Advertisement

ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿ ಸೌಕರ್ಯ

04:13 PM Sep 25, 2021 | Team Udayavani |

ಸಿರಿಗೆರೆ: ತರಳಬಾಳು ಜಗದ್ಗುರು ಬೃಹನ್ಮಠವು ಸಿರಿಗೆರೆಯಲ್ಲಿ ನಡೆಸುತ್ತಿರುವ ಬಾಲಕರು ಮತ್ತು ಬಾಲಕಿಯರ ಹಾಸ್ಟೆಲ್‌ಗ‌ಳಲ್ಲಿದ್ದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಉಚಿತ ಊಟ ಮತ್ತು ವಸತಿ ವಸತಿ ಸೌಕರ್ಯ ಕಲ್ಪಿಸಿಕೊಡಲಾಗುವುದು ಎಂದು ಶ್ರೀ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯರು ಸಭೆಯಲ್ಲಿ ಘೋಷಣೆ ಮಾಡಿದರು.

Advertisement

ಹಿರಿಯ ಗುರುಗಳ ಶ್ರದ್ಧಾಂಜಲಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಉಚಿತ ವ್ಯವಸ್ಥೆ ಕಲ್ಪಿಸುವುದರಿಂದ ವಾರ್ಷಿಕ ಸುಮಾರು ಒಂದೂವರೆ ಕೋಟಿಗಳ ವೆಚ್ಚ ಬರಲಿದೆ. ಅದನ್ನು ಭಕ್ತರ ಕಾಣಿಕೆ, ದಾಸೋಹ ಸಾಮಗ್ರಿಗಳು ಮತ್ತು ಕೊಡುಗೆಗಳ ಮೂಲಕ ಸರಿದೂಗಿಸಲಾಗುವುದು ಎಂದು ತಿಳಿಸಿದರು. ತಮ್ಮ ಗುರುವರ್ಯರಾದ ಶಿವಕುಮಾರ ಶ್ರೀಗಳನ್ನು ಯಾರೊಂದಿಗೂ ಹೋಲಿಕೆ ಮಾಡಲಾಗುವುದಿಲ್ಲ. ಬಸವಣ್ಣ ಹೇಗಿದ್ದರೋ ಶಿವಕುಮಾರ ಶ್ರೀಗಳೂ ಹಾಗೆಯೇ ಇದ್ದರು. ಬಸವ ಜಯಂತಿಯನ್ನು ಜನ್ಮ ತಾಳಿ, ಬಸವ ಜಯಂತಿಯಂದೇ ಪಟ್ಟವೇರಿದ ಶ್ರೀಗಳು ಬಸವಣ್ಣನ ಪಡಿಯಚ್ಚಿನಂತಿದ್ದರು. ಬಸವಣ್ಣನವರ ಸಾಹಿತ್ಯ ಪ್ರಚಲಿತವಿಲ್ಲದಿದ್ದ ಕಾಶಿಯಲ್ಲಿ ಆಳವಾದ ಸಂಸ್ಕೃತ ಜ್ಞಾನವನ್ನು ಶ್ರೀಗಳು ಸಂಪಾದಿಸಿದ್ದರು. ಬಸವಣ್ಣನವರ ವ್ಯಕ್ತಿತ್ವವನ್ನು ಅವರು ಅಂತರ್ಗತ ಮಾಡಿಕೊಂಡಿದ್ದರು ಎಂದು ಸ್ಮರಿಸಿದರು.

ತರಳಬಾಳು ಜಗದ್ಗುರು ಬೃಹನ್ಮಠದ ಅಭಿವೃದ್ಧಿಯ ಭದ್ರಬುನಾದಿಯ ಆರಂಭಕ್ಕೆ ನಾಂದಿ ಹಾಡಿದವರು ಶ್ರೀ ಗುರುಶಾಂತ ಸ್ವಾಮೀಜಿಗಳು. 100 ವರ್ಷಗಳ ಹಿಂದೆಯೇ ಅವರು ದಾವಣಗೆರೆ ನಗರದಲ್ಲಿ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲು ವಸತಿ ನಿಲಯ ಸ್ಥಾಪಿಸಿದ್ದರು. ಅಂತಹ ಗುರುಗಳನ್ನು ಮಠದ ಭಕ್ತರು ಯಾವಾಗಲೂ ಸ್ಮರಣೆ ಮಾಡಬೇಕೆಂದು ತಿಳಿಸಿದರು. ಇಂದು ಭರಮಸಾಗರ ಕೆರೆಗೆ ನೀರು ಬರುತ್ತದೆಯೆಂಬ ಆಶಾಭಾವನೆ ನಮಗೂ ಇತ್ತು. ಇದೊಂದು ದೊಡ್ಡ ಯೋಜನೆಯಾಗಿದ್ದು, ಕೆಲವು ತಾಂತ್ರಿಕ ದೋಷಗಳಿಂದ ಅದು ಸಾಧ್ಯವಾಗಿಲ್ಲ. ಆದಷ್ಟು ಬೇಗ ಅವುಗಳನ್ನು ನಿವಾರಿಸಿಕೊಂಡು ನೀರು ಬರುವಂತೆ ಮಾಡಲಾಗುವುದು. ನಮ್ಮ ಮಠವು ಯಾವುದೇ ಪಕ್ಷಕ್ಕೂ ಸೇರಿಲ್ಲ. ಆದರೆ ಮಠದ ಭಕ್ತರು ಎಲ್ಲ ಪಕ್ಷಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಭರಮಸಾಗರ ಮತ್ತು ಜಗಳೂರು ಏತನೀರಾವರಿ ಯೋಜನೆಗೆ ಕೇವಲ 15 ದಿನಗಳಲ್ಲಿಯೇ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್‌ನಲ್ಲಿ ಸೇರಿಸಿದ್ದರು. ಮುಂದೆ ಬಂದ ಕುಮಾರಸ್ವಾಮಿಯವರು ತಮ್ಮ ಅವ ಧಿಯಲ್ಲಿ ಯೋಜನೆಗೆ ಮಂಜೂರಾತಿ ನೀಡಿದರು. ನಂತರ ಬಿ.ಎಸ್‌. ಯಡಿಯೂರಪ್ಪನವರು ಯೋಜನೆಗೆ ಬೇಕಾದ 1215 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದರು. ಈ ಯೋಜನೆ ಕಾರ್ಯಗತವಾಗುವ ಸಂದರ್ಭದಲ್ಲಿ ಈ ಮೂವರು ನಾಯಕರನ್ನು ಒಂದೇ ವೇದಿಕೆಗೆ ಕರೆತರುವ ಆಶಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಪೊಲೀಸ್‌ ನಿವೃತ್ತ ವರಿಷ್ಠಾಧಿಕಾರಿ ಶಂಕರ ಬಿದರಿ ಮಾತನಾಡಿ, ತರಳಬಾಳು ಮಠವು ಭಕ್ತರ ಸಂಕಷ್ಟಕ್ಕೆ ಮಿಡಿಯುತ್ತದೆ. ಅವರ ಸಮಸ್ಯೆಗಳಿಗೆ ಪರಿಹಾರ ತಂದುಕೊಡುತ್ತದೆ. ಇದು ಹಿರಿಯ ಗುರುಗಳ ಕಾಲದಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಉತ್ತರ ಕರ್ನಾಟಕದಲ್ಲಿ ಹಲವು ನೀರಾವರಿ ಯೋಜನೆಗಳು ಚಾಲ್ತಿಯಲ್ಲಿದ್ದರೂ 35 ಸಾವಿರ ಎಕರೆ ಭೂಪ್ರದೇಶ ಮಾತ್ರವೇ ನೀರಾವರಿಗೆ ಒಳಪಟ್ಟಿದೆ. ಇನ್ನೂ ಅಂದಾಜು 35 ಸಾವಿರ ಎಕರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದ್ದು, ಅಂತಹ ಯೋಜನೆಗಳೇ ಜಾರಿಯಾಗುತ್ತಿಲ್ಲ. ಆದ್ದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ತರಳಬಾಳು ಶ್ರೀಗಳಂತ ದೂರದೃಷ್ಟಿಯ ವ್ಯಕ್ತಿಗಳ ಅಗತ್ಯವಿದೆ ಎಂದರು. ಮಾಜಿ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಮಾತನಾಡಿ, ದಿಕ್ಕುದೆಸೆ ಇಲ್ಲದಿದ್ದ ಅಂಚಿನ ಸಮುದಾಯಗಳಿಗೆ ಶ್ರೀ ಶಿವಕುಮಾರ ಶ್ರೀಗಳು ಅನ್ನ, ವಸತಿ ನೀಡಿ ಸಲುಹಿದ್ದಾರೆ. ಶ್ರೀಗಳ ಬಗ್ಗೆ ಭಕ್ತರಿಗೆ ಅಪಾರ ಗೌರವ. ಹೀಗಾಗಿ ಗುರುಗಳನ್ನು ಭಕ್ತರು ತಮ್ಮ ಹೃದಯದಲ್ಲಿಟ್ಟುಕೊಂಡಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲ ಡಾ| ನಾ. ಲೋಕೇಶ ಒಡೆಯರ್‌ ನುಡಿನಮನ ಸಲ್ಲಿಸಿದರು. ಜಿಲ್ಲಾ ಧಿಕಾರಿ ಕವಿತಾ ಮನ್ನಿಕೇರಿ ಗುರುಗಳಿಗೆ ನಮನ ಸಲ್ಲಿಸಿದರು. ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಜಿ.ಎಸ್‌. ಮಂಜುನಾಥ್‌ ಉಪಸ್ಥಿತರಿದ್ದರು. ಆರಂಭದಲ್ಲಿ ದಾವಣಗೆರೆ ಸುಶ್ರಾವ್ಯ ಸಂಗೀತ ಶಾಲೆಯ ಯಶಾ ದಿನೇಶ್‌ ತಂಡದವರು ವಚನಗಳನ್ನು ಹಾಡಿದರು. ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್‌. ಮರುಳಸಿದ್ಧಯ್ಯ ಸ್ವಾಗತಿಸಿದರು. ಅಧ್ಯಾಪಕ ಎಚ್‌.ಎನ್‌. ನಾಗರಾಜ್‌ ವಂದಿಸಿದರು.

Advertisement

ಶಿವಕುಮಾರ ಶ್ರೀಗಳು ಅಸಾಮಾನ್ಯ ಗುಣಧರ್ಮದ ಶ್ರೇಷ್ಠ ಸ್ವಾಮೀಜಿ

ಸಿರಿಗೆರೆ: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯರು ಅಸಾಮಾನ್ಯ ಗುಣಧರ್ಮ ಇದ್ದಂತಹ ಒಬ್ಬ ಶ್ರೇಷ್ಠ ಸ್ವಾಮೀಜಿಗಳಾ‌ªರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಿರಿಗೆರೆಯ ಬೃಹನ್ಮಠದಲ್ಲಿ ಏರ್ಪಡಿಸಲಾಗಿದ್ದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭದಲ್ಲಿ ಆನ್‌ಲೈನ್‌ ಮೂಲಕ ಮಾತನಾಡಿದ ಮುಖ್ಯಮಂತ್ರಿಗಳು, ಸ್ವಾಮೀಜಿಗಲಾಗಿ ನೊಂದ ಜನರ ಪರವಾಗಿ ಹೇಗೆ ನಿಲ್ಲಬಹುದೆಂಬುದನ್ನು ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಅವರು ತೋರಿಸಿಕೊಟ್ಟವರು. ಜನಸಾಮಾನ್ಯರ ಜೊತೆಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಹ, ವಿಶೇಷವಾಗಿ ಹರಿಜನ ಮತ್ತು ಗಿರಿಜನರಲ್ಲಿನ ಕೀಳರಿಮೆಯನ್ನು ತೊಡೆದುಹಾಕಿ ಅವರಲ್ಲಿ ಆತ್ಮಸೈ§ರ್ಯ ಮೂಡಿಸಿದ ಶ್ರೇಷ್ಠ ಗುರುಗಳು ಎಂದು ಬಣ್ಣಿಸಿದರು. ನಿರಂತರ ಹೋರಾಟವೇ ಅವರ ಬದುಕಾಗಿತ್ತು. ಮರುಳಸಿದ್ಧ ಮತ್ತು ಬಸವಣ್ಣನವರ ಸಿದ್ಧಾಂತಗಳು ಮತ್ತು ಆಚಾರ-ವಿಚಾರಗಳಲ್ಲಿ ಅವರಿಗೆ ಬಲವಾದ ನಂಬಿಕೆ ಇತ್ತು. ಅವುಗಳನ್ನು ಪ್ರತಿಪಾದಿಸುತ್ತಲೇ ಸಮಾಜವನ್ನು ಅವರು ಮುನ್ನಡೆಸಿದರು. ಸಮಾಜದಲ್ಲಿ ನ್ಯಾಯ ನೀಡುವಾಗ ಅವರು ನಿಷ್ಠುರವಾಗಿ ಮತ್ತು ಜನಪರವಾಗಿ ನಡೆದುಕೊಳ್ಳುವಂತಹ ಮಾನದಂಡವನ್ನು ಅನುಸರಿಸುತ್ತಿದ್ದರು ಎಂದು ಮುಖ್ಯಮಂತ್ರಿಗಳು ಹೇಳಿದರು.

ರೈತರು ಬಗ್ಗೆ ಶಿವಕುಮಾರ ಶ್ರೀಗಳು ಅಪಾರ ಕಾಳಜಿ ಇಟ್ಟಿದ್ದರು. ಶಿಕ್ಷಣದಿಂದ ವಂಚಿತರಾದಂತ ಗ್ರಾಮೀಣ ಜನರಿಗೆ ಶಾಲೆಗಳನ್ನು ತೆರೆಯುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದರು. ಹಿರಿಯ ಗುರುಗಳ ಮಾರ್ಗದರ್ಶದಲ್ಲಿ ಡಾ| ಶಿವಮೂರ್ತಿ ಶಿವಾಚಾರ್ಯರು ಅದೇ ಸ್ಪಷ್ಟತೆ, ದಿಟ್ಟತನ ಇಟ್ಟುಕೊಂಡು ಸಮಾಜದ ಒಳಿತಿಗೆ ಕೆಲಸ ಮಾಡುತ್ತಿದ್ದಾರೆ. ಹಿರಿಯ ಗುರುಗಳಲ್ಲಿದ್ದ ಮಾತೃ ಸ್ವರೂಪಿ ನಿಲುವುಗಳೇ ಈಗಿನ ಗುರುಗಳಲ್ಲಿಯೂ ಇವೆ. ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ರೈತ ಸಮುದಾಯದ ಏಳಿಗೆಗೆ ಕೆರೆ ತುಂಬಿಸುವಂತ ಯೋಜನೆಯನ್ನು ಆರಂಭಿಸಿದ್ದೆ ಶ್ರೀ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯರು. ಇದರಿಂದ ಆ ಭಾಗದ ರೈತರ ಬದುಕಿನಲ್ಲಿ ಆಶಾಕಿರಣ ಬಂದಿದೆ. ಈ ಇಬ್ಬರು ಗುರುವರ್ಯರ ಸಿದ್ಧಾಂತಗಳು ಮತ್ತು ಅವರು ನಡೆದುಬಂದ ದಾರಿಯನ್ನು ಗಮನದಲ್ಲಿಟ್ಟುಕೊಂಡು ಅವರ ಆದರ್ಶಗಳನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಲು ತಾವು ಶ್ರಮಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next