Advertisement

ವೈಭವದ ಸಿದ್ಧಗಂಗೆ ಶಿವರಾತ್ರಿ ರಥೋತ್ಸವ

07:25 AM Mar 06, 2019 | Team Udayavani |

ತುಮಕೂರು: ಸಿದ್ಧಗಂಗೆಯ ಸಿದ್ಧಲಿಂಗೇಶ್ವರ ಸ್ವಾಮಿಯವರ ಮಹಾಶಿವರಾತ್ರಿ ರಥೋತ್ಸವ ಮಂಗಳವಾರ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

Advertisement

ಬೇಡಿ ಬಂದ ಭಕ್ತರ ಇಷ್ಟಾರ್ಥ ನೆರವೇರಿಸುವ ತಪೋನಿಷ್ಠೆಯ ಸಿದ್ಧಿ ರೂಪವಾಗಿ ಉದ್ಭವವಾದ ಗಂಗೆಯು ನೆಲೆಸಿರುವ ಶ್ರೀ ಕ್ಷೇತ್ರ ಸಿದ್ಧಗಂಗೆಯಲ್ಲಿ ಕ್ಷೇತ್ರದ ಆರಾಧ್ಯ ದೈವ ಸಿದ್ಧಲಿಂಗೇಶ್ವರ ಸ್ವಾಮಿಯವರ ರಥೋತ್ಸವದಲ್ಲಿ ಸಾವಿರಾರು ಭಕ್ತರು ಸುಡು ಬಿಸಿಲನ್ನೂ ಲೆಕ್ಕಿಸದೆ ಭಾಗವಹಿಸಿ ರಥಕ್ಕೆ ಬಾಳೆಹಣ್ಣು, ದವನ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.

ಮಂಗಳವಾರ ಮಧ್ಯಾಹ್ನ ಸಿದ್ಧಲಿಂಗೇಶ್ವರ ಸ್ವಾಮಿಯವರನ್ನು ಅಭೂತಪೂರ್ಣ ವಸ್ತ್ರಗಳಿಂದ ಸುವರ್ಣ ಕಲಶಗಳಿಂದ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಳಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕೃತವಾದ ರಥದಲ್ಲಿ ಮಧ್ಯಾಹ್ನ 12.10ಕ್ಕೆ ಕೂರಿಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿದ ಮೇಲೆ ನಂದಿಧ್ವಜ, ಕರಡಿ ಮಜಲು, ನಾಗಸ್ವರ ವಾದ್ಯ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಅಲಂಕೃತವಾದ ರಥೋತ್ಸವ ಆರಂಭಗೊಂಡಿತು.

ರಥೋತ್ಸವಕ್ಕೆ ಚಾಲನೆ: ಸಿದ್ಧಗಂಗಾ ಮಠದ ನಡೆದಾಡುವ ದೇವರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ನಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಮೊದಲ ರಥೋತ್ಸವ ಇದಾಗಿದ್ದು, ಮಧ್ಯಾಹ್ನ 12.10ಕ್ಕೆ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಯವರು ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ಹಿರಿಯ ಶ್ರೀಗಳಂತೆ ರಥದ ಬಲಭಾಗದ ಗಾಲಿಗೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಹರ್ಷೋದ್ಗಾರ: ರಥೋತ್ಸವಕ್ಕೂ ಮುನ್ನ ಸಿದ್ಧಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಹಿರಿಯ ಶ್ರೀಗಳ ಗದ್ದುಗೆ ಬಳಿಗೆ ಕೊಂಡೊಯ್ದು ಪೂಜೆ ಸಲ್ಲಿಸಿ, ನಂತರ ರಥದ ಸುತ್ತ ಮೂರು ಸುತ್ತು ಸುತ್ತಿದ ನಂತರ ರಥಕ್ಕೆ ಕೂರಿಸಲಾಯಿತು. ನಂತರ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ರಥದ ಗಾಲಿಗೆ ತೆಂಗಿನಕಾಯಿ ಒಡೆದು ಚಾಲನೆ ನೀಡುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಸಮೂಹದ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

Advertisement

ನೆತ್ತಿ ಸುಡುವ ಬಿಸಿಲಿನ ಝಳವನ್ನು ಲೆಕ್ಕಿಸದೆ ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಹಲವು ಸಂಘ-ಸಂಸ್ಥೆಗಳಿಂದ ಪಾನಕ, ನೀರು, ಮಜ್ಜಿಗೆ ವಿತರಿಸಲಾಯಿತು. ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌, ಅಮೂಲ್ಯ ರಾಕೇಶ್‌ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ವಿವಿಧ ಮಠಾಧೀಶರುಗಳು ಸೇರಿದಂತೆ ಅನೇಕ ಗಣ್ಯರು, ಭಕ್ತರು ಭಾಗವಹಿಸಿದ್ದರು.

ಇಂದು ಬೆಳ್ಳಿ ಪಲ್ಲಕ್ಕಿ ಉತ್ಸವ: ಬುಧವಾರ ರಾತ್ರಿ 11 ಗಂಟೆಗೆ ಪ್ರಸಿದ್ಧ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಾ.7ರಂದು ತೆಪ್ಪೋತ್ಸವ ಮತ್ತು ಪಂಚಬ್ರಹ್ಮೋತ್ಸವಗಳು ನಡೆಯಲಿವೆ. ಜಾತ್ರೆಯ ಅಂಗವಾಗಿ ನಡೆಯುತ್ತಿರುವ ರಾಜ್ಯ ಮಟ್ಟದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನ ಸೆಳೆಯುತ್ತಿವೆ.

ಜಾತ್ರೆಯ ಅಂಗವಾಗಿ ಮಠದ ಆವರಣದಲ್ಲೆಲ್ಲಾ ಬಗೆ ಬಗೆಯ ವಸ್ತುಗಳ ಮಾರಾಟ ನಡೆಯುತ್ತಿದೆ. ಜಾತ್ರೆಗೆ ಬಂದವರು ಕಡಲೆ ಪುರಿಕೊಳ್ಳುವುದು ವಿಶೇಷ. ಕಡಲೆಪುರಿ ಅಂಗಡಿಗಳೇ ಹೆಚ್ಚಾಗಿದ್ದು, ಸಾವಿರಾರು ಮೂಟೆ ಪುರಿ, ಬಗೆ ಬಗೆಯ ಕಾರಾ, ಚಕುಲಿ, ಕಡಲೆಬೀಜ, ಕಡ್ಲೆ, ಬತಾಸು, ಜಿಲೇಬಿ, ಬೋಂಡಾ, ವಡೆ ಬಜ್ಜಿ, ಹೀಗೆ ಹಲವು ತಿಂಡಿ ತಿನ್ನಿಸುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next