Advertisement

ಜಿಲ್ಲಾದ್ಯಂತ ದೇಗುಲಗಳಲ್ಲಿ ಶಿವ ನಾಮಸ್ಮರಣೆ

07:45 AM Mar 05, 2019 | Team Udayavani |

ಮಂಡ್ಯ: ಮಹಾಶಿವರಾತ್ರಿ ಪ್ರಯುಕ್ತ ಜಿಲ್ಲೆಯ ಹಲವು ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ರುದ್ರ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸೋಮವಾರ ಶ್ರದ್ಧಾ-ಭಕ್ತಿಯಿಂದ ನಡೆದವು. ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭಕ್ತಾದಿಗಳು ತೆರಳಿ ಪೂಜೆ ಸಲ್ಲಿಸಿದರು. ಎಲ್ಲಾ ದೇವಾಲಯಗಳಲ್ಲೂ ಮಹಿಳೆಯರಿಂದ ಜಾಗರಣೆ, ಹರಿಕಥೆ, ಶಿವ ಪಾರಾಯಣ, ಜಪ-ತಪಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮಂಗಳವಾರ ಮುಂಜಾನೆಯವರೆಗೂ ಸಂಭ್ರಮದಿಂದ ನೆರವೇರಿದವು. 

Advertisement

ಶ್ರೀ ಅರಕೇಶ್ವರಸ್ವಾಮಿಗೆ ವಿಶೇಷ ಪೂಜೆ: ಮಂಡ್ಯದ ಗುತ್ತಲು ಸಮೀಪವಿರುವ ಶ್ರೀ ಅರಕೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 4.30ರಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆದವು. ಕ್ಷೀರ, ಮೊಸರು, ಎಳನೀರು, ಗಂಧ, ಜೇನುತುಪ್ಪ, ಸಕ್ಕರೆ, ನಿಂಬೆಹಣ್ಣು, ಪಂಚಾಮೃತಾಭಿಷೇಕ, ಅರಿಶಿನ-ಕುಂಕುಮ, ಬಿಲ್ವಪತ್ರ ಅರ್ಚನೆ ಮಾಡಲಾಯಿತು. ಮುಂಜಾನೆಯಿಂದಲೇ ಭಕ್ತರ ದಂಡು ದೇವಾಲಯದತ್ತ ಹರಿದುಬಂದಿತ್ತು. ಶ್ರೀ ಅರಕೇಶ್ವರ ಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಿ ತೀರ್ಥ-ಪ್ರಸಾದ ಸ್ವೀಕರಿಸಿ ಧನ್ಯತಾ ಭಾವದಿಂದ ನಡೆಯುತ್ತಿದ್ದರು. ದೇವಾಲಯದಲ್ಲಿ ರಾತ್ರಿ ಪೂರ್ತಿ ಶಿವ ಪಾರಾಯಣ ನಡೆಯಿತು.

ನಗರದ ಪ್ರಮುಖ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಸಕಲೇಶ್ವರಸ್ವಾಮಿ ದೇವಾಲಯದಲ್ಲೂ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬೆಳ್ಳಿಯ ನಾಗಾಭರಣವನ್ನು ಧರಿಸಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶಂಕರನಗರದಲ್ಲಿರುವ ಮಲೇ ಮಹದೇಶ್ವರಸ್ವಾಮಿ, ಶಂಕರಮಠದ ಆದಿ ಚುಂಚನಗಿರಿ ಶಾಖಾ ಮಠದಲ್ಲಿರುವ ಶ್ರೀ ಗವಿಗಂಗಾಧರೇಶ್ವರ ಸ್ವಾಮಿಗೆ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಅಭಿಷೇಕ, ಪೂಜೆ, ಅಲಂಕಾರ ನಡೆಸಲಾಗಿತ್ತು. ಬೆಳಗ್ಗೆಯಿಂದಲೇ ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. 

ಶ್ರೀ ಶನೇಶ್ವರ ದೇವಸ್ಥಾನ: ನಗರದ ಹೊಸಹಳ್ಳಿ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಸಂಜೆ 5 ಗಂಟೆಗೆ ಹೂ ಹೊಂಬಾಳೆ, ಬಾಯಿಬೀಗ ಹಾಗೂ ವಿಶೇಷ ಪುಷ್ಪಾಲಂಕಾರದೊಂದಿಗೆ ಉತ್ಸವ ಮೂರ್ತಿಯ ದರ್ಶನ ಏರ್ಪಡಿಸಲಾಗಿತ್ತು.  ರಾತ್ರಿ 9.30ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ನಾಟಕ, ಭರತನಾಟ್ಯ, ಭಕ್ತಿಗೀತೆಗಳ ಗಾಯನ ಹರಿಕಥೆ ಕಾರ್ಯಕ್ರಮ ನಡೆಯಿತು. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಸ್ವಾಮಿಯ ಉಯ್ನಾಲೆ, ಊರಿನ ರಾಜ ಬೀದಿಗಳಲ್ಲಿ ಭವ್ಯ ಮೆರವಣಿಗೆ, ಬೆಳಗ್ಗೆ 7.30ಕ್ಕೆ ತಲೆಮುಡಿ, 8 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನ: ಹಾಲಹಳ್ಳಿಯ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಹಬ್ಬದ ಪೂಜಾ ಮಹೋತ್ಸವ ನಡೆಯಿತು. ಸಂಜೆ 7 ಗಂಟೆಗೆ ಹಾಲಹಳ್ಳಿ ಚನ್ನಯ್ಯ ಪಾರ್ಕ್‌ ಮುಂಭಾಗವಿರುವ ನಾಗರಗುಡಿಯಿಂದ ಶ್ರೀ ಮಹದೇಶ್ವರ ಸ್ವಾಮಿ ದೇವರ ಉತ್ಸವದೊಂದಿಗೆ ಮೀಸಲು ನೀರು ತರಲಾಯಿತು. ನಂತರ ವಿಶೇಷ ಪೂಜೆ, ಅಭಿಷೇಕಗಳು ನಡೆದವು. 

