Advertisement

ಜಡಿ ಮಳೆ: ಇಳಿದ ತುಂಗೆಯ ಅಬ್ಬರ

02:57 PM Aug 14, 2019 | Naveen |

ಶೃಂಗೇರಿ: ಆಶ್ಲೇಷ ಮಳೆ ಎರಡು ದಿನ ಬಿಡುವು ನೀಡಿದ್ದು, ಸೋಮವಾರ ರಾತ್ರಿಯಿಂದ ಜಡಿ ಮಳೆ ಆರಂಭವಾಗಿದೆ.

Advertisement

ಮಂಗಳವಾರ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಆದರೆ, ಮೊದಲಿನ ಅಬ್ಬರ ಇಲ್ಲವಾಗಿದ್ದು, ತುಂಗಾ ನದಿಯ ನೀರು ಸಾಮಾನ್ಯ ಮಟ್ಟಕ್ಕೆ ಹರಿಯುತ್ತಿದ್ದು, ಮಳೆಯ ಪ್ರಮಾಣ ಹೆಚ್ಚಾದಲ್ಲಿ ಮತ್ತೆ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.

ನಿರಂತರ ಮಳೆಯಿಂದ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಕೆರೆ ಗ್ರಾಪಂನ ಬಾಳಗೆರೆ ಉಡ್ತಾಳ್‌ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾನಿಯಾಗಿದೆ. 40ಕ್ಕೂ ಹೆಚ್ಚು ಮನೆಗಳಿಗೆ ರಸ್ತೆ ಸಂಪರ್ಕ, ವಿದ್ಯುತ್‌ ಇಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಬಪ್ಪನಮಕ್ಕಿ, ಉಡ್ತಾಳ್‌, ಹಾರಂಗಲ್, ಕೋಳಿಬಿಳಲು, ಹೊಲ್ಮ, ಮಂಡಗಾರು ಹಳ್ಳಿಗಳ ಜನರು ಸಂಪರ್ಕ ಕಳೆದುಕೊಂಡಿದ್ದಾರೆ. ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯ ಕಣ್‌ಕುಟ್ಲು ಅರುಣಕುಮಾರ ಎಂಬುವವರ ಮನೆಗೆ ಧರೆ ಕುಸಿದು ಹಾನಿಯಾಗಿದೆ.

ಕೆರೆ ಗ್ರಾಪಂ ವ್ಯಾಪ್ತಿಯ ಹೊರಣೆ ಹಳ್ಳಕ್ಕೆ ಗ್ರಾಮಸ್ಥರೇ ನಿರ್ಮಿಸಿದ್ದ ಕಾಲು ಸಂಕ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. ಮಿನಿ ವಿಧಾನಸೌಧದ ಗುಡ್ಡ ಕುಸಿದಿದೆ. ಮಣ್ಣಿನೊಂದಿಗೆ ಗಿಡ-ಮರಗಳು ನೆಲಸಮವಾಗಿವೆ. ಚೀಪಗೋಡು ಕೃಷ್ಣಪ್ಪ ಅವರ ಮನೆಯ ಕೊಟ್ಟಿಗೆ ಗೋಡೆ ಭಾರೀ ಮಳೆಗೆ ಕುಸಿದಿದೆ. ಕೂತಗೋಡು ಗ್ರಾಪಂ ವ್ಯಾಪ್ತಿಯ ಕೊಡ್ತಲು ಅಂಗನವಾಡಿ ಕೇಂದ್ರದ ಮೇಲೆ ಮರ ಬಿದ್ದು ಮೇಲ್ಚಾವಣಿಗೆ ಹಾನಿಯಾಗಿದೆ. ಮಾರನಕೊಡಿಗೆ ರಸ್ತೆಯಿಂದ ಚೀಪಗೋಡು ರಸ್ತೆಗೆ ತೀವ್ರ ಹಾನಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next