Advertisement

ಬಡತನ ಮೆಟ್ಟಿ ಯಶಸ್ಸಿನ ಶಿಖರವೇರಿದ್ದ ಶಿವಳ್ಳಿ 

12:31 AM Mar 23, 2019 | |

ಹುಬ್ಬಳ್ಳಿ : ಬಡತನವನ್ನು ಮೆಟ್ಟಿನಿಂತು ಸಾರ್ವಜನಿಕ ಜೀವನದಲ್ಲಿ ಮಿಂಚಿದ್ದರು. ಸತತ ಸೋಲಿನಿಂದಲೇ ಆರಂಭವಾದ ರಾಜಕೀಯ ಪಯಣದಲ್ಲಿ ಗೆಲುವಿನ ನಗೆ ಬೀರಿದ್ದರು. ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನಸಾಮಾನ್ಯರೊಂದಿಗೆ ಗುರುತಿಸಿಕೊಂಡ,ಅವರ ಕಷ್ಟ-ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಜನನಾಯಕರಾಗಿ ಗುರುತಿಸಿಕೊಂಡವರು ಸಚಿವ ಸಿ.ಎಸ್‌.ಶಿವಳ್ಳಿ.

Advertisement

ಶಿವಳ್ಳಿ ರಾಜಕೀಯ ಹಿನ್ನೆಲೆ ಇಲ್ಲವೇ ಆರ್ಥಿಕವಾಗಿ ಬಲಾಡ್ಯ ಕುಟುಂಬದಿಂದ ಬಂದವರಲ್ಲ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಬಡ ಕುಟುಂಬದಿಂದ ಬಂದವರು, ಸ್ವಸಾಮರ್ಥ್ಯ ದಿಂದಲೇ ಸಾರ್ವಜನಿಕ ಬದುಕಿನಲ್ಲಿ ಜನರ ಪ್ರೀತಿ ಗಳಿಸಿದ್ದಲ್ಲದೆ, ರಾಜಕೀಯ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಿದ್ದರು. ಕುಂದಗೋಳ ಕ್ಷೇತ್ರದ ಜನರ ಯಾವುದೇ ಸಮಸ್ಯೆಗಳಿದ್ದರೂ ಅವುಗಳ ಪರಿಹಾರಕ್ಕೆ ಭಾಗಿಯಾಗುವುದು,ಕೆಲಸ-ಕಾರ್ಯಗಳನ್ನು ಮಾಡಿಕೊಡುವ ಮೂಲಕ ಜನಪ್ರತಿನಿಧಿ ಅಲ್ಲದಿದ್ದರೂ ಜನರ ಮನದಲ್ಲಿ ಸ್ಥಾನ ಪಡೆಯತೊಡಗಿದ್ದರು. ಅದೆಷ್ಟೋ ಬಾರಿ ಕೈಯಲ್ಲಿ ಹಣವಿಲ್ಲದೆ ಕುಂದಗೋಳದಿಂದ ಯರಗುಪ್ಪಿಗೆ ಸುಮಾರು 10 ಕಿ.ಮೀ.ನಡೆದುಕೊಂಡು ಬಂದಿದ್ದು, ಇಲ್ಲವೇ ಕುಂದಗೋಳ ಬಸ್‌ ನಿಲ್ದಾಣದಲ್ಲೇ ಮಲಗಿದ್ದೂ ಇದೆಯಂತೆ.

ರಾಜಕೀಯ ಗುರು ಬಂಗಾರಪ್ಪ 

ಶಿವಳ್ಳಿ ಅವರು ರಾಜಕೀಯವಾಗಿ ಮೇಲೇರಲು ಮಾಜಿ ಸಿಎಂ ಎಸ್‌.ಬಂಗಾರಪ್ಪ ಅವರ ಪ್ರೋತ್ಸಾಹ ಸಾಕಷ್ಟಿದೆ.ಯರಗುಪ್ಪಿಯಲ್ಲಿ ಗ್ರಾಪಂ ಚುನಾವಣೆಯಲ್ಲಿ ಎರಡು ಬಾರಿ ಸೋತು, ಗ್ರಾಮ ತೊರೆದಿದ್ದ ಅವರಿಗೆ ರಾಜಕೀಯ ಬಲ ತುಂಬಿದವರು, ಮಾರ್ಗದರ್ಶನ ಮಾಡಿದವರು ಬಂಗಾರಪ್ಪ. ಶಿವಳ್ಳಿ ಅವರಲ್ಲಿನ ಸಂಘಟನಾ ಚತುರತೆ ಗುರುತಿಸಿದ್ದ ಬಂಗಾರಪ್ಪ , ತಾವು ಸ್ಥಾಪಿಸಿದ್ದ ಕೆಸಿಪಿ ಪಕ್ಷದಿಂದ 1994ರ ವಿಧಾನಸಭೆ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದ ಅಭ್ಯರ್ಥಿಯಾಗಿಸಿದ್ದರು. ಆ ಚುನಾವಣೆಯಲ್ಲಿ ಶಿವಳ್ಳಿಯವರು 19,700ಕ್ಕೂ ಹೆಚ್ಚು ಮತ ಪಡೆದು 2ನೇ ಸ್ಥಾನ ಪಡೆಯುವ ಮೂಲಕ ಕ್ಷೇತ್ರದ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