Advertisement

ತಾಲೂಕಿನ ಸಂತೆಕಸಲಗೆರೆ ಗ್ರಾಮದ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ 17ನೇ ವರ್ಷದ ಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ. ಗಣಪತಿ ಹೋಮ, ರುದ್ರಹೋಮ, ಚಂಡಿಕಾಹೋಮ ಮತ್ತು ಪೂರ್ಣಾಹುತಿ ನಡೆಯಲಿದ್ದು, ಬಳಿಕ ಕರಗ ಮಹೋತ್ಸವ ಹಾಗೂ ಶನೇಶ್ವರಸ್ವಾಮಿ ಮುತ್ತಿನ ಪಲ್ಲಕ್ಕಿ ರಥೋತ್ಸವ, ಬಾಯಿಬೀಗ, ಮೀಸಲು ನೀರು ತರಲಾಯಿತು.  ಹರಿಕೆ ಮುಡಿ, ಪೂಜಾ ಕುಣಿತ, ವೀರಗಾಸೆ, ದೊಣ್ಣೆವರಸೆ ಮತ್ತು ಕೋಲಾಟ ಕಾರ್ಯಕ್ರಮಗಳು ನಡೆಯಲಿದೆ.  

ಮದ್ದೂರು ತಾಲೂಕಿನ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಜಾತ್ರಾ ಮಹೋತ್ಸವ ನಡೆಯಲಿದೆ. ದನಗಳ ಜಾತ್ರೆ, ರಥೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜಾ ವಿಧಿ ವಿಧಾನಗಳು ನಡೆದವು. ಮದ್ದೂರು ತಾಲೂಕು ವೈದ್ಯನಾಥಪುರ ಗ್ರಾಮದಲ್ಲಿರುವ ಶ್ರೀ ವೈಧ್ಯನಾಥೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಬ್ಬನಹಳ್ಳಿ ಗ್ರಾಮದ ಶ್ರೀ ಸೀತಾಳಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು.

ಮಂಗಳವಾರದಿಂದ ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಮಂಗಳವಾರ ಬಂಡಿಉತ್ಸವ, ಬುಧವಾರ ಕೊಂಡೋತ್ಸವ, ಗುರುವಾರ ಮಡೆ ಮತ್ತು ಬಾಯಿಬೀಗ, ಶುಕ್ರವಾರ ರಥೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ನಾಗಮಂಗಲ ತಾಲೂಕಿನ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯ, ಆದಿಚುಂಚನಗಿರಿ ಮಠದ ಶ್ರೀ ಭೈರವೇಶ್ವರ, ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲೂ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಭಕ್ತರ ದಂಡು ಹರಿದು ಬಂದು ದರ್ಶನ ಪಡೆದರು. 

ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಭ ದೇವಾಲಯದಲ್ಲಿರುವ ಶಿವನಗುಡಿಯಲ್ಲಿ ವಿಶೇಷ ಪೂಜೆ ನಡೆಯಿತು. ಘೋಸಾಯಿಘಾಟ್‌ನ ಶ್ರೀ ಕಾಶಿವಿಶ್ವಾನಾಥ, ಚಂದ್ರವನದಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ  ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪಾಂಡವಪುರ, ಕೆ.ಆರ್‌. ಪೇಟೆ, ಮಳವಳ್ಳಿ ತಾಲೂಕುಗಳಲ್ಲಿರುವ ಎಲ್ಲ ಶಿವ ದೇವಳಗಳಲ್ಲಿ ವಿಶೇಷ ಪೂಜೆ, ಭಜನೆ, ಹರಿಕಥೆ, ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಸಾಂಗೋಪಸಾಂಗವಾಗಿ ನೆರವೇರಿದವು. ಜಿಲ್ಲೆಯ ಎಲ್ಲ ಶಿವಾಲಯಗಳಲ್ಲೂ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜೆ, ಭಜನೆ, ಹರಿಕಥೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

Advertisement

Udayavani is now on Telegram. Click here to join our channel and stay updated with the latest news.

Next