Advertisement

ಜಯ ಸುವರ್ಣರ ಮಾರ್ಗದರ್ಶನ ಅನುಕರಣೀಯ: ಮೋಹನ್‌ ಅಮೀನ್‌

12:32 PM Nov 03, 2020 | Suhan S |

ಮುಂಬಯಿ: ನ. 2: ಸಮಾಜದ ದೂರದೃಷ್ಟಿ ಚಿಂತನೆಯ ವ್ಯಕ್ತಿಯನ್ನು ಕಳಕೊಂಡಾಗ ಸಮಾಜಕ್ಕೆ ಆಗುವ ಬಹುದೊಡ್ಡ ನಷ್ಟವನ್ನು ಅರಗಿಸಿಕೊಳ್ಳಲು ಅಸಾಧ್ಯವಾಗುತ್ತದೆ. ಸಮಾಜದ ಅಭಿವೃದ್ಧಿಯ ಜತೆಗೆ, ಸದಾ ದೂರದೃಷ್ಟಿ ಚಿಂತಕರಾಗಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಪರಿಪಾಲಕರಾಗಿ, ಸಂಘಟನಾ ಚತುರತೆಯ ಮೂಲಕ ಬಿಲ್ಲವ ಜನಾಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟಂತಹ ನಮ್ಮ ಜನನಾಯಕ ಜಯ ಸಿ. ಸುವರ್ಣರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಚಿಂತನೆ ಮಾರ್ಗದರ್ಶನ ನಮಗೆಲ್ಲ ಅನುಕರಣೀಯ ಎಂದು ಬಿಲ್ಲವರ ಅಸೋಸಿಯೇಶನ್‌ ಬೊರಿವಲಿ ದಹಿಸರ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ ಬಿ. ಅಮೀನ್‌ ತಿಳಿಸಿದರು.

Advertisement

ನ. 1ರಂದು ಬಿಲ್ಲವರ ಅಸೋಸಿಯೇಶನ್‌ ಬೊರಿವಲಿ-ದಹಿಸರ್‌ ಸ್ಥಳೀಯ ಸಮಿತಿಯ ಗುರುಸನ್ನಿಧಿ ಆರ್‌. ಎಸ್‌. ಸಿ 3 ಬೆಸ್ಟ್‌ ಕ್ವಾಟ್ರìಸ್‌ ಸಮೀಪದ ಶಿಂಪೋಲಿ ರೋಡ್‌ ಗೋರೈ ಬೊರಿವಲಿ ಪಶ್ಚಿಮ ಇಲ್ಲಿ ಬಿಲ್ಲವರ ಅಸೋಸಿಯೇಶನ್‌ ಮಾಜಿ ಅಜೀವ ಗೌರವಾಧ್ಯಕ್ಷ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಭಾರತ್‌ ಕೋ. ಆಪರೇಟಿವ್‌ ಬ್ಯಾಂಕಿನ ನಿಕಟಪೂರ್ವ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣರ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಸಮಾಜವನ್ನು ಬೆಳೆಸಿ ಅದಕ್ಕೊಂದು ಹೊಸ ಚೈತನ್ಯ ನೀಡಿದ ಮಹಾನ್‌ ವ್ಯಕ್ತಿ ಅವರು ಸಮಾಜವನ್ನು ಬೆಳೆಸಿದ ದೂರದೃಷ್ಟಿ ಚಿಂತನೆಯನ್ನು ಮುನ್ನಡೆಸುವುದು ಭವಿಷ್ಯದಲ್ಲಿ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಲೇಖಕ ಕವಿ ಶಿಮಂತೂರು ಚಂದ್ರಹಾಸ ಸುವರ್ಣ ಮಾತನಾಡಿ, ಜನಾಂಗದ ಪ್ರಗತಿಯ ಜತೆಗೆ ಜಾತ್ಯಾತೀತ ನಿಲುವನ್ನು ಅಳವಡಿಸಿಕೊಳ್ಳುವ ಮೂಲಕ ಅವರ ವ್ಯಕ್ತಿತ್ವ ಅಜರಾಮರವಾಗಿ ಉಳಿಯಲಿದ್ದು, ಪ್ರಗತಿಯ ಚಿಂತಕರಾಗಿ ದೂರದೃಷ್ಟಿ ಚಿಂತನೆಗೆ ಗೆರೆಯನ್ನು ಎಳೆದ ಅವರ ಸಾಧನೆ ಅಪಾರ. ಬಿಲ್ಲವರ ಅಸೋಸಿಯೇಶನ್‌ ಮತ್ತು ಭಾರತ್‌ ಬ್ಯಾಂಕ್‌ ಮುಂದೆಯೂ ಯಶಸ್ವಿಯಾಗಿ ನಡೆಯುವಂತೆ ನಾವು ಮೈಗೂಡಿಸಿಕೊಳ್ಳುವ ದೃಷ್ಟಿಕೋನವೇ ನಾವು ಅವರಿಗೆ ನೀಡುವ ಬಹುದೊಡ್ಡ ಶ್ರದ್ಧಾಂಜಲಿ. ಅಧಿಕಾರದ ಲಾಲಸೆಗಿಂತ ಸಮಾಜಕ್ಕೆ ಅಳಿಲ ಸೇವೆಯೇ ಮುಖ್ಯ ಎಂಬ ವ್ಯಾಖ್ಯೆಯ ಪ್ರತಿಪಾದಕರಾಗಿದ್ದವರು ಜಯ ಸುವರ್ಣರು. ಅವರ ಅಗಲಿಕೆ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಮುಂದಿನ ಜನ್ಮದಲ್ಲೂ ಬಿಲ್ಲವ ಸಮಾಜದಲ್ಲಿ ಅವರು ಹುಟ್ಟಿ ಬರಲಿ ಎಂದು ನುಡಿದರು.

ಮಾಜಿ ಕಾರ್ಯಾಧ್ಯಕ್ಷ ಜಿ. ಎಂ. ಕೋಟ್ಯಾನ್‌ ನುಡಿ ನಮನ ಸಲ್ಲಿಸಿ, ಸಮಾಜ ಸೇವೆಯ ಪ್ರಗತಿಗೆ ಆರ್ಥಿಕ ಅಡಚಣೆ ಯಾವ ರೀತಿ ನಿವಾರಿಸಬೇಕೆಂಬ ಒಳಗುಟ್ಟನ್ನು ಅರಿತ ಸುವರ್ಣರು ಮಾನವೀಯತೆಗೆ ಹೆಸರುವಾಸಿಯಾಗಿದ್ದರು. ಸಮಾಜ ಸೇವೆಯಲ್ಲಿ ಮತ್ತು ಸಂಘಟನೆಯಲ್ಲಿ ಅವರಂಥ ನಿಸ್ಸೀಮರನ್ನು ಪಡೆಯಲು ನಾವು ಸಮಾಜದಲ್ಲಿ ಹುಡುಕಾಟ ಮುಂದುವರಿಸಬೇಕಾಗಿದೆ ಎಂದರು.

ಬೊರಿವಿಲಿ ತುಳು ಸಂಘದ ಅಧ್ಯಕ್ಷ ವಾಸು ಕೆ. ಪುತ್ರನ್‌ ಅವರು ಮಾತನಾಡಿ, ಬಿಲ್ಲವ ಸಮಾಜಕ್ಕೆ ಸೀಮಿತವಾಗಿರದ ಅವರ ಸಮಾಜ ಸೇವೆ ಸಮಾಜದ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಯ ಚಿಂತನೆಯ ವ್ಯಕ್ತಿಯಾಗಿದ್ದರು. ತನ್ನ ವೈಯಕ್ತಿಕ ಉದ್ಯಮದ ಜತೆಗೆ ಸಮಾಜದ ಉದ್ಧಾರಕ್ಕೆ ಹೆಚ್ಚು ಮಹತ್ವ ನೀಡಿದ ವ್ಯಕ್ತಿಯಾಗಿ ಎಲ್ಲರ ಹೃನ್ಮನದಲ್ಲಿ ನೆಲೆಸಲಿದ್ದಾರೆ ಎಂದರು.

Advertisement

ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು ಜಯ ಸಿ. ಸುವರ್ಣರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು, ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಗೌರವ ಕಾರ್ಯದರ್ಶಿ ಕೃಷ್ಣರಾಜ್‌ ಸುವರ್ಣ ಜಯ ಸಿ. ಸುವರ್ಣರ ಸಾಧನೆಯನ್ನು ಗುಣಗಾನ ಮಾಡಿ ಪುಷ್ಪಾಂಜಲಿ ಅರ್ಪಿಸಿದರು. ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ರಜಿತ್‌ ಎಲ್‌. ಸುವರ್ಣ, ಭಾರತ್‌ ಬ್ಯಾಂಕಿನ ನಿರ್ದೇಶಕ ಪ್ರೇಮನಾಥ್‌ ಎ. ಕೋಟ್ಯಾನ್‌, ಧನಂಜಯ ಕೋಟ್ಯಾನ್‌, ಜತೆ ಕಾರ್ಯದರ್ಶಿ ವತ್ಸಲಾ ಪೂಜಾರಿ, ಎಂ. ಎಸ್‌. ಸಾಲ್ಯಾನ್‌, ಕೋಶಾಧಿಕಾರಿ ಅಶೋಕ್‌ ಸಾಲ್ಯಾನ್‌, ಜತೆ ಕೋಶಾಧಿಕಾರಿ ಉಮೇಶ್‌ ಜಿ. ಕೋಟ್ಯಾನ್‌, ಜಯರಾಮ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ಸದಸ್ಯರು ಜಯ ಸುವರ್ಣರ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಮಾತಾಪಿತರು ಇಟ್ಟ ಜಯ ಹೆಸರಿಗೆ ತಕ್ಕಂತೆ ಜಯದ ಹಾದಿಯಲ್ಲಿ ಸಾಗಿದ ಅವರು ಹೆಸರಿಗಿಂತಲೂ ಬಹುದೊಡ್ಡ ಸಾಧಕರೆನಿಸಿ¨ªಾರೆ. ತನ್ನ ಸುವರ್ಣ ಯುಗದಲ್ಲಿ ಭಾರತ್‌ ಬ್ಯಾಂಕ್‌ ಹಣಕಾಸು ಸಂಸ್ಥೆಗೆ ಹೊಸ ರೂಪ ಚೈತನ್ಯ ನೀಡಿ ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಉದ್ಯಮ ಬಯಸುವವರಿಗೆ ಹಣಕಾಸು ನೆರವು ನೀಡುವ ಮೂಲಕ ಸುವರ್ಣರು ಬಹುದೊಡ್ಡ ಸಾಧನೆಗೈದಿದ್ದಾರೆ. ತನ್ನ ಧರ್ಮವನ್ನು ಕಾಪಾಡುವುದರ ಜತೆಗೆ ಬದುಕಿನಲ್ಲಿ ಸಾಧನೆ ಮುಖ್ಯ ಎಂಬುದನ್ನು ತೋರಿಸಿಕೊಟ್ಟವರು. -ಪ್ರಕಾಶ್‌ ಶೆಟ್ಟಿ ಪೇಟೆಮನೆ, ಗೌರವ ಕಾರ್ಯದರ್ಶಿ, ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ

 

ಚಿತ್ರ-ವರದಿ: ರಮೇಶ್‌ ಉದ್ಯಾವರ.

Advertisement

Udayavani is now on Telegram. Click here to join our channel and stay updated with the latest news.

Next