Advertisement

ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಸಂಕಲ್ಪ ಮಾಡೋಣ: ಶಿವಾಚಾರ್ಯ ಸ್ವಾಮೀಜಿ

10:01 AM Nov 20, 2023 | Team Udayavani |

ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಗೋವಾ ಮುಖ್ಯಮಂತ್ರಿಗಳ ಬಳಿ ಗೋವಾ ಕನ್ನಡಿಗರೆಲ್ಲ ಒಗ್ಗೂಡಿ ಮನವಿ ಮಾಡಿಕೊಳ್ಳಿ. ನಾನೂ ಕೂಡ ಗೋವಾ ವಿಧಾನಸಭೆಗೆ ನಿಮ್ಮೊಂದಿಗೆ ಬರಲು ಸಿದ್ಧನಿದ್ದೇನೆ. ಕಳೆದ ಇಪ್ಪತ್ತು ವರ್ಷಗಳಿಂದ ಗೋವಾಕ್ಕೆ ಕನ್ನಡಿಗರ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದೇನೆ. ಆದರೆ ಇದುವರೆಗೂ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಸಾಧ್ಯವಾಗಿಲ್ಲ ಎನ್ನುವುದು ನನ್ನ ಮನಸ್ಸಿಗೂ ತುಂಬಾ ಬೇಸರವುಂಟಾಗುತ್ತದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ಬೆಳಗಾವಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.

Advertisement

ಕನ್ನಡ ಸಂಘ ಜವಾರಿನಗರ ಗೋವಾ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕ ಗೋವಾ ಇವರ ಸಂಯುಕ್ತ ಆಶ್ರಯದಲ್ಲಿ ವಾಸ್ಕೊ ಜುವಾರಿನಗರದ ಇಸಿದೊರೊ ಕಾರ್ವಾಲೊ ಸಭಾಗೃಹದಲ್ಲಿ ರವಿವಾರ ಆಯೋಜಿಸಿದ್ದ “ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ” ಕಾರ್ಯಕ್ರಮದ ದಿವ್ಯ ಸಾನಿಧ್ಯ ನೆರವೇರಿಸಿ ಅವರು ಆಶೀರ್ವಚನ ನೀಡುತ್ತಿದ್ದರು.

ಗೋವಾದಲ್ಲಿ ಕನ್ನಡಿಗರೆಲ್ಲರೂ ಒಗ್ಗಟ್ಟಾದರೆ ಕನ್ನಡಿಗರು ಗೋವಾ ವಿಧಾನಸಭೆಯ ಮೆಟ್ಟಿಲೇರಲು ಸಾಧ್ಯ. ಗೋವಾದ ಕನ್ನಡ ಶಾಲೆಯಲ್ಲಿ ಕಲಿತ ಒಬ್ಬ ವಿದ್ಯಾರ್ಥಿ ಇಂದು ಕರ್ನಾಟಕದಲ್ಲಿ ನ್ಯಾಯಾಧೀಶರಾಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.

ಗೋವಾದಲ್ಲಿ ಮೊದಲು 21 ಕನ್ನಡ ಶಾಲೆಗಳಿದ್ದವು. ಆದರೆ ಇಂದು ಗೋವಾದಲ್ಲಿ 15 ಕನ್ನಡ ಶಾಲೆಗಳಿವೆ. ಇವುಗಳಲ್ಲಿಯೂ ಕೆಲ ಶಾಲೆಗಳು ಮುಚ್ಚುವ ಹಂತದಲ್ಲಿದೆ ಎಂಬುದು ಬೇಸರದ ಸಂಗತಿ. ಕನ್ನಡ ಶಾಲೆಗಳು ಬಂದ್ ಆಗಬಾರದು. ನಾವೆಲ್ಲರೂ ಸೇರಿ ಗೋವಾದಲ್ಲಿ ಕನ್ನಡ ಶಾಲೆಗಳನ್ನು ಉಳಿಸೋಣ. ಕನ್ನಡ ಶಾಲೆ ಉಳಿಸಲು ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಬೇಕು. ಕಲೆ, ಸಾಹಿತ್ಯ,ಸಂಸ್ಕøತಿ ಉಳಿದಿರುವುದು ಮಠಮಾನ್ಯಗಳಿಂದಲೇ. ಕನ್ನಡ ಉಳಿಸುವಲ್ಲಿಯೂ ಮಠಮಾನ್ಯಗಳ ಪಾತ್ರ ಬಹು ಮುಖ್ಯವಾದ್ದು. ಗೋವಾದಲ್ಲಿರು ಎಲ್ಲ ಕನ್ನಡಿಗರೂ ನಿಮ್ಮ ಬಗ್ಗೆ ಆಲೋಚನೆ ಮಾಡಿ, ಎಲ್ಲರೂ ಮೊದಲು ಒಗ್ಗಟ್ಟಾಗಿ ಎಂದು ಹುಕ್ಕೇರಿ ಶ್ರೀಗಳು ಗೋವಾ ಕನ್ನಡಿಗರಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಬಾಗಲಕೋಟೆ ಸಿದ್ಧನಕೊಳ್ಳದ ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ ಮಹಾಸ್ವಾಮೀಜಿ ಆಶೀರ್ವಚನ ನೀಡಿ-ಗೋವಾ ರಾಜ್ಯಕ್ಕೆ ಬಂದು ಇಲ್ಲಿ ನೆಲೆಸಿ ಕರ್ನಾಟಕ ರಾಜ್ಯದ ಕೀರ್ತಿ ಪತಾಕೆ ಹಾರಿಸುತ್ತಿರುವುದು ಹೆಮ್ಮೆಯ ಸಂಗತಿ. ಹೊರ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವುದು ಸಾಮಾನ್ಯ ವಿಷಯವಲ್ಲ.

