Advertisement

ಇಂದು ಭರತೇಶನ ದಿಗ್ವಿಜಯದ ಐತಿಹಾಸಿಕ ಮೆರವಣಿಗೆ

04:51 AM Feb 13, 2019 | |

ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ ಪಂಚಮಹಾ ವೈಭವದಲ್ಲಿ ಫೆ. 13ರಂದು ಬೆಳಗ್ಗೆ 10.30ಕ್ಕೆ ಧರ್ಮಸ್ಥಳದಿಂದ ಶಾಂತಿವನದವರೆಗೆ ಹಾಗೂ ಅಪರಾಹ್ನ 3ಕ್ಕೆ ಶಾಂತಿವನದಿಂದ ಧರ್ಮಸ್ಥಳದವರೆಗೆ ಎರಡು ಐತಿಹಾಸಿಕ ಮೆರವಣಿಗೆಗಳು ನಡೆಯಲಿವೆ. ಇದರಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳುವ ಮೂಲಕ ಇತಿಹಾಸ ನಿರ್ಮಾಣವಾಗಲಿದೆ.

Advertisement

ಭರತೇಶನ ಪುಣ್ಯೋದಯದಿಂದ ಆತನ ಶಸ್ತ್ರಾಗಾರದಲ್ಲಿ ಚಕ್ರರತ್ನ ಉದಯಿಸುವುದು. ಬಳಿಕ ಷಡVಂಡಗಳನ್ನು ಜಯಿಸಿ ಚಕ್ರವರ್ತಿಯಾಗಲು ದಿಗ್ವಿಜಯ ಕೈಗೊಳ್ಳಲಿದ್ದು, ದಿಗ್ವಿಜಯದ ವೈಭವದ ಮೆರವಣಿಗೆಯೇ ಇದಾಗಿದೆ. ಬಳಿಕ ಸಂಜೆ ಅಯೋಧ್ಯೆಗೆ ವಿಜಯೀ ಭರತೇಶನ ಮರು ಪಯಣದ ವೈಭವೋಪೇತ ಮೆರವಣಿಗೆ ಇರುತ್ತದೆ.

ಅಚ್ಚುಕಟ್ಟಿನ ಪಾರ್ಕಿಂಗ್‌, ಸಂಚಾರ ವ್ಯವಸ್ಥೆ
ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ವಾಹನ ಸಮಿತಿ ಮೂಲಕ ಅಚ್ಚುಕಟ್ಟಿನ ಪಾರ್ಕಿಂಗ್‌ – ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ. 8 ಕಡೆಗಳಲ್ಲಿ ವಿಶೇಷ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ಫೆ. 16ರ ಬಳಿಕ ಅಭಿಷೇಕದ ದಿನಗಳಲ್ಲಿ ಪಾರ್ಕಿಂಗ್‌ ಸ್ಥಳದಿಂದಲೇ ಬೆಟ್ಟಕ್ಕೆ ಹೋಗಲು ಅನುಕೂಲವಾಗುವಂತೆ ಬಸ್ಸಿನ ವ್ಯವಸ್ಥೆಯೂ ಇರುತ್ತದೆ. ಪ್ರಸ್ತುತ ಅಶಕ್ತರಿಗೆ ನೆರವಾಗುವ ದೃಷ್ಟಿಯಿಂದ ಬೆಟ್ಟಕ್ಕೆ ವೀಶೇಷ ವಾಹನದ ವ್ಯವಸ್ಥೆ ಇರುತ್ತದೆ.

ವಾಹನ ಸಮಿತಿಯಲ್ಲಿ 6 ಮಂದಿ ಸದಸ್ಯರ ಜತೆಗೆ ವೇಣೂರು ಹಾಗೂ ಸಂಸೆಯ ಐಟಿಐನ 160 ವಿದ್ಯಾರ್ಥಿಗಳು ಸಹಿತ ಹೋಂಗಾರ್ಡ್‌, ಪೊಲೀಸ್‌ ಸಿಬಂದಿ ವಾಹನದ ವ್ಯವಸ್ಥೆಯಲ್ಲಿ ತೊಡಗಿಕೊಂಡಿದ್ದಾರೆ.

ಅಭಿಷೇಕ ದಿನಗಳಲ್ಲಿ ಗಣ್ಯರಿಗೆ ಸನ್ನಿಧಿ ವಸತಿಗೃಹದ ಬಳಿ, ಸನ್ಯಾಸಿಕಟ್ಟೆ, ಅಣ್ಣಪ್ಪ ಸ್ವಾಮಿ ಬೆಟ್ಟದ ಕೆಳಗೆ ಪಾರ್ಕಿಂಗ್‌ಗೆ ವ್ಯವಸ್ಥೆ ಇರುತ್ತದೆ. ಪ್ರಸ್ತುತ ಅಗತ್ಯ ವಸ್ತುಗಳ ಸಾಗಾಟದ ದೃಷ್ಟಿಯಿಂದ ಆನ್‌ ಡ್ಯೂಟಿ ಬೋರ್ಡ್‌ ಇರುವ ವಾಹನಗಳಿಗೆ ಎಲ್ಲ ಕಡೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

