Advertisement

ಕಾಯಕ ಶ್ರದ್ಧೆಗೆ ರೂಪಕವಾದ ಶ್ರೀಗಳು

02:13 AM Jan 21, 2021 | Team Udayavani |

ಇಂದು ನಾವೆಲ್ಲರೂ ಪೂಜ್ಯ ಗುರುದೇವರ ಸ್ಮರಣೆ ಮಾಡುತ್ತಿದ್ದೇವೆ. ಆ ನಡೆದಾಡುವ ದೇವರನ್ನು ನೋಡಿದ ನಾವೆಲ್ಲರೂ ಭಾಗ್ಯವಂತರು. ಮತ್ತೆ ಅಂಥ ಮಹಾನ್‌ ಪುರುಷನನ್ನು ನೋಡಲು ಜಗತ್ತಿಗೆ ಸಾಧ್ಯವೇ ಇಲ್ಲವೇನೋ. ಶಿವಕುಮಾರ ಸ್ವಾಮಿಗಳು ಹೀಗೆ ಇದ್ದರು, ಈ ರೀತಿ ಪೂಜೆ ಮಾಡುತ್ತಿದ್ದರು, ಇಷ್ಟು ಗಂಟೆಗೆ ಎದ್ದೇಳುತ್ತಿದ್ದರು, ಅವರ ದಿನಚರಿ ಹೀಗಿರುತ್ತಿತ್ತು, ಅವರ ಕಾಯಕನಿಷ್ಠೆ ಯಾವ ರೀತಿ ಇತ್ತು ಎನ್ನುವುದನ್ನು ಹೇಳಿದರೆ ಮುಂದಿನ ದಿನಗಳಲ್ಲಿ ಯಾರೂ ಅದನ್ನು ನಂಬಲಾರರೇನೋ.

Advertisement

ಮಹಾನ್‌ ವಿಜ್ಞಾನಿ ಐನ್‌ಸ್ಟೀನ್‌, ಮಹಾತ್ಮಾ ಗಾಂಧಿಯವರ ಬಗ್ಗೆ ಒಂದು ಮಾತನ್ನು ಹೇಳಿದ್ದರು-ರಕ್ತ, ಮಾಂಸಗಳ ಇಂಥ ಒಬ್ಬ ವ್ಯಕ್ತಿ ಈ ಭೂಮಿ ಮೇಲಿದ್ದರು, ಬದುಕಿ-ಓಡಾಡಿಕೊಂಡಿದ್ದರು ಎನ್ನುವುದನ್ನು ಮುಂದಿನ ಪೀಳಿಗೆ ನಂಬುವುದಿಲ್ಲ!

ಹಾಗೆಯೇ, ಮುಂದಿನ ಪೀಳಿಗೆಗೆ “”ಶಿವಕುಮಾರ ಸ್ವಾಮಿಗಳು ಹೀಗಿದ್ದರಪ್ಪ” ಎಂದು ಹೇಳಿದರೆ, ಅವರು ನಂಬುತ್ತಾರೋ ಬಿಡುತ್ತಾರೋ ಎನ್ನುವ ಪ್ರಶ್ನೆ ಬರುತ್ತದೆ. ಏಕೆಂದರೆ ಗುರುಗಳು ಆ ಮಟ್ಟಕ್ಕೆ ಅಚ್ಚರಿ ಮೂಡಿಸುವಂತೆ ಬದುಕಿದಂಥವರು. ತಮ್ಮ ಇಡೀ ಬದುಕನ್ನು ಶಿವಮಯವನ್ನಾಗಿ ಮಾಡಿಕೊಂಡವರು, ಸೇವಾಮಯವನ್ನಾಗಿ ಮಾಡಿಕೊಂಡವರು, ತ್ಯಾಗದ ಬದುಕನ್ನು ಬಾಳಿದಂಥವರು.

ಗ್ರೀಕ್‌ ದೇಶದ ದೊಡ್ಡ ತತ್ತÌಜ್ಞಾನಿ ಪ್ಲೇಟೋ ಒಂದು ಮಾತನ್ನು ಹೇಳುತ್ತಾನೆ-“”ದೇವರೇ ನಿನಗೆ ನಾನು ಎರಡು ಕಾರಣಗಳಿಗಾಗಿ ಕೃತಜ್ಞನಾಗಿರುತ್ತೇನೆ. ಮೊದಲನೆಯದಾಗಿ ಈ ಗ್ರೀಸ್‌ ದೇಶದಲ್ಲಿ ಹುಟ್ಟಿಸಿದ್ದಕ್ಕಾಗಿ ಹಾಗೂ ಎರಡನೆಯದಾಗಿ ಸಾಕ್ರೆಟಿಸ್‌ ಈ ಭೂಮಿಯ ಮೇಲೆ ಇರುವಾಗಲೇ ನನ್ನನ್ನು ಹುಟ್ಟಿಸಿದ್ದಕ್ಕಾಗಿ”!

ನಾವೂ ಹಾಗೆಯೇ ಹೇಳಬಹುದಲ್ಲವೇ? “”ಭಗವಂತ ನಮ್ಮನ್ನು ಕರ್ನಾಟಕದಲ್ಲಿ ಹುಟ್ಟಿಸಿದೆ, ಶಿವಕುಮಾರ ಮಹಾಸ್ವಾಮಿಗಳು ಇದ್ದಾಗ ನಾವೆಲ್ಲ ಇದ್ದೆವು” ಎಂದು ಧನ್ಯವಾದ ಅರ್ಪಿಸಬಹುದು. ಪರಮಪೂಜ್ಯರ ಸ್ಮರಣೆ ಅಂದರೆ, ನಮ್ಮೆಲ್ಲರಿಗೆ ಬೆಳಕಿದ್ದಹಾಗೆ, ಅವರ ಸ್ಮರಣೆಯೆಂದರೆ ನಮ್ಮ ಜೀವನದಲ್ಲಿ ಉತ್ಸಾಹ ತುಂಬಿಕೊಂಡ ಹಾಗೆ…

Advertisement

“”ಎನಗೆ ನಿಮ್ಮ ನೆನಹಾದಾಗಲೇ ಉದಯ, ಎನಗೆ ನಿಮ್ಮ ಮರೆ ಆದಾಗಲೇ ಅಸ್ತಮಯ|” ಎಂದು ಬಸವಣ್ಣನವರು ಹೇಳುತ್ತಾರೆ.

ನಾವು ಶಿವಕುಮಾರ ಸ್ವಾಮೀಜಿಗಳನ್ನು ಸ್ಮರಣೆ ಮಾಡಿಕೊಂಡರೆ ಬದುಕಿನಲ್ಲಿ ಸೂರ್ಯೋದಯವಾದಂತೆ, ಅವರನ್ನು ಮರೆಯುತ್ತೀವಿ ಅಂದರೆ ಅಸ್ತಮಾನ-ಕತ್ತಲು ಕವಿದ ಹಾಗೆ.

ರಾಷ್ಟ್ರಕವಿ ಜಿಎಸ್‌ ಶಿವರುದ್ರಪ್ಪನವರು ಸ್ವಾಮೀಜಿಗಳ ಕುರಿತು ಬಹಳ ಸುಂದರವಾಗಿ ಹೇಳಿದ್ದಾರೆ. ಅವರು ಶ್ರೀಮಠದ ವಿದ್ಯಾರ್ಥಿಯಾಗಿ, ಪರಮಪೂಜ್ಯರನ್ನು ಹತ್ತಿರದಿಂದ ನೋಡಿದ ಅನುಭವದ ಮೇಲೆ ಬರೆದಿರುವಂಥ ಸಾಲುಗಳಿವು.

“”ಇಲ್ಲಿ ಇಲ್ಲ ಪವಾಡದದ್ಭುತ ಅಥವಾ ಉತ್ಸವದ ಅಬ್ಬರ

ಮುಡಿಯನೇರಿದೆ ಸರ್ವ ಸಾಧಾರಣ ಬದುಕಿನ ಓಪುರ

ಅದರ ಮೇಲಿದೆ ತ್ಯಾಗದ ಧ್ವಜ ಕೈಬೀಸಿ ಕರೆವುದು ಪಥಿಕರ

ಪರಮ ನಿರಪೇಕ್ಷೆಯಲೇ ಸೇವೆಗಾಗಿದೆ ಸರ್ವರ”

“”ಭಿಕ್ಷೆ ಹೊರಟಿದೆ ಜಂಗಮದ ಜೋಳಿಗೆ

ಲಕ್ಷ ಜನಗಳ ಪೊರೆದಿದೆ / ತೀರ್ಥವಾಗಿದೆ ಭಕ್ತರಿಗೆ, ಜತೆಗೆ ಸ್ಫೂರ್ತಿಯಾಗಿದೆ ಬುದ್ಧಿಗೆ”

ಈ ಒಂದೊಂದು ಸಾಲುಗಳೂ ಕೂಡ ಪರಮಪೂಜ್ಯರ ಜೀವನದ ಘಟನೆಗಳ ಪ್ರತಿರೂಪದಂತಿವೆ.

ಸದ್ದು ಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆ ಏರಿದೆ

ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯಲಿ ಮೂಡಿದೆ

ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ…

ಎಲ್ಲರು ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ

ಅನೇಕರು ಭಾಷಣಕ್ಕೆ ಸೀಮಿತವಾದವರು. ಆದರೆ, ಶಿವಕುಮಾರ ಸ್ವಾಮೀಜಿಗಳು ಕೃತಿಯಲ್ಲಿ ತೋರಿಸಿದವರು. ಮಾತನ್ನು ಕೃತಿಯಲ್ಲಿ ಅಳವಡಿಸಿಕೊಂಡರು. ಅವರು ಪ್ರತಿಯೊಂದು ಕಾಯಕವನ್ನೂ ಮಾಡಿದರು. ಕಸ ಗುಡಿಸಿದರು, ಕಟ್ಟಡ ಕಟ್ಟಿದರು, ವ್ಯವಸಾಯದಲ್ಲಿ ಕೆಲಸ ಮಾಡಿದರು, ಅಡುಗೆ ಮನೆಯಲ್ಲಿ ಅಡುಗೆ ಮಾಡಿದರು, ಊಟಕ್ಕೆ ಬಡಿಸಿದರು, ಹುಡುಗರಿಗೆ ಪಾಠ ಮಾಡಿದರು, ಎಲ್ಲೆಡೆಯೂ ಪ್ರವಾಸ ಮಾಡಿದರು…ಈ ಮಟ್ಟದಲ್ಲಿ ಕಾಯಕಪ್ರಜ್ಞೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕಿದವರು ಶಿವಕುಮಾರ ಸ್ವಾಮೀಜಿಗಳು.

ಸಹಸ್ರಾರು ಮಕ್ಕಳಿಗೆ ಆಶ್ರಯ :

ಒಂದು ಕಥೆಯಿದೆ. ಒಮ್ಮೆ ಜೋರಾಗಿ ಮಳೆ ಬರುತ್ತಿತ್ತು. ಆ ಮಳೆಯಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಕೊನೆಗೆ ಯಾರಧ್ದೋ ಮನೆಯ ಬಾಗಿಲನ್ನು ತಟ್ಟಿದ. “ಯಾರಪ್ಪ?’ ಎನ್ನುವ ಧ್ವನಿ ಮನೆಯೊಳಗಿಂದ ಬಂತು.

ಆಗ ಆ ವ್ಯಕ್ತಿ, “ಬಹಳ ಜೋರಾಗಿ ಮಳೆ ಬರುತ್ತಿದೆ. ಮಳೆ ನಿಲ್ಲುವವರೆಗೂ ನಿಮ್ಮ ಮನೆಯಲ್ಲಿ ಕೂತುಕೊಳ್ಳಬಹುದೇ?’ ಎಂದು ಕೇಳಿದ.

ಒಳಗಿನ ವ್ಯಕ್ತಿ ಅಂದ-“ಬಾ ಬಾ…ಅತಿಚಿಕ್ಕ ಜಾಗ ನನ್ನದು. ಮಲಗಿಕೊಳ್ಳುವುದಾದರೆ, ಒಬ್ಬನಿಗಷ್ಟೇ ಜಾಗವಿದೆ. ಕೂತುಕೊಳ್ಳುವುದಾದರೆ, ಇಬ್ಬರಿಗೂ ಜಾಗವಿದೆ’ ಎಂದು ಕರೆಸಿ ಕೂಡಿಸಿಕೊಂಡ!

ಸ್ವಲ್ಪ ಹೊತ್ತಾಯಿತು. ಇವರಿಬ್ಬರೇ ಕುಳಿತಿದ್ದರು. ಮತ್ತೆ ಯಾರೋ ಕದ ತಟ್ಟಿದ ಸದ್ದು, “ಯಾರಪ್ಪ ಅದು?’ ಎಂದು ಮನೆಯವ ಕೇಳಿದ.

ಹೊರಗಿನ ಧ್ವನಿ ಹೇಳಿತು-“ಸ್ವಾಮಿ ಮಳೆಯಲ್ಲಿ ಸಿಲುಕಿದ್ದೀನಿ, ಸ್ವಲ್ಪ ಆಶ್ರಯ ಬೇಕಿತ್ತು!’

ಆಗ ಮನೆಯವ ಅಂದ- “ಕುಳಿತುಕೊಳ್ಳುವುದಾದರೆ ಇಬ್ಬರೇ ಕುಳಿತುಕೊಳ್ಳಬೇಕು, ಆದರೆ ನಿಂತುಕೊಳ್ಳುವುದಾದರೆ ಮೂವರು ನಿಲ್ಲುವಷ್ಟು ಜಾಗವಿದೆ’ ಎನ್ನುತ್ತಾ ಆ ವ್ಯಕ್ತಿಯನ್ನೂ ಒಳಗೆ ಬಿಟ್ಟುಕೊಂಡ.

ಅದೇ ರೀತಿಯಲ್ಲೇ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಗಳು ಬದುಕಿದರು. ವಿದ್ಯಾರ್ಥಿಗಳಿಗೆ ಕೊಠಡಿಯ ಅಭಾವ ಎದುರಾದಾಗ ತಾವು

ಮಲಗುವ ಕೋಣೆಯನ್ನೇ ವಿದ್ಯಾರ್ಥಿಗಳಿಗೆ ಬಿಟ್ಟುಕೊಟ್ಟ ಉದಾಹರಣೆಯಿದೆ.

ಅವರಿಗೆ ಒಂದು ದೊಡ್ಡ ಕನಸಿತ್ತು. ಈ ನಾಡು ಉದ್ಧಾರವಾಗಬೇಕಾದರೆ ಗ್ರಾಮೀಣ ಮಕ್ಕಳಿಗೆ ಉತ್ತಮವಾಗಿ ಶಿಕ್ಷಣ ಕೊಡಬೇಕು. ಅವರು ಮೇಲೆ ಬಂದರೆ, ಅವರ ಹಾಗೂ ಅವರ ಕುಟುಂಬದವರ ಜೀವನ ಸ್ಥಿತಿ ಉತ್ತಮವಾಗುತ್ತದೆ ಅನ್ನುವ ಕಾರಣದಿಂದ, ಆಶ್ರಯ ಅರಸಿ ಎಷ್ಟೇ ಮಕ್ಕಳು ಬಂದರೂ ಸ್ವಾಮೀಜಿ ಅವರಿಗೆಲ್ಲ ಆಶ್ರಯ ಕೊಡುತ್ತಿದ್ದರು. “ಆ ಹುಡುಗ ನಾಲ್ಕು ಅಕ್ಷರ ಕಲಿತುಕೊಳ್ಳಲಿ, ಉತ್ತಮವಾಗಿ ಶಿಕ್ಷಣ ಪಡೆಯಲಿ, ಕನಿಷ್ಠ ಎಸ್‌ಎಸ್‌ಎಲ್‌ಸಿಯಾದರೂ ಪಾಸು ಮಾಡಲಿ’ ಎನ್ನುವ ಗುರಿಯನ್ನು ಇಟ್ಟುಕೊಂಡಿದ್ದರು. ಈ ಕಾರಣಕ್ಕಾಗಿ, ಹತ್ತಾರುಸಾವಿರ ಮಕ್ಕಳಿಗೆ ಆಶ್ರಯ, ಅನ್ನ, ಅಕ್ಷರ ಕೊಟ್ಟರು. ಸ್ವಾಮೀಜಿ ಮಕ್ಕಳಲ್ಲೇ ದೇವರನ್ನು ಕಾಣುತ್ತಿದ್ದರು.

ಪೂಜಾ ನಿಷ್ಠೆ-ಕಾಯಕಶ್ರದ್ಧೆ

ಅವರ ಪೂಜಾ ನಿಷ್ಠೆ ಅದ್ಭುತವಾಗಿರುತ್ತಿತ್ತು. ಪ್ರಾತಃಕಾಲದ ಪೂಜೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸುತ್ತಿರಲಿಲ್ಲ. ಸೂರ್ಯೋದಯದಂತೆ ನಿರಂತರವಾಗಿ ನಡೆಯುತ್ತಿತ್ತು. ಅವರ ಪ್ರಸಾದ ನಿಷ್ಠೆಯೂ ಹಾಗೆಯೇ ಇರುತ್ತಿತ್ತು. ಅವರು ಯಾವುದನ್ನೂ ಬಯಸಿದಂಥವರೇ ಅಲ್ಲ, ತಮಗಾಗಿ ಏನನ್ನೂ ಬಯಸಿದವರಲ್ಲ, ಅಲ್ಪ ಆಹಾರವನ್ನೇ ಸೇವಿಸಿ ಬದುಕಿದಂಥವರು. ಶಿವಕುಮಾರ ಸ್ವಾಮೀಜಿಗಳಲ್ಲಿದ್ದ ಕಾಯಕ ನಿಷ್ಠೆಯಂಥ ಮಹತ್ತರವಾದದ್ದು. ಅವರು ತಮ್ಮ ಪಾಲಿನ ಕಾಯಕವನ್ನು ನಿಷ್ಠೆಯಿಂದ, ಶ್ರದ್ಧೆಯಿಂದ, ಸಮಯ ಬದ್ಧವಾಗಿ ಸಮಯಪ್ರಜ್ಞೆಯಿಂದ ಮಾಡುತ್ತಿದ್ದರು. ಪರಮಪೂಜ್ಯರು ಅನೇಕ ವಿಧವಾದ ರೀತಿಯಲ್ಲಿ ನಮಗೆ ಆದರ್ಶಗಳನ್ನು ಬಿಟ್ಟುಹೋಗಿದ್ದಾರೆ. ಇವತ್ತು ಅವರ ಆದರ್ಶಗಳು ನಮಗೆಲ್ಲರಿಗೂ ಬೆಳಕಾಗಿವೆ, ದಾರಿ ದೀಪವಾಗಿವೆ. ಆ ದಾರಿಯಲ್ಲಿ ಸಾಗಿದರೆ ನಿಸ್ಸಂಶಯವಾಗಿಯೂ ನಮ್ಮ ಜೀವನವು ಸಾರ್ಥಕವಾಗುತ್ತದೆ….

 

 ಶ್ರೀ ಸಿದ್ಧಲಿಂಗ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next