Advertisement

ಆತ್ಮರಕ್ಷಣೆಗೆ ಮುಲಾಜಿಲ್ದೆ ಗುಂಡು ಹಾರಿಸಿ

11:43 AM Jan 21, 2018 | Team Udayavani |

ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಹೆಚ್ಚುತ್ತಿರುವ ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌, ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಮುಂದಾಗುವವರ ಮೇಲೆ ಗುಂಡು ಹಾರಿಸುವಂತೆ ಆದೇಶ ನೀಡಿದ್ದಾರೆ.

Advertisement

ಪೊಲೀಸರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ ಬೆನ್ನಲ್ಲೇ, ಶನಿವಾರ ಸುದ್ದಿಗೋಷ್ಠಿ ನಡೆಸಿದ ಸುನಿಲ್‌ ಕುಮಾರ್‌, ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ, ಕುಡಿದುದಾಂಧಲೆ ನಡೆಸುವುದು ಹಾಗೂ ಠಾಣೆ ಆಸ್ತಿ-ಪಾಸ್ತಿಗಳ ಧಕ್ಕೆ ಮಾಡಿದರೆ ಮುಲಾಜಿಲ್ಲದೆ ಗುಂಡು ಹಾರಿಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಪೊಲೀಸರಿಗೆ ಬಂದೂಕು ನೀಡಿರುವುದು ಆತ್ಮರಕ್ಷಣೆಗೆ, ಅಪರಾಧಗಳನ್ನು ನಿಯಂತ್ರಿಸಲು ಬಲಪ್ರಯೋಗ ಮಾಡಬಹುದು. ಹೀಗಾಗಿ ಕರ್ತ್ಯವ್ಯಕ್ಕೆ ಅಡ್ಡಿ ಪಡಿಸಿದಲ್ಲದೇ, ಹಲ್ಲೆ ನಡೆಸಿದರೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಎಂದು ಆದೇಶಿಸಿದ್ದೇನೆ ಎಂದು ತಿಳಿಸಿದರು.

ಕೆ.ಜಿ.ಹಳ್ಳಿ, ಬಾಣಸವಾಡಿ, ಜೀವನ್‌ ಭೀಮಾನಗರ ಠಾಣೆ, ಎಚ್‌ಎಎಲ್‌ ಠಾಣೆ ಹಾಗೂ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಪೊಲೀಸರ ಮೇಲಿನ ಹಲ್ಲೆ ಪ್ರಕರಣದ ಆರೋಪಿಗಳು ರೌಡಿಶೀಟರ್‌ಗಳಲ್ಲ. ಮದ್ಯದ ಅಮಲಿನಲ್ಲಿ ಬಂಧಿಸಲು ಮುಂದಾದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೂ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಕ್ರಿಮಿನಲ್‌ ಕೇಸ್‌: ಇತ್ತೀಚೆಗೆ ಜೀವನ್‌ ಭೀಮಾನಗರದಲ್ಲಿ ಕೇರಳ ಮೂಲದ ಯುವಕರು ಕುಡಿದು ಗಲಾಟೆ ನಡೆಸುತ್ತಿದ್ದರು. ಅವರನ್ನು ಬಂಧಿಸಲು ಹೋದಾಗ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ಮಾರಕಾಸ್ತ್ರ ಇಟ್ಟುಕೊಂಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆ, ಮಹಿಳಾ ಪಿಎಸ್‌ಐ ಸಮವಸ್ತ್ರ ಎಳೆದಾಡಿರುವುದು ಸೇರಿದಂತೆ ಆರೋಪಿಗಳ ವಿರುದ್ಧ ಗಂಭೀರ ಪ್ರಕರಣಗಳಡಿ ಬಂಧಿಸಲಾಗಿದೆ.

