Advertisement

ಸಿ.ಆರ್‌.ಝಡ್‌:ಸಾರ್ವಜನಿಕರಲ್ಲಿ ಆತಂಕ; ಜನಪ್ರತಿನಿಧಿಗಳ ದಿವ್ಯಮೌನ

04:14 PM Feb 22, 2017 | Team Udayavani |

ಕುಂದಾಪುರ: 2015ರಲ್ಲಿಯೇ ಕೇಂದ್ರ ಬಜೆಟ್‌ ಅಧಿಸೂಚನೆ ಹೊರಡಿಸಿದ್ದರೂ ಕರ್ನಾಟಕ ರಾಜ್ಯದಲ್ಲಿ ಮಾತ್ರ ವಲಯ  ನಿಗದಿ ಪಡಿಸುವ ಬಗ್ಗೆ ಸರಕಾರ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷé ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Advertisement

ಚಟುವಟಿಕೆಗಳಿಗೆ ತೊಂದರೆ
ಕರ್ನಾಟಕ ರಾಜ್ಯದಲ್ಲಿ ಝೋನ್‌-1 ವ್ಯಾಪ್ತಿಯು 150 ಮೀಟರಿಗೆ ನಿಗದಿಪಡಿಸಿದ್ದು, ಕೇರಳ ಮತ್ತು ಗೋವಾ ರಾಜ್ಯಗಳಿಗೆ 50 ಮೀಟರ್‌ ಎಂದು ನಿಗದಿಪಡಿಸಿದ್ದು, ಇದರಿಂದ ಕರಾವಳಿಯ ಹಲವಾರು  ಕುಟುಂಬಗಳು ತಮ್ಮ ವಾಸಕ್ಕೆಂದು ಮನೆ ಕಟ್ಟಿಕೊಳ್ಳಲು ಮತ್ತು ಇತರೆ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ.  ಒಟ್ಟಾರೆ ಕರಾವಳಿಗರ ಬೇಡಿಕೆಗಳು ಭರವಸೆಯಾಗಿಯೇ ಉಳಿದಿವೆ.

ಗಜೆಟ್‌ ಅಧಿಸೂಚನೆ  
ಮಾರ್ಚ್‌ 31, 2015ರಂದೇ ಸಿಆರ್‌ಝಡ್‌ ವ್ಯಾಪ್ತಿ ಪ್ರದೇಶದ ನಿಯಂತ್ರಣ ಕಾಯ್ದೆ ತಿದ್ದುಪಡಿಗೆ ಆಕ್ಷೇಪಣೆ ಅಥವಾ ಮರುಹೊಂದಾಣಿಕೆ ಮಾಡಿಕೊಳ್ಳಲು ರಾಜ್ಯ ಸರಕಾರಗಳಿಗೆ  ಕೇಂದ್ರದ  ಗಜೆಟ್‌ ಅಧಿಸೂಚನೆ ಹೊರಡಿಸಿತ್ತು. ಈ ಬಗ್ಗೆ ಆಗಿನ ಉಸ್ತುವಾರಿ ಸಚಿವ ವಿನಯಕುಮಾರ್‌ ಸೊರಕೆಗೆ ಸಂತ್ರಸ್ತರು ಮನವಿ ನೀಡಲಾಗಿದ್ದು, ನಡಾವಳಿ ಮೂಲಕ ಎಲ್ಲ ದಾಖಲಾತಿಗಳನ್ನು ಕಳುಹಿಸಿ ಕರ್ನಾಟಕ ಕರಾವಳಿಯ ವಾಸ್ತವಿಕ ಸ್ಥಿತಿಯನ್ನು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿ ಗೋವಾ ಕೇರಳದಂತೆ ಕರ್ನಾಟಕ ತೀರ ಪ್ರದೇಶದವರಿಗೂ 50 ಮೀಟರ್‌ ವಿಶೇಷ ಸವಲತ್ತನ್ನು ಕಲ್ಪಿಸುವ ಸಂಬಂಧ ಪೂರಕ ಶಿಫಾರಸು ಕಳಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಕೋರಲಾಗಿತ್ತು . ಅನಂತರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಭಾರತ ಸರಕಾರ ಹೊಸದಿಲ್ಲಿ ಇವರಿಗೆ ಮೂರು ಬಾರಿ ಪತ್ರ ಬರೆಯಲಾಗಿತ್ತು. ಇದಕ್ಕೆ ಯಾವುದೇ ಪ್ರತಿಫಲ ಇನ್ನೂ ದೊರೆತಿಲ್ಲ ಎನ್ನುವುದು ಸಂತ್ರಸ್ತರ ದೂರಾಗಿದೆ.

ಕೇರಳ-ಗೋವಾಕ್ಕೆ ವಿಶೇಷ ಅವಕಾಶ
ಕೇಂದ್ರ ಪರಿಸರ ಸಚಿವಾಲಯ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ-2011 ಅಧಿಸೂಚನೆಯಡಿ ಕೇರಳ ಮತ್ತು ಗೋವಾ ರಾಜ್ಯಗಳಿಗೆ ಈ ಕೆಳಕಂಡಂತೆ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಕೇರಳ ರಾಜ್ಯದಲ್ಲಿ ಸಿಆರ್‌ಝಡ್‌ ನಡುಗಡ್ಡೆಗಳಿಗೆ 50ಮೀ. ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ.

