Advertisement

ಇಂದು ‘ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌’ಗೆ ಚಾಲನೆ

05:00 AM Nov 14, 2018 | Karthik A |

ಹೊಸದಿಲ್ಲಿ: ತ್ರೇತಾಯುಗದ ಶ್ರೀ ರಾಮಚಂದ್ರನ ಹೆಜ್ಜೆಯ ಜಾಡು ಹಿಡಿದು ನೀವೂ ಹೆಜ್ಜೆ ಹಾಕಬೇಕೇ? ಅಂಥದ್ದೊಂದು ಅವಕಾಶವನ್ನು ಭಾರತೀಯ ರೈಲ್ವೇ ಕಲ್ಪಿಸಿಕೊಡಲಿದ್ದು, ದೇಶದ ಅನುಪಮ ಪವಿತ್ರ ಯಾತ್ರಾ ಯೋಜನೆ ‘ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌’ಗೆ ಬುಧವಾರ ಚಾಲನೆ ಸಿಗಲಿದೆ.

Advertisement

ಶ್ರೀಲಂಕಾ ಸಹಿತ ಶ್ರೀರಾಮ ಸಂಚರಿಸಿದ್ದ ಎಂದು ಹೇಳಲಾಗುವ ಸ್ಥಳಗಳಿಗೆ 16 ದಿನಗಳ ಪ್ರವಾಸ ಆಯೋಜಿಸುವ ಯೋಜನೆ ಇದಾಗಿದೆ. ‘ಶ್ರೀ ರಾಮಾಯಣ ಎಕ್ಸ್‌ಪ್ರಸ್‌’ ವಿಶೇಷ ರೈಲಿನಲ್ಲಿ 800 ಮಂದಿ ಪ್ರಯಾಣಿಸಲು ಅವಕಾಶ ಇದ್ದು, ಪ್ರತಿಯೊಬ್ಬ ಯಾತ್ರಿಕನಿಗೆ 15,120 ರೂ. ನಿಗದಿ ಮಾಡಲಾಗಿದೆ. ದಿಲ್ಲಿಯಿಂದ ಯಾತ್ರೆ ಆರಂಭವಾಗಲಿದ್ದು, ಕರ್ನಾಟಕದ ಹಂಪಿಗೂ ಈ ರೈಲು ಪ್ರವೇಶಿಸಲಿದೆ. ಅಯೋಧ್ಯೆಯಲ್ಲಿ ಮೊದಲ ನಿಲುಗಡೆ. ರಾಮಜನ್ಮಭೂಮಿ ಅಯೋಧ್ಯೆ ವೀಕ್ಷಣೆಯ ಬಳಿಕ ರೈಲು ಮುಂದಕ್ಕೆ ಸಾಗಲಿದೆ. ಅನಂತರ ಹನುಮಾನ್‌ ಗಾರ್ಹಿ, ರಾಮಕೂಟ ಮತ್ತು ಕನಕ್‌ ಭವನ ದೇಗುಲಗಳಿಗೆ ಭೇಟಿ ನೀಡಲಿದೆ. ಅಲ್ಲಿಂದ ನಂದಿ ಗ್ರಾಮ, ಸೀತಾಮರ್ಹಿ, ಜನಕಪುರಿ, ವಾರಾಣಸಿ, ಪ್ರಯಾಗ, ಶೃಂಗವರಪುರ, ಚಿತ್ರಕೂಟ, ನಾಸಿಕ್‌, ಹಂಪಿ ಮತ್ತು ರಾಮೇಶ್ವರಗಳಿಗೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ. ಆಹಾರ ಪೂರೈಕೆ, ವಸತಿ ಸಹಿತ ಮೂಲಸೌಲಭ್ಯಗಳು ಪ್ಯಾಕೇಜ್‌ ವೆಚ್ಚದಲ್ಲೇ ಸೇರಿರುತ್ತವೆ.

ರಾಮಾಯಣ ಮಹಾಗ್ರಂಥದಲ್ಲಿ ಉಲ್ಲೇಖೀಸಿದಂತೆ ಶ್ರೀಲಂಕಾದ ಒಂದಿಷ್ಟು  ಪ್ರದೇಶಗಳ ವೀಕ್ಷಣೆಗೂ ಕರೆದೊಯ್ಯಲಾಗುತ್ತದೆ. ಯೋಜನೆಯ ನೀಲನಕ್ಷೆಯಂತೆ ಚೆನ್ನೈಯಿಂದ ವಿಮಾನದ ಮೂಲಕ ಶ್ರೀಲಂಕಾದ ಕೊಲಂಬೊಗೆ ತೆರಳಿ ಅಲ್ಲಿಂದ ಮತ್ತೆ ಪ್ರವಾಸ ಮುಂದುವರಿಯಲಿದೆ. ಅದಕ್ಕಾಗಿ ಪ್ರತ್ಯೇಕ ವೆಚ್ಚ ನಿಗದಿಮಾಡಲಾಗಿದೆ (ಪ್ರತಿ ಸೀಟ್‌ಗೆ 36,970 ರೂ.) ದ್ವೀಪ ರಾಷ್ಟ್ರದಲ್ಲಿ ಕೊಲಂಬೊ, ಕ್ಯಾಂಡಿ, ನುವಾರ ಎಲಿಯಾ, ನೆಗೊಂಬೋಗಳ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next