Advertisement

ಕೆ.ಜಿ.ಹಳ್ಳಿ ಪ್ರಕರಣದಲ್ಲಿ ಆಫ್ರಿಕಾದ ಕಾಂಗೋ ದೇಶದ ಇಬ್ಬರನ್ನು ಬಂಧಿಸಲಾಗಿದೆ. ಜೆ.ಜೆ.ನಗರ ಪ್ರಕರಣ ಆರೋಪಿ ಮೊಹಮ್ಮದ್‌ ಅಲೀಂ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು, ಸದ್ಯದಲ್ಲೇ ಬಂಧಿಸುತ್ತೇವೆ. ಹಾಗೆಯೇ ಕೊಡಿಗೇಹಳ್ಳಿಯಲ್ಲಿ ಪೊಲೀಸರ ಬಂದೂಕು ಕಸಿದಿರುವ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಬಂದೂಕು ಹೊಂದುವುದು ಕಡ್ಡಾಯ: ಬೀಟ್‌ ಪೊಲೀಸರು ಕಡ್ಡಾಯವಾಗಿ ಪೊಲೀಸ್‌ ಬಂದೂಕುಗಳನ್ನು ಕೊಂಡೊಯ್ಯಬೇಕು. ರಾತ್ರಿ ಗಸ್ತು ಹಾಗೂ ಕರ್ತವ್ಯದ ವೇಳೆ ಸೂಕ್ಷ್ಮ ಪ್ರದೇಶಗಳಲ್ಲಿ ಒಬ್ಬರೇ ಓಡಾಡುವ ಬದಲು ಮೂರ್ನಾಲ್ಕು ಮಂದಿ ಒಟ್ಟಿಗೆ ಹೋಗುವಂತೆ ಸೂಚಿಸಿದ್ದೇನೆ.

ಹಾಗೆಯೇ ಕುಡಿದು ವಾಹನ ಚಲಾಯಿಸುವವರು ಮತ್ತು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸಂಚಾರ ಪೊಲೀಸರ ಕಾರ್ಯಾಚರಣೆ ವೇಳೆ ಕೆಲವರು ಪ್ರತಿರೋಧ ವ್ಯಕ್ತಪಡಿಸಿ¨ªಾರೆ. ಅದನ್ನು ವಿಡಿಯೊ ರೆಕಾರ್ಡ್‌ ಮಾಡಿಕೊಳ್ಳಬೇಕು, ಬಾಡಿ ವಾರೆಂಟ್‌ ಜಾರಿ ಮಾಡಬೇಕು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿಸುವಂತೆ ಸೂಚನೆ ನೀಡಲಾಗಿದೆ ಎಂದು ಸುನಿಲ್‌ಕುಮಾರ್‌ ತಿಳಿಸಿದರು.

ಅವಧಿ ಮೀರುವ ಬಾರ್‌ ಬಂದ್‌: “ಈಗಾಗಲೇ ತಡರಾತ್ರಿ ಒಂದು ಗಂಟೆವರೆಗೆ ಬಾರ್‌ ಮತ್ತು ವೈನ್ಸ್‌ ಸ್ಟೋರ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಒಂದು ವೇಳೆ 1 ಗಂಟೆ ನಂತರವೂ ತೆರೆದರೆ ಅಂತಹ ಬಾರ್‌ಗಳನ್ನು 7ರಿಂದ10 ದಿನಗಳ ಕಾಲ ಮುಚ್ಚಿಸುವ ಅಧಿಕಾರ ಪೊಲೀಸರಿಗಿದೆ.

ಪಿಎಸ್‌ಐ ಸೇರಿದಂತೆ ಮೇಲಿನ ಎಲ್ಲ ಅಧಿಕಾರಿಗಳಿಗೆ ಈ ಅಧಿಕಾರವಿದೆ. ಈ ರೀತಿ ಅಬಕಾರಿ ನಿಯಮ ಉಲ್ಲಂ ಸಿದ ಟೈಮ್ಸ್‌ ಬಾರ್‌ ಸೇರಿದಂತೆ 20-25 ಬಾರ್‌ಗಳನ್ನು ಮುಚ್ಚಿಸಲಾಗಿದೆ. ಮತ್ತೂಂದೆಡೆ ಅಬಕಾರಿ ಇಲಾಖೆ ಕೂಡ ಈ ಕೆಲಸ ಮಾಡುತ್ತಿದೆ,’ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ಕುಮಾರ್‌ ತಿಳಿಸಿದ್ದಾರೆ.

ಜನವರಿಯಲ್ಲಿ ಪೊಲೀಸರ ಮೇಲೆ ನಡೆದ ಹತ್ತು ಹಲ್ಲೆ ಪ್ರಕರಣಗಳು
* ಜ.2ರಂದು ರಾತ್ರಿ 12 ಗಂಟೆ ಸುಮಾರಿಗೆ ಹುಳಿಮಾವು ಸಂಚಾರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಪುಟ್ಟಸ್ವಾಮಿ ಮೇಲೆ ಮೈಕೋಲೇಔಟ್‌ನಲ್ಲಿ ದುಷ್ಕರ್ಮಿಯಿಂದ ಹಲ್ಲೆ.