ಅನುಮತಿ ಪತ್ರಕ್ಕೆ ಅನುಮೋದನೆ
ಗೋವಾ ರಾಜ್ಯದಲ್ಲಿ ಕಡಲ ತೀರದ ಸೌಲಭ್ಯಗಳಾದ ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಾದ ಸ್ಥಳೀಯ ಮೀನು ಸಂಸ್ಕರಣ ಅಂಗಳ, ದೋಣಿ ನಿರ್ಮಾಣ ಮತ್ತು ದುರಸ್ತಿ ಅಂಗಳ, ಬಲೆ ಹೆಣೆಯುವ ಅಂಗಳ, ಶೀತಲ ಗೃಹ ಹಾಗೂ ಸಂಗ್ರಹಣೆ, ಹರಾಜು ಅಂಗಳ, ದೋಣಿ ನಿಲುಗಡೆ ತಾಣ ಇವುಗಳಿಗೆ ಅನುಮತಿ ಪತ್ರವನ್ನು ಗ್ರಾ.ಪಂ. ಮೂಲಕ  ನೀಡಲು ಅನುಮೋದಿಸಲಾಗಿದೆ. ಗೋವಾ ರಾಜ್ಯದಲ್ಲಿ ಸೆಪೆಂಬರ್‌ನಿಂದ ಮೇ ಮಾಹೆಯ ಅವಧಿಯಲ್ಲಿ ಋತುಮಾನಕ್ಕೆ ಅನ್ವಯಿಸುವಂತೆ ಸಾಂಪ್ರದಾಯಕ ತಾತ್ಕಾಲಿಕ ನಿರ್ಮಾಣಗಳನ್ನು ಪ್ರವಾಸೋದ್ಯಮಕ್ಕಾಗಿ ರಚಿಸಲು ಅನುಮೋದಿಸಲಾಗಿದೆ. ಈ ವಿಶೇಷ ಅವಕಾಶಗಳನ್ನು ಕರ್ನಾಟಕ ರಾಜ್ಯಕ್ಕೂ ಸಹಾ ವಿಸ್ತರಿಸುವಂತೆ ಕೋರಲಾಗಿದೆ.ಆದರೆ ಕರ್ನಾಟಕದಲ್ಲಿ ಮಾತ್ರ ಯಾವುದೇ ಹೊಸ ಕಾಯ್ದೆ ಜ್ಯಾರಿಗೆ ಬಾರದೇ ಇದ್ದು, ಇದರಿಂದ ಕರಾವಳಿಗರಿಗೆ ಅನ್ಯಾಯವಾಗಿದೆ.  ತತ್‌ಕ್ಷಣ ಸರಕಾರ ಈ ಬಗ್ಗೆ ಸ್ಪಂದಿಸಬೇಕಾಗಿದ್ದು, ಕೇರಳ ಹಾಗೂ ಗೋವಾ ರಾಜ್ಯಗಳ ಮಾದರಿಯಲ್ಲಿಯೇ ಸಿಆರ್‌ಝೆಡ್‌ ಕಾನೂನಿಗೆ ತಿದ್ದುಪಡಿ ತರಬೇಕು ಎನ್ನುವುದು ಸಂತ್ರಸ್ತರ ಆಗ್ರಹ.

Advertisement

ಸಿಆರ್‌ಝಡ್‌ ವ್ಯಾಪ್ತಿಯ ಕಾನೂನಿನಿಂದ ತೊಂದರೆಗೊಳಗಾದ, ನೋವನ್ನು ಅನುಭವಿಸುತ್ತಿರುವ ಮತ್ತು ಕರಾವಳಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಂಟಕವಾಗಿರುವ ಈ ಕಾನೂನಿನ ತಿದ್ದುಪಡಿಯನ್ನು ತರಲು ಹಾಲಿ ಸಂಸದರು ಪ್ರಯತ್ನಿಸಬೇಕು. ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸಿ, ನುಣಚಿಕೊಳ್ಳುವ ಪ್ರವೃತ್ತಿಯನ್ನು ಬಿಟ್ಟು ವಾಸ್ತವಿಕವಾಗಿರುವ ಅಂಶಗಳನ್ನು ಪರಿಗಣಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ.
– ಶರಶ್ಚಂದ್ರ ಹೆಗ್ಡೆ, ಸಾಮಾಜಿಕ ಕಾರ್ಯಕರ್ತ

ಕೆಂದ್ರದಲ್ಲಿ ಯುಪಿಎ ಸರಕಾರ  ಇರುವಾಗ ಅಂದು ಪರಿಸರ ಸಚಿವರಾಗಿದ್ದ ವೀರಪ್ಪ ಮೊಲಿ ಅವರ ಮೂಲಕ ಕೇರಳ ಹಾಗೂ ಗೋವಾ ಮಾದರಿಯಲ್ಲಿ ನಿಗದಿಪಡಿಸುವಂತೆ ಪ್ರಸ್ತಾವನೆಯನ್ನು ಕಳುಹಿಸ ಲಾಗಿತ್ತು.  ಆದರೆ ಈ ಪ್ರಸ್ತಾವನೆಗೆ ಇನ್ನೂ ಉತ್ತರ ದೊರಕಿಲ್ಲ. ಸಿಆರ್‌ಝಡ್‌ನ‌ ಉದ್ದೇಶ ಸಮುದ್ರ ತೀರದಲ್ಲಿ ವಾಸವಾಗಿರುವ ಮೀನುಗಾರರಿಗೆ ಹಾಗೂ ಮೂಲ ನಿವಾಸಿಗಳಿಗೆ ತೊಂದರೆ ಆಗಕೂಡದು ಎನ್ನುವುದಾದರೂ ಈ ಕಾಯಿದೆಯಂತೆ ಇಂದು ಯಾವುದೂ ನಡೆಯುತ್ತಿಲ್ಲ.
– ಮದನ್‌ ಕುಮಾರ್‌, ಮೀನುಗಾರ ಮುಖಂಡ

– ಉದಯ ಆಚಾರ್‌ ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next