Advertisement

115ನೇ ಜನ್ಮದಿನೋತ್ಸವ; ಶ್ರೀಮಠದ ತುಂಬಾ ಗುರುಗಳ ಬಿಂಬ

01:03 PM Apr 01, 2022 | Team Udayavani |

ಪ್ರತೀ ವರ್ಷ ಶ್ರೀಗಳ ಜನ್ಮದಿನೋತ್ಸವ ಬಂದಾಗ ಮನಸ್ಸು ತುಂಬಿ ಬರುತ್ತದೆ. ಶ್ರೀಗಳೊಟ್ಟಿಗೆ ಕಳೆದ, ಅವರ ಪಾದ ಸ್ಪರ್ಶಿಸಿದ, ಅವರ ಜತೆಗೆ ಕಳೆದ ಅನೇಕ ಘಟನೆಗಳು ಕಣ್ಮುಂದೆ ಬರುತ್ತವೆ. ಇಡೀ ಜಗತ್ತನ್ನು ಸೆಳೆದ, ತನ್ಮೂಲಕ ಇಡೀ ಭಕ್ತ ವೃಂದವನ್ನು ಪುನೀತಗೊಳಿಸಿದ ಪೂಜ್ಯ ಶ್ರೀಗಳು ಲಿಂಗೈಕ್ಯರಾಗಿ ನಮ್ಮ ಹೃದಯದಲ್ಲಿ ಸ್ಥಾಪಿತವಾದ, ಪರಂಜ್ಯೋತಿ ಹುಟ್ಟಿದ ದಿನವಿದು.

Advertisement

ದೇಹ ನಿರ್ದೇಹವೆಂದೆನುತಿಪ್ಪರಯ್ಯ

ದೇಹ ನಿರ್ದೇಹದ ಮರ್ಮವನರಿಯರು

ಅಹಂ ಎಂಬುದೇ ದೇಹ ನೋಡಾ ದಾಸೋಹಂ

ಎಂಬುದೇ ನಿರ್ದೇಹ ನೋಡಾ ಅಹಂ ಭಾವ ವಳಿದುಳಿದು

Advertisement

ದಾಸೋಹಿಯಾದ ಕೂಡಲಚನ್ನಸಂಗ !

ಬಸವಣ್ಣನವರು ಹೇಳಿದ ಈ ಮಾತುಗಳು  ಈಗಲೂ ಪ್ರಸ್ತುತ ಅನಿಸುವುದು ಅವರು ನಡೆದ ದಾರಿಗಳಿಂದ ಮತ್ತು ಅವರು ಹಾಕಿಕೊಟ್ಟ ಮಾರ್ಗದಿಂದ. ಹಾಗೆಯೇ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳೂ ಕೂಡ ಒಂದು ಮಠದ ಪೀಠಾಧಿಪತಿಯಾಗಷ್ಟೇ ಉಳಿಯದೆ ದಾಸೋಹ ಪ್ರಜ್ಞೆಯನ್ನೇ ನಮ್ಮಲ್ಲಿ ಬಿತ್ತಿ ನಡೆದರು. ಪ್ರತೀ ವರ್ಷ ಮಠಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳು ನಡೆಯಲಿ; ಅದು ಶ್ರೀಗಳ ಜನ್ಮದಿನವಾಗಿರಲಿ ಅಥವಾ ಸ್ಮರಣೋತ್ಸವವಾಗಿರಲಿ, ಆ ಸಂದರ್ಭದಲ್ಲಿ  ಎಲ್ಲಡೆಯೂ ದಾಸೋಹ ನಡೆಯುತ್ತದೆ. ಮಕ್ಕಳಿಗೆ ಶಿಕ್ಷಣ ಕೊಡಿಸುವ ಮನಸ್ಸುಗಳು ಒಟ್ಟುಗೂಡುತ್ತವೆ. ಕೆಲಸ ಕೊಡುವ ಕೈಗಳು ಉದ್ಯೋಗ ಮೇಳಗಳನ್ನು ಆಯೋಜಿಸುತ್ತವೆ. ಆರೋಗ್ಯ ಕಾಳಜಿಯ ಕಾರ್ಯಕ್ರಮಗಳು, ಮಹಿಳೆ, ರೈತರು, ಯುವಕರಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳು ಆರಂಭವಾಗುತ್ತವೆ. ಇಂಥ ಕಾರ್ಯಕ್ರಮಗಳು ಶ್ರೀಗಳಿಗೆ ಬಹಳ ಪ್ರಿಯವಾಗಿದ್ದವು ಎನ್ನುವುದು ಇಲ್ಲಿನ ಪ್ರತಿಯೊಬ್ಬ ಭಕ್ತನಿಗೂ ಗೊತ್ತು.

ಬೇಡುವುದಷ್ಟೇ ಬದುಕಾಗಬಾರದು: ಶ್ರೀಗಳು ಇಂಥ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಆಗಾಗ ಆಯೋಜಿಸುತ್ತಿದ್ದರು. ಅವರು ಯಾವುದನ್ನೂ ಹೇಳದೆ ಸುಮ್ಮನೆ ತಾವೇ ಮಾಡುತ್ತಾ ಹೋದರು. ಅದು ಈಗ ನಮಗೆ ಮಹಾದಾರಿಯಾಗಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಯೆಂದರೆ ಪ್ರತೀ ವರ್ಷ ನಡೆಯುವ ಜಾತ್ರೋತ್ಸವದ ಕೈಗಾರಿಕ ವಸ್ತು ಪ್ರದರ್ಶನದಲ್ಲಿ ಎಲ್ಲ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಒಂದೆಡೆ ಸೇರುತ್ತವೆ. ಅಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ನೂತನ ತಂತ್ರಜ್ಞಾನ- ಕೈಗಾರಿಕೆ, ಕೃಷಿಗಳನ್ನು ಕುರಿತು ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ದೂರದ ಊರುಗಳಿಂದ ಬರುವ ರೈತರು ರಾಸುಗಳನ್ನು ಕೊಳ್ಳುವುದರ ಜತೆಗೆ ನೂತನ ಕೃಷಿಯ ತಂತ್ರಜ್ಞಾನದ ಅರಿವು ಪಡೆದುಕೊಳ್ಳುತ್ತಾರೆ. ಧಾರ್ಮಿಕತೆ, ಕೈಗಾರಿಕತೆ, ಶೈಕ್ಷಣಿಕತೆ ಹಾಗೂ ಸಾಂದರ್ಭಿಕತೆ ಶ್ರೀಗಳ ಯೋಚನೆ ಹಾಗೂ ಯೋಜನೆಯಾಗಿತ್ತು. ಬೇಡುವ ಕೈಗಳನ್ನು ಗಟ್ಟಿಗೊಳಿಸಬೇಕೇ ಹೊರತು ಬೇಡುವುದಷ್ಟೇ ಬದುಕಾಗಬಾರದು ಎಂದು ಶ್ರೀಗಳು ಇಂಥ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.

ಶ್ರೀಮಠದ ತುಂಬಾ ಅವರಿದ್ದಾರೆ…: ಮಠದಲ್ಲಿ ಕಾಣುವ ಕಟ್ಟಡಗಳ ಸಂಖ್ಯೆ ಹೆಚ್ಚೇನಿಲ್ಲ. ಕಾರಣ, ಶ್ರೀಗಳಿಗೆ ಕಟ್ಟಡಗಳನ್ನು ಕಟ್ಟುವುದಕ್ಕಿಂತ ಬೌದ್ಧಿಕವಾಗಿ ಕಟ್ಟುವುದರ ಕಡೆಗೆ ಹೆಚ್ಚಿನ ಆಸಕ್ತಿ ಇತ್ತು. ಮಕ್ಕಳಿಗಾಗಿ ನಿರ್ಮಿಸುವ ಕಟ್ಟಡಗಳನ್ನು ಹೊರತುಪಡಿಸಿ ಇನ್ನಾವುದೇ ಕಟ್ಟಡಗಳನ್ನು ಕಟ್ಟುವಾಗಲೂ ಶ್ರೀಗಳು ಪೂರ್ಣ ಮನಸ್ಸಿನಿಂದ ಒಪ್ಪಿದವರಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಯಾವುದೇ ಕಾರ್ಯ ಕ್ರಮಗಳಿದ್ದರೂ ತನ್ನಿ ಎಂದು ಹೇಳುತ್ತಿದ್ದರು.

ಶ್ರೀಗಳು ಲಿಂಗೈಕ್ಯರಾದ ಮೇಲೆ ಮಠ ಪಡೆದುಕೊಂಡಿರುವ ಬದಲಾವಣೆಗಳು ಯಾವುದೂ ಇಲ್ಲ. ಏಕೆಂದರೆ ಮುಂದಿನ ತಲೆಮಾರುಗಳ ಬಗ್ಗೆಯೂ ಶ್ರೀಗಳಿಗಿದ್ದ ಅದ್ಭುತ ಆಲೋಚನೆಗಳ ಬಗ್ಗೆ ಕಿರಿಯ ಶ್ರೀಗಳೊಂದಿಗೆ ಹೇಳುತ್ತಿದ್ದ ಮಾತುಗಳೇ ಮಠದ ಮುಂದಿನ ದಾರಿದೀಪವಾಗಿದೆ.

ಶ್ರೀಗಳ ಆಲೋಚನೆ ಮತ್ತು ಅವರ ಆದರ್ಶಗಳನ್ನಿಟ್ಟುಕೊಂಡೇ ಸಿದ್ಧಲಿಂಗ ಶ್ರೀಗಳು ಮಠವನ್ನು ನಡೆಸುತ್ತಿದ್ದಾರೆ. ನಿರಂತರವಾಗಿ ಮಕ್ಕಳ ದಾಖಲಾತಿ ನಡೆಯುತ್ತಿದೆ. ಮಠಕ್ಕೆ ಬರುತ್ತಿರುವ ರೈತರ ಮೊದಲ ಫಸಲು ಕಿಂಚಿತ್ತೂ ಕಡಿಮೆಯಾಗಿಲ್ಲ. ಮಠಕ್ಕೆ ಹರಿದು ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನೆಲ್ಲ ನೋಡುತ್ತಿದ್ದರೆ ಶ್ರೀಗಳು ಮಠವನ್ನು ಕಟ್ಟಿದ ರೀತಿ ನೆನಪಾಗುತ್ತದೆ.

ನಮ್ಮ ಗೊಂದಲ ಅವರಿಗೆ ಗೊತ್ತಾಗುತ್ತಿತ್ತು!: ಈಗಲೂ ಶ್ರೀಗಳ ಕುರಿತು  ಕುತೂಹಲವಿರುವುದು- ಅವರ ತೀರ್ಮಾನದ ವಿಧಾನದ ಬಗ್ಗೆ. ಯಾವುದಾದರೂ ಒಂದು ವಿಚಾರವನ್ನು ಶ್ರೀಗಳಿಗೆ ಹೇಳಬೇಕೆಂದರೆ ನಾವು ಸಾಕಷ್ಟು ತಯಾರಿ ನಡೆಸಿಕೊಳ್ಳುತ್ತಿದ್ದೆವು. ಪೂರ್ವಾಪರ ಚರ್ಚೆ ಮಾಡಿಕೊಳ್ಳುತ್ತಿದ್ದೆವು. ಕೊನೆಗೆ ಅವರ ಮುಂದೆ ಹೋಗಿ ನಮ್ಮ ಹೊಸ ಯೋಜನೆಯೋ ಅಥವಾ ಇನ್ನಾವುದೋ ಮುಖ್ಯ ವಿಚಾರ ಹೇಳಿದ ತತ್‌ಕ್ಷಣವೇ ಅದಕ್ಕೆ ತೀರ್ಮಾನ ಹೇಳಿಬಿಡುತ್ತಿದ್ದರು. ಇದು ಆಗಬೇಕಾ ಬೇಡವಾ ಎಂದು! ಈ ಬಗ್ಗೆ ಅವರು ಯಾವಾಗ ತಿಳಿದುಕೊಂಡು ಹೇಗೆ ಇಷ್ಟು ಬೇಗ ಈ ನಿರ್ಧಾರಕ್ಕೆ ಬರೋದಕ್ಕೆ ಸಾಧ್ಯವಾಯಿತು ಎಂದು ಗೊತ್ತಾ¤ಗದೆ ನಾವೇ ಅನೇಕ ಬಾರಿ ಯೋಚನೆ ಮಾಡುತ್ತಿದ್ದೆವು.

ಅವರಿಗೆ ನಮ್ಮ ಮನಸ್ಸಿನ ಪ್ರತೀ ಗೊಂದಲಗಳು ತಿಳಿಯುತ್ತಿದ್ದ ರೀತಿ, ಯಾವುದೇ ಒಂದು ಹೊಸ ನಿರ್ಧಾರದ ಬಗ್ಗೆ ಅವರಿಗಿದ್ದ ತಿಳಿವಳಿಕೆ ನಮಗೆ ಈಗಲೂ ಸೋಜಿಗವುಂಟು ಮಾಡುತ್ತದೆ. ಶ್ರೀಗಳು ಮಠದ ಮಕ್ಕಳನ್ನು ನೋಡಿದಾಗ ನೆನಪಾಗುತ್ತಾರೆ. ಪಾಕಶಾಲೆ, ಪಾಠಶಾಲೆಗಳಲ್ಲಿ, ಮಠದಲ್ಲಿರುವ ಪ್ರತೀ ಜಾನುವಾರುಗಳಲ್ಲಿ ಮತ್ತು ಮಠದ ಪ್ರತೀ ಸ್ಥಳದಲ್ಲೂ ಶ್ರೀಗಳ ಗುರುತು ಕಾಣಿಸುತ್ತದೆ. ಪ್ರತಿಯೊಂದು ಮಗುವೂ, ಪ್ರತೀ ಗುರುಭಕ್ತರ ಹೃದಯವೂ ಕೂಡ ಶ್ರೀಗಳನ್ನು ನೆನಪಿಸಿಕೊಳ್ಳುವುದು ಇಂತಹ ಸನ್ನಿವೇಶಗಳನ್ನು ನೋಡಿದಾಗಲೇ.

ಅವರ ಹಾರೈಕೆಯಿಂದ ಸಾಧ್ಯವಾಗಿದೆ!: ತ್ರಿವಿಧ ದಾಸೋಹದ ಕಾರುಣ್ಯಮೂರ್ತಿಯಾದ ಶ್ರೀಗಳಿಗೆ ಆರೋಗ್ಯ ಕ್ಷೇತ್ರಕ್ಕೂ ಸೇವೆಯನ್ನು ವಿಸ್ತರಿಸುವ ಕನಸಿತ್ತು. ಆರ್ಥಿಕ ಲೆಕ್ಕಾಚಾರಗಳಿಗೆ ಆತಂಕಪಟ್ಟು ಸುಮ್ಮನಿದ್ದರು. ಸಿದ್ಧಗಂಗಾ ಆಸ್ಪತ್ರೆಯನ್ನು ಸಮಾನಮನಸ್ಕ ವೈದ್ಯರುಗಳಾದ ನಮ್ಮ ತಂಡಕ್ಕೆ ವಹಿಸಿಕೊಟ್ಟು ಸುಮ್ಮನಾಗಿದ್ದರು. ಅವರ ಪುಣ್ಯ, ತಪಸ್ಸು ಹಾಗೂ ಆಶೀರ್ವಾದದ ಫಲವಾಗಿ ಸಿದ್ಧಗಂಗಾ ಆಸ್ಪತ್ರೆ ವೈದ್ಯಕೀಯ ವಿದ್ಯಾಲಯವಾಗಿ ಬೆಳೆದು ನಿಂತಿದೆ. ಕಳೆದ ಮೂರು ವರ್ಷದಲ್ಲಿ ಸಾವಿರಾರು ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಗ್ರಾಮೀಣ ಪ್ರದೇಶದ ಜನರಲ್ಲಿ  ಆರೋಗ್ಯ ಕುರಿತು ಕಾಳಜಿ ಮೂಡಿಸಿದ್ದೇವೆ. ಪೂಜ್ಯ ಸಿದ್ಧಲಿಂಗ ಶ್ರೀಗಳ ದೂರದೃಷ್ಟಿ ಹಾಗೂ ಆರೋಗ್ಯ ಕುರಿತು ಇರುವ ಕಾಳಜಿಯಿಂದ ಸಿದ್ಧಗಂಗಾ ಮೆಡಿಕಲ್‌ ಕಾಲೇಜಿನ ಪ್ರತ್ಯೇಕ ಬ್ಲಾಕ್‌ನಲ್ಲಿ ಉಚಿತ ಸೇವೆ ನೀಡಲಾಗುತ್ತಿದೆ. ಸೂಪರ್‌ ಸ್ಪೆಷಾಲಿಟಿ ಹೊರತುಪಡಿಸಿದ ಎಲ್ಲ ಸೇವೆಗಳು ರೋಗಿಗಳಿಗೆ ಉಚಿತವಾಗಿ ದೊರೆಯುತ್ತಿವೆ. ಇದೆಲ್ಲದರ ಹಿಂದೆ ಪೂಜ್ಯ ಶಿವಕುಮಾರ ಶ್ರೀಗಳ ದಿವ್ಯಾಶೀರ್ವಾದದ ಫಲವಿದೆ.  ಶ್ರೀಗಳ ಜನ್ಮದಿನ ನಮಗೆಲ್ಲರಿಗೂ ಸುಗ್ಗಿ, ಪ್ರಕೃತಿಯಲ್ಲಿ ಯುಗಾದಿಯ ಸಂಭ್ರಮ ಆರಂಭವಾಗಿದೆ. ಎಳೆಯ ಚಿಗುರುಗಳು ಒಣಗಿದ ಮರಗಳನ್ನು ಮೈದುಂಬಿಕೊಳ್ಳು ತ್ತಿದ್ದರೆ, ಇಡೀ ರಾಜ್ಯ ಹಬ್ಬದ ಸಂಭ್ರಮದಲ್ಲಿ ಮುಳುಗಿದೆ. ಶ್ರೀಗಳು 115 ವರ್ಷಗಳ ಹಿಂದೆ ಇಂತಹ ಸಂಭ್ರ ಮಗಳ ದಿನದಲ್ಲೇ ಜನಿಸಿದ್ದವರು. ಪ್ರಕೃತಿಯೇ ಅವರ ಜನ್ಮಕ್ಕೆ ತವಕಿಸುವಂತೆ ಜನಿಸಿ, ನಮ್ಮನ್ನು ಪೋಷಿಸಿ ಲಿಂಗೈಕ್ಯರಾಗಿ ಮತ್ತೆ ನಮ್ಮೊಳಗೆ ಚಿಗುರುತ್ತಿದ್ದಾರೆ.

ಡಾ| ಎಸ್‌.ಪರಮೇಶ್‌, ತುಮಕೂರು

 (ಲೇಖಕರು: ಸಿದ್ಧಗಂಗಾ ಶ್ರೀಗಳ ಆಪ್ತ ವೈದ್ಯರು ಹಾಗೂ ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕರು)

Advertisement

Udayavani is now on Telegram. Click here to join our channel and stay updated with the latest news.

Next