* ಜ.11ರ ರಾತ್ರಿ 12 ಗಂಟೆಗೆ ಕಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕವಾಗಿ ಮದ್ಯ ಸೇವಿಸುತ್ತಿದ್ದನ್ನು ಪ್ರಶ್ನಿಸಿದ ಬಾಣಸವಾಡಿ ಠಾಣೆ ಮುಖ್ಯಪೇದೆ ಮಂಜುನಾಥ್‌ ಮತ್ತು ಪೇದೆ ಭೂತಯ್ಯ ಮೇಲೆ ಐವರು ಆರೋಪಿಗಳು. ಜ.19ರಂದು ಆರೋಪಿಗಳ ಬಂಧನ.

* ಜ.12ರ ತಡರಾತ್ರಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಮದ್ಯಪಾನ ತಪಾಸಣೆ ನಡೆಸುತ್ತಿದ್ದ ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆ ಎಎಸ್‌ಐ ವೆಂಕಟೇಶ್‌ ಹಾಗೂ ಪೇದೆ ಶ್ರೀಶೈಲ ಮೇಲೆ ಮೂವರು ಆರೋಪಿಗಳಿಂದ ಹಲ್ಲೆ. ಬಸವೇಶ್ವರ ನಗರದ ಕಿರಣ್‌, ಚಂದ್ರು ಹಾಗೂ ಶ್ರೀನಿವಾಸಗೌಡ ಎಂಬ ಆರೋಪಿಗಳ ಬಂಧನ.

* ಜ.14ರ ರಾತ್ರಿ ಆಫ್ರಿಕಾದ ಕಾಂಗೋ ಪ್ರಜೆಗಳಿಬ್ಬರು ರಸ್ತೆ ಅಪಘಾತವೆಸಗಿದ್ದು, ಇದನ್ನು ಪ್ರಶ್ನಿಸಿದ ಕೆ.ಜಿ.ಹಳ್ಳಿ ಠಾಣೆ ಪೇದೆ ಆನಂದ್‌ ಹಾಗೂ ಮುಖ್ಯಪೇದೆ ಮಲ್ಲಿಕಾರ್ಜನಯ್ಯ ಮೇಲೆ ಹಲ್ಲೆ ನಡೆಸಿದ್ದರು. ಜ.19ರಂದು ಯುವತಿ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

* ಜ.15ರ ತಡರಾತ್ರಿ 2 ಗಂಟೆ ಸುಮಾರಿಗೆ ಪಾನಮತ್ತ ಟೆಕ್ಕಿಗಳಿಂದ ಎಚ್‌ಎಎಲ್‌ ಸಬ್‌ಇನ್ಸ್‌ಪೆಕ್ಟರ್‌ ನವೀನ್‌ ಮತ್ತು ಪೇದೆ ಮೋಹನ್‌ ಮೇಲೆ ಹಲ್ಲೆ. ಮೂವರು ಆರೋಪಿಗಳ ಸೆರೆ.

* ಜ.15ರಂದು ಶೆಟ್ಟಿಹಳ್ಳಿಯ ಅಂಜನಾದ್ರಿ ಬಡಾವಣೆಯಲ್ಲಿ ಮಹಾಲಕ್ಷ್ಮೀ ಲೇಔಟ್‌ ಠಾಣೆ ಮುಖ್ಯ ಪೇದೆ ಅನಿಲ್‌ ಕುಮಾರ್‌ ಮೇಲೆ ಬೈಕ್‌ ಸವಾರನಿಂದ ಹಲ್ಲೆ.

* ಜ.15ರಂದು ಪೊಲೀಸ್‌ ಸಿಬ್ಬಂದಿಯ ಸಮವಸ್ತ್ರ ಹರಿದ ದುಷ್ಕ ರ್ಮಿಗಳು. ಪ್ರಕರಣ ಸಂಬಂಧ ಬಾಗಲಕುಂಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

* ಜ.16ರಂದು ರಾತ್ರಿ 11.30ರ ಸುಮಾರಿಗೆ ಜಗಳ ಬಿಡಿಸಲು ಹೋದ ಜಗಜೀವನ್‌ರಾಂ ನಗರ ಠಾಣೆ ಮುಖ್ಯ ಪೇದೆ (ಹೊಯ್ಸಳ ಚಾಲಕ) ಕೆ.ರಾಜೇಂದ್ರ ಅವರ ಮೇಲೆ ಮಚ್ಚಿನಿಂದ  ಹಲ್ಲೆ ನಡೆಸಿದ ರೌಡಿಶೀಟರ್‌  ಮೊಹಮದ್‌ ಅಲೀಂ.

* ಜ.18ರ ಬೆಳಗಿನಜಾವ ಕಳ್ಳತನಕ್ಕೆ ಸಿದ್ಧರಾಗಿದ್ದ ಗುಂಪೊಂದನ್ನು ತಡೆಯಲು ಹೋದ ಕೊಡುಗೆಹಳ್ಳಿ ಪೊಲೀಸ್‌ ಠಾಣೆಯ ಪರಮೇಶ್ವರಪ್ಪ ಮತ್ತು ಸಿದ್ದಪ್ಪ ಮೇಲೆ ಹಲ್ಲೆ ನಡೆಸಿ ರೈಫ‌ಲ್‌ ಕಸಿದು ಪರಾರಿಯಾದಗಿದ್ದ ದುಷ್ಕರ್ಮಿಗಳು.

* ಜ.18ರ ತಡರಾತ್ರಿ ಗಸ್ತು ತಿರುಗುತ್ತಿದ್ದ ಜೀವನ್‌ ಭೀಮಾನಗರ ಠಾಣೆಯ ಮಹಿಳಾ ಪಿಎಸ್‌ಐಗೆ ಲೈಂಗಿಕ ಕಿರುಕುಳ ನೀಡಿದ ದುಷ್ಕರ್ಮಿಗಳು. ತಿಪ್ಪಸಂದ್ರದ ವಿಜಯಾನಂದ (26), ಜೀತು (26), ಸಚೀನ್‌ (25), ಅಖೀಲ್‌ ಜೋಸೆ (27) ಬಂಧನ.

ನಗರ ಪೊಲೀಸ್‌ ಆಯುಕ್ತರು ಹೇಳಿದ್ದು…
-ಪೊಲೀಸರಿಗೆ ಬಂದೂಕು ನೀಡುವುದು ಆತ್ಮಹರಕ್ಷಣೆಗೆ
-ಅಪರಾಧಗಳನ್ನು ತಡೆಯಲು ಬಲಪ್ರಯೋಗ ಮಾಡಬಹುದು
-ನಿಮ್ಮ ಮೇಲೇ ಹಲ್ಲೆಗೆ ಬಂದರೆ ಮುಲಾಜಿಲ್ಲದೆ ಗುಂಡು ಹಾರಿಸಿ
-ತಪಾಸಣೆಗೆ ಪ್ರತಿರೋಧ ತೋರಿದರೆ ವಿಡಿಯೊ ರೆಕಾರ್ಡ್‌ ಮಾಡಿ
-ಹರಿಹಾಯಲು ಬಂದವರ ವಿರುದ್ಧ ಬಾಡಿ ವಾರೆಂಟ್‌ ಜಾರಿ ಮಾಡಿ
-ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿಸಿ

ಬೆಂಗಳೂರು ನಗರದಲ್ಲಿ ಏಳು ದಿನದಲ್ಲಿ 13 ಮಂದಿ ಪಿಎಸ್‌ಐ ಸೇರಿ ಪೊಲೀಸ್‌ ಪೇದೆಗಳ ಮೇಲೆ ದಾಳಿ ನಡೆದಿದೆ. ಪೊಲೀಸರೇ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಶ್ರೀಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು. ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಸಮಾಜಘಾತುಕ ಶಕ್ತಿಗಳು ಕ್ರಿಯಾಶೀಲವಾಗಲು ಕಾರಣ ಏನು? ವೇಕ್‌ಅಪ್‌ ಸಿದ್ದರಾಮಯ್ಯ.
-ಸಿ.ಟಿ.ರವಿ, ಬಿಜೆಪಿ ಮುಖಂಡ

ಸಮವಸ್ತ್ರದಲ್ಲಿರುವ ಪೊಲೀಸರೇ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ ಜನ ಸಾಮಾನ್ಯರ ಗತಿ ಏನು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ವಾರದಲ್ಲಿ 13 ಮಂದಿ ಪಿಎಸ್‌ಐ ಸೇರಿ ಪೊಲೀಸ್‌ ಪೇದೆಗಳ ಮೇಲೆ ನಡೆದ ದಾಳಿಯೇ ಸಾಕ್ಷಿ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next