1999ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಯತ್ನಿಸಿದ್ದರು. ಬಂಗಾರಪ್ಪ ಅವರು ಸಾಕಷ್ಟು ಯತ್ನಿಸಿದ್ದರೂ ಶಿಷ್ಯನಿಗೆ ಟಿಕೆಟು ಕೊಡಿಸಲು ಸಾಧ್ಯವಾಗಿರಲಿಲ್ಲ. ಬಂಗಾರಪ್ಪನವರ ಪ್ರೋತ್ಸಾಹದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಿವಳ್ಳಿ, ಘಟಾನುಘಟಿಗಳನ್ನು ಮಣಿಸಿ ಸುಮಾರು 10,508 ಮತಗಳ ಅಂತರದಿಂದ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

Advertisement

2004ರ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ತೀವ್ರ ಯತ್ನ ನಡೆಸಿದರೂ ಸಿಗದಿದ್ದಾಗ ಮತ್ತೂಮ್ಮೆ ಪಕ್ಷೇತರರಾಗಿ ಸ್ಪರ್ಧಿಸಿ ಸೋಲುಂಡಿದ್ದರು. 2008ರಲ್ಲಿ ಕಾಂಗ್ರೆಸ್‌ ನಿಂದ ಟಿಕೆಟು ದೊರೆತಿತ್ತಾದರೂ ಗೆಲುವು ಸಾಧ್ಯವಾಗಿರಲಿಲ್ಲ. 2013ರಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ, ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ವಿಧಾನಸಭೆಗೆ ತೆರಳಿದ್ದರು. 2018ರಲ್ಲೂ ಸತತ ಎರಡನೇ ಹಾಗೂ ಒಟ್ಟಾರೆ ಮೂರನೇ ಗೆಲುವು ಪಡೆದಿದ್ದರು. ಕುಂದಗೋಳ ಕ್ಷೇತ್ರಕ್ಕೆ ಸುಮಾರು ನಾಲ್ಕು ದಶಕಗಳ ನಂತರ ಸಚಿವ ಸ್ಥಾನ ದಕ್ಕಿಸಿಕೊಟ್ಟ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

ಜನ ಸಾಮಾನ್ಯರ ನಾಯಕ..: ಶಿವಳ್ಳಿ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ತಮ್ಮ ಕಡೆ ಬಂದ ಜನರ ಸಂಕಷ್ಟ-ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದರು. ಈ ಕಾರಣದಿಂದಲೇ ಶಿವಳ್ಳಿ ಇದ್ದಾರೆ ಎಂದರೆ ಅವರ ಹಿಂದೆ ಕನಿಷ್ಠ ಹತ್ತಾರು ಬೆಂಬಲಿಗರು, ಕಾರ್ಯಕರ್ತರು ಸದಾ ಇರುತ್ತಿದ್ದರು. ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲೂ ಸಾಮಾನ್ಯರಂತೆ ಭೋಜನ ಸವಿಯುತ್ತಿದ್ದರು. ಕ್ಷೇತ್ರದ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಮನೆಯಲ್ಲೂ ಶುಭ ಸಮಾರಂಭ, ನೋವಿನ ಸಂಗತಿಯಲ್ಲೂ ಭಾಗಿಯಾಗುತ್ತಿದ್ದರು.

ಜನಪರ ಕಾಳಜಿಯಿಂದಾಗಿ 3 ಬಾರಿ ಶಾಸಕರಾಗಿದ್ದ ಸಿ.ಎಸ್‌.ಶಿವಳ್ಳಿ, ಸಮ್ಮಿಶ್ರ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದರು. ಅವರು ಮೆಲು ಮಾತಿನ ಸರಳ ವ್ಯಕ್ತಿತ್ವದ ಜನಾನುರಾಗಿ ನಾಯಕರಾಗಿದ್ದರು.
● ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಧಾರವಾಡ ಕಟ್ಟಡ ದುರಂತ ಸ್ಥಳದಲ್ಲಿ ಮೂರು ದಿನದಿಂದ ಉಪಸ್ಥಿತರಿದ್ದರು. ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಅವರು ಇನ್ನಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ. ಅವರಕು ಟುಂಬ ವರ್ಗಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.
● ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಬಂಗಾರಪ್ಪ ಅವರ ಒಡನಾಡಿಯಾಗಿದ್ದು, ಮೂರು ಬಾರಿ ಶಾಸಕರಾಗಿ, ಸಚಿವರಾಗಿದ್ದ ಶಿವಳ್ಳಿ ಅವರು ಸರಳ ಜೀವಿ. ಬಡ ಕುಟುಂಬದಿಂದ ಬಂದಿದ್ದ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಹಿಂದುಳಿದ ವರ್ಗಗಳ ನಾಯಕರಾಗಿದ್ದರು.
● ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

ಮೂರು ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು ರಾಜ್ಯ ಕಂಡ ಅತ್ಯುತ್ತಮ ರಾಜಕಾರಣಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.
● ಬಿ.ಎಸ್‌.ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ

ಕಾಂಗ್ರೆಸ್‌ ಪಕ್ಷ ಕುಟುಂಬದ ಸದಸ್ಯನನ್ನು ಕಳೆದುಕೊಂಡಿದೆ. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪ ಸೂಚಿಸುತ್ತೇನೆ.
● ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ.

ಪಕ್ಷದ ನಿಷ್ಠಾವಂತಕಾರ್ಯಕರ್ತ ರಾಗಿದ್ದ ಅವರು,  ಮೂರು ಬಾರಿ ಶಾಸಕರಾಗಿ ತಮ್ಮ ಕೊನೇ
ಉಸಿರಿರುವವರೆಗೂ ಪ್ರಾಮಾಣಿಕರಾಗಿ ಕೆಲಸ ಮಾಡಿದ್ದರು.

● ಕೆ.ಸಿ.ವೇಣುಗೋಪಾಲ್‌,
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ.

Advertisement

Udayavani is now on Telegram. Click here to join our channel and stay updated with the latest news.

Next