Advertisement

ವಿಕ್ರಮಸಿಂಘೆಯೇ ಪ್ರಧಾನಿ ಎಂದು ಘೋಷಿಸಿದ ಸ್ಪೀಕರ್‌

08:57 AM Oct 29, 2018 | Team Udayavani |

ಕೊಲೊಂಬೊ/ಹೊಸದಿಲ್ಲಿ: ಶ್ರೀಲಂಕಾದಲ್ಲಿ ಆರಂಭವಾಗಿರುವ ಸಾಂವಿಧಾನಿಕ ಬಿಕ್ಕಟ್ಟು ಮತ್ತೂಂದು ಹಂತ ತಲುಪಿದೆ. ಪ್ರಧಾನಿ ರಣಿಲ್‌ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ, ಅವರ ಸ್ಥಾನದಲ್ಲಿ ಮಹೀಂದಾ ರಾಜಪಕ್ಸೆ ಅವರನ್ನು ಕೂರಿಸುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಯತ್ನಕ್ಕೆ ಹಿನ್ನಡೆಯಾಗಿದೆ. ಜನರಿಂದ ಆಯ್ಕೆಯಾಗಿ ಸರಕಾರ ರಚಿಸಿರುವ ವಿಕ್ರಮಸಿಂಘೆ ಅವರೇ ದೇಶದ ಪ್ರಧಾನಿ ಎಂದು ಸ್ಪೀಕರ್‌ ರವಿವಾರ‌ ಘೋಷಿಸಿದ್ದಾರೆ.

Advertisement

ಅಲ್ಲದೆ, ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ ಅಸ್ಥಿರತೆ ಸೃಷ್ಟಿಸಿದ ಸಿರಿಸೇನಾ ಅವರನ್ನು ಸ್ಪೀಕರ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಸಿರಿಸೇನಾಗೆ ತೀವ್ರ ಮುಖಭಂಗವಾಗಿದೆ. ಶುಕ್ರವಾರ ರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ವಿಕ್ರಮ ಸಿಂಘೆ ಅವರನ್ನು ಏಕಾಏಕಿ ವಜಾಗೊಳಿಸಿದ್ದ ಸಿರಿಸೇನಾ ಅವರು, ರಾಜಪಕ್ಸೆಯನ್ನು ನೂತನ ಪ್ರಧಾನಿ ಎಂದು ಘೋಷಿಸಿದ್ದರು. ಲಂಕಾ ರಾಜಕೀಯ ಬಿಕ್ಕಟ್ಟು ಕುರಿತು ಪ್ರತಿಕ್ರಿಯಿಸಿರುವ ಭಾರತ ಸರಕಾರ, ನಾವು ಶ್ರೀಲಂಕಾದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಸಾಂವಿಧಾನಿಕ ಪ್ರಕ್ರಿಯೆಗಳಿಗೆ ಗೌರವ ನೀಡಲಾಗುತ್ತದೆ ಎಂಬ ವಿಶ್ವಾಸ ನಮಗಿದೆ ಎಂದಿದೆ.

ಹಿಂಸೆಗೆ ಒಬ್ಬ ಬಲಿ
ಈ ನಡುವೆ ಕೊಲೊಂಬೋದಲ್ಲಿ ಹಿಂಸಾಚಾರ ಆರಂಭವಾಗಿದ್ದು, ಗುಂಡೇಟಿಗೆ ಒಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಅಧ್ಯಕ್ಷ  ಸಿರಿಸೇನಾ ಅವರ ಬೆಂಬಲಿಗರ ಗುಂಪೊಂದು ರವಿವಾರ‌ ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗ ಅವರನ್ನು ಅಪಹರಿಸಲು ಯತ್ನಿಸಿದ್ದು, ಈ ವೇಳೆ ರಣತುಂಗ ಅವರ ಅಂಗರಕ್ಷಕರು ಗುಂಡಿನ ದಾಳಿ ನಡೆಸಿ, ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಆಗ ಗುಂಡೇಟು ತಗುಲಿದ  ಒಬ್ಬ ವ್ಯಕ್ತಿ ಅಸುನೀಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next