Advertisement

ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸಸಿ: ಶಾಮನೂರು ಶಿವಶಂಕರಪ್ಪ

08:24 AM Jul 06, 2017 | Team Udayavani |

ದಾವಣಗೆರೆ: ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕರಿಗೆ ಅತಿ ಕಡಮೆ ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದ್ದು, ಈ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ ಮನವಿ ಮಾಡಿದ್ದಾರೆ.

Advertisement

ಬುಧವಾರ ಪಿಬಿ ರಸ್ತೆಯಲ್ಲಿನ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಸಸ್ಯ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆ ಆವರಣದಲ್ಲಿ ಜುಲೆ„ 15ರ ವರೆಗೆ ಹತ್ತು ದಿನಗಳ ಕಾಲ ಆಯೋಜಿಸಿರುವ ಸಸ್ಯ ಸಂತೆಯಲ್ಲಿ ಎಲ್ಲರೂ ಗಿಡಗಳನ್ನು ತೆಗೆದುಕೊಂಡು
ಹೋಗಿ ಬೆಳೆಸಿ ಎಂದರು. ಜಿಲ್ಲೆಯ ಚನ್ನಗಿರಿ ತಾಲೂಕಿನ ಗರಗ, ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು, ಹರಪನಹಳ್ಳಿ ತಾಲ್ಲೂಕಿನ ಕೆ. ಕಲ್ಪನಹಳ್ಳಿ, ದಾವಣಗೆರೆಯ ಆವರಗೊಳ್ಳ, ಹರಿಹರ ತಾಲ್ಲೂಕಿನ ಬುಳ್ಳಾಪುರ, ಜಗಳೂರು  ತಾಲೂಕಿನ ವ್ಯಾಸಗೊಂಡನಹಳ್ಳಿ ಸೇರಿದಂತೆ ಒಟ್ಟು 9 ತೋಟಗಾರಿಕೆ ಕ್ಷೇತ್ರದ 3 ನರ್ಸರಿ ಸೇರಿ ಒಟ್ಟು 375 ಎಕರೆ ವಿಸ್ತೀರ್ಣದಲ್ಲಿ ಸಸಿ ಬೆಳೆಸಲಾಗಿದೆ. ಕ್ಷೇತ್ರ ಹಾಗೂ ನರ್ಸರಿಗಳಲ್ಲಿ ಬೆಳೆಸಲಾಗಿರುವ ಉತ್ತಮ ಗುಣಮಟ್ಟದ ತೆಂಗು, ಮಾವು, ಸಪೋಟ, ನಿಂಬೆ, ಕರಿಬೇವು, ನುಗ್ಗೆ ಹಾಗೂ ಅಲಂಕಾರಿಕ ಸಸಿ/ಕಸಿಗಳನ್ನು ನಗರವಾಸಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಪೂರೈಸಲಾಗುತ್ತಿದೆ ಎಂದು ಅವರು ತಿಳಿಸಿದರು.

ನಗರದ ಆರ್‌ಎಂಸಿ ಯಾರ್ಡ್‌ನಲ್ಲಿ ಜೈವಿಕ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು, ಈ ವರ್ಷಾಂತ್ಯದಲ್ಲಿ ಕೇಂದ್ರದ ಕಾಮಗಾರಿ
ಪೂರ್ಣಗೊಳ್ಳಬಹುದು. ಈ ಕೇಂದ್ರದಲ್ಲಿ ಅಂಗಾಂಶ ಬಾಳೆ ಸಸಿ, ರೈತರ ಬೇಡಿಕೆಗೆ ಅನುಗುಣವಾಗಿ ಅಂಗಾಂಶ ದಾಳಿಂಬೆ ಸಸಿ, ಜೈವಿಕ ಗೊಬ್ಬರ ತಯಾರಿಸಲಾಗುವುದು ಎಂದು  ಅವರು ಹೇಳಿದರು. ಬರದ ಹಿನ್ನೆಲೆಯಲ್ಲಿ ಪ್ರಸ್ತುತ ಒಣ ತೋಟಗಾರಿಕೆಗೆ ಒತ್ತು ನೀಡಲಾಗುತ್ತಿದೆ. ಸೀಬೆ, ನೇರಳೆ, ಸಪೋಟ, ಬೇಲದ ಹಣ್ಣು, ಹುಣಸೆ ಇವುಗಳು ಮಳೆ ಇಲ್ಲದಿದ್ದರೂ ಉಳಿಯುವಂತಹ ಬೆಳೆಗಳಾಗಿದ್ದು ಇವುಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಾವಿನ ಫಸಲು ಈ ಬಾರಿ ಕಡಿಮೆ ಇದೆ. ಮುಂದಿನ ಮಾರ್ಚ್‌ನಲ್ಲಿ ಮಾವು ಮೇಳ ನಡೆಸುವ ಯೋಜನೆ ಇದೆ. ಮಾವು ಮಾಗಿಸುವ ಘಟಕಗಳನ್ನು ಸ್ಥಾಪಿಸಲು ರೈತರಿಗೆ ಶೇ.30ರ ಸಬ್ಸಿಡಿ ನೀಡಲಾಗುವುದು ಹಾಗೂ ಮಾವಿನ 
ಪುನಶ್ಚೇತನಕ್ಕೆ ಒಂದು ಹೆಕ್ಟೇರ್‌ಗೆ ಇಪ್ಪತ್ತು ಸಾವಿರದಂತೆ ಪ್ರೋತ್ಸಾಹಧನ ನೀಡಲಾಗುವುದು ಎಂದರು.

ಹವಾಮಾನ ಆಧಾರಿತ ತೋಟಗಾರಿಕಾ ಬೆಳೆವಿಮೆಯಡಿ 4600 ರೈತರು 6 ಕೋಟಿಯಷ್ಟು ವಿಮೆ ಕಟ್ಟಿದ್ದು, ವಿಮಾ ಕಂಪೆನಿಯಿಂದ 15 ಕೋಟಿ ಹಣ ಪಾವತಿಗೆ ನಿಗದಿಯಾಗಿದೆ. ಆದರೆ ವಿಮಾ ಕಂಪೆನಿ ಕಡೆಯಿಂದ ಹಣ ಬಿಡುಗಡೆ
ತಡವಾಗುತ್ತಿದೆ. ಈ ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವರು ವಿಮಾ ಕಂಪೆನಿಯೊಂದಿಗೆ ಮಾತುಕತೆ ನಡೆಸಿ, ಶೀಘ್ರದಲ್ಲೇ ರೈತರ ಖಾತೆಗೆ ಬೆಳೆವಿಮೆ ಹಣ ಪಾವತಿಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next