Advertisement

ಹೆಚ್ಚು ಜನ ಸೇರಿದಾಗ ಮೊಬೈಲ್‌ ನೆಟ್ವರ್ಕ್‌ ಜಾಮ್‌ ಆಗುವ ಹಿನ್ನೆಲೆಯಲ್ಲಿ ಸುಮಾರು 8 ಸಮಿತಿಗಳ ಪ್ರಮುಖರಿಗೆ ತುರ್ತು ಸಂಭಾಷಣೆಗಾಗಿ ವಾಕಿಟಾಕಿಗಳ ವ್ಯವಸ್ಥೆ ಮಾಡಿದ್ದು, ಯಾವುದೇ ಅಗತ್ಯದ ಸಂದರ್ಭ ಇದರ ಮೂಲಕ ಸಂಭಾಷಣೆ ನಡೆಸಬಹುದಾಗಿದೆ.

ಮೆರವಣಿಗೆ ಸಹಿತ ಇದರ ತುರ್ತು ಸಂದರ್ಭದಲ್ಲಿ ಆಯಾ ಸಮಿತಿಗಳ ಸೂಚನೆಯಂತೆ ಕೆಲಸ ಮಾಡುತ್ತಿದ್ದೇವೆ ಎಂದು ವಾಹನ ಸಮಿತಿಯ ಸಂಚಾಲಕ ಮನ್ಮಥ್‌ರಾಜ್‌ ಕಾಜವ ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು
ಬೆಳಗ್ಗಿನ ಮೆರವಣಿಗೆಯಲ್ಲಿ ಸುಡುಮದ್ದು ಪ್ರದರ್ಶನ, ತಾಲೀಮು, ಕೊಂಬು ಕಹಳೆ, ಬಿರುದಾವಳಿ, ಘಟೋತ್ಕಚ, ಕಿಂಗ್‌ ಕಾಂಗ್‌, ಸೈನಿಕರು, ನಗಾರಿ, ಜಟ್ಟಿಗಳು, ಡೊಳ್ಳು ಕುಣಿತ, ಕಾಡು ಮನುಷ್ಯರು, ಚೆಂಡೆ, ಕತ್ತಿ ಗುರಾಣಿಯ ಸೈನಿಕರು, ಪುರವಂತಿಕೆ, ನಾಸಿಕ್‌ ಬ್ಯಾಂಡ್‌, ಮರಾಠರು, ಜಗ್ಗಲಿಗೆ, ಶಂಖ, ಬಣ್ಣದ ಕೊಡೆಗಳು, ದೇವರ ಟ್ಯಾಬ್ಲೋ, ಧ್ವಜಗಳು, ಭಾರತ ರತ್ನ-ಚಕ್ರ ರತ್ನಗಳು ಮೆರವಣಿಗೆಯಲ್ಲಿರಲಿವೆ. ಸಂಜೆಯ ಮೆರವಣಿಗೆಯಲ್ಲಿ ಸುಲ್ತಾನ್‌ ಹೋರಿ, ಗಿರೀಶ, ಪೂಜಾ ಕುಣಿತ, ರಾಜಸ್ಥಾನ, ಗುಜರಾತ್‌, ನಾಗಾಲ್ಯಾಂಡ್‌, ಪಂಜಾಬ್‌, ಬಂಗಾಲ, ಮಣಿಪುರ, ಕೊಡಗು, ಜಪಾನ್‌, ಈಜಿಪ್ಟ್, ಚೀನಾ, ಶ್ರೀಲಂಕಾ, ಭೂತಾನ್‌ಗಳ ಕಲಾ ತಂಡಗಳು ಮೆರುಗು ನೀಡಲಿವೆ.

216 ಕಲಶಗಳಿಂದ ಪಾದಾಭಿಷೇಕ
ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ರತ್ನಗಿರಿ ಬೆಟ್ಟದಲ್ಲಿ ಮಂಗಳವಾರ ಬೆಳಗ್ಗೆ ನಿತ್ಯ ವಿಧಿ, 216 ಕಲಶಗಳಿಂದ ಪಾದಾಭಿಷೇಕ, ಮಧ್ಯಾಹ್ನ ಯಜ್ಞ ಶಾಲೆಯಲ್ಲಿ ಯಾಗ ಮಂಡಲಾರಾಧನೆ, ಸಂಜೆ ಧ್ವಜ ಪೂಜೆ, ಶ್ರೀ ಬಲಿ ವಿಧಾನ, ಮಹಾಮಂಗಳಾರತಿ ನಡೆಯಿತು.

ಸುಸಜ್ಜಿತ ವಸತಿ ವ್ಯವಸ್ಥೆ
ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಈಗಾಗಲೇ ಪರವೂರಿನ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಅವರಿಗೆ ಉಳಿದುಕೊಳ್ಳುವ ದೃಷ್ಟಿಯಿಂದ ಕ್ಷೇತ್ರದ ವಸತಿ ಗೃಹಗಳು ಸಹಿತ ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗ‌ಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಭಿಷೇಕಕ್ಕೆ ಆಗಮಿಸುವ 3 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಇರುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next