Advertisement

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೋವಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ, ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಕನ್ನಡಿಗರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿರುವುದಕ್ಕೆ ಇಲ್ಲಿನ ಕನ್ನಡ ಸಂಘಟನೆಯನ್ನು ಅಔಇನಂದಿಸುತ್ತೇನೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ಮಾತನಾಡಿ- ಗೋವಾದಲ್ಲಿ ಕನ್ನಡ ಫಿಲ್ಮ ಫೆಸ್ಟಿವಲ್ ಆಯೋಜಿಸಿ ಗೋವಾದಲ್ಲಿ 10,000 ಜನ ಕನ್ನಡಿಗರನ್ನು ಸೇರಿಸಿ, ಕನ್ನಡ ಚಲನಚಿತ್ರ ಕಲಾವಿದರನ್ನು ಕರೆಸಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಿದ್ದನಕೊಳ್ಳ ಧರ್ಮಾಧಿಕಾರಿ ಡಾ.ಶಿವಕುಮಾರ ಮಹಾಸ್ವಾಮೀಜಿ ಯವರ ಬಳಿ ಮನವಿ ಮಾಡಿದರು.

ಕನ್ನಡ ಸಂಘ ಜುವಾರಿನಗರದ ಅಧ್ಯಕ್ಷ ಶಿವಾನಂದ ಬಿಂಗಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿ- ಹೊರನಾಡಿನಲ್ಲಿ ಕನ್ನಡ ಭಾಷೆ,ಸಂಸ್ಕøತಿ ಉಳಿಯಬೇಕಾದರೆ ಕನ್ನಡ ಸಂಘಗಳು ಬೇಕು. ಗೋವಾದಲ್ಲಿ ಕನ್ನಡ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡ ಶಿಕ್ಷಕರು ಇಲ್ಲಿ ಕನ್ನಡ ಉಳಿಸಿ ಬೆಳೆಸಲು ಶೃಮಪಟ್ಟಿದ್ದಾರೆ. ಗೋವಾದಲ್ಲಿರುವ ವಿವಿಧ ಕನ್ನಡ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ 84 ಜನ ಕನ್ನಡ ಶಾಲಾ ಶಿಕ್ಷಕರನ್ನು ಇಂದು ಸನ್ಮಾನಿಸಲಾಗುತ್ತಿದೆ ಎಂದರು.

ಶ್ರೀ ಶಂಕರಲಿಂಗ ಗುರುಪೀಠ ಕೇಸರಕಟ್ಟಿಯ ಶ್ರೀ ಸೋಮಲಿಂಗ ಮಹಾಸ್ವಾಮಿಗಳು, ಬೆಳಗಾವಿ ಶಿವಾಪುರದ ಶ್ರೀ ಮುಪ್ಪಿನ ಕಾಡಸಿದ್ದೇಶ್ವರ ಮಹಾಸ್ವಾಮಿಗಳು, ಗೋವಾ ಜುವಾರಿನಗರದ ಶ್ರೀ ಯಲ್ಲಾಲಿಂಗೇಶ್ವರ ಮಠದ ಶ್ರೀ ಕಂಬಳಯ್ಯ ಮಹಾರಾಜರು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ-ಗದಗ ಸಿವಿಲ್ ನ್ಯಾಯಾಧೀಶರಾದ ಬೀರಪ್ಪ ಕಂಬಳಿ, ದಕ್ಷಿಣ ಗೋವಾ ಬಿಜೆಪಿ ಸೆಲ್ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪಡದಯ್ಯ ಹಿರೇಮಠ, ಸೂರ್ಯೋದಯ ಕನ್ನಡ ಸಂಘದ ಅಧ್ಯಕ್ಷ ಗಂಗಯ್ಯ ಹಿರೇಮಠ, ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಾಯ್.ಎಲ್.ಬೆಳಗಲ್, ಗೋವಾ ಶಿಪ್ ಯಾರ್ಡ ಎಂಜಿನೀಯರ್ ಎಂ.ಎನ್.ಬಿರಾದಾರ್, ಮತ್ತಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಗೋವಾದಲ್ಲಿರುವ ಕನ್ನಡ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 84 ಜನ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮ ನಂತರ ವಿವಿಧ ಸಾಂಸ್ಕøತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಜಾನಪದ ಸಿರಿಗಂಧ ಕಲಾ ಬಳಗ ಧಾರವಾಡದ ಶ್ರೀ ರೇಣುಕಾ ಯಲ್ಲಮ್ಮ ಜೋಗತಿ ನೃತ್ಯ ಪ್ರೇಕ್ಷಕರ ಮನ ಸೆಳೆಯಿತು. ಜುವಾರಿನಗರ ಕನ್ನಡ ಸಂಘದ ಕಾರ್ಯದರ್ಶಿ ದಾವಲಸಾಬ ಕೆ. ನದಾಫ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು. ಗೋವಾದ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: Visakhapatnam ಬಂದರಿನಲ್ಲಿ ಭಾರಿ ಅಗ್ನಿ ಅವಘಡ, 40 ಕ್ಕೂ ಹೆಚ್ಚು ದೋಣಿಗಳು ಬೆಂಕಿಗಾಹುತಿ

Advertisement

Udayavani is now on Telegram. Click here to join our channel and stay updated with the latest news.

Next