Advertisement

ಅಮ್ಮನ ಭಕ್ತಿಯ ತುತ್ತು

10:11 AM Feb 09, 2020 | mahesh |

ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರ, ಕಮಲಶಿಲೆ. ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಾನ. ಉಡುಪಿ ಶೈಲಿಯಲ್ಲಿ ಸೆಳೆಯುವ ಇಲ್ಲಿನ ಭೋಜನ, ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಗಿದೆ…

Advertisement

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಕಮಲಶಿಲೆಯಲ್ಲಿ ಶ್ರೀಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯವಿದೆ. ಕುಬಾj ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರ. ಇಲ್ಲಿ ದುರ್ಗೆ ಲಿಂಗರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು, ಮಹಾಲಕ್ಷ್ಮೀ, ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ. ದೇವಳದ ಸುತ್ತಲೂ ಹೊರಪೌಳಿಯಲ್ಲಿ ಈಶ್ವರ, ಗಣಪತಿ, ಸುಬ್ರಹ್ಮಣ್ಯ, ಹೊಸಮ್ಮ, ಕ್ಷೇತ್ರಪಾಲ, ರಕ್ತೇಶ್ವರಿ, ಹುಲಿದೇವಿ, ವೀರಭದ್ರ ಮುಂತಾದ ಪರಿವಾರ ದೇವರು ನೆಲೆಸಿದ್ದಾರೆ. ಅಮ್ಮನ ಸನ್ನಿಧಾನದಲ್ಲಿ ನಡೆಯುವ ಅನ್ನಸಂತರ್ಪಣಕ್ಕೆ ವಿಶೇಷ ಮಹತ್ವವಿದೆ.

ನಿತ್ಯ ಅನ್ನದಾನದ ಕತೆ
ಕಮಲಶಿಲೆಯ ಪ್ರಸಾದ ಭೋಜನ ಕುರಿತು ಭಕ್ತರಲ್ಲಿ ವಿಶೇಷ ಪ್ರೀತಿ ಇದೆ. “ಕಮಲಶಿಲೆಯಲ್ಲಿ ಊಟ ಮಾಡಿ ನೋಡು’ ಎಂಬ ಗಾದೆಯೇ ಬೆಳೆದು ಬಂದಿದೆ. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ 1.5 ಸಾವಿರಕ್ಕೂ ಅಧಿಕ ಭಕ್ತರು ಅನ್ನದಾನದಲ್ಲಿ ಪಾಲ್ಗೊಳ್ಳುತ್ತಾರೆ. ರವಿವಾರ, ಮಂಗಳವಾರ, ಶುಕ್ರವಾರ ಹಾಗೂ ಇತರ ರಜಾದಿನಗಳಲ್ಲಿ ಇದು 5-6 ಸಾವಿರ ದಾಟುವುದೂ ಇದೆ. ನವರಾತ್ರಿ ಸಂದರ್ಭ ಒಟ್ಟು 1.5 ಲಕ್ಷಕ್ಕೂ ಅಧಿಕ ಮಂದಿ ಪ್ರಸಾದ ಸ್ವೀಕರಿಸುತ್ತಾರೆ.

ಅಡುಗೆ ತಯಾರಿ
ಅನ್ನಪ್ರಸಾದ ಹಾಗೂ ಇತರ ಅಡುಗೆ ಪದಾರ್ಥಗಳನ್ನು ಸಿದ್ಧಪಡಿಸಲು ಹಬೆ ಬಾಯ್ಲರ್‌, ಗ್ಯಾಸ್‌ ಒಲೆ, ಕಟ್ಟಿಗೆ ಒಲೆಗಳಿವೆ. ಹತ್ತು ಸಾವಿರಕ್ಕಿಂತ ಅಧಿಕ ಮಂದಿಗೆ ಅಡುಗೆ ತಯಾರಿಸಬಹುದು. ಒಟ್ಟು 4 ಅನ್ನಛತ್ರಗಳಿದ್ದು ಏಕಕಾಲದಲ್ಲಿ 1,600 ಮಂದಿ ಪ್ರಸಾದ ಭೋಜನ ತೆಗೆದುಕೊಳ್ಳಬಹುದು.

ಭಕ್ಷ್ಯ ವಿಶೇಷ
ನಿತ್ಯವೂ ಕೋಸಂಬರಿ, ಚಟ್ನಿ, ಕೂಟು, ಪಲ್ಯ, ಮುದ್ದುಳಿ, ಅನ್ನ, ಸಾರು, ಸಾಂಬಾರು, ಪಾಯಸ, ಸಿಹಿ ಭಕ್ಷ್ಯ, ಮಜ್ಜಿಗೆಹುಳಿ, ಮಜ್ಜಿಗೆ, ಉಪ್ಪಿನಕಾಯಿ, ವಿಶೇಷ ದಿನಗಳಲ್ಲಿ ಇನ್ನಷ್ಟು ಪದಾರ್ಥಗಳಿರುತ್ತವೆ.

