Advertisement

ಸಮತೋಲನಕ್ಕೆ ಬೇಕು ಸರ್ವನಗರಗಳ ಅಭಿವೃದ್ಧಿ

11:37 AM Apr 07, 2017 | |

ಒಂದಂಶವಂತೂ ಸ್ಪಷ್ಟವಾಗುತ್ತಿದೆ. ಬೆಂಗಳೂರಷ್ಟೇ ಅಲ್ಲ, ಬದಲಾಗಿ, ಕರ್ನಾಟಕದ ಇತರೆ ಪ್ರದೇಶಗಳಿಗೂ ಉತ್ತಮ ಮೂಲಸೌಕರ್ಯ ಒದಗಿಸುವ ಅಗತ್ಯತೆಯನ್ನು ರಾಜ್ಯ ಸರಕಾರ ಮನಗಂಡಿದೆ. ಆದಾಗ್ಯೂ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಉಳಿದ ನಗರಗಳು ಬಹಳ ಕಾಲದಿಂದ ಪ್ರಮುಖ ಪಾತ್ರ ವಹಿಸಿಯೇ ಇಲ್ಲ. 

Advertisement

ಹಣಕಾಸು ಖಾತೆಯನ್ನು ಹೊಂದಿರುವಂಥ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ 15ರಂದು ಬಜೆಟ್‌ ಮಂಡಿಸಿ, “ರಾಜ್ಯದಲ್ಲಿ ಮೂಲಸೌಕರ್ಯಾಭಿವೃದ್ಧಿ ಹೆಚ್ಚಿಸುವುದರತ್ತ ನಮ್ಮ ಸರ್ಕಾರ ಗಮನ ಹರಿಸಲಿದೆ’ ಎಂದು ಹೇಳಿದರು. ಒಂದು ವೇಳೆ  ಮುಖ್ಯಮಂತ್ರಿಗಳು  ಈ ಗುರಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದಾದರೆ, ನಗರಾಭಿವೃದ್ಧಿಯೆಡೆಗಿನ ಗಮನವನ್ನು ಬೆಂಗಳೂರಿಗಷ್ಟೇ ಸೀಮಿತಗೊಳಿಸದೇ, ಕರ್ನಾಟಕದ ಇತರೆ ಅಭಿವೃದ್ಧಿಶೀಲ ನಗರಗಳತ್ತ ಹರಿಸುವುದು ಒಳ್ಳೆಯದು. 

ಕರ್ನಾಟಕದ ಒಟ್ಟು ನಗರ ಜನಸಂಖ್ಯೆಯಲ್ಲಿ 36-40 ಪ್ರತಿಶತದಷ್ಟು ಪಾಲು ಬೆಂಗಳೂರೇ ಹೊಂದಿದೆ. ಅತ್ತ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿರುವ ಮೈಸೂರಿನಲ್ಲಿ ಈ ಪ್ರಮಾಣ ಕೇವಲ 4 ಪ್ರತಿಶತದಷ್ಟಿದೆ. ಕರ್ನಾಟಕದ ಎರಡು ಅತಿದೊಡ್ಡ ನಗರಗಳ ನಡುವಿರುವ ಈ ಬೃಹತ್‌ ವ್ಯತ್ಯಾಸವು, ರಾಜ್ಯದಲ್ಲಿ ಅನ್ಯ ನಗರಗಳ ಬೆಳವಣಿಗೆಯ ಅಗತ್ಯ ಎಷ್ಟಿದೆ ಎನ್ನುವುದನ್ನು ಸ್ಪಷ್ಟವಾಗಿ ಸಾರುತ್ತಿದೆ. ಬೆಂಗಳೂರಿನ ಮೇಲಿನ ಒತ್ತಡವನ್ನು ತಗ್ಗಿಸಲು ಮತ್ತು ರಾಜ್ಯದಲ್ಲಿ ಸುಸ್ಥಿರ ಬೆಳವಣಿಗೆಯನ್ನು ಖಾತ್ರಿ ಪಡಿಸಲು ಈ ನಗರ ಪ್ರದೇಶಗಳು ಸಹಾಯ ಮಾಡಲಿವೆ. 

