗೆ ಏರಿದೆ. ಅಚ್ಛೇ ದಿನ್ ಬಂದಿದೆಯಂತೆ? ಎಲ್ಲಿ ಬಂದಿದೆ? ಪೆಟ್ರೋಲ್ ಮೇಲೆ 9.20 ಪೈಸೆ ಎಕ್ಸೈಸ್ ಡ್ಯೂಟಿ ಇತ್ತು, ಇಂದು 37 ರೂ. 90 ಪೈಸೆ ಎಕ್ಸೈಸ್ ಡ್ಯೂಟಿ. ಹಾಕಲಾಗಿದೆ. ಜನರ ರಕ್ತ ಹೀರುತ್ತಿದ್ದೀರಲ್ಲ ನರೇಂದ್ರ ಮೋದಿಯವರೇ, ಗೊಬ್ಬರ ಅಡುಗೆ ಎಣ್ಣೆ, ಅನಿಲ, ಪೆಟೊ್ರೀಲ್ ಬೆಲೆ ಎಲ್ಲವೂ ಏರಿಕೆಯಾಗಿ, ಜನಸಾಮಾನ್ಯರ ಬದುಕು ಕಷ್ಟಕರವಾಗಿದೆ. ಇದೇನಾ ನಿಮ್ಮ ಅಚ್ಚೇ ದಿನ್? ಎಂದು ಕಟಕಿಯಾಡಿದರು.

ಇದನ್ನೂ ಓದಿ : ಬೆಳಗಾವಿ: ಬಿರುಗಾಳಿ ಮಳೆಗೆ ಧರೆಗುರುಳಿದ ಮರ, ಇಬ್ಬರು ಗಂಭೀರ, 5೦ಕ್ಕೂ ಹೆಚ್ಚು ವಾಹನಗಳು ಜಖಂ

ಅಶಾಂತಿಯಿಂದಾಗಿ ದೊಡ್ಡ ಕಂಪೆನಿಗಳು ಕರ್ನಾಟಕ ತೊರೆಯುತ್ತಿವೆ-ಧ್ರುನ
ಚಾಮರಾಜನಗರ: ಪುಣ್ಯಭೂಮಿಯಾದ ಕರ್ನಾಟಕಕ್ಕೆ ಕಪ್ಪು ಚುಕ್ಕೆ ಬಂದಿದೆ. ಬಿಜೆಪಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದೆ. ಕೋಮು ವೈಷಮ್ಯ ಹರಡುತ್ತಿದೆ. ದೊಡ್ಡ ಕಂಪೆನಿಗಳು ರಾಜ್ಯ ತೊರೆದು ಬೇರೆ ರಾಜ್ಯಗಳಲ್ಲಿ ಬಂಡವಾಳ ಹೂಡಲು ಹೊರಡುತ್ತಿವೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಧ್ರುವನಾರಾಯಣ ಹೇಳಿದರು.

ನವ ಚಾಮರಾಜನಗರದ ನಿರ್ಮಾತೃ ಸಿದ್ದರಾಮಯ್ಯನವರು. ಜಿಲ್ಲೆಯಲ್ಲಿ 5000 ಕೋಟಿಗೂ ಹೆಚ್ಚು ಹಣವನ್ನು ಅವರು ಸಿಎಂ ಆಗಿದ್ದಾಗ ಜಿಲ್ಲೆಗೆ ನೀಡಿದ್ದಾರೆ. 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಣ ನೀಡಿದರು. ಕಬಿನಿಯಿಂದ ಪ್ರತಿ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಗೊಳಿಸಿದರು. ಸರ್ಕಾರಿ ಮೆಡಿಕಲ್, ಇಂಜಿನಿಯರಿಂಗ್, ಕೃಷಿ ಕಾಲೇಜು, ಜಿಲ್ಲೆಗೆ 21 ವಸತಿ ಶಾಲೆ ನೀಡಲಾಗಿದೆ. ಸಿದ್ದರಾಮಯ್ಯನವರು ಎಲ್ಲ ಸಮಾಜದವರಿಗೂ ಸಮಾನ ಅವಕಾಶ ನೀಡಿದರು. ಬುದ್ಧ ವಿಹಾರಕ್ಕೆ 10 ಕೋಟಿ, 25 ಎಕರೆ ಜಮೀನು ನೀಡಿದರು. ಚಾಮರಾಜನಗರದ ರಸ್ತೆಗಳಿಗೆ ಅನುದಾನ ನೀಡಿದರು. ಚಾಮರಾಜನಗರ ಜಿಲ್ಲೆಗೆ ಸಿದ್ದರಾಮಯ್ಯವರ ಅವಧಿ ಸುವರ್ಣ ಯುಗ ಎಂದು ಬಣ್ಣಿಸಿದರು.

ಬಿಜೆಪಿ ಸರ್ಕಾರದ ಈ 3 ವರ್ಷದಲ್ಲಿ ಯಾವ ಮುಖ್ಯಮಂತ್ರಿಯೂ ಭೇಟಿ ನೀಡಲಿಲ್ಲ. ಯಡಿಯೂರಪ್ಪನವರು ಬರಲಿಲ್ಲ. ಬೊಮ್ಮಾಯಿಯವರು ಬೈಪಾಸ್ ನಿಂದ ಮುಂದೆ ಬರಲಿಲ್ಲ. 3 ವರ್ಷದಿಂದ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಎನ್ ಎಚ್ ಕಾಮಗಾರಿ ಸ್ಥಗಿತವಾಗಿದೆ ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಾಲ್ಕೂ ಕ್ಷೇತ್ರ ಗೆಲ್ಲಲು ತಾವೆಲ್ಲ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next