Advertisement

365 ದಿನವೂ ಊಟ
ಏಕಾದಶಿ, ಶಿವರಾತ್ರಿ ಎಂಬ ಭೇದವಿಲ್ಲದೇ ವರ್ಷದ 365 ದಿನವೂ ಮಧ್ಯಾಹ್ನ, ರಾತ್ರಿ ಊಟ ಇದೆ. ನವರಾತ್ರಿ ಸಂದರ್ಭ ವಿಶೇಷ ಜನಸಂದಣಿ ಇರುತ್ತದೆ. ಆದರೆ, ಎಷ್ಟೇ ಹೊತ್ತಿಗೆ ಹೋದರೂ ಊಟ ಇಲ್ಲ ಎಂದು ಕಳುಹಿಸುವ ಕ್ರಮ ಇಲ್ಲ. ಸಂಜೆ 4 ಗಂಟೆಗೆ ಹೋದವರು ಮಧ್ಯಾಹ್ನ ಊಟ ಆಗಿಲ್ಲ ಎಂದರೂ ಊಟ ಸಿದ್ಧಪಡಿಸಿ ಬಡಿಸಿ ಕಳುಹಿಸಿದ ಉದಾಹರಣೆಯಿದೆ. ಕಮಲಶಿಲೆ ಪ್ರೌಢಶಾಲೆಯ 100 ವಿದ್ಯಾರ್ಥಿಗಳಿಗೆ ನಿತ್ಯ ಊಟ ಇಲ್ಲಿಂದಲೇ ನೀಡಲಾಗುತ್ತದೆ.

ಊಟದ ಸಮಯ
– ಮಧ್ಯಾಹ್ನ 12ರಿಂದ 3.30
– ರಾತ್ರಿ 8.30ರಿಂದ 9.30

ಸಂಖ್ಯಾ ಸೋಜಿಗ
4- ಬಾಣಸಿಗರಿಂದ ಅಡುಗೆ ತಯಾರಿ
100- ವಿದ್ಯಾರ್ಥಿಗಳಿಗೆ ಇಲ್ಲಿಂದ ಬಿಸಿಯೂಟ
105- ತೆಂಗಿನಕಾಯಿ ನಿತ್ಯ ಬಳಕೆ
150- ಕಿಲೋ ಅಕ್ಕಿ ನಿತ್ಯ ಬಳಕೆ
1,500 ಜನರಿಗೆ ನಿತ್ಯಅನ್ನಪ್ರಸಾದ
1,50,000- ಭಕ್ತರಿಂದ ನವರಾತ್ರಿಯಲ್ಲಿ ಭೋಜನ ಸ್ವೀಕಾರ

ಎಲೆ ಊಟ
ಎಷ್ಟೇ ಮಂದಿ ಆಗಮಿಸಿದರೂ ಬಾಳೆಎಲೆಯಲ್ಲೇ ಊಟ ಬಡಿಸುವುದು ಇಲ್ಲಿನ ವಿಶೇಷ. ಶುದ್ಧ ಕುಡಿವ ನೀರು, ಊಟದ ಸಂದರ್ಭ ಕುಡಿಯಲು ಮಜ್ಜಿಗೆ ನೀಡಲಾಗುತ್ತಿದೆ.

ಕಳೆದ 9 ವರ್ಷಗಳಿಂದ ಶುಚಿ ರುಚಿಯಾದ ಅಡುಗೆ ಸಿದ್ಧಪಡಿಸುತ್ತಿದ್ದು, ಇಲ್ಲಿನ ಅನ್ನದಾನದ ಕುರಿತು ಭಕ್ತರಲ್ಲಿ ವಿಶೇಷವಾದ ಶ್ರದ್ಧೆ, ನಂಬಿಕೆ ಇದೆ.
– ರಾಮಚಂದ್ರ ಭಟ್‌, ಮುಖ್ಯ ಬಾಣಸಿಗ

ಸುಮಾರು 29 ವರ್ಷಗಳಿಂದ ಇಲ್ಲಿ ನಿತ್ಯ ಅನ್ನದಾನ ನಡೆಸಲಾಗುತ್ತಿದೆ. ಈವರೆಗೆ ದೇವರು ಕೈಬಿಟ್ಟಿಲ್ಲ. ಆದಾಯ ಕುರಿತು ಚಿಂತಿಸಿಲ್ಲ. ದೇವರು ನಡೆಸುತ್ತಾರೆ ಎಂಬ ನಂಬಿಕೆಗೆ ಚ್ಯುತಿಯಾಗಿಲ್ಲ.
– ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಆನುವಂಶಿಕ ಆಡಳಿತ ಮೊಕ್ತೇಸರರು

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next