ಒಂದು ವಿಷಯವನ್ನು ನಾವಿಲ್ಲಿ ಗಮನಿಸಬೇಕು. ರಾಜ್ಯದ ನಗರಗಳ ಬೆಳವಣಿಗೆಗೆ ಸಹಕಾರಿಯಾಗುವ “ವಿತ್ತ ಸಂಪನ್ಮೂಲದ’ ಮೇಲಿನ ಬಿಗಿ ಹಿಡಿತವಿರುವುದು ಕರ್ನಾಟಕದ ನಗರಾಭಿವೃದ್ಧಿ ಇಲಾಖೆ(ಯುಡಿಡಿ)ಯ ಕೈಯಲ್ಲಿ. ಇದರಿಂದಾಗಿ, ಸೀಮಿತ ಆದಾಯವಿರುವ ಮುನ್ಸಿಪಾಲಿಟಿಗಳಿಗೆ ಸ್ವಾಯತ್ತತೆ ಸಿಗುವುದೇ ಇಲ್ಲ. ಉದಾಹರಣೆಗೆ, “ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ’ದಂಥ ಬೃಹತ್‌ ಯೋಜನೆಗಳ ಹಣಕಾಸು ನಿರ್ವಹಣೆಯ ಜವಾಬ್ದಾರಿ ಯುಡಿಡಿ ಹಿಡಿತದಲ್ಲಿದೆ. ಇನ್ನು ಪೌರಾಡಳಿತ ನಿರ್ದೇಶನಾಲಯವು (ಡಿಎಂಎ) 10 ಮಹಾನಗರ ಪಾಲಿಕೆಗಳು, 60 ನಗರಸಭೆಗಳು, 114 ಪುರಸಭೆಗಳು, ಸುಮಾರು 90 ಪಟ್ಟಣ ಪಂಚಾಯಿತಿಗಳು ಮತ್ತು 5 ಅಧಿಸೂಚಿತ ಪ್ರದೇಶಗಳನ್ನೊಳಗೊಂಡಂತೆ 250ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳ ಹಣಕಾಸು ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಯುಡಿಡಿ ಅಡಿಯಲ್ಲಿ ಆಗುವ ಖರ್ಚಿನಲ್ಲಿ ಬಹುಪಾಲು ಬರುವುದು ಕೇಂದ್ರದಿಂದ; ಅದೂ ಯೋಜನೆಗಳ ರೂಪದಲ್ಲಿ. ಉದಾಹರಣೆಗೆ, ಈ ಬಾರಿಯ ಬಜೆಟ್‌ನಲ್ಲಿ ನಗರಾಭಿವೃದ್ಧಿಯ ಒಟ್ಟು ವೆಚ್ಚದಲ್ಲಿ ಕೇಂದ್ರೀಯ ಯೋಜನೆಗಳಾದ ಅಮೃತ್‌ ಮತ್ತು ಸ್ಮಾರ್ಟ್‌ ಸಿಟಿ ಯೋಜನೆಗಳಿಗೆ ಮೀಸಲಾದ ಪ್ರಮಾಣವೇ 45 ಪ್ರತಿಶತದಷ್ಟಿದೆ. ಹೀಗಾಗಿ,  ಹಣ ಹಂಚಿಕೆಯ ವಿಚಾರದಲ್ಲಿ ಯುಡಿಡಿಯ ಶಕ್ತಿ ಸೀಮತವಾಗಿಬಿಡುತ್ತದೆ. 

Advertisement

ನಗರಾಭಿವೃದ್ಧಿಯ ಒಟ್ಟು ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿಗಳಿಗಾಗಿ ಮೀಸಲಾದ ಪಾಲು  32 ಪ್ರತಿಶತದಷಿcದೆ. ಹೀಗಾಗೇ, ಈ ಬಾರಿ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ಒಟ್ಟಾರೆ ಮೊತ್ತದಲ್ಲಿ ಬಹುಪಾಲನ್ನು ತಮ್ಮದಾಗಿಸಿಕೊಂಡಿವೆ.

