Advertisement

Karnataka: ನೂತನ ಶಾಸಕರಿಗೆ ಸಿದ್ದರಾಮಯ್ಯ ಪಾಠ

11:50 AM Jun 27, 2023 | Team Udayavani |

ಬೆಂಗಳೂರು: ಸದನದಲ್ಲಿ ಸದಾ ಹಾಜರಿ, ಪೂರ್ವತಯಾರಿ, ಭಾಷೆ ಮೇಲೆ ಹಿಡಿತ, ಜನಪರ ವಿಷಯದ ಮಂಡನೆ, ವಿಷಯ ತಜ್ಞರ ಜತೆ ಚರ್ಚೆ, ಅಧ್ಯಯನಶೀಲತೆ, ಜನರ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕ ಕಾಳಜಿ, ಜನರ ಬಗ್ಗೆ ಗೌರವ, ಸಂವಿಧಾನದ 51ನೇ ವಿಧಿವರೆಗಿನ ಅರಿವು, ಸದನದ ನಿಯಮಗಳ ಮಾಹಿತಿ ಮತ್ತು ಸಂವಿಧಾನಕ್ಕೆ ಬದ್ಧತೆ ಮುಂತಾದ ಅಂಶಗಳನ್ನು ರೂಡಿಸಿಕೊಂಡು ಉತ್ತಮ ಸಂಸದೀಯ ಪಟುಗಳಾಗಿ ಬೆಳೆಯಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಯಯ್ಯ ಅವರು ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಕಿವಿ ಮಾತು ಹೇಳಿದರು.

Advertisement

ನೆಲಮಂಗಲದ ಎಸ್‌ಡಿಎಂ ಇನ್‌ಸ್ಟಿಟ್ಯೂಟ್‌ ಆಫ್ ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸಸ್‌ ಕ್ಷೇಮವನದಲ್ಲಿ ಆಯೋಜಿಸಲಾಗಿರುವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸದನ ನಡೆಸುವ ನಿಯಮಾವಳಿಗಳನ್ನು ಓದಬೇಕು. ಇಲ್ಲವಾದರೆ ಏನು ಪ್ರಶ್ನೆ ಕೇಳಬೇಕು, ಯಾವ ನಿಯಮದಡಿ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ನಾವು ಏನೇ ಕಾನೂನು, ತಿದ್ದುಪಡಿ ಮಾಡಿದರೂ ಅದು ಸಂವಿಧಾನದ ಆಶಯಕ್ಕೆ ಬದ್ಧವಾಗಿರಲೇಬೇಕು. ಆದ್ದರಿಂದ ಸಂವಿಧಾನದ ಅರಿವು ಇರಬೇಕು. ಜನರಿಗೆ ಪೂರಕವಾದ ಕಾನೂನು ರೂಪಿಸುವ ಸಿದ್ಧತೆ ಮತ್ತು ಬದ್ಧತೆ ಹೊಂದಿರಬೇಕು. ಬಜೆಟ್‌ ಅನ್ನು ಅರ್ಥಮಾಡಿಕೊಳ್ಳುವ ಶಕ್ತಿ ರೂಡಿಸಿಕೊಳ್ಳಿ. ಗ್ರಂಥಾಲಯ ಬಳಸಿಕೊಳ್ಳಿ. ಕಲಾಪ ನಡೆಯುವ ದಿನಗಳಲ್ಲಿ ಬೇರೆ ಯಾವುದೇ ಕಾರ್ಯಕ್ರಮ, ಭೇಟಿಗಳನ್ನು ಇಟ್ಟುಕೊಳ್ಳಬೇಡಿ. ಕೋರ್ಟ್‌ ನಿಮ್ಮನ್ನು ಪ್ರಶ್ನೆ ಮಾಡದಿರಬಹುದು. ಆದರೆ ಜನತಾ ಕೋರ್ಟ್‌ ಪ್ರಶ್ನೆ ಮಾಡುತ್ತದೆ ಎಂದರು.
ಮತದಾರ ಕೈಬಿಡಲ್ಲ

ಜನರ ಧ್ವನಿಯಾಗಿ ಕೆಲಸ ಮಾಡಿದರೆ ಮಾತ್ರ ರಾಜಕಾರಣದಲ್ಲಿ ಉಳಿದು ಮುಂದಿನ ಚುನಾವಣೆಯನ್ನು ಗೆಲ್ಲಲು ಸಾಧ್ಯ. ಜನಪರ ಕಾಳಜಿ ಇಲ್ಲದವರು ಒಂದು ಚುನಾವಣೆ ಮಾತ್ರ ಗೆಲ್ಲಬಹುದು. ಬೆವರಿನ ಶ್ರಮ, ಸಂಸ್ಕೃತಿಗೆ ಅಸಹ್ಯ ಪಡದವರನ್ನು, ಜನರ ಜತೆ ಬೆರೆತು ಗೌರವ ವಿಶ್ವಾಸದಿಂದ ನಡೆದುಕೊಳ್ಳುವವರನ್ನು, ಜನಸೇವೆಗಾಗಿ ರಾಜಕಾರಣ ಮಾಡುವವರನ್ನು ಮತದಾರರು ಕೈ ಬಿಡುವುದಿಲ್ಲ ಎಂದು ಹೇಳಿದರು.

ಸದನದಲ್ಲಿ ಇರಬೇಕು
ಬಹಳ ಜನ ಒಮ್ಮೆಯಾದರೂ ವಿಧಾನಸಭೆ ಮೆಟ್ಟಿಲು ಹತ್ತಬೇಕೆಂದು ಬಯಸುತ್ತಾರೆ. ಮೆಟ್ಟಿಲು ಹತ್ತಿದ ಬಳಿಕ ಸದನದ ಒಳಗಡೆ ಬರಲ್ಲ. ಈ ಧೋರಣೆಯನ್ನು ಬಿಡಬೇಕು. ಶಾಸಕರು ಎಲ್ಲ ಸಮಯದಲ್ಲೂ ವಿಧಾನಸಭೆಯಲ್ಲಿ ಇರಬೇಕು. ಬಹಳ ಜನ ಮಂತ್ರಿಗಳೇ ವಿಧಾನಸಭೆಗೆ ಬರುವುದಿಲ್ಲ. ವಿಧಾನಸಭೆಗೆ ಬರುವುದರಿಂದ ಹಿರಿಯರು ಏನು ಮಾತನಾಡುತ್ತಾರೆ, ಸಂಸದೀಯ ಮಾತುಗಳು ಏನು ಎಂಬುದು ಅರ್ಥ ಆಗುತ್ತದೆ ಎಂದು ಸಲಹೆ ನೀಡಿದರು.

Advertisement

ವರ್ಗಾವಣೆ ಕಡತ ಇಟ್ಟುಕೊಂಡು ಕಾರ್ಯದರ್ಶಿ ಬಳಿ ಹೋಗಬೇಡಿ
ಕಾನೂನು ಮತ್ತು ಸಂಸದೀಯ ಸಚಿವ ಎಚ್‌. ಕೆ. ಪಾಟೀಲ್‌ ಮಾತನಾಡಿ, ಶಾಸಕರು ಗೌರವಯುತ ಮತ್ತು ಗಂಭೀರ ನಡವಳಿಕೆ ರೂಡಿಸಿಕೊಂಡಾಗ ಜನರು ಮತ್ತು ಅಧಿಕಾರಿಗಳು ಗೌರವಿಸುತ್ತಾರೆ. ಸದನ ಎಂಬುದು ಸಂತೆಯಲ್ಲ ಎಂಬುದನ್ನು ಅರಿತು ಗೌರವಯುತವಾಗಿ ವರ್ತಿಸಿ. ನೀವು ವರ್ಗಾವಣೆ ಕಡತ ಹಿಡಿದುಕೊಂಡು ಕಾರ್ಯದರ್ಶಿ ಹತ್ತಿರ ಹೋದರೆ ನಿಮ್ಮ ಗಂಭೀರತೆ ಕಡಿಮೆ ಆಗುತ್ತದೆ ಎಂದು ಕಿವಿಮಾತು ಹೇಳಿದರು. ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮಾತನಾಡಿದರು.

ವಾಟಾಳ್‌ ನಾಗರಾಜ್‌ ಮಾದರಿ ಶಾಸಕ
ವಾಟಾಳ್‌ ನಾಗರಾಜ್‌ ಅವರು ಮಾದರಿ ಶಾಸಕರಾಗಿದ್ದರು. ಅಧಿವೇಶನದ ಬೆಲ್‌ ಆಗುತ್ತಿದ್ದಂತೆ ಸದನದ ಒಳಗೆ ಬಂದು ಕೂರುತ್ತಿದ್ದರು. ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು. ಅವರು ಕಲಾಪದ ಒಂದು ಕ್ಷಣವನ್ನೂತಪ್ಪಿಸಿಕೊಂಡಿರಲಾರರು. ನಾನು ಆ ತರಹದ ವ್ಯಕ್ತಿಯನ್ನು ಈವರೆಗೂ ನೋಡಿಲ್ಲ. ನಾನಾದರೂ ಈವರೆಗೆ ನಾಲ್ಕೈದು ದಿನ ಗೈರು ಹಾಜರಾಗಿರಬಹುದು. ನಾನು 1994ರಲ್ಲಿ ಹಣಕಾಸು ಸಚಿವನಾಗಿದ್ದಾಗ ಆಗ ಶಾಸಕರಾಗಿದ್ದ ಜಯಪ್ರಕಾಶ್‌ ಹೆಗ್ಡೆ, ಮಾಧುಸ್ವಾಮಿ, ಶ್ರೀರಾಮ ರೆಡ್ಡಿ, ರಾಜೇಂದ್ರ ಅವರು ಏನು ಪ್ರಶ್ನೆ ಕೇಳುತ್ತಾರೋ ಎಂಬ ಆತಂಕದಿಂದ ಅಧಿವೇಶನದ ಒಂದು ಕ್ಷಣವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

ಪಕ್ಷಾಂತರ ನಿಷೇಧವಾಗಬೇಕು
ನಾನು ರಾಜಕಾರಣ ಆರಂಭಿಸಿದಾಗ ಹಣದ ಪ್ರಭಾವ ಕಡಿಮೆ ಇತ್ತು. ನಾನು 1983ರಲ್ಲಿ ಮೊದಲ ಚುನಾವಣೆ ಗೆದ್ದಾಗ 63 ಸಾವಿರ ರೂ. ಖರ್ಚು ಮಾಡಿದ್ದೆ. ಆಗ ಎರಡೇ ಕಾರು ಬಳಸಿದ್ದೆ. ಆದರೆ ಈಗ ಚುನಾವಣೆ ದುಬಾರಿ ಆಗಿದೆ. ಹಾಗೆಯೇ ಆಗ ಜಾತಿ ಇಷ್ಟೊಂದು ಪ್ರಬಲವಾಗಿರಲಿಲ್ಲ. ಊರಿನ ಮುಖ್ಯಸ್ಥರು ತೀರ್ಮಾನಿಸಿದವರಿಗೆ ಜನ ಮತ ಹಾಕುತ್ತಿದ್ದರು. ಆದರೆ ಈಗ ಯುವಕರು, ಮಹಿಳೆಯರು ತಮಗಿಷ್ಟದಂತೆ ಮತ ಹಾಕುತ್ತಿದ್ದಾರೆ. ಪಕ್ಷಾಂತರ, ಆಪರೇಷನ್‌ ಕಮಲ, ಆಪರೇಷನ್‌ ಹಸ್ತ, ಆಪರೇಷನ್‌ ಜೆಡಿಎಸ್‌ ಹೆಚ್ಚಾಗಿದೆ. ಪಕ್ಷಾಂತರವನ್ನು ನಿರ್ಬಂಧಿಸುವಂತೆ ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬಜೆಟ್‌ ಎಂದರೆ ಕಾಯಕ ದಾಸೋಹ
ಶಾಸಕರು, ಸಂಸದರು ಬಜೆಟ್‌ ಅಂದರೆ ಏನೆಂದು ಅರ್ಥ ಮಾಡಿಕೊಳ್ಳಬೇಕು. 12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್‌ ಬಗ್ಗೆ ಹೇಳಿ¨ªಾರೆ. ಕಾಯಕ ಮತ್ತು ದಾಸೋಹ ಬಜೆಟ್‌ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್‌ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್‌ನ ಮೌಲ್ಯ. ಶ್ರೀಮಂತರಿಗೆ ತೆರಿಗೆ ಹಾಕಬೇಕೇ ಹೋರತು ಬಡವರಿಗಲ್ಲ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next