ಇನ್ನು ಸರಳ ಯೋಜನೆಗಳ ವಿಷಯಕ್ಕೆ ಬಂದಾಗ, ಹಣ ಹಂಚಿಕೆಯು ಬೆಂಗಳೂರಿನತ್ತಲೇ ಹೆಚ್ಚು ಕೇಂದ್ರಿತವಾಗಿರುತ್ತದೆ. ನಗರ ಪ್ರದೇಶಗಳಲ್ಲಿ ಮೂಲಭೂತ ವ್ಯವಸ್ಥೆಯನ್ನು ಖಾತ್ರಿ ಪಡಿಸಲು ಜಾರಿಯಲ್ಲಿರುವ ಅಮೃತ್‌ ಯೋಜನೆಯ ವ್ಯಾಪ್ತಿಯಲ್ಲಿ ಕರ್ನಾಟಕದ 27 ನಗರಗಳಿವೆ. 2015-2016ರ ರಾಜ್ಯದ ವಾರ್ಷಿಕ ಕ್ರಿಯಾಯೋಜನೆಯ ಅನ್ವಯ, ಬೆಂಗಳೂರಿಗೆ 800 ಕೋಟಿ ರೂಪಾಯಿ ಮಂಜೂರಾಗಿದ್ದರೆ, ಉಳಿದ 14 ನಗರಗಳಿಗೆ ತಲಾ 160 ಕೋಟಿ ರೂಪಾಯಿ ಮಂಜೂರಾಗಿದೆ. ಬೆಂಗಳೂರಿನ ಜನಸಂಖ್ಯೆಯನ್ನು ಪರಿಗಣಿಸಿ, ರಾಜಧಾನಿಯ ನಿವಾಸಿಗಳಿಗೆ ಒಟ್ಟಾರೆ ಮೊತ್ತದಲ್ಲಿ ಅರ್ಧ ಅಥವಾ ನಾಲ್ಕನೇ ಒಂದು ಭಾಗದಷ್ಟು ಮಂಜೂರು ಮಾಡಲಾಗಿದೆ. ಜನಸಂಖ್ಯೆಯಿಂದಾಗಿ ರಾಜಧಾನಿಯ ಮೇಲೆ ಉದ್ಭವವಾಗಿರುವ ಒತ್ತಡವನ್ನು ತಲೆಯಲ್ಲಿಟ್ಟುಕೊಂಡು ಈ ರೀತಿ ಮಂಜೂರು ಮಾಡಲಾಗಿದೆ. ಹಾಗೆಂದು ಇದು ಕೆಟ್ಟ ನಡೆಯೇನೂ ಅಲ್ಲ. ಆದರೆ ಬಿಎಂಆರ್‌ಸಿಎಲ್‌ ಅಥವಾ ಸ್ಟೀಲ್‌ ಫ್ಲೈ ಓವರ್‌ನಂಥ ದೊಡ್ಡ ದೊಡ್ಡ ಸೌಲಭ್ಯಗಳಿಂದಲೂ ಗಮನಸೆಳೆಯುತ್ತಿದೆಯಲ್ಲ ಬೆಂಗಳೂರು?  

ಇದೇನೇ ಇದ್ದರೂ, ರಾಜಧಾನಿಯನ್ನೂ ದಾಟಿ ಕರ್ನಾಟಕದ ಸಣ್ಣ ಪಟ್ಟಣಗಳ ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರವಾಗಿಡಲು ರಾಜ್ಯ ಸರಕಾರ ಹಲವು ಯೋಜನೆಗಳನ್ನು ನಿರ್ವಹಿಸುತ್ತಿದೆ. ಉದಾಹರಣೆಗೆ, ಉತ್ತರ ಕರ್ನಾಟಕ ನಗರ ಪ್ರದೇಶ ಹೂಡಿಕೆ ಕಾರ್ಯಕ್ರಮ(ಎನ್‌ಕೆಯುಎಸ್‌ಐಪಿ). ಉತ್ತರ ಕರ್ನಾಟಕ ಭಾಗದ‌ 5 ಮುನ್ಸಿಪಲ್‌ ಕಾರ್ಪೊರೇಷನ್‌ಗಳಲ್ಲಿನ ಸೇವೆ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸುವುದಕ್ಕಾಗಿ ಈ ಕಾರ್ಯಕ್ರಮ ರೂಪ ಪಡೆದಿದೆ. ಈ ವರ್ಷದ ಬಜೆಟ್‌ನಲ್ಲಿ ಈ ಕಾರ್ಯಕ್ರಮಕ್ಕಾಗಿ ನಗರಾಭಿವೃದ್ಧಿಗೆ ಮೀಸಲಿಡಲಾದ ಒಟ್ಟು ಮೊತ್ತದಲ್ಲಿ 15 ಪ್ರತಿಶತ ಪಾಲು ನೀಡಲಾಗಿದೆ. 

ಇದಷ್ಟೇ ಅಲ್ಲ, ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮಕ್ಕೆ(ಸಿಎಂಎಸ್‌ಎಂಟಿಡಿಎಸ್‌ಧಿ) ಎರಡನೆಯ ಹಂತವಾಗಿ 2,060 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಸಣ್ಣ ಮತ್ತು ಮಧ್ಯಮ ಪಟ್ಟಣಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ಪೌರಾಡಳಿತ ಸೇವೆಗಳನ್ನು ಎಲ್ಲಾ ಪಟ್ಟಣಗಳಿಗೆ ವಿಸ್ತರಿಸಲು ಅಸ್ತಿತ್ವಕ್ಕೆ ಬಂದ ಯೋಜನೆಯಿದು. ಹೀಗಾಗಿ, ಒಂದಂಶವಂತೂ ಸ್ಪಷ್ಟವಾಗುತ್ತಿದೆ. ಬೆಂಗಳೂರಷ್ಟೇ ಅಲ್ಲ, ಬದಲಾಗಿ, ಇತರೆ ಪ್ರದೇಶಗಳಿಗೂ ಉತ್ತಮ ಮೂಲಸೌಕರ್ಯ ಒದಗಿಸುವ ಅಗತ್ಯತೆಯನ್ನು ರಾಜ್ಯ ಸರಕಾರ ಮನಗಂಡಿದೆ. ಆದಾಗ್ಯೂ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಈ ನಗರಗಳು ಬಹಳ ಕಾಲದಿಂದ ಪ್ರಮುಖ ಪಾತ್ರ ವಹಿಸಿಯೇ ಇಲ್ಲ. ಕರ್ನಾಟಕದ “ನಗರ ಸಮತೋಲನ’ವನ್ನು ಕಾಯ್ದುಕೊಳ್ಳಲು-ರೂಪಾಂತರಿಸಲು ಈ ನಗರಗಳ ವಿಷಯದಲ್ಲಿ ದೂರದೃಷ್ಟಿ ಬೆಳೆಸಿಕೊಳ್ಳುವ ಮತ್ತು ನಾಟಕೀಯ ರೀತಿಯಲ್ಲಿ ಬೃಹತ್‌ ಹೂಡಿಕೆ ಮಾಡುವ ಅಗತ್ಯವಿದೆ. 

 ದೇವಿಕಾ ಖೇರ್‌
(ಲೇಖಕರು ಬೆಂಗಳೂರಿನ ತಕ್ಷಶಿಲಾ ಸಂಸ್ಥೆಯಲ್ಲಿ ಸಂಶೋಧಕರು)

Advertisement

Udayavani is now on Telegram. Click here to join our channel and stay updated with